ದಲಿತ ವಿರೋಧಿ ಧೋರಣೆ ಸೇರಿದಂತೆ ಸ್ವಜನ ಪಕ್ಷಪಾತ, ತಾಲ್ಲೂಕು ಆಡಳಿತದ ವೈಪಲ್ಯದ ವಿರುದ್ದ ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ದಲಿತರ ಕರಾಳ ದಿನಾಚರಣೆ ಆಚರಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಫುರ ಜಿಲ್ಲೆಯ ಗಡಿಭಾಗದಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ. ೩೦ ರಷ್ಟು ಪರಿಶಿಷ್ಟ ಜಾತಿ ಹಾಗು ಪಂಗಡದ ಜನಸಂಖ್ಯೆಯಿದ್ದು ಕೂಲಿನಾಲಿಯಿಂದ ಜೀವನ ನಡೆಸುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ತಾಲ್ಲೂಕಿನಲ್ಲಿ ಮಳೆಯನ್ನೇ ಆಶ್ರಯಿಸಿ ಜೀವನ ನಡೆಸುವ ದಲಿತರು ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ತಲುಪಿದ್ದಾರೆ. ಸರ್ಕಾರಿ ಸವಲತ್ತು ಸಿಗದೇ ಮೇಲ್ಜಾತಿಯ ಗುಲಾಮರಾಗಿ ಬದುಕುವುದನ್ನು ರೂಡಿಸಿಕೊಂಡಿರುವ ದಲಿತರ ಮೇಲೆ ನಿರಂತರ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿರುವದನ್ನು ಕಂಡು ರೋಸಿಹೋಗಿದ್ದು ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನವನ್ನಾಗಿ ಆಚರಿಸಲು ಕ.ದ.ಸಂ.ಸ ವತಿಯಿಂದ ತೀರ್ಮಾನಿಸಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷವಾದರೂ ಸಂವಿಧಾನದ ಆಶಯ ಹಾಗು ದಲಿತರ ಪರ ಕಾನೂನು ತರಲು ಈವರೆಗೂ ಆಡಳಿತ ನಡೆಸಿದ ಯಾವುದೇ ಸರ್ಕಾರದಿಂದ ಆಗಿಲ್ಲ. ಬದಲಿಗೆ ಇಂದಿಗೂ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ, ಕೊಲೆ ಸುಲಿಗೆ, ಅತ್ಯಾಚಾರ, ಭೂಕಬಳಿಕೆಯಂತಹವು ನಿರಂತರವಾಗಿ ನಡೆಯುತ್ತಿದೆ.
ದೇಶದ ಭೂಮಿ, ವಿದ್ಯೆ, ಅಧಿಕಾರ ಆರ್ಥಿಕ ಸಂಪನ್ಮೂಲಗಳನ್ನು ಸಮಾನವಾಗಿ ತಳ ಮಟ್ಟದ ಶೋಷಿತ ಸಮುದಾಯಗಳಿಗೆ ಹಂಚುವಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರ ವರ್ಗ ವಿಫಲವಾಗಿರುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಾ ಮಾನವ ಹಕ್ಕುಗಳನ್ನು ದಮನ ಮಾಡಲು ಮುಂದಾಗಿರುವ ಸರ್ಕಾರಗಳು ಒಂದೆಡೆಡಯಾದರೆ ಇನ್ನೊಂದೆಡೆ ಜಾತಿವಾದಿ ಅಧಿಕಾರಿಗಳಿಂದ ಭ್ರಷ್ಟಾಚಾರ, ಲಂಚಗುಂಡಿತನ, ಸ್ವಜನ ಪಕ್ಷಪಾತ, ಮೀಸಲಾತಿ ಹಣ ದುರುಪಯೋಗ, ಮದ್ಯವರ್ತಿಗಳ ಹಾವಳಿಯಿಂದ ದೇಶದ ಮೂಲ ನಿವಾಸಿಗಳಾದ ದಲಿತರು ದಿಕ್ಕಿಲ್ಲದ ತಬ್ಬಲಿಗಳಾಗುತ್ತಿದ್ದಾರೆ.
ಹಾಗಾಗಿ ದಲಿತ ವಿರೋಧಿ ಧೋರಣೆಯಿಂದ ಆಗಸ್ಟ್ ೧೫ ರ ಸ್ವಾತಂತ್ರ್ಯ ದಿನಾಚರಣೆಯನ್ನು ದಲಿತರ ಕರಾಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಹಾಗು ತಾಲ್ಲೂಕು ಘಟಕ ಸೇರಿದಂತೆ ಮಹಿಳಾ ಘಟಕ ಸಂಘಟನೆ ಪಾಲ್ಗೊಳ್ಳುತ್ತಿದ್ದು ಸಮಾನ ಮನಸ್ಕರು, ಚಿಂತಕರು, ವಿಚಾರವಂತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹೇಳಿಕೆಯಲ್ಲಿ ಕೋರಿದ್ದಾರೆ.
- Advertisement -
- Advertisement -
- Advertisement -