ಈಗಿನ ಮಕ್ಕಳು ಮನುಷ್ಯರಿಗಿಂತ ಮೊಬೈಲ್ ಜೊತೆಯೇ ಹೆಚ್ಚು ಕಾಲ ಕಳೆಯುತ್ತವೆ. ನಮ್ಮ ಮಕ್ಕಳು ನಮ್ಮನ್ನು ನೋಡುವುದಕ್ಕಿಂತ ಹೆಚ್ಚು ಟಿವಿ ನೋಡುತ್ತವೆ, ಪೋಷಕರ ಕೈಹಿಡಿಯುವ ಬದಲು ರಿಮೋಟ್ ಹಿಡಿಯುತ್ತವೆ ಎಂದು ಖ್ಯಾತ ಹಾಸ್ಯ ಕಲಾವಿದೆ ಸುಧಾ ಬರಗೂರ್ ಹಾಸ್ಯಮಿಶ್ರಿತವಾಗಿ ಬದುಕಿನ ವಾಸ್ತವತೆಯನ್ನು ತೆರೆದಿಟ್ಟರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ದಶಮಾನೋತ್ಸವ ಸಂಭ್ರಮದಲ್ಲಿ ನಡೆದ ‘ನಗೆ ಹಬ್ಬ’ದಲ್ಲಿ ಹಾಸ್ಯ ಚಟಾಕಿಗಳೊಂದಿಗೆ ಅವರು ಪ್ರೇಕ್ಷಕರನ್ನು ರಂಜಿಸಿದರು.

ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿ ಹಾಸ್ಯ ಪ್ರಸಂಗಗಳನ್ನು ವಿವರಿಸಿದರು. ಅಂಕಪಟ್ಟಿಯಷ್ಟೇ ಮಕ್ಕಳನ್ನು ಅಳೆಯುವ ಮಾಪನವಲ್ಲ, ಅವರ ಬುದ್ಧಿ, ಐಕ್ಯೂ ನಾವು ಅರ್ಥಮಾಡಿಕೊಳ್ಳಬೇಕು. ಸಂಸ್ಕಾರ ಕಲಿತಾಗಷ್ಟೇ ಅವರು ದೇಶಕ್ಕೆ ಆಸ್ತಿಯಾಗುತ್ತಾರೆ ಎಂದು ಹೇಳಿ ಅವರು ಹಲವು ನಗೆ ಚಟಾಕಿಗಳಿಂದ ಕುಳಿತಿದ್ದ ಎಲ್ಲರಲ್ಲೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಆನಂದದ ಕಡಲಲ್ಲಿ ತೇಲಿಸಿದರು.
ಕಲಾವಿದ ಬದ್ರಿನಾಥ್ ಮ್ಯಾಜಿಕ್ ಶೋ ಮೂಲಕ ಮಕ್ಕಳು, ಹಿರಿಯರನ್ನು ರಂಜಿಸಿದರು. ಮಿಮಿಕ್ರಿ ಕಲಾವಿದ ಮಹೇಶ್ ಹಲವು ರಾಜಕೀಯ ನಾಯಕರು ಮತ್ತು ನಟರ ಧ್ವನಿಯನ್ನು ಅನುಕರಣೆ ಮಾಡಿದರು.
ಶಶಿಕಲಾ, ಪೂರ್ಣಿಮಾ, ಸುಪ್ರೀತ್ ಫಲ್ಗುಣ ಅವರ ಚನ್ನಪಟ್ಟಣ ಸೋದರಿಯರ ತಂಡದಿಂದ ಜನಪದ, ವಚನ, ಶರೀಫರ ಹಾಗೂ ಹಳೆಯ ಕನ್ನಡ ಗೀತೆಗಳ ಗಾಯನ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ಯೋಜನಾ ನಿರ್ದೇಶಕ ಡಾ.ಎನ್.ಭಾಸ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಲಿಕ್ಕಾಧಿಕಾರಿ ಡಾ.ನಾಗೇಶ್, ಜಿಲ್ಲಾ ಖಜಾನಾಧಿಕಾರಿ ಮುನಿರೆಡ್ಡಿ, ಗೌರಿಬಿದನೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾರಾಯಣಸ್ವಾಮಿ ಅವರನ್ನು ತಹಶೀಲ್ದಾರ್ ಅಜಿತ್ಕುಮಾರ್ ರೈ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ ತಾಲ್ಲೂಕು ಆಡಳಿತದ ಪರವಾಗಿ ಗೌರವಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







