Sidlaghatta : ಶಿಡ್ಲಘಟ್ಟ ನಗರದ ವಾರದ ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಶಾಸಕ ಬಿ.ಎನ್. ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಅಧಿಕಾರಿಗಳೊಂದಿಗೆ ಸಂತೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದಿನಪೂರ್ತಿ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಮೇಲ್ಚಾವಣಿ ನಿರ್ಮಾಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಶೌಚಾಲಯ, ಊಟದ ಕ್ಯಾಂಟೀನ್, ವಾಹನ ನಿಲುಗಡೆ ಸ್ಥಳ ಹಾಗೂ ಸ್ವಚ್ಛತಾ ವ್ಯವಸ್ಥೆಗಳನ್ನು ತುರ್ತಾಗಿ ಕಲ್ಪಿಸಬೇಕೆಂದರು. ಮಳೆಗಾಲದಲ್ಲಿ ನೀರು ನಿಂತುಕೊಳ್ಳದಂತೆ ಸಮರ್ಪಕ ನೀರು ಹರಿವಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸಂತೆಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಿ ಗೇಟ್ ಅಳವಡಿಸಲು ಹಾಗೂ ಈ ಸಂಬಂಧಿತ ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ 4.65 ಕೋಟಿ ರೂ.ಗಳನ್ನು ಈ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿಡಲಾಗಿದ್ದು, ಬೆಳಗಾವಿಯಲ್ಲಿ ನಿರ್ಮಿಸಿರುವ ಸಂತೆ ಮೈದಾನದ ಮಾದರಿಯಲ್ಲಿ ಶಿಡ್ಲಘಟ್ಟ ಸಂತೆ ಮೈದಾನವನ್ನು ರೂಪಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಪೌರಾಯುಕ್ತೆ ಜಿ. ಅಮೃತ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರೆ ಮಾಧವಿ, ಎಇಇ ರಘುನಾಥ್, ಮುಖಂಡ ತಾದೂರು ರಘು, ಜಿಲ್ಲಾ ಸಹಕಾರಿ ಸಂಘದ ಮುರಳಿ ಹಾಗೂ ನವೀನ್ ಉಪಸ್ಥಿತರಿದ್ದರು.