ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಮಕೋಟೆ ಕ್ರಾಸ್ ನಲ್ಲಿರುವ ಅಂಗಡಿಗಳ ಮುಂದೆ ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿದರು.
ನಮ್ಮ ಅಂಗಡಿ, ನಮ್ಮ ಮನೆ, ನಮ್ಮ ಬೀದಿ, ನಮ್ಮ ಗ್ರಾಮ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಯಾರೋ ಬಂದು ಸ್ವಚ್ಛಗೊಳಿಸುತ್ತಾರೆ ಎಂಬ ಧೋರಣೆ ಬಿಟ್ಟು, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಇಡೀ ಗ್ರಾಮ ಹಾಗೆಯೇ ಗ್ರಾಮ ಪಂಚಾಯಿತಿ ಸುಂದರವಾಗಿರುತ್ತದೆ ಎಂದು ಅವರು ತಿಳಿಸಿದರು.
ತಮ್ಮ ಅಂಗಡಿಗಳ ಮುಂದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಅಂಗಡಿ ಮತ್ತು ಮನೆಗಳ ಸುತ್ತಮುತ್ತ ಸ್ಚಚ್ಛತೆ ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಕರ್ತವ್ಯ. ಒಂದೊಂದು ಗ್ರಾಮದಲ್ಲೂ ಈ ರೀತಿಯ ಸ್ವಚ್ಛತಾ ಕಾರ್ಯ ಆಂದೋಲನದಂತೆ ಪ್ರಾರಂಭವಾದರೆ ನಾಡೆಲ್ಲಾ ಸ್ವಚ್ಛವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ.ಓ.ಶಿವಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳೊಂದಿಗೆ ತಾವೇ ಸ್ವಚ್ಛತೆಯ ಕಾರ್ಯವನ್ನು ನಡೆಸಿದರು. ಅವರೊಂದಿಗೆ ಗ್ರಾಮಸ್ಥರೂ ಕೈಜೋಡಿಸಿದರು. ನಂತರ ಗ್ರಾಮ ಪಂಚಾಯಿತಿ ವತಿಯಿಂದ ಇಒ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಪಿ.ಡಿ ಓ ಮಧು, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ಉಪಾದ್ಯಕ್ಷೆ ಸುಜಾತ ನರಸಿಂಹ ಮೂರ್ತಿ, ಸದಸ್ಯರಾದ ಮಂಜುನಾಥಗೌಡ, ಸುರೇಶ್, ರಾಜಶೇಖರ್, ಎಸ್.ವೈ.ನಾರಾಯಣಸ್ವಾಮಿ, ನರಸಿಂಹಮೂರ್ತಿ, ಮೀನಾಕ್ಷಿಬಸಪ್ಪ, ಸುಶೀಲಮ್ಮನಾರಾಯಣಸ್ವಾಮಿ, ರಜಿನಿ, ಯಶೋದಮ್ಮ ಹಾಜರಿದ್ದರು.