Melur, Sidlaghatta : ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಮಯಪಾಲನೆ ಮತ್ತು ಗೌರವದ ಮೌಲ್ಯಗಳನ್ನು ಬೆಳೆಸಿಕೊಂಡು ಸಾಧನೆ ಮಾಡಿದರೆ, ತಂದೆ-ತಾಯಿ, ಗುರುಗಳು ಮತ್ತು ಹಿರಿಯರಿಗೆ ಗೌರವ ತರುವಂತವರಾಗುತ್ತಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಸೇಂಟ್ ಥಾಮಸ್ ಶಾಲೆಯ 21 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೈನಂದಿನ ಆಟ-ಪಾಠಗಳ ನಡುವೆ ಸಮಯ ನಿರ್ವಹಣೆ ಮಾಡಿ, ಶಿಸ್ತು ಪಾಲಿಸಿ ವಿದ್ಯೆಯ ಮೆರುಗು ಹೆಚ್ಚಿಸಬೇಕು. ಇದರಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಮತ್ತು ಭವಿಷ್ಯದಲ್ಲಿ ಯಶಸ್ಸು ಸಿಗುತ್ತದೆ. ಗುರುಗಳು ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಿ. ಕೇವಲ ಅಂಕಗಳ ಗಳಿಕೆಗಿಂತ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಿ. ತಂದೆ-ತಾಯಿಯ ಸಲಹೆಗಳನ್ನು ಅನುಸರಿಸಿ, ಗುರುಗಳ ಮಾರ್ಗದರ್ಶನದಲ್ಲಿ ಸಾಗಿ ಉತ್ತಮ ಫಲಿತಾಂಶ ಗಳಿಸಿ. ಸಾಧನೆಯ ಜೊತೆಗೆ ಹಿರಿಯರನ್ನು ಸನ್ಮಾನಿಸುವುದು ನಿಮ್ಮ ಕರ್ತವ್ಯ, ಇದು ಸಮಾಜದಲ್ಲಿ ಗೌರವ ತರುತ್ತದೆ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಡಾ.ಸ್ಪುರ್ಜಿಯನ್, ಕೆ.ಎನ್.ಎಸ್.ಮಿಷನ್ ನ ರೆವರೆಂಡ್ ಸಂಕಲ್ಪ್ ಸ್ಯಾಮ್ ಮ್ಯಾಥೀವ್, ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್, ಮುಖ್ಯ ಶಿಕ್ಷಕ ಬಿ.ಎ.ಆನಂದ್, ರೆವರೆಂಡ್ ಜೋಸ್ ಥಾಮಸ್ ಹಾಜರಿದ್ದರು.








