ರೈತರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕುರಿ ಮತ್ತು ಉಣ್ಣೆ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ಮಧುರನಾಥ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಪ್ರಗತಿಪರ ಕುರಿ ಸಾಕಾಣಿಕಾ ಸಹಕಾರ ಸಂಘದ ವತಿಯಿಂದ ಬುಧವಾರ ಸಂಘದ ಕಚೇರಿಯಲ್ಲಿ ಕುರಿಸಾಕಾಣಿಕೆದಾರ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.
ಕುರಿಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಕುರಿಗಳು ಮನೆಯಲ್ಲಿ ಎಟಿಎಂ ಇದ್ದಂತೆ. ರೈತನ ಕಷ್ಟಕ್ಕೆ ನೆರವಾಗುವ ಈ ಕುರಿಸಾಕಾಣಿಕೆಯನ್ನು ಹೆಚ್ಚು ಮಂದಿ ಕೈಗೊಳ್ಳಬೇಕು. ಕುರಿ ಸಾಕಾಣಿಕೆದಾರರು ಕುರಿ ಸತ್ತಲ್ಲಿ ಕಾರಣವನ್ನು ದಾಖಲಿಸುವ ಮೂಲಕ ಪರಿಹಾರ ಧನವನ್ನು ಪಡೆಯಬಹುದಾಗಿದೆ. ಕುರಿಗಳಿಗೆ ಸಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 26 ಮಂದಿ ಫಲಾನುಭವಿಗಳಿಗೆ ಒಬ್ಬರಿಗೆ 52 ಸಾವಿರ ರೂಗಳಂತೆ ಒಟ್ಟು 13 ಲಕ್ಷ 52 ಸಾವಿರ ರೂಗಳ ಸಾಲ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
ಪ್ರಗತಿಪರ ಕುರಿ ಸಾಕಾಣಿಕಾ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ, ನಿರ್ದೇಶಕ ರಾಮಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -







