Sidlaghatta : ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನ ಮತಕ್ಕೂ ಮಹತ್ವವಿದ್ದು, ಮತದಾನವನ್ನು ಹಕ್ಕು ಎಂದು ಮಾತ್ರ ಪರಿಗಣಿಸದೆ ಜವಾಬ್ದಾರಿಯನ್ನಾಗಿಯೂ ಸ್ವೀಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವೈ. ನವೀನ್ ಭಟ್ ಹೇಳಿದರು.
ತಾಲ್ಲೂಕಿನ ಹನುಮಂತಪುರ ಸಮೀಪದ ಬಿ.ಜಿ.ಎಸ್. ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಮೊಬೈಲ್ ಫೋನ್ ಹಾಗೂ ಇತರ ಸೌಲಭ್ಯಗಳಿಗಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಯುವಜನರು, ಚುನಾವಣೆ ಸಂದರ್ಭದಲ್ಲಿ ಅದಕ್ಕಿಂತ ಹೆಚ್ಚಿನ ಆಸಕ್ತಿಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ತಮ್ಮ ಆಯ್ಕೆಯನ್ನು ಮತದಾನದ ಮೂಲಕ ವ್ಯಕ್ತಪಡಿಸುವುದರಿಂದ ತಮ್ಮ ಭವಿಷ್ಯ ರೂಪಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದು” ಎಂದರು.
18 ವರ್ಷ ಪೂರ್ಣಗೊಳಿಸಿರುವ ಅರ್ಹ ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೊಸ ಮತದಾರರ ನೋಂದಣಿಗೆ ನಮೂನೆ–6 ಅರ್ಜಿ ಸಲ್ಲಿಸಬಹುದು ಮತ್ತು ಚುನಾವಣಾ ಆಯೋಗದ ಆನ್ಲೈನ್ ಸೇವೆಗಳ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.
“ಒಂದು ಮತದಿಂದ ಏನು ಬದಲಾವಣೆ ಸಾಧ್ಯ ಎಂದು ಯಾರೂ ನಿರ್ಲಕ್ಷಿಸಬಾರದು. ಹಲವು ಚುನಾವಣೆಗಳಲ್ಲಿ ಕಡಿಮೆ ಮತಗಳ ಅಂತರದಿಂದ ಫಲಿತಾಂಶ ನಿರ್ಧಾರವಾದ ಉದಾಹರಣೆಗಳಿವೆ. ಹೀಗಾಗಿ ಪ್ರತಿಯೊಂದು ಮತವೂ ಮಹತ್ವದ್ದಾಗಿದೆ” ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು ಎಂದು ತಿಳಿಸಿದ ಅವರು, ಅರ್ಹ ಯುವಕರು ಮುಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಚಿಂತಿಸಬೇಕು ಎಂದು ಕರೆ ನೀಡಿದರು. “ಸಮಾಜದಲ್ಲಿ ಯಾವ ಬದಲಾವಣೆಯನ್ನು ಬಯಸುತ್ತೇವೆಯೋ, ಆ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು” ಎಂಬ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಉಲ್ಲೇಖಿಸಿದ ಅವರು, ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅಬಿದ್.ಎಸ್.ಎಸ್., ಇಒ ಹೇಮಾವತಿ ಆರ್., ತಹಶೀಲ್ದಾರ್ ಗಗನ ಸಿಂಧು, ನಗರಸಭೆ ಪೌರಾಯುಕ್ತೆ ಜಿ. ಅಮೃತ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಪಿ., ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು, ಕಾಲೇಜು ಪ್ರಾಂಶುಪಾಲ ಮಹಾದೇವ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
In English: Voting is not just a right but a responsibility, Zilla Panchayat CEO Dr. Y. Naveen Bhat told students at a SVEEP voter-awareness programme held at BGS College near Hanumanthapura on Saturday. He urged eligible youth to register using Form-6 or the Election Commission’s online services, noting that many close elections have been decided by narrow vote margins. He also encouraged qualified young people to consider contesting elections themselves once they turn 25, quoting Gandhi’s call to be the change one wishes to see in society.
ಮತದಾನ ಜಾಗೃತಿಗೆ ಸಂಬಂಧಿಸಿದ ಮತ್ತೊಂದು ಸ್ವೀಪ್ ಕಾರ್ಯಕ್ರಮದ ಬಗ್ಗೆ ಶಾಲೆಯಲ್ಲಿ ಮತದಾನದ ಜಾಗೃತಿ ಮತ್ತು ಅರಿವು ಎಂಬ ವರದಿಯನ್ನೂ ಓದಿ.








