Sidlaghatta : ಶ್ರೀ ರಾಮನ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜೊತೆಗೆ ಯುವ ಪೀಳಿಗೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಜೂನ್ ೭ರಂದು ಶ್ರೀರಾಮ ಶೋಭಾಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಶ್ರೀರಾಮ ಶೋಭಾಯಾತ್ರೆಯ ಆಚರಣೆ ಸಮಿತಿಯ ಅಧ್ಯಕ್ಷ ಬಿ.ವೆಂಕಟೇಶ್ ಹೇಳಿದರು,
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಸಲ್ಲಾಪರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೂ 7 ರಂದು ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಜೂನ್ 7 ರಂದು ಬೆಳಗ್ಗೆ 11 ಗಂಟೆಗೆ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಎಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶ್ರೀರಾಮಚಂದ್ರರ ಕೃಪೆಗೆ ಪಾತ್ರವಾಗಬೇಕೆಂದು ಕೋರಿದರು.
ಶ್ರೀರಾಮ ಶೋಭಾಯಾತ್ರೆಯ ದಿನದಂದು ಎಲ್ಲಾ ಹಿಂದೂ ಬಾಂಧವರ ಮನೆಯ ಮುಂದೆ ರಂಗೋಲಿ ಹಾಗೂ ಹೂವಿನಿಂದ ಅಲಂಕೃತವಾಗಿರಲಿ. ಮನೆಗೆ ಹಸಿರು ತೋರಣ ಕಟ್ಟಿ, ಭಗವಧ್ವಜ ಕಟ್ಟಿ, ಹಬ್ಬದ ವಾತಾವರಣ ಸೃಷ್ಟಿಯಾಗಲಿ ಎಂದು ಮನವಿ ಮಾಡಿದರು.
ಶ್ರೀರಾಮ ಶೋಭಾಯಾತ್ರೆ ಸಮಿತಿಯ ಉಪಾಧ್ಯಕ್ಷ ಪ್ರಕಾಶ್, ಸಮಿತಿ ಸದಸ್ಯರಾದ ಗುಡಿಹಳ್ಳಿ ಮಂಜುನಾಥ್, ಅನಿಲ್ಕುಮಾರ್, ಭರತ್, ರವಿಚಂದ್ರ, ನಾಗೇಶ್, ಮತ್ತಿತರರು ಹಾಜರಿದ್ದರು.








