Sidlaghatta : ಕೈವಾರ ತಾತಯ್ಯನವರ 300 ವರ್ಷದ ಜಯಂತಿಯ ಅಂಗವಾಗಿ ತಾಲ್ಲೂಕಿನ ಬೈರಗಾನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ ಸಾದಲಿ ಶ್ರೀರಾಮಮಂದಿರ ದೇವಾಲಯದವರೆಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅವರ ನೇತೃತ್ವದಲ್ಲಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಾದ್ಯಾಂತ ಹಮ್ಮಿಕೊಳ್ಳಲಾಗಿರುವ ಕೈವಾರ ತಾತಯ್ಯನವರ 300ನೇ ವರ್ಷದ ಜಯಂತಿಯ ಅಂಗವಾಗಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ ನಡೆಸಲಾಯಿತು.
ಬೆಳಿಗ್ಗೆ 6 ಗಂಟೆಗೆ ಬೈರಗಾನಹಳ್ಳಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು. ಸಾವಿರಾರು ಭಕ್ತರು ನಾರೇಯಣ ಧ್ವಜವನ್ನು ಹಿಡಿದು ಭಜನೆಯನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಂತರ ಸುಬ್ಬರಾಯನಹಳ್ಳಿ, ಈ.ತಿಮ್ಮಸಂದ್ರ, ವೆಂಕಟಾಪುರ, ನೇರಳೇಮರದಹಳ್ಳಿ, ಪೂಸಗಾನದೊಡ್ಡಿ, ಸಾದಲಿ ಕ್ರಾಸ್ ಮಾರ್ಗವಾಗಿ ಸಾದಲಿ ಶ್ರೀರಾಮಭಜನಾ ಮಂದಿರದಲ್ಲಿ ಪಾದಯಾತ್ರೆಯ ಸಂಕೀರ್ತನೆಯ ಸಮರ್ಪಣೆಯನ್ನು ಮಾಡಲಾಯಿತು. ನಂತರ ಸಾದಲಿಯ ಶ್ರೀಸಾದಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಶ್ರೀರಾಮದಂಡು ಪಾದಯಾತ್ರೆಗೆ ಗ್ರಾಮಗಳು ಸಿಂಗರಿಸಿಕೊಂಡಿದ್ದವು. ಗ್ರಾಮಸ್ಥರು ದಾರಿಯುದ್ದಕ್ಕೂ ರಸ್ತೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿದ್ದರು. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ರಸ್ತೆಗಳನ್ನು ರಂಗೋಲಿಗಳಿಂದ ಅಲಂಕರಿಸಿದ್ದರು. ಗ್ರಾಮಗಳಲ್ಲಿ ಭಕ್ತರು ಶ್ರೀರಾಮರ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ವಿಶೇಷಪೂಜೆಗಳನ್ನು ಸಲ್ಲಿಸಿ ಆರತಿಯನ್ನು ಬೆಳಗಿದರು. ಪ್ರತಿಹಳ್ಳಿಯಲ್ಲಿಯೂ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳಿಗೆ ನೀರು, ಹಾಲು, ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ವಿತರಿಸಿ ಸತ್ಕರಿಸಿದರು. ಪ್ರತಿಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಜಡಲಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ನಾಮಸಂಕೀರ್ತನೆಯನ್ನು ಸಮರ್ಪಿಸಲಾಯಿತು. ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗೆ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾದಲಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಪಾದಯಾತ್ರೆಯ ಭಜನೆ ಸಂಕೀರ್ತನೆಯ ಉಸ್ತುವಾರಿಯನ್ನು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಶ್ರೀ ವಾನರಾಶಿ ಬಾಲಕೃಷ್ಣ ಭಾಗವತರ್ ವಹಿಸಿದ್ದರು. ಅವರು ನಿರಂತರವಾಗಿ ಭಜನೆಯವರನ್ನು ಎಲ್ಲಿಯೂ ನಿಲ್ಲದೇ ನಡೆಸಿಕೊಂಡು, ಭಕ್ತರಿಗೆ ಉತ್ಸಾಹ ತುಂಬುತ್ತಾ ಮುನ್ನಡೆದರು. ಪಾದಯಾತ್ರೆಯಲ್ಲಿ ಕೈವಾರ ಮಠ ಟ್ರಸ್ಟ್ ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಸದಸ್ಯರಾದ ಕೆ.ನರಸಿಂಹಪ್ಪ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಸಾದಲಿಯ ಹಿರಿಯ ವಕೀಲ ಅಶ್ವಥನಾರಾಯಣ್, ಡಾ.ಸತ್ಯನಾರಾಯಣ್, ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್ ಹಾಗೂ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.








