ಶಿಡ್ಲಘಟ್ಟದಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ರೈತರಿಂದ ತರಕಾರಿಗಳನ್ನು ನೇರವಾಗಿ ಖರೀದಿ ಮಾಡಿ ಅದೇ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ.
“ಕೊರೊನಾ ರೋಗ ಹರಡುವುದನ್ನು ತಪ್ಪಿಸಲೆಂದು ಲಾಕ್ ಡೌನ್ ಮಾಡಿರುವ ಪರಿಣಾಮ ಅನೇಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ಕಷ್ಟಪಡುತ್ತಿದ್ದಾರೆ. ವ್ಯಾಪಾರಿಗಳು ತರಕಾರಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿರುವುದರಿಂದ ಕೊಳ್ಳುವ ಗ್ರಾಹಕರಿಗೂ ಹೊರೆಯಾಗುತ್ತಿದೆ. ಇದನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸುವ ನಿಟ್ಟಿನಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಕೆಲಸ ಮಾಡುತ್ತಿದೆ. ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ 49 ನೇ ವರ್ಷಾಚರಣೆಯ ಪ್ರಯುಕ್ತ ರಿಯಾಯಿತಿ ದರದಲ್ಲಿ ತರಕಾರಿ ಮಾರುತ್ತಾ ಅತ್ತ ರೈತರು, ಇತ್ತ ಗ್ರಾಹಕರಿಗೂ ನೆರವಾಗುತ್ತಿದ್ದೇವೆ” ಎಂದು ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
“ಪ್ರತಿದಿನ ಮುಂಜಾನೆ ಚಿಂತಾಮಣಿಗೆ ಹೋಗಿ ಅಲ್ಲಿ ರೈತರಿಂದ ತರಕಾರಿಗಳನ್ನು ಕೊಳ್ಳುತ್ತೇನೆ. ನಗರದ ಅಶೋಕ ರಸ್ತೆಯ ಶಿವಕುಮಾರಸ್ವಾಮಿ ವೃತ್ತದಲ್ಲಿ ಬೆಳಗಿನ ಹೊತ್ತು ರೈತರಿಂದ ಕೊಂಡು ತಂದಿರುವ ಬೆಲೆಗೇ ಮಾರುತ್ತೇನೆ. ನಂತರ ಪೊಲೀಸ್ ಕ್ವಾಟ್ರಸ್, ಆಸ್ಪತ್ರೆ ಕ್ವಾಟ್ರಸ್ ಸೇರಿದಂತೆ ವಿವಿದ ಬಡಾವಣೆಗಳಲ್ಲಿ ಸಂಚರಿಸಿ ತರಕಾರಿಯನ್ನು ರಿಯಾಯಿತಿ ಬೆಲೆಗೆ ಮಾರುತ್ತೇನೆ. ಉಳಿದು ಹೋಗಿದ್ದನ್ನು ಬಡವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಅಧಿಕಾರಿಗಳು ಮತ್ತು ಜನರಿಂದ ಉತ್ತಮ ಸ್ಪಂದನೆಯಿದೆ” ಎಂದು ಅವರು ಹೇಳಿದರು.