ಸ್ಥಳೀಯ ಶಾಸಕರಿಗೆ ಕನಿಷ್ಠ ಮಾಹಿತಿಯೂ ನೀಡದೇ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಬರ ಅಧ್ಯಯನ ಹೆಸರಲ್ಲಿ ಪ್ರವಾಸ ಮಾಡಿರುವ ರಾಜ್ಯ ಸಚಿವ ಸಂಪುಟ ಉಪಸಮಿತಿ ಸದಸ್ಯರ ತಂಡದ ಕಾರ್ಯವೈಖರಿ ಖಂಡನೀಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಘೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳೆದ ಮಂಗಳವಾರ ತಾಲ್ಲೂಕಿನ ಬರಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ರಾಜ್ಯ ಸಚಿವ ಸಂಪುಟ ಉಪಸಮಿತಿ ಸದಸ್ಯರ ತಂಡ ಭೇಟಿ ನೀಡುವ ಬಗ್ಗೆ ಕನಿಷ್ಠ ವಾರದ ಮೊದಲು ಮಾಹಿತಿ ನೀಡಬೇಕು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಗಳವಾರ ಭೇಟಿ ನೀಡುವ ಬಗ್ಗೆ ಸೋಮವಾರ ಸಂಜೆಯವರೆಗೂ ಜಿಲ್ಲಾಡಳಿತಕ್ಕಾಗಲೀ ಯಾವುದೇ ತಾಲ್ಲೂಕು ಆಡಳಿತಕ್ಕಾಗಲೀ ಮಾಹಿತಿಯೇ ನೀಡದೇ ಬರ ಅಧ್ಯಯನ ನಡೆಸುವ ಅಗತ್ಯತೆಯಾದರೂ ಏನಿತ್ತು ಎಂದರು.
ಇನ್ನು ಬರ ಅಧ್ಯಯನದ ಹೆಸರಲ್ಲಿ ನಿಗಧಿಪಡಿಸಿದ್ದ ಗ್ರಾಮಗಳಿಗಾದರೂ ಅವರು ಸರಿಯಾಗಿ ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜಾನುವಾರುಗಳ ಮೇವಿನ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿಲ್ಲ. ತಾಲ್ಲೂಕಿನ ದೊಡ್ಡದಾಸರಹಳ್ಳಿಗೆ ಭೇಟಿ ನೀಡಿ ಕೇವಲ ಎರಡೇ ನಿಮಷದಲ್ಲಿ ಅಲ್ಲಿಂದ ಚಿಂತಾಮಣಿ ಕಡೆ ಹೊರಟು ಹೋಗಿದ್ದು ಪಕ್ಕದ ನಾರಾಯಣದಾಸರಹಳ್ಳಿಯ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಅವರ ಬರುವಿಕೆಗಾಗಿ ಬೆಳಗ್ಗೆಯಿಂದ ಕಾದು ಕುಳಿತು ಕೊನೆಗೆ ಪ್ರತಿಭಟಿಸುವಂತಾಗಿದ್ದು ದುರದೃಷ್ಟಕರ.
ಬರಪರಿಹಾರ ವೀಕ್ಷಣೆ ಹೆಸರಲ್ಲಿ ಪ್ರವಾಸ ಮಾಡುವ ಬದಲಿಗೆ ಜಿಲ್ಲಾಧಿಕಾರಿಯಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಬಹುದಿತ್ತು. ಆದರೆ ತಾವು ಬರ ಅಧ್ಯಯನದ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ, ತಮ್ಮ ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ಓಲೈಸುವ ಕೆಲಸಕ್ಕೆ ಮುಂದಾಗುವುದರೊಂದಿಗೆ ಕೀಳು ಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಕೇವಲ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿಯಾಗಲು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆಯೇ ಹೊರತು ಅವರಿಗೆ ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಕೊಳ್ಳುವ ಇಚ್ಚಾಶಕ್ತಿಯಿಲ್ಲ. ಇನ್ನು ಸರ್ಕಾರದ ಸಚಿವರು ಸಾರ್ವಜನಿಕರಲ್ಲಿ ನಡೆದುಕೊಳ್ಳುವ ರೀತಿ ನೀತಿ ಅಸಹ್ಯ ಮೂಡಿಸುತ್ತದೆ. ಸಾರ್ವಜನಿಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದರೆ ಅವರ ಸಮಸ್ಯೆ ಕೇಳುವ ಬದಲಿಗೆ ಜನರನ್ನು ಬೆದರಿಸುವುದು ನೋಡಿದರೆ ಇವರು ಜನಪರ ಸರ್ಕಾರದ ಸಚಿವರು ಎಂದೆನಿಸುವುದಿಲ್ಲ ಬದಲಿಗೆ ಜನವಿರೋಧಿಗಳು ಎಂಬುದು ರುಜುವಾತಾಗುತ್ತದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ನಗರಸಭೆ ಸದಸ್ಯರಾದ ಅಫ್ಸರ್ಪಾಷ, ಲಕ್ಷ್ಮಯ್ಯ, ತಾಲ್ಲೂಕು ಪಂಚಾಯತಿ ಸದಸ್ಯ ಕೆ.ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ಡಿ.ಬಿ.ವೆಂಕಟೇಶ್, ತಾದೂರು ರಘು, ಶ್ರೀಧರ್, ಶ್ರೀನಾಥ, ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -