Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆಯ ಪರಿಣಾಮವಾಗಿ ರೈತರ ಹಲವಾರು ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಬೇಸಿಗೆ ಅವಧಿಯಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆ ಹಾಗೂ ಬಿರುಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ಬೆಳೆಗಳು ನೆಲಕಚ್ಚಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲ್ಲೂಕಿನ ಗಂಗಾಪುರ, ಎಸ್.ದೇವಗಾನಹಳ್ಳಿ, ಯರ್ರನಾಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದ್ದು, ರೈತರು ಬೆಳೆದಿದ್ದ ಕಲ್ಲಂಗಡಿ, ತರಕಾರಿ, ಬಾಳೆ ಹಾಗೂ ಹೂವಿನ ಬೆಳೆಗಳು ಸಂಪೂರ್ಣ ಅಥವಾ ಭಾಗಶಃ ನಾಶವಾಗಿವೆ. ಕೆಲವೆಡೆ ಗಾಳಿಯ ವೇಗ ಹೆಚ್ಚಿದ್ದರಿಂದ ಬೆಳೆಗಳ ಮೇಲೆ ಬಿದ್ದ ಆಲಿಕಲ್ಲುಗಳು ಬೆಳೆಗಳನ್ನು ಚೂರಾಗಿ ಮಾಡಿ ಹಾನಿಗೊಳಪಡಿಸಿದ್ದವೆಂದು ರೈತರು ತಿಳಿಸಿದ್ದಾರೆ.

ಎಸ್. ದೇವಗಾನಹಳ್ಳಿಯ ರೈತ ಡಿ. ಎನ್. ಚಂದ್ರಶೇಖರ 3 ಎಕರೆ ಬಾಳೆ ತೋಟ ಮಳೆ ಗಾಳಿಗೆ ಬಿದ್ದುಹೋಗಿ ಸುಮಾರು 6 ಲಕ್ಷ ರೂಪಾಯಿ ನಷ್ಟವಾಗಿದೆ. ಮಳೆಯ ನೀರಿನ ಜೋರು ಹಾಗೂ ಗಾಳಿಯ ತೀವ್ರತೆಗೆ ಬೆಳೆಗಳು ನೆಲಕ್ಕುರುಳಿದ್ದು, ರೈತರ ಪರಿಶ್ರಮ ನಾಶವಾಗಿದೆ. ಈ ಅಕಾಲಿಕ ಮಳೆಯಿಂದಾಗಿ ರೈತರಿಗೆ ಭಾರೀ ನಷ್ಟ ಉಂಟಾಗಿದ್ದು, ಸಾಲಬಾಧೆ ಹೆಚ್ಚುವ ಭೀತಿ ಎದುರಾಗಿದೆ.
ಸರ್ಕಾರ ತಕ್ಷಣವೇ ಹಾನಿ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ, ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.








