Talakayalabetta, sidlaghatta : ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (FES) ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಾಗೃತಿ ಜಾಥಾ:
ಪರಿಸರ ಸಂರಕ್ಷಣೆಯ ಮಹತ್ವ ಸಾರಲು ಗ್ರಾಮ ಪಂಚಾಯಿತಿ ಸಿಬ್ಬಂದಿ, ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಗ್ಗೂಡಿ ಜಾಗೃತಿ ಜಾಥಾವನ್ನು ನಡೆಸಿದರು. ಘೋಷವಾಕ್ಯಗಳ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಬೀಜದುಂಡೆಗಳ ಅಭಿಯಾನ:
ಟಿ. ವೆಂಕಟಾಪುರ ಗ್ರಾಮದ ಗೋಮಾಳದಲ್ಲಿ ವಿದ್ಯಾರ್ಥಿಗಳಿಂದ ಸುಮಾರು 1000 ಬೀಜದುಂಡೆಗಳನ್ನು (ನೇರಳೆ, ಹೊಂಗೆ, ಹುಣಸೆ) ಹಾಕಿಸುವ ಮೂಲಕ ಪರಿಸರ ಸಂರಕ್ಷಣೆಯ ಪ್ರಾಯೋಗಿಕ ಪಾಠವನ್ನು ಮಾಡಲಾಯಿತು. ನಂತರ ನಡೆದ ಪರಿಸರ ಗ್ರಾಮ ಸಭೆಯಲ್ಲಿ ಮರಗಳ ಮಹತ್ವ, ನೀರಿನ ಉಳಿತಾಯ ಮತ್ತು ಪ್ಲಾಸ್ಟಿಕ್ ನಿರ್ಮೂಲನೆಯ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಯಿತು.
ಪರಿಸರ ರಕ್ಷಣೆ ದಿನನಿತ್ಯದ ಕರ್ತವ್ಯ:
ಕಾರ್ಯಕ್ರಮ ಉದ್ಘಾಟಿಸಿದ ಪಿಡಿಓ ಶ್ರೀನಿವಾಸಪ್ಪ ಮಾತನಾಡಿ, “ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಮಾನವನ ಬದುಕು, ಪ್ರಾಣಿ-ಪಕ್ಷಿಗಳು ಹಾಗೂ ಭೂಮಿಯ ಸಮತೋಲನವು ಸಂಪೂರ್ಣವಾಗಿ ಪರಿಸರದ ಮೇಲೆಯೇ ಅವಲಂಬಿತವಾಗಿದೆ. ಆದ್ದರಿಂದ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ದಿನನಿತ್ಯದ ಜವಾಬ್ದಾರಿಯಾಗಿದೆ” ಎಂದು ಕರೆ ನೀಡಿದರು.
ಜೀವನಶೈಲಿ ಬದಲಾವಣೆಗೆ ಒತ್ತು:
FES ಸಂಸ್ಥೆಯ ರಮೇಶ್ ಎನ್. ಮಾತನಾಡಿ, “ಅತಿಯಾದ ಆಸೆಗಳಿಂದಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಿ, ನಾವೇ ವಿನಾಶಕ್ಕೆ ಅಡಿಪಾಯ ಹಾಕಿಕೊಳ್ಳುತ್ತಿದ್ದೇವೆ. ಹಿರಿಯರು ಪಂಚಭೂತಗಳನ್ನು ಆರಾಧಿಸಿ ಪ್ರಕೃತಿಯನ್ನು ಉಳಿಸಿದ್ದರು. ಇಂದಿನ ದಿನಮಾನದಲ್ಲಿ ಪ್ಲಾಸ್ಟಿಕ್ ತ್ಯಜಿಸಿ, ಮರ-ಗಿಡಗಳನ್ನು ಬೆಳೆಸುವ ಮೂಲಕ ಪ್ರಕೃತಿಯ ಪೂರಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರುಗಳಾದ ವೆಂಕಟರೆಡ್ಡಿ, ಗುರು, ಕಾರ್ಯದರ್ಶಿ ಪದ್ಮಾವತಮ್ಮ, ಶಿಕ್ಷಕರು, ಪಂಚಾಯಿತಿ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.








