Sidlaghatta : ಶಿಡ್ಲಘಟ್ಟ ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಸಮುದಾಯ ಸಹಾಯಕರ ದಿನವನ್ನು (Community Helpers Day) ಅತ್ಯಂತ ವಿಭಿನ್ನವಾಗಿ ಆಚರಿಸಲಾಯಿತು. ಶಾಲೆಯ ಪುಟ್ಟ ಮಕ್ಕಳು ತಾವು ಭವಿಷ್ಯದಲ್ಲಿ ಆಗಬಯಸುವ ವೈದ್ಯರು, ಪೋಲಿಸ್, ಪೈಲಟ್, ಶಿಕ್ಷಕರು ಹಾಗೂ ವಕೀಲರಂತಹ ವಿವಿಧ ವೃತ್ತಿಪರರ ವೇಷಭೂಷಣಗಳನ್ನು ಧರಿಸಿ ಆಗಮಿಸಿ, ಆಯಾ ವೃತ್ತಿಯ ಮೂಲಕ ಸಮಾಜಕ್ಕೆ ಹೇಗೆ ನೆರವಾಗುತ್ತೇವೆಂಬುದನ್ನು ವಿವರಿಸಿದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತ ಮಾತನಾಡಿ, “ಮಕ್ಕಳೇ ಭವಿಷ್ಯದ ಭಾರತದ ರೂವಾರಿಗಳು. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಮಾಜದ ವಿವಿಧ ವೃತ್ತಿಗಳ ಬಗ್ಗೆ ಅರಿವು ಮೂಡಿಸುವುದಲ್ಲದೆ, ಅವರ ಇಚ್ಛೆಗೆ ಅನುಗುಣವಾಗಿ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿವೆ. ಸಮಾಜದ ಯಾವುದೇ ವೃತ್ತಿ ಕೀಳಲ್ಲ ಅಥವಾ ಮೇಲಲ್ಲ. ಮಕ್ಕಳು ಇಷ್ಟಪಟ್ಟು ಓದಿದಾಗ ಮಾತ್ರ ಜ್ಞಾನ ಸಂಪಾದನೆ ಸಾಧ್ಯ,” ಎಂದು ತಿಳಿಸಿದರು. ಅಲ್ಲದೆ, ಮುಂಬರುವ ದಿನಗಳಲ್ಲಿ ತಾವೇ ಸ್ವತಃ ಶಾಲೆಗೆ ಬಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ ನೀಡುವುದಾಗಿ ಅವರು ಭರವಸೆ ನೀಡಿದರು.

ಬಿಜೆಪಿ ತಾಲ್ಲೂಕು ಗ್ರಾಮಾಂತರ ಮಂಡಲ್ ಅಧ್ಯಕ್ಷ ಸೀಕಲ್ ಆನಂದ ಗೌಡ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹಾಕಬಾರದು ಎಂದು ಕಿವಿಮಾತು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುಬ್ಬಾರೆಡ್ಡಿ ಅವರು ಸಮುದಾಯ ಪ್ರಜ್ಞೆ ಮೂಡಿಸುವ ಇಂತಹ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು, ಆಡಳಿತಾಧಿಕಾರಿ ರೂಪಸಿ ರಮೇಶ್ ಹಾಗೂ ಶಾಲೆಯ ಶಿಕ್ಷಕ ವೃಂದದವರು ಈ ಸಂಭ್ರಮಕ್ಕೆ ಸಾಕ್ಷಿಯಾದರು.








