18.8 C
Sidlaghatta
Monday, March 2, 2026

ಬೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

- Advertisement -
- Advertisement -

ರೈತರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಹಣ ಸಂದಾಯ ಮಾಡಿ ಒಂಬತ್ತು ತಿಂಗಳಾದರೂ ಈವರೆಗೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಅಳಿವಡಿಸಿಲ್ಲ ಎಂದು ಆರೋಪಿಸಿ ನಗರದ ಬೆಸ್ಕಾಂ ಕಚೇರಿಗೆ ರೈತರು ಹಾಗೂ ವಿವಿಧ ಮುಖಂಡರು ಸೋಮವಾರ ಬೀಗ ಜಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಲ್ಲಶೆಟ್ಟಿಪುರ ಗ್ರಾಮದ ದೇವರಾಜು, ವೆಂಕಟೇಶಪ್ಪ ಮತ್ತು ಅಬ್ಲೂಡು ಗ್ರಾಮದ ಅನಸೂಯಮ್ಮ ಎಂಬ ರೈತರು ಕಳೆದ ಏಪ್ರಿಲ್ ತಿಂಗಳಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಬೆಸ್ಕಾಂ ಇಲಾಖೆಗೆ ಹಣ ಸಂದಾಯ ಮಾಡಿದ್ದಾರೆ. ಒಂಬತ್ತು ತಿಂಗಳು ಕಳೆದರೂ ಈವರೆಗೂ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಅಳವಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ರೈತರು ಕಚೇರಿಗೆ ಪ್ರತಿನಿತ್ಯ ಅಲೆದು ಬೇಸತ್ತು ಹೋಗಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಗರಸಭೆ ಸದಸ್ಯ ಎಸ್.ರಘವೇಂದ್ರ ಮಾತನಾಡಿ ಲಕ್ಷಾಂತರ ರೂಗಳು ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿರುವ ರೈತರು ವಿದ್ಯುತ್ ಪರಿವರ್ತಕ ಅಳವಡಿಸದೇ ಇರುವುದರಿಂದ ಇರುವ ನೀರನ್ನು ಬಳಸಲಾಗುತ್ತಲ್ಲ. ಕೊಳವೆಬಾವಿ ಕೊರೆಸಲು ಹಾಗೂ ಜಮೀನಿನಲ್ಲಿ ಆಲೂಗಡ್ಡೆ ಬೆಳೆಯಿಡಲು ಬ್ಯಾಂಕ್ನಿಂದ ಪಡೆದಿರುವ ಸಾಲ ಮರು ಪಾವತಿ ಮಾಡಲಾಗದೇ ನರಳುವಂತಾಗಿದೆ ಎಂದರು.
ಕೂಡಲೇ ವಿದ್ಯುತ್ ಪರಿವರ್ತಕಗಳಿಗೆ ಹಣ ಸಂದಾಯ ಮಾಡಿರುವ ರೈತರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಎಂದು ಒತ್ತಾಯಿಸಿ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.
ಚಿಂತಾಮಣಿಯ ಉಪವಿಭಾಗದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೈಯ್ಯದ್ ರೆಹಮಾನ್ ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕೂಡಲೇ ಈ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಪಿ.ಕೆ.ಕಿಷನ್(ನಂದು), ಆಮ್ ಆದ್ಮಿ ಪಕ್ಷದ ತಾಲ್ಲೂಕು ಸಂಚಾಲಕ ಬಿ.ಆರ್.ರಾಮಚಂದ್ರ, ಮುಖಂಡರಾದ ಎನ್.ಮಹೇಶ್, ಆರ್.ರಾಘವೇಂದ್ರ, ರೈತರಾದ ದೇವರಾಜು, ವೆಂಕಟೇಶಪ್ಪ ಪಾಲ್ಗೊಂಡಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!