Sidlaghatta : ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಯಾರೇ ಜನಪ್ರತಿನಿಧಿಗಳು ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಲಿದೆ. ಜನ ಸಾಮಾನ್ಯರ ನಾಡಿ ಮಿಡಿತ ಅರಿತವನು ಮಾತ್ರ ಉತ್ತಮ ನಾಯಕನಾಗಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ವೀರಾಪುರ ಗ್ರಾಮದ ಶ್ರೀಗವಿಗುಟ್ಟ ಗಂಗಾಧರೇಶ್ವರಸ್ವಾಮಿ ದೇವಾಲಯ ಆವರಣದಲ್ಲಿನ ಸಮುದಾಯ ಭವನದ ಆವರಣದಲ್ಲಿ ಕೈಗೊಳ್ಳುವ ಮೂಲ ಸೌಕರ್ಯ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ, ಡೇರಿ, ಕುಂಟೆ, ಕಾಲುವೆ, ಸಮುದಾಯ ಭವನದಂತ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಿ, ಅಭಿವೃದ್ದಿಪಡಿಸುವ ಕಾರ್ಯಕ್ಕೆ ಎಲ್ಲರೂ ಕೂಡ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಗವಿಗುಟ್ಟ ಗಂಗಾಧರೇಶ್ವರಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಈಗಾಗಲೆ ವಾಯು ವಿಹಾರಿಗಳಿಗೆ ಅನುಕೂಲ ಆಗುವಂತ ಪಾದಚಾರಿ ಮಾರ್ಗ ನಿರ್ಮಿಸಿದೆ. ಬದುಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ ಈ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಇನ್ನು ಮುಂದೆಯೂ ಎಲ್ಲರೂ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರ ನಿಧಿಯ ಅನುದಾನದಿಂದ ಸಮುದಾಯ ಭವನ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದು ಎಲ್ಲರೂ ಕೈ ಜೋಡಿಸಬೇಕೆಂದು ಗ್ರಾಮಸ್ಥರಲ್ಲಿ ಕೋರಿದರು.
ಗ್ರಾಮದ ಹಿರಿಯರಾದ ಸುಬ್ಬರಾಯಪ್ಪ ಅವರು ಸಮುದಾಯ ಭವನದ ಆವರಣದಲ್ಲಿನ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಪಿಡಿಒ ಸುಧಾಮಣಿ, ಮುಖಂಡರಾದ ಬಿ.ಮುನಿರೆಡ್ಡಿ, ರೈತ ಸಂಘದ ಮುನಿನಂಜಪ್ಪ, ವಿನಾಯಕಸ್ವಾಮಿ ಅಭಿವೃದ್ದಿ ಟ್ರಸ್ಟ್ ನ ಸಿ.ರಾಮು, ವಿ.ಆರ್.ಗಣೇಶ್, ಗುತ್ತಿಗೆದಾರ ಬಿ.ಎ.ಲಕ್ಷ್ಮೀಪತಿ, ಡೇರಿ ಮಾಜಿ ಅಧ್ಯಕ್ಷ ಇ.ಸುಬ್ರಮಣಿ, ಡೇರಿ ಸತ್ಯ, ದೇವಪ್ಪ, ಬೂದಾಳ ಶ್ರೀನಿವಾಸ್, ಮುನಿಶಾಮಿರೆಡ್ಡಿ, ಆರ್.ಶ್ರೀನಿವಾಸ್, ಕೈಯ್ಯಪ್ಪ, ಭೂಮಿಕೇಶವ, ಅರ್ಚಕ ಆದಿರೆಡ್ಡಿ ಹಾಜರಿದ್ದರು.