Sidlaghatta : ಬೆಂಗಳೂರಿನ ಸಮದೃಷ್ಟಿ ವಿಕಾಸ ಮತ್ತು ಅನುಸಂದಾನ ಮಂಡಲ (ಸಕ್ಷಮ), ವಿಜಯಪುರ ರೋಟರಿ, ಬೆಂಗಳೂರಿನ ಜೀವನಯೋಗ ಪ್ರತಿಷ್ಟಾನ, ಚಿಕ್ಕಬಳ್ಳಾಪುರದ ಸೀನಿಯರ್ ಚೇಂಬರ್ ಇಂಟರ್ನ್ಯಾಶನಲ್, ಚಿಕ್ಕಬಳ್ಳಾಪುರದ ಡಿಇಐಸಿ-ಜಿಲ್ಲಾ ಕ್ಷಿಪ್ರ ಮಧ್ಯಸ್ಥಿಕ ಕೇಂದ್ರ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಆಶ್ರಯದಲ್ಲಿ 15 ವರ್ಷದೊಳಗಿನ ಬೌದ್ಧಿಕ ವಿಕಲತೆಯ ಮಕ್ಕಳು ಮತ್ತು ಅವರ ಪೋಷಕರಿಗಾಗಿ ದೊಡ್ಡಬಳ್ಳಾಪುರದ ಶ್ರೀ ಸುಬ್ರಹ್ಮಣ್ಯಘಾಟಿಯಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ವಿಶೇಷ ಸುಚೇತನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಆಯ್ದ ಬೌದ್ಧಿಕ ವಿಕಲತೆಯುಳ್ಳ, ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ 18, ಗೌರಿಬಿದನೂರು ತಾಲ್ಲೂಕಿನ 6, ಡಿಇಐಸಿ ವತಿಯಿಂದ 9, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಿಂದ 5 ಮಂದಿ ಮಕ್ಕಳು ಸೇರಿ ಒಟ್ಟು 38 ಮಕ್ಕಳು ಮತ್ತು ಪೋಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಜೀವನಯೋಗ ಪ್ರತಿಷ್ಟಾನದ ಅರುಣ್ಪ್ರಕಾಶ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದಿವ್ಯಾಂಗ ಮಕ್ಕಳನ್ನು ದೇವರಂತೆ ಕಾಣುವುದು, ಅವರ ಸೇವೆಯ ಮೂಲಕ ಸಾರ್ಥಕ್ಯವನ್ನು ಕಾಣುವುದು ಶ್ರೇಷ್ಟಕಾರ್ಯ. ಮಗುವು ತಾಯಿಯ ಗರ್ಭದಲ್ಲಿದ್ದಾಗಲೇ ಸಂಸ್ಕಾರವನ್ನು ಆಲಿಸಿ ಕಲಿಯುವುದು. ಮಗುವಿನ ಆರೋಗ್ಯವು ತಾಯಿ ಗರ್ಭಿಣಿಯಲ್ಲಿದ್ದಾಗಿನಿಂದಲೇ ನೋಡಿಕೊಳ್ಳಬೇಕಾದ ಜವಾಬ್ದಾರಿಯಾಗಿರುತ್ತದೆ ಎಂದರು.
ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಗೋವುಗಳ ಸಂರಕ್ಷಣೆಯೂ ಶಿಷ್ಯನಾಗುವವನ ಕರ್ತವ್ಯವಾಗಿದ್ದಿತು. ಉತ್ತಮ ಜೀವನಶೈಲಿ, ಅಪಕ್ವ ಸಾಮಾಜಿಕ, ಮಾನಸಿಕ ಮತ್ತು ವರ್ತನಾ ಸಮಸ್ಯೆಗಳಿಗೆ ಪರಿಹಾರವನ್ನು ಪರಿಸರದಿಂದಲೂ ಕಂಡುಕೊಳ್ಳಬೇಕು. ಪೋಷಕರು ದಿವ್ಯಾಂಗ ಮಕ್ಕಳ ಪೋಷಣೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸಿಕೊಳ್ಳಬೇಕು ಎಂದರು.
ವಿಶೇಷಚೇತನ ಮಕ್ಕಳು, ಪೋಷಕರು ಗೋವುಗಳೊಂದಿಗೆ ಆಟವಾಡಿ ಧನಾತ್ಮಕ ಬದಲಾವಣೆಗಳನ್ನು ಕಂಡುಕೊಂಡಿದ್ದು ವಿಶೇಷವಾಗಿತ್ತು. ಪೋಷಕರೊಂದಿಗೆ ಸಂವಾದ, ಉತ್ತಮ ಆಹಾರಕ್ರಮಗಳ ಕುರಿತ ಪ್ರಾತ್ಯಕ್ಷಿಕೆ, ಸುಮಾರು 5 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಔಷಧಯುಕ್ತ ಗಿಡಮರಗಳ ವನದಲ್ಲಿ ವಿಹಾರ. ಧ್ಯಾನ, ಮತ್ತಿತರ ಚಟುವಟಿಕೆಗಳು ನಡೆದವು.
ರಾಷ್ಟ್ರೋತ್ಥಾನ ಗೋಶಾಲೆಯ ಡಾ.ಜೀವನ್, ಚಿಕ್ಕಬಳ್ಳಾಪುರ ಸೀನಿಯರ್ ಚೇಂಬರ್ ಇಂಟರ್ನ್ಯಾಶನಲ್ನ ಎನ್.ಶ್ರೀನಿವಾಸ್, ಸೆವೆನ್ ಹಿಲ್ಸ್ ಸಂಸ್ಥೆಯ ವೆಂಕಟೇಶ್ಮೂರ್ತಿ, ರೋಟರಿ ವಿಜಯಪುರ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ಸಕ್ಷಮದ ವಿವೇಕ್, ವರದಾಹೆಗಡೆ, ಡಾ.ಕಿರಣ್, ಡಾ.ಹರಿಕೃಷ್ಣ, ನಾಗರಾಜು, ರಮೇಶ್ಪ್ರಭು, ಅರುಣ್, ಬಿ.ಎಂ.ಜಗದೀಶ್, ವಂದನಾ, ಡಿಇಐಸಿ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು. ಶಿಡ್ಲಘಟ್ಟ, ಗೌರಿಬಿದನೂರು, ಚಿಕ್ಕಬಳ್ಳಾಪುರ ಭಾಗಗಳಿಂದ ವಿಶೇಷಚೇತನ ಮಕ್ಕಳು ಮತ್ತು ಪೋಷಕರನ್ನು ವಿಶೇಷಬಸ್ಗಳಲ್ಲಿ ಘಾಟಿವರೆಗೆ ಕರೆದೊಯ್ಯಲಾಗಿತ್ತು.