Budala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದ ಮಲೆ ಮಲ್ಲೇಶ್ವರಸ್ವಾಮಿ ದೇವಾಲಯ ಬಳಿ ಇರುವ ಸರ್ಕಾರಿ ಕುಂಟೆ ಹಾಗೂ ದೇವಾಲಯ ಪ್ರದೇಶದಲ್ಲಿನ ಬೆಳೆದು ನಿಂತಿದ್ದ ದೊಡ್ಡ ದೊಡ್ಡ ಹೊಂಗೆ ಮರಗಳನ್ನು ರಾತ್ರೋ ರಾತ್ರಿ ಕಡಿದು ಹಾಕಲಾಗಿದೆ.
ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ-234ಕ್ಕೆ ಹೊಂದಿಕೊಂಡಿರುವ ಬೂದಾಳ ಗ್ರಾಮದ ಸಮೀಪ ಇರುವ ಮಲೆಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಕುಂಟೆ ಇದೆ. ಕುಂಟೆಯ ಸುತ್ತ ಹಾಗೂ ದೇವಾಲಯದ ಸುತ್ತಲೂ ಹೊಂಗೆ ಹಾಗೂ ದೇವಾಲಯದ ಬಳಕೆಗೆಂದು ನಾನಾ ರೀತಿಯ ಹೂ ಗಿಡಗಳನ್ನು ಬೆಳಸಲಾಗಿದೆ.
ಈ ಜಮೀನಿನ ಪಕ್ಕದಲ್ಲಿರುವ ನಂಜುಂಡಗೌಡ ಎಂಬಾತ ಕುಂಟೆ ಹಾಗೂ ದೇವಾಲಯದ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿದ್ದು ಹೊಂಗೆ ಮರಗಳನ್ನು ರಾತ್ರೋ ರಾತ್ರಿ ಕಡಿದುಹಾಕಿದ್ದಾನೆ ಎಂದು ಬೂದಾಳ ಗ್ರಾಮಸ್ಥರು ಶಿಡ್ಲಘಟ್ಟದ ತಹಶೀಲ್ದಾರ್, ವಲಯ ಅರಣ್ಯಾಧಿಕಾರಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಮಲೆಮಲ್ಲೇಶ್ವರಸ್ವಾಮಿ ದೇವಾಲಯದ ಎದುರು ಇರುವ ಸರ್ಕಾರಿ ಕುಂಟೆಯ ಪಕ್ಕ ನಂಜುಂಡಗೌಡ ಅವರ ಜಮೀನಿದ್ದು ತನ್ನ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದ ನಂಜುಂಡಗೌಡ ಗುರುವಾರ ತನ್ನ ಜಮೀನಿನಲ್ಲಿ ಉಳುಮೆ ಮಾಡಿದ್ದು ರಾತ್ರಿ ಹೊಂಗೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈಗಾಗಲೆ ಈ ಮಲೆಮಲ್ಲೇಸ್ವರಸ್ವಾಮಿ ಕುಂಟೆಯ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯದ ಆದೇಶವಿದೆ. ಇದರ ಮದ್ಯೆಯೂ ಮರಗಳನ್ನು ಕಡಿದು ಹಾಕಿರುವ ನಂಜುಂಡಗೌಡ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ದೂರಿದ್ದಾರೆ.