16.1 C
Sidlaghatta
Monday, December 29, 2025

ಅಹಂ ತ್ಯಜಿಸಿದಾಗ ಸಂಬಂಧಗಳು ವೃದ್ಧಿಸುತ್ತವೆ

- Advertisement -
- Advertisement -

ಮಾನವೀಯತೆ ಎಂಬ ಗುಣ ಮಾನವನ ಸರ್ವತೋಮುಖ ಬೆಳವಣಿಗೆಯ ಅವಿಭಾಜ್ಯ ಅಂಗ. ಮನುಷ್ಯ ಸ್ವಾರ್ಥಭಾವನೆ ತ್ಯಜಿಸಿದಾಗ ಮಾತ್ರ ಸಂಪೂರ್ಣ ಮಾನವನಾಗುತ್ತಾನೆ. ಇಲ್ಲವಾದಲ್ಲಿ ನಾನು, ನನ್ನದೆಂಬ ನಿರಂಕುಶ ಭಾವನೆಗಳು ಅವನ ವಿನಾಶದ ಅಂಚಾಗುತ್ತವೆ. ಒಮ್ಮೆ ಮನುಷ್ಯನಲ್ಲಿ ಅಹಂ ಭಾವನೆ ಬಂತೆಂದರೆ ಮುಗಿಯಿತು ಅವನು ಲಗಾಮು ಇಲ್ಲದ ಕುದುರೆಯಂತಾಗುತ್ತಾನೆ ಎಂದು ಸಾಹಿತಿ ರಾಘವೇಂದ್ರ ಈ ಹೊರಬೈಲು ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಹನ್ನೊಂದನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವೀಯತೆಯೇ ನಿತ್ಯ ಬದುಕಿನ ಜೀವಾಳ. ಪ್ರಪಂಚದ ಎಲ್ಲಾ ಧರ್ಮಗಳು ಬೋಧಿಸುವುದು ಇದನ್ನೆ. ಎಲ್ಲಾ ಸಂತರು, ಪ್ರವಾದಿಗಳು ಸಾರುವುದು ಇದನ್ನೇ. ಬೈಬಲ್, ಖುರಾನ್, ಭಗವದ್ಗೀತೆಗಳಲ್ಲಿ ಪ್ರತಿಧ್ವನಿಸುವುದು ಇದೇ ಮಾನವೀಯತೆ ಎಂದು ಹೇಳಿದರು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಅಲ್ಲಿನ ಪರಿಸರ, ಓದು, ಶಿಕ್ಷಕರ ಪ್ರೋತ್ಸಾಹ ಬರಹಗಾರನಾಗಲು ಪ್ರೇರೇಪಿಸಿತು. ನಮ್ಮ ಗುರುಗಳು ಹೇಳುತ್ತಿದ್ದರು, ‘ಪ್ರತಿಯೊಬ್ಬರಲ್ಲೂ ಕವಿ ಮನಸ್ಸು ಇರುತ್ತದೆ. ಯಾರು ಅದನ್ನು ಜಾಗೃತಗೊಳಿಸುತ್ತಾರೋ ಅವರು ಕವಿಯಾಗುತ್ತಾರೆ’ ಎಂಬ ಮಾತು ಅಕ್ಷಶಃ ಸತ್ಯ. ಮಗುವಿನ ಮನಸ್ಸು, ಕುತೂಹಲ, ಪರಿಸರ ಪ್ರೇಮ, ಕರುಣೆ, ಮಾನವೀಯ ಮೌಲ್ಯ ಮತ್ತು ನಿರಂತರ ಓದುವಿಕೆ ಬರಹಗಾರನಿಗೆ ಅತ್ಯಗತ್ಯ ಎಂದರು.
ಚಿಂತಾಮಣಿ ತಾಲ್ಲೂಕು ಬಟ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಬಂದ ನಂತರ ನನ್ನ ಬಹರ ಹೆಚ್ಚಾಯಿತು. ಎರಡು ಪುಸ್ತಕಗಳನ್ನು ಹೊರತಂದೆ. ನನ್ನ ಮದುವೆಯ ದಿನದಂದು ದ್ವಿತೀಯಾಕ್ಷರ ಪ್ರಾಸವನ್ನಿಟ್ಟುಕೊಂಡು ಬರೆದಿರುವ ಎರಡನೆಯ ಚುಟುಕು ಕವನ ಸಂಕಲನ ‘ಚೊಂಬೇಶ ಮುಕ್ತಕ’ ಹೊರತಂದೆ. ಜಿಲ್ಲೆಯ ಬರಹಗಾರರನ್ನು ಪ್ರೋತ್ಸಾಹಿಸುವ, ಓದುಗರೊಂದಿಗೆ ಒಡನಾಡುವ ಈ ರೀತಿಯ ಕಾರ್ಯಕ್ರಮಗಳು ಅನುಕರಣೀಯ ಎಂದು ನುಡಿದರು.
ಕವಿ ರಾಜಹಂಸ ಮಾತನಾಡಿ, ಇತರ ಜಿಲ್ಲೆಗೆ ಹೋಲಿಸಿದರೆ ಕನ್ನಡದ ಕೆಲಸ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಅಂತಹುದರಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯವನ್ನು ನಾಡಿನ ಎಲ್ಲಾ ಗ್ರಂಥಾಲಯಗಳಲ್ಲೂ ನಡೆದರೆ ಆ ಪ್ರಾಂತ್ಯದ ಜನರಿಗೆ ಸ್ಥಳೀಯ ಸಾಹಿತಿಗಳ ಪರಿಚಯವಾಗುತ್ತದೆ ಎಂದು ಹೇಳಿ ಅವರು ಕವನವನ್ನು ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ರಾಘವೇಂದ್ರ ಈ ಹೊರಬೈಲು ಅವರು ಮೂಲತಃ ಶಿವಮೊಗ್ಗದ ಹೊರಬೈಲು ನವರಾಗಿದ್ದು ಪ್ರಸ್ತುತ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಹ, ನಟನೆ, ಗಾಯನ ಮತ್ತು ಓದು ಇವರ ಹವ್ಯಾಸ. ಅಂತರಂಗದುಲಿ (ಕವನ ಸಂಕಲನ), ಚೊಂಬೇಶ ಮುಕ್ತಕ (ಚುಟುಕು ಕವನ ಸಂಕಲನ) ಇವರ ಕೃತಿಗಳು. ಸುಮಾರು ನೂರಕ್ಕೂ ಹೆಚ್ಚು ಲೇಖನಗಳು ಕನ್ನಡದ ಜನಪ್ರಿಯ ದಿನಪತ್ರಿಕೆಗಳು ಹಾಗೂ ಮಾಸಿಕಗಳಲ್ಲಿ ಪ್ರಕಟವಾಗಿವೆ. ಇವರಿಗೆ ರಾಜ್ಯ ಮಟ್ಟದ ‘ಗುರು ಶ್ರೀ ಪುರಸ್ಕಾರ’ ದೊರೆತಿದೆ. ಎಂದು ಪರಿಚಯ ಮಾಡಿಕೊಟ್ಟರು.
ಸಾಹಿತಿ ರಾಘವೇಂದ್ರ ಈ ಹೊರಬೈಲು ತಾವು ಬರೆದ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ರಾಘವೇಂದ್ರ ಈ ಹೊರಬೈಲು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಪಾಲಕ ಬಚ್ಚರೆಡ್ಡಿ, ಸತೀಶ್, ಸುಂದರನ್, ಚಲನಚಿತ್ರ ಸಹನಟ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮಕ್ಸೂದ್, ಚಾಂದ್ಪಾಷ, ಟಿ.ಟಿ.ನರಸಿಂಹಪ್ಪ, ಅಬ್ದುಲ್, ಲಕ್ಷ್ಮೀನಾರಾಯಣ್, ಲಕ್ಷ್ಮೀಕಾಂತ್, ಸುದರ್ಶನ್, ರಾಮಚಂದ್ರ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!