ರೇಷ್ಮೆ ಹುಳು ಸಾಕಾಣಿಕಾ ಮನೆಗಳ ಮೇಲ್ಛಾವಣಿಯಲ್ಲಿ ತೆಂಗಿನ ಗರಿ, ಒಣ ಹುಲ್ಲು ಅಥವಾ ಸೋಗೆಯನ್ನು ಹಾಕಿ ನೀರು ಹಾಯಿಸುವುದರಿಂದ ಉಷ್ಣತೆಯನ್ನು ಕಡಿಮೆಗೊಳಿಸಬಹುದಾಗಿದೆ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ತಿಳಿಸಿದರು.
ಬೇಸಿಗೆಯಲ್ಲಿ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ರೈತರಿಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸುತ್ತಾ ಅವರು ಮಾತನಾಡಿದರು.
ಹಿಪ್ಪುನೇರಳೆ ತೋಟಕ್ಕೆ ಬೆಳಗಿನ ಜಾವ ನೀರನ್ನು ಹಾಯಿಸಿದ ಸೊಪ್ಪನ್ನು ರಾತ್ರಿ ಹುಳುಗಳಿಗೆ ಬಳಸುವುದು ಹಾಗೂ ಸಾಯಂಕಾಲ ನೀರನ್ನು ಹಾಯಿಸಿದ ತೋಟದ ಸೊಪ್ಪನ್ನು ಬೆಳಿಗ್ಗೆ ನೀಡುವುದರಿಂದ ಹುಳುಗಳಿಗೆ ತಾಜಾ ಸೊಪ್ಪನ್ನು ನೀಡಬಹುದು. ಸೊಪ್ಪನ್ನು ಒದ್ದೆ ಗೋಣಿ ತಾಟಿನಿಂದ ಮುಚ್ಚಬೇಕು. ಕಿಟಕಿ ಬಾಗಿಲುಗಳನ್ನು ತೆರೆದಿರಿಸಿ ಅವುಗಳಿಗೆ ಗೋಣಿ ತಾಟು ಹಾಕಿ ನೀರು ಸಿಂಪಡಿಸಬೇಕು. ಎದುರು ಬಿಸಿಲು ತಡೆಯುವಂತೆ ಹುಳು ಸಾಕಾಣಿಕೆ ಮನೆಯ ಮುಂದೆ ಚಪ್ಪರ ಅವಶ್ಯವಾಗಿ ಹಾಕಬೇಕು. ಹುಳು ಸಾಕಾಣಿಕೆ ಮನೆಯಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರು ತುಂಬಿಸಿ ಇಡುವುದರಿಂದ ಉಷ್ಣಾಂಶವನ್ನು ನಿಯಂತ್ರಿಸಬಹುದು. ಬೇಸಿಗೆಯಲ್ಲಿ ಹುಳು ಸಾಕಾಣಿಕಾ ಮನೆಯನ್ನು ಸುಣ್ಣದಿಂದ ಬಳಿಯುವುದರಿಂದ ಬ್ಯಾಕ್ಟೀರಿಯ ಹಾಗೂ ವೈರಾಣುಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ವಿವರಿಸಿದರು.
ರೇಷ್ಮೆ ಉಪನಿರ್ದೇಶಕ ಎಂ.ಎನ್.ರತ್ನಯ್ಯಶೆಟ್ಟಿ, ರೀಲಿಂಗ್ ವಿಭಾಗದ ಸಹಾಯಕ ನಿರ್ದೇಶಕ ಎಂ.ನರಸಿಂಹಮೂರ್ತಿ, ವಿಸ್ತರಣಾಧಿಕಾರಿಗಳಾದ ತಿಮ್ಮರಾಜು, ಅರಸು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -