Sidlaghatta : ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ 24 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತಿದೆ. 2 ಕೋಟಿ ರೂ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ ಶೇ 10ರಷ್ಟು ಹಣವನ್ನು ವಿಶೇಷ ಚೇತನರಿಗೆ ಮೀಸಲಿಟ್ಟು ಅದರಲ್ಲಿ ತ್ರಿ ಚಕ್ರ ವಾಹನಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 24 ಮಂದಿ ವಿಶೇಷಚೇತನರಿಗೆ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ 24 ತ್ರಿ ಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಜತೆಗೆ ಕ್ಷೇತ್ರದಲ್ಲಿನ ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಬಹುತೇಕ ಹದಗೆಟ್ಟಿವೆ. ಈ ಬಗ್ಗೆ ಸದನದಲ್ಲಿ ನಾನು ಪ್ರಸ್ತಾಪಿಸಿದ್ದು ಮೊದಲಿಗೆ ಶಾಲೆ, ಶಿಕ್ಷಣದ ಅಭಿವೃದ್ದಿಗೆ ಆಧ್ಯತೆ ನೀಡಬೇಕಿದೆ ಎಂದರು.
ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿಕೊಂಡರೆ ಶಿಡ್ಲಘಟ್ಟ ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರ. ಆದರೂ ಇಲ್ಲಿನ ಜನತೆ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಅಬಕಾರಿ, ಪೆಟ್ರೋಲ್ ಡೀಸೆಲ್, ಜಿ.ಎಸ್.ಟಿ ಮತ್ತು ಕೆ.ಎಸ್.ಆರ್.ಟಿ.ಸಿ ಯಿಂದ ಹೆಚ್ಚು ತೆರಿಗೆಯನ್ನು ಪಾವತಿಸಲಾಗುತ್ತಿದೆ.
ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಅದಕ್ಕೆ ಎಲ್ಲರ ಸಹಕಾರವೂ ಮುಖ್ಯ ಎಂದರು.
ಜಲ ಜೀವನ್ ಯೋಜನೆಯಡಿ ನಡೆದ ಕಾಮಗಾರಿ ಗುಣಮಟ್ಟದಿಂದಲ್ಲ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದು ಈಗಾಗಲೆ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಬಳಿ ಚರ್ಚಿಸಲಾಗಿದೆ.
ಸಂಬಂಧಿಸಿದ ಗುತ್ತಿಗೆಗಾರರ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಗುಣಮಟ್ಟದ ಕಾಮಗಾರಿಯನ್ನು ನಿಗಧಿತ ಕಾಲಾವಧಿಯಲ್ಲಿ ಮುಗಿಸಿಕೊಡುವ ಭರವಸೆಯನ್ನು ಸಿಇಒ ಅವರು ನೀಡಿದ್ದಾರೆ. ಇದಲ್ಲದೆ ಥರ್ಡ್ ಪಾರ್ಟಿಯಿಂದ ಕಾಮಗಾರಿ ಗುಣಮಟ್ಟ ಪರೀಕ್ಷೆಯನ್ನು ಮಾಡಿಸುವ ಒತ್ತಾಯವನ್ನು ಮಾಡಿದ್ದೇವೆ ಎಂದರು. 24 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಜ್ಯೋತಿಲಕ್ಷ್ಮಿ, ಯೋಜನಾ ಸಹಾಯಕ ಅರುಣ್ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷ ರೂಪ ನವೀನ್, ಸದಸ್ಯರಾದ ಎಸ್.ರಾಘವೇಂದ್ರ, ಅನಿಲ್ಕುಮಾರ್, ಮುಖಂಡರಾದ ಎಸ್.ಎಂ.ರಮೇಶ್, ನಂದ ಕಿಶನ್, ಜೆ.ವಿ.ಸದಾಶಿವ, ಬಾಲಕೃಷ್ಣ, ಆರ್.ಎ.ಉಮೇಶ್, ಮೇಲೂರು ಮಂಜುನಾಥ್ ಹಾಜರಿದ್ದರು.
For Daily Updates WhatsApp ‘HI’ to 7406303366









