
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ಸಂಘದ ಸದಸ್ಯರಿಗೆ ಒಂದು ದಿನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.
ಯೋಜನೆ ವತಿಯಿಂದ ಪ್ರವಾಸ ಹೊರಟ ಬಸ್ಸುಗಳಿಗೆ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಚಾಲನೆ ನೀಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರತಿವರ್ಷ ತಾಲ್ಲೂಕಿನಲ್ಲಿ ಪ್ರತಿ ಹಳ್ಳಿಗಳಿಂದ ಆಯ್ದ ಸಂಘದ ಸದಸ್ಯರಿಗೆ ಅಧ್ಯಯನ ಪ್ರವಾಸವನ್ನು ಹಮ್ಮಿಕೊಂಡಿದ್ದು ಈಗಾಗಲೇ 14 ಅಧ್ಯಯನ ಪ್ರವಾಸವನ್ನು ಈ ವರ್ಷದಲ್ಲಿ ನಡೆಸಲಾಗಿದೆ. ಇದರ ಉದ್ದೇಶ ಪ್ರತಿ ಸದಸ್ಯರಿಗೂ ಸರ್ಕಾರದ ವಿವಿಧ ಇಲಾಖೆಗಳ ಪರಿಚಯ ಆಗಬೇಕು. ಸ್ವಉದ್ಯೋಗ, ಕೃಷಿ, ಹೈನುಗಾರಿಕೆಯ ಮೂಲಕ ಅಭಿವೃದ್ಧಿ ಸಾಧಿಸಿದ ಸದಸ್ಯರನ್ನು ನೋಡಿ ನಮ್ಮ ಸಂಘದ ಸದಸ್ಯರು ಅಭಿವೃದ್ಧಿಯನ್ನು ಸಾಧಿಸಿ, ಸ್ವಾವಲಂಬಿ ಜೀವನ ಸಾಗಿಸಬೇಕು ಎನ್ನುವುದು ಧರ್ಮಸ್ಥಳದ ಧರ್ಮಾಧಿಕಾರಿಗಳ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಸುಮಾರು 1 ಲಕ್ಷ ವೆಚ್ಚದಲ್ಲಿ 14 ಅಧ್ಯಯನ ಪ್ರವಾಸವನ್ನು ನಡೆಸಲಾಗಿದೆ. ಸದಸ್ಯರು ಇದನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ” ಎಂದು ತಿಳಿಸಿದರು.
ಕೈವಾರ, ಕೈಲಾಸಗಿರಿಬೆಟ್ಟ, ರೇಷ್ಮೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಗ್ನಿಶಾಮಕದಳಕ್ಕೆ ಸದಸ್ಯರನ್ನು ಕರೆದೊಯ್ದು ಮಾಹಿತಿ ನೀಡಲಾಯಿತು.
ನಗರದ ಅಗ್ನಿಶಾಮಕದಳಕ್ಕೆ ಸದಸ್ಯರು ಭೇಟಿ ನೀಡಿದಾಗ, ಅಲ್ಲಿಯ ಅಧಿಕಾರಿಗಳು ಅಗ್ನಿ ಅವಘಡ ಆದಾಗ ಯಾವ ರೀತಿ ಬೆಂಕಿಯನ್ನು ನಂದಿಸಬೇಕು ಹಾಗೂ ಅಗ್ನಿಶಾಮಕ ದಳದವರ ಉಪಯೋಗ ಹೇಗೆ ಪಡೆದುಕೊಳ್ಳಬೇಕು, ಅವರಿಂದ ಆಗುವ ಉಪಯೋಗವೇನು ಎಂದು ತಿಳಿಸಿಕೊಟ್ಟರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ಮೇಲ್ವಿಚಾರಕ ರಮೇಶ್, ಸೇವಾಪ್ರತಿನಿಧಿ ಭಾಗ್ಯಲಕ್ಷ್ಮಿ, ಚೈತ್ರಾ, ಅಗ್ನಿಶಾಮಕ ದಳದ ಅಧಿಕಾರಿಗಳಾದ ಬಸವರಾಜ್, ಕರಿಲಿಂಗಣ್ಣ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ರಾಮಕೃಷ್ಣ, ಅಶೋಕ್, ಶ್ರೀನಿವಾಸ್, ಹರೀಶ್, ಮುನಿಕೃಷ್ಣಪ್ಪ, ಶ್ರೀನಿವಾಸ್ ಹಾಜರಿದ್ದರು.