ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕಾರ್ಯಕ್ರಮ ನೀಡುವ ಅಪರೂಪದ ಅವಕಾಶವನ್ನು ಶಿಡ್ಲಘಟ್ಟ ತಾಲ್ಲೂಕು ಕಸಾಪ ಪಡೆದಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಮ್ ದಾಸ ಸಾಹಿತ್ಯ ಯೋಜನೆಯ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ಯ ತಿಳಿಸಿದರು.
ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಹಿಂದೂ ಧರ್ಮ ಪ್ರಚಾರ ಪರಿಷತ್ನ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮದಡಿಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ನೂರಾರು ಭಜನಾ ಕಲಾವಿದರ ತಂಡಗಳು ಇಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡುತ್ತಾರೆ. ನೂರೊಂದು ವರ್ಷಗಳು ತುಂಬಿದ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಪರಿಚಯ ಮಾಡಿಕೊಟ್ಟು, ಪುರಂದರ ದಾಸರ, ಶರೀಫರ ಹಾಗೂ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಸೊಗಡಿನ ಮೂಲಕ ತಿಮ್ಮಪ್ಪನ ಸೇವೆಯನ್ನು ಮಾಡಿದ್ದೀರಿ. ನಾದನೀರಾಂಜನ ಎಂಬ ಕಾರ್ಯಕ್ರಮವನ್ನು ತಿರುಪತಿ ತಿರುಮಲ ದೇವಸ್ಥಾನಮ್ ಆಯೋಜಿಸುತ್ತಿದ್ದು ಅದರಲ್ಲೂ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಭಕ್ತಿ ಸುಧೆಯನ್ನು ಹರಿಸುವಂತೆ ಕೋರಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಧ್ಯೇಯೋದ್ದೇಶ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ವಿವರಿಸಿದರು.
ಕಲಾವಿದ ರವಿಕುಮಾರ್ ದಾಸರ, ಶರೀಫರ ಹಾಗೂ ಭಕ್ತಿ ಗೀತೆಗಳನ್ನು ಹಾಡಿದರು. ತಾಲ್ಲೂಕು ಕಸಾಪ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನಮ್ ದಾಸ ಸಾಹಿತ್ಯ ಯೋಜನೆಯ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ಯ ಅವರನ್ನು ಗೌರವಿಸಲಾಯಿತು.
ತಿರುಪತಿ ತಿರುಮಲ ದೇವಸ್ಥಾನಮ್ ವತಿಯಿಂದ ಶಿಡ್ಲಘಟ್ಟ ತಾಲ್ಲೂಕು ಕಸಾಪ ಸದಸ್ಯರಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಖಜಾಂಚಿ ಎಸ್.ಸತೀಶ್, ರಾಜ್ಯ ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ವೈ.ನಾರಾಯಣಸ್ವಾಮಿ, ಕಲಾವಿದರಾದ ನಾರಾಯಣರೆಡ್ಡಿ, ರಾಮಚಂದ್ರಪ್ಪ, ಗೋಪಾಲಕೃಷ್ಣಪ್ಪ, ವೆಂಕಟರಮಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -







