ಐಟಿ ದಾಳಿ ವೇಳೆ ಹೊಸ ನೋಟುಗಳೊಂದಿಗೆ ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮತ್ತು ಪಿಡಬ್ಲೂಡಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ಬುಧವಾರ ಬಿಜೆಪಿ ತಾಲ್ಲೂಕು ಘಟಕ ಮತ್ತು ಯುವ ಮೋರ್ಚಾ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಅಧಿಕಾರಿ ಚಿಕ್ಕರಾಯಪ್ಪ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಆಪ್ತ ಅಧಿಕಾರಿ ಜಯಚಂದ್ರ ಅವರ ನಿವಾಸದ ಮೇಲೆ ದಾಳಿ ಮಾಡಿದಾಗ ಒಟ್ಟು ಆರು ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಿಗ್ಭ್ರಮೆ ಹುಟ್ಟಿಸುವ ಸಂಗತಿಯೆಂದರೆ, ಈ ಇಬ್ಬರೂ ಅಧಿಕಾರಿಗಳ ಬಳಿ ದೊರಕಿರುವ ನಗದು ಪೈಕಿ 4.7 ಕೋ. ರೂ.ನಷ್ಟು ಮೊತ್ತ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ 2,000 ರೂ. ನೋಟುಗಳ ರೂಪದಲ್ಲಿದೆ. ಈ ಭ್ರಷ್ಟ ಅಧಿಕಾರಿಗಳ ಬೆನ್ನ ಹಿಂದಿರುವ ಜನಪ್ರತಿನಿಧಿಗಳ ಬಣ್ಣ ಬಯಲಾಗಿದೆ. ಇದರ ಜೊತೆಯಲ್ಲಿ ಎತ್ತಿನ ಹೊಳೆ ಕಾಮಗಾರಿಯಲ್ಲಿ ಖರೀದಿಸಿರುವ ಪೈಪುಗಳ ವಿಚಾರವಾಗಿ ಮೂವರು ಸಚಿವರು ಅಕ್ರಮವೆಸಗಿರುವುದು ತಿಳಿದುಬಂದಿದೆ. ಭ್ರಷ್ಟ ಸರ್ಕಾರದ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು.
ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಶಿರಸ್ತೆದಾರರಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಪಕ್ಷದ ಸುರೇಂದ್ರಗೌಡ, ಅರಿಕೆರೆ ಮುನಿರಾಜು, ಭಾಸ್ಕರರೆಡ್ಡಿ, ರತ್ನಮ್ಮ, ಬೈರರೆಡ್ಡಿ, ಪ್ರತಾಪ್, ಅಶ್ವಾಕ್ ಅಹಮದ್, ಫಯಾಜ್ ಅಹಮದ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -







