19.1 C
Sidlaghatta
Saturday, November 15, 2025

ಕಸವಿಲೇವಾರಿಯ ಬಗ್ಗೆ ಚರ್ಚೆ

- Advertisement -
- Advertisement -

ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಬಗ್ಗೆ ನಗರಸಭಾ ಆಯುಕ್ತ ಹರೀಶ್, ಟೈಡ್ ಟೆಕ್ನೋಕ್ರೇಡಿಕ್ ಪ್ರೈವೇಟ್ ಲಿಮಿಟೆಡ್ನ ಎಂಜಿನಿಯರ್ ಅರೊಂದಿಗೆ ಗುರುವಾರ ಸಮಾಲೋಚನೆ ನಡೆಸಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಎಂಜಿನಿಯರ್ರೊಂದಿಗೆ ಚರ್ಚೆ ನಡೆಸಿ, ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಸುಮಾರು ೧೮ ಟನ್ ಕಸದ ಪ್ರಮಾಣವನ್ನು ಶೇಖರಣೆ ಮಾಡಿಕೊಂಡು ಹಸಿಕಸ ಮತ್ತು ಒಣಕಸವನ್ನು ವಿಂಗಡಣೆ ಮಾಡಲು ನಾಗರಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಪ್ರತಿಯೊಂದು ಮನೆಗೆರಡರಂತೆ ಟಬ್ಗಳನ್ನು ನೀಡಿ ಮನೆಯ ಬಾಗಿಲಿಗೆ ಹೋಗಿ ಕಸವನ್ನು ಪಡೆದುಕೊಳ್ಳಲಾಗುತ್ತದೆ. ನಂತರ ಕಸದ ಪ್ರಮಾಣದ ಬಗ್ಗೆ ಮತ್ತು ಕಸವನ್ನು ವಿಂಗಡಣೆ ಮಾಡಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಬಗ್ಗೆ ಡಿ.ಪಿ.ಆರ್ ತಯಾರಿಸಿ, ಡಿ.ಎಂ.ಎ. ಅನುಮೋದನೆ ಪಡೆದುಕೊಂಡ ನಂತರ ಸ್ವಚ್ಚ ಭಾರತ ಅಭಿಯಾನ ಯೋಜನೆಯಿಂದ ಇದಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗುತ್ತದೆ ಎಂದರು.
ನಗರಸಭೆಯಿಂದ ಗುರ್ತಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲೆ ಕಸವನ್ನು ಸಂಗ್ರಹ ಮಾಡಿಕೊಂಡು ಗೊಬ್ಬರ ತಯಾರಿಕೆ ಮಾಡುವುದರಿಂದ ನಗರದಲ್ಲಿ ಕಸದ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಹಾಗು ಈಗಾಗಲೇ ಯಾದಗಿರಿ, ತುಮಕೂರು, ದಾವಣಗೆರೆ, ವಿಜಯಪುರ, ಕೆ.ಆರ್.ನಗರ, ಮಡಿಕೇರಿ ಮುಂತಾದ ಕಡೆಗಳಲ್ಲಿ ಗೊಬ್ಬರ ತಯಾರಿಕೆ ಮಾಡಲಾಗುತ್ತಿದೆ ಎಂದು ಪರಿಸರ ಇಂಜಿನಿಯರ್ ಅಕ್ಷಯ್ರಂಗನಾಥ್ ವಿವರಿಸಿದರು.
ನಗರಸಭೆ ಸದಸ್ಯ ವೆಂಕಟಸ್ವಾಮಿ, ಪರಿಸರ ಇಂಜಿನಿಯರ್ ದಿಲೀಪ್, ಮುಖಂಡ ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಸದಿಂದ ರಸ
‘ಈ ಹಿಂದೆ ಕಸ ಶೇಖರಿಸಿ ನಂತರ ವಿಲೇವಾರಿ ಮಾಡಲೆಂದು ನಗರದಲ್ಲಿ ಹಲವಾರು ಕಡೆ ಲಕ್ಷಾಂತರ ರೂಗಳ ವೆಚ್ಚದ ಕಬ್ಬಿಣದ ಕಂಟೈನರ್ಗಳನ್ನು ಇರಿಸಲಾಗಿತ್ತು. ಹಸಿಕಸ ಮತ್ತು ಒಣಕಸವನ್ನು ವಿಂಗಡಣೆ ಮಾಡಿ ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ಕೆಲವು ಸ್ತ್ರೀ ಶಕ್ತಿ ಸಂಘಗಳಿಗೆ ಒಪ್ಪಂದ ನೀಡಿ ಅವರಿಗೆಲ್ಲಾ ಲಕ್ಷಾಂತರ ರೂಗಳ ವೆಚ್ಚದಲ್ಲಿ ತಳ್ಳುವ ಗಾಡಿಗಳನ್ನು ವಿತರಿಸಲಾಗಿತ್ತು. ಕಸವಿಲೇವಾರಿಗೆಂದೇ ಟ್ರಾಕ್ಟರ್, ಟಿಪ್ಪರ್ ಮುಂತಾದ ವಾಹನಗಳ ಡೀಸಲ್, ಬಾಡಿಗೆಗಾಗಿ ಲಕ್ಷಾಂತರ ಬಿಲ್ಲುಗಳಾಗುತ್ತಿವೆ. ಒಂದು ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ತಾಲ್ಲೂಕಿನ ಹಿತ್ತಲಹಳ್ಳಿಯ ಸಮೀಪ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಹೆಸರಿಗೆ ಮಾತ್ರ ಸೀಮಿತವಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಗೂ ಕಸ ತುಂಬಿ ತುಳುಕುತ್ತಿದ್ದು, ಡಿ ಗ್ರೂಪ್ ನೌಕರರು 5 ತಿಂಗಳಿಂದ ಸಂಬಳ ನೀಡದ ಕಾರಣ ಕೆಲಸ ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಪೋಲಾಗಿರುವ ಹಣದ ಜೊತೆಗೆ ಸ್ವಚ್ಛ ಭಾರತ್ ಹೆಸರಿನಲ್ಲಿ ನಗರಸಭೆಯಲ್ಲಿ ಮತ್ತೊಂದು ಲಕ್ಷಾಂತರ ರೂಪಾಯಿಗಳ ‘ಕಸದಿಂದ ರಸ’ ಯೋಜನೆ ರೂಪಿತಗೊಳ್ಳುತ್ತಿದೆ’ ಎಂದು ಹಿರಿಯರೊಬ್ಬರು ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!