Home News ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹಣ ಹೆಚ್ಚಳ ಮಾಡಲು ಆಗ್ರಹ

ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹಣ ಹೆಚ್ಚಳ ಮಾಡಲು ಆಗ್ರಹ

0
Karnataka State Budget Silk Industry Budget Allocation Increase

Sidlaghatta : ರಾಜ್ಯದಲ್ಲಿ ರೇಷ್ಮೆ ಉದ್ಯಮದ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಬಜೆಟ್ ಹೆಚ್ಚಳ ಮಾಡಲು ಕ್ರಮ ಕೈಗೊಂಡು ರೇಷ್ಮೆ ಬೆಳೆಗಾರರ ಮತ್ತು ನೂಲು ಬಿಚ್ಚಾಣಿಕೆದಾರರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಲ್ ಇಂಡಿಯಾ ಸಿಲ್ಕ್ ಅಸೋಸಿಯೇಷನ್‍ ನ ನಿಯೋಗ ರೇಷ್ಮೆ ಸಚಿವ ವೆಂಕಟೇಶ್ ಅವರನ್ನು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಭ್ರಮಣ್ಯಂ ಅವರ ನೇತೃತ್ವದಲ್ಲಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಸಂಘಟನೆಯ ಕಾರ್ಯದರ್ಶಿ ಎಂ.ರಾಮಚಂದ್ರಗೌಡ ಅವರ ನಿಯೋಗ ರಾಜ್ಯ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ವೆಂಕಟೇಶ್ ಅವರನ್ನು ಭೇಟಿ ಮಾಡಿ ರೇಷ್ಮೆ ಉದ್ಯಮದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ರೇಷ್ಮೆ ಉದ್ಯಮದಲ್ಲಿ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಎರಡು ಕಣ್ಣುಗಳಾಗಿದ್ದು ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ ರೇಷ್ಮೆ ಉದ್ಯಮದಲ್ಲಿ ಆಧುನಿಕ ವ್ಯವಸ್ಥೆಯ ಅನುಷ್ಠಾನಕ್ಕೆ ಸೂಕ್ತ ರೀತಿಯ ಕ್ರಮ ಕೈಗೊಂಡು ಈ ಬಾರಿ ಬಜೆಟ್‍ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಕೋರಿದರು.

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಪರವಾಗಿ ಸಿಲ್ಕ್ ಸಮಗ್ರ-02 ತಾಂತ್ರಿಕ ಸಮಿತಿಯ ಸದಸ್ಯ ಮೊಹ್ಮದ್ ಅನ್ವರ್ ಮಾತನಾಡಿ, ರಾಜ್ಯದಲ್ಲಿ ಅಧಿಕೃತವಾಗಿ ಸುಮಾರು 7 ಸಾವಿರ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಇಲಾಖಾ ಪರವಾನಗಿಯನ್ನು ಹೊಂದಿದ್ದಾರೆ. ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಮಿಕರೊಂದಿಗೆ 30 ಸಾವಿರ ಕಾಟೇಜ್, ಫಿಲೇಚರ್ ಬೇಸಿನ್ ಹಾಗೂ ಚರಕಗಳೊಂದಿಗೆ ಕಾರ್ಯನಿರ್ವಹಿಸುತ್ತಾ ರೇಷ್ಮೆ ಉದ್ದಿಮೆಯ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಇಡೀ ರೇಷ್ಮೆ ಉದ್ದಿಮೆಯು ಶೇ 75 ರಷ್ಟು ಅವಿದ್ಯಾವಂತರು ಹಾಗೂ ಶೇ 80 ರಷ್ಟು ಬಡವರನ್ನು ಒಳಗೊಂಡು ಕಷ್ಟಕಾರ್ಪಣ್ಯದೊಂದಿಗೆ ಕೆಲಸ ಮಾಡುತ್ತಿದ್ದು, ಶೇ 100 ರಷ್ಟು ಅಸಂಘಟಿತ ವಲಯದ ಮೇಲೆ ಆಧಾರವಾಗಿದೆ ಎಂದರು.

ಕೇವಲ ಶೇ 20 ರಷ್ಟು ರೇಷ್ಮೆ ನೂಲು ಉತ್ಪಾದಕರು ಮಾತ್ರ ಸುಸ್ಥಿತಿಯಲ್ಲಿದ್ದು, ಉಳಿದವರೆಲ್ಲರೂ ಉದ್ದಿಮೆಯ ಯಾವುದೇ ಸಮಸ್ಯೆಯ ಅರಿವಿಲ್ಲದೆ ತಮ್ಮ ಹೊಟ್ಟೆಪಾಡಿಗೆ ವಿಧಿ ಇಲ್ಲದೆ ತಮಗೆ ದೊರೆಯುವ ಅಲ್ಪ ಸಂಪಾದನೆಯಿಂದ ಜೀವನ ಸಾಗಿಸುತ್ತಾ ಉದ್ದಿಮೆಯ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರೇಷ್ಮೆ ವ್ಯಾಪಾರದಲ್ಲಿ ಆಗುತ್ತಿರುವ ರೇಷ್ಮೆ ಧರದ ಏರುಪೇರುಗಳಿಗೆ ಗುರಿಯಾಗಿ ಬಹಳ ಸಂಕಷ್ಟಗಳಿಗೆ ಪ್ರತಿ ವರ್ಷವೂ ಸಿಲುಕಿಕೊಳ್ಳುತ್ತಿದ್ದಾರೆ. ರೇಷ್ಮೆ ವ್ಯಾಪಾರದಲ್ಲಿ ಸ್ಥಿರತೆ ಇಲ್ಲದಿರುವುದರಿಂದ ನಷ್ಟಕ್ಕೆ ಒಳಗಾಗಿ ದುಡಿಮೆ ಬಂಡವಾಳವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅನೇಕ ರೀಲರುಗಳು ಕಸುಬನ್ನು ಬಿಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಅದರಲ್ಲೂ ಇತ್ತೀಚಿನ 5 ವರ್ಷಗಳಲ್ಲಿ ಉದ್ಯಮಕ್ಕೆ ಬಂದಂತಹ ಕಷ್ಟಗಳು ಇತಿಹಾಸದಲ್ಲಿ ಎದುರಾಗಿಲ್ಲ. ಆದ್ದರಿಂದ 12 ಸಾವಿರ ಇದ್ದ ರೇಷ್ಮೆ ಉತ್ಪಾದಕರು ದಿನೇದಿನೇ ಕಡಿಮೆಯಾಗಿ ಪ್ರಸ್ತುತ 7 ಸಾವಿರಕ್ಕೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಉದ್ಯಮವು ನಶಿಸಿ ಹೋಗುತ್ತದೆ ಎಂದು ರೇಷ್ಮೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ರೇಷ್ಮೆ ನೂಲು ಬಿಚ್ಚಾಣಿಕೆದಾರರನ್ನು ಪ್ರತ್ಯೇಕವಾಗಿ ಸಭೆಯನ್ನು ಕರೆದು ಅವರ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ ಬಗೆಹರಿಸಬೇಕೆಂದು ಸಚಿವರಲ್ಲಿ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ಕೆ.ಎಸ್.ಎಂ.ಬಿ ಮಾಜಿ ಅಧ್ಯಕ್ಷೆ ಸೀತಾ ಅಮರ್‍ಶೆಟ್ಟಿ, ಆಲ್ ಇಂಡಿಯಾ ಸಿಲ್ಕ್ ಅಸೋಸಿಯೇಷನ್‍ನ ಪದಾಧಿಕಾರಿಗಳಾದ ಸಿ.ಎಸ್‍.ಬಿ ನಿವೃತ್ತ ವಿಜ್ಞಾನಿಗಳಾದ ಡಾ.ಬಸವರಾಜ್, ಡಾ.ಇ.ಮುನಿರಾಜು, ಪ್ರಗತಿಪರ ರೇಷ್ಮೆ ಬೆಳೆಗಾರರ ಮಳ್ಳೂರು ಹರೀಶ್, ಚಂಗನಮಲ್, ಸತ್ಯನಾರಾಯಣ, ಜೆ.ಎಂ.ಮುನಿರಾಜು,ಎಫ್.ಪಿ.ಓ ನಿರ್ದೇಶಕ ಸೈಯದ್ ಫಾರುಖ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version