Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜನರಿಗೆ ಪುಣ್ಯ ಮತ್ತು ದೈವಿಕ ಅನುಗ್ರಹವನ್ನು ಪಡೆಯುವ ಸಲುವಾಗಿ ಏಪ್ರಿಲ್ 14 ಮತ್ತು 15 ರಂದು ಎರಡು ದಿನಗಳ ತೀರ್ಥಯಾತ್ರೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬಿಜೆಪಿಯ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಹೇಳಿದರು.
ನಗರದ ಬಿಜೆಪಿಯ ಸೇವಾ ಸೌಧದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೀರ್ಥಯಾತ್ರೆಗಳು ಭಾರತದ ಸಾಂಸ್ಕೃತಿಕ ಪರಂಪರೆ ಆಧ್ಯಾತ್ಮಿಕ ಶಕ್ತಿಯನ್ನು ಸಾಕ್ಷಾತ್ಕರಿಸುತ್ತದೆ. ಕ್ಷೇತ್ರದ ಜನರಿಗೆ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಮಾಡಲು ಪ್ರತಿ ಪಂಚಾಯತಿಗೆ ಎರಡು ಬಸ್ಸುಗಳು ಮತ್ತು ತೀರ್ಥ ಸ್ಥಳಗಳಲ್ಲಿ ಉಳಿದುಕೊಳ್ಳಲು ವಸತಿ ಸೌಲಭ್ಯ ಮತ್ತು ಊಟದ ವ್ಯವಸ್ಥೆಯನ್ನು ಒದಗಿಸಿದ್ದೇವೆ ಎಂದು ಹೇಳಿದರು.
ಏಪ್ರಿಲ್ 14 ರಂದು ಮಧ್ಯಾಹ್ನ 2 ಗಂಟೆಗೆ ಶಿಡ್ಲಘಟ್ಟ ತಾಲ್ಲೂಕಿನಿಂದ ಹೊರಟು ಬಿದನಗೆರೆಯ ಶ್ರೀ ಪಂಚಮುಖ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನ, ಶ್ರೀ ಸತ್ಯ ಶನೇಶ್ವರ ದೇವಸ್ಥಾನದ ದರ್ಶನ ಮಾಡಿಕೊಂಡು ಆನಂತರ ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಮಾಡಿ ಅಲ್ಲಿಯೇ ರಾತ್ರಿ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಬೆಳಗ್ಗೆ ಸಿದ್ದಲಿಂಗೇಶ್ವರ ಸ್ವಾಮಿ ದರ್ಶನ ಪಡೆದು ಆನಂತರ ಏಪ್ರಿಲ್ 15 ರಂದು ಆದಿಚುಂಚನಗಿರಿಯಲ್ಲಿ ನಡೆಯಲಿರುವ ಶ್ರೀ ಗುರು ಭೈರವೈಕ್ಯ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಈ ಅವಕಾಶವನ್ನು ಭಕ್ತಾದಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಧ್ಯಾಹ್ನ 3 ಗಂಟೆಗೆ ಆದಿಚುಂಚನಗಿರಿಯ ಕಾಲಭೈರವೈಶ್ವರ ಸ್ವಾಮಿಯ ದರ್ಶನ ಪಡೆದುಕೊಂಡು ವಾಪಸ್ ಆಗಮಿಸುತ್ತೇವೆ. ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರೋಗ್ಯವಾಗಿ ಧಾರ್ಮಿಕವಾಗಿ ಅಭಿವೃದ್ಧಿ ಹೊಂದಬೇಕು ಜೊತೆಗೆ ತೀರ್ಥಯಾತ್ರೆಗಳ ಬಗ್ಗೆಯೂ ಸಹ ಜನರಿಗೆ ಪರಿಚಯಿಸುವ ಸಲುವಾಗಿ ಈ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿಯೊಂದು ಬಸ್ಸಿಗೆ ಮುಖಂಡರು ಸಮಾಜ ಸೇವಕರನ್ನು ಮೇಲುಸ್ತುವಾರಿ ವಹಿಸಲಾಗಿದ್ದು ಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ನಾಗರಿಕರಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಮತ್ತು ಸುರಕ್ಷಿತವಾಗಿ ಅವರವರ ಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ ಎಂದರು.
ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ ಗೌಡ, ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಪ್ರಕಾಶ್, ಸಂಜೀವಪ್ಪ, ಬಿಜೆಪಿಯ ಮುಖಂಡರಾದ ಪುರುಷೋತ್ತಮ್, ನರೇಶ್, ರಾಮಕೃಷ್ಣ ಹಾಜರಿದ್ದರು.








