
Mallishettypura, Sidlaghatta : ಗ್ರಾಮಗಳ ಕಲ್ಯಾಣಿಗಳು ನಮ್ಮ ಸಾಂಸ್ಕೃತಿಕ ಹಾಗೂ ಜಲಸಂಪನ್ಮೂಲಗಳು. ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಇವುಗಳನ್ನು ಕಾಪಾಡಿ, ರೈತರಿಗೆ ಉಪಯೋಗಕ್ಕೆ ಬರುವಂತೆ ಮಾಡುವುದು ನಮ್ಮ ಜವಾಬ್ದಾರಿ. ಈ ರೀತಿಯ ಶ್ರಮದಾನಗಳು ಗ್ರಾಮೀಣ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತವೆ. ಎಲ್ಲರೂ ಸಹಕರಿಸಿ ಸ್ವಚ್ಛ ಗ್ರಾಮಗಳನ್ನು ನಿರ್ಮಿಸೋಣ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಶೆಟ್ಟಿಪುರ ಗ್ರಾಮದ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲ್ಯಾಣಿಯ ಸ್ವಚ್ಛತೆ ಕಾರ್ಯಕ್ರಮವು ನಮ್ಮ ಗ್ರಾಮೀಣ ಜಲಸಂಪನ್ಮೂಲಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹೂಳುಗಳಿಂದ ತುಂಬಿದ್ದ ಈ ಕಲ್ಯಾಣಿಯನ್ನು ಇಂದು ನಾವು ಸ್ವಚ್ಛಗೊಳಿಸಿ, ಭವಿಷ್ಯದಲ್ಲಿ ರೈತರ ಜಾನುವಾರುಗಳಿಗೆ ಮತ್ತು ಭೂಜಲ ಸಂರಕ್ಷಣೆಗೆ ಉಪಯುಕ್ತಗೊಳಿಸಿದ್ದೇವೆ. ಸ್ವಚ್ಛತೆಯೇ ದೇವರು, ಸ್ವಚ್ಛತೆಯೇ ಸೇವೆ. ಈ ರೀತಿಯ ಶ್ರಮದಾನಗಳ ಮೂಲಕ ನಮ್ಮ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡೋಣ. ಗ್ರಾಮ ಪಂಚಾಯಿತಿ, ಯುವಕರು, ಮಹಿಳೆಯರು ಎಲ್ಲರ ಸಹಕಾರಕ್ಕೆ ಧನ್ಯವಾದಗಳು. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ, ಶಿಡ್ಲಘಟ್ಟ ಕ್ಷೇತ್ರವನ್ನು ಸ್ವಚ್ಛ ಕ್ಷೇತ್ರವನ್ನಾಗಿ ಮಾಡೋಣ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಮಲ್ಲಿಶೆಟ್ಟಿಪುರ ಗ್ರಾಮದ ಕಲ್ಯಾಣಿಗೆ ಅನೇಕ ವರ್ಷಗಳ ಇತಿಹಾಸವಿದೆ. ಆದರೆ ಮಣ್ಣು, ಕಸ, ಕಡ್ಡಿ ತುಂಬಿಕೊಂಡು ನೀರು ಶೇಖರಣೆ ಸರಿಯಾದ ರೀತಿಯಲ್ಲಿ ಆಗದೇ ತಳ ಭಾಗದಲ್ಲಿ ಕಲ್ಲು, ಕಸ ತುಂಬಿ ಕೊಂಡಿದ್ದರಿಂದ ನೀರು ಶೇಖರಣೆಯಾಗದೇ ಹಾಗೇ ಉಳಿದುಕೊಂಡಿದೆ. ಈ ಅಭಿಯಾನದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಭಾಗವಹಿಸಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆ ಹಾಗೂ ತಾಲ್ಲೂಕಿನಾದ್ಯಂತ ಮರೆತು ಹೋಗಿದ್ದ ಅಥವಾ ತ್ಯಾಜ್ಯದಿಂದ ತುಂಬಿದ್ದ ಪುರಾತನ ಕಲ್ಯಾಣಿಗಳಿಗೆ ಹೊಸ ಜೀವ ನೀಡಲಾಗುತ್ತಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮೂಲಕ ಜಲ ಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ಪೌರಾಯುಕ್ತೆ ಜಿ.ಅಮೃತ, ತುಮ್ಮನಹಳ್ಳಿ ಪಿ.ಡಿ.ಒ ಕ್ಯಾತ್ಯಾಯಿನಿ, ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳ.ಪಿ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ, ನರೇಗಾ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.