‘ಮನೆ ಬಾಗಿಲಿಗೆ ನಗರಸಭೆ’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ತ್ಯಾಜ್ಯವನ್ನು ಸಂಗ್ರಹಿಸುವುದರೊಂದಿಗೆ ತ್ಯಾಜ್ಯಗಳನ್ನು ವಿಂಗಡಿಸಿಡುವುದರ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಗರಸಭೆಯ ಗೋದಾಮುಗಳ ಬಳಿಯಿಂದ ತ್ಯಾಜ್ಯ ಸಂಗ್ರಹಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ವಿಂಗಡಿಸಿ ನಾಲ್ಕು ಭಾಗಗಳಿರುವ ಕಸ ಸಂಗ್ರಹಣೆಯ ತಳ್ಳುಗಾಡಿಗಳಲ್ಲಿ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಕಸವನ್ನು ಸಂಗ್ರಹಿಸಲು ಬರುವ ಪೌರ ಕಾರ್ಮಿಕರಿಗೆ ಗ್ಲೌಸ್, ಮಾಸ್ಕ್ ಮೊದಲಾದ ಪರಿಕರಗಳನ್ನು ನೀಡಿದ್ದು, ಊರಿನ ಆರೋಗ್ಯ ಕಾಪಾಡುವ ಅವರ ಆರೋಗ್ಯದ ಕಡೆಗೂ ಗಮನಹರಿಸಲಾಗಿದೆ. ಸಾರ್ಮಜನಿಕರು ಮನೆಗಳಲ್ಲಿ ಕಸವನ್ನು ವಿಂಗಡಿಸಿಟ್ಟು ಕಸ ಸಂಗ್ರಹಿಸಲು ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ವಿಂಗಡಣೆಯಾದ ಕಸವನ್ನು ನೀಡಿದಲ್ಲಿ ಅನುಕೂಲವಾಗುತ್ತದೆ. ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ನಮ್ಮ ಬಡಾವಣೆ ಹಾಗೂ ನಗರವನ್ನು ಸಹ ಸ್ವಚ್ಛವಾಗಿರಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಪ್ರತಿಯೊಂದು ವಾರ್ಡ್ ನಲ್ಲಿಯೂ ಈ ರೀತಿಯಾಗಿ ಕಸ ಸಂಸಗ್ರಹಿಸಲು ಪುಶ್ ಕಾರ್ಟ್ ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸಾರ್ವಜನಿಕರು ರಸ್ತೆ ಕೊನೆಯಲ್ಲಿ ಅಥವಾ ಚರಂಡಿಗಳಲ್ಲಿ ಮನೆಗಳ ತ್ಯಾಜ್ಯವನ್ನು ಸುರಿಯಬಾರದು ಎಂದು ಹೇಳಿದರು.
ನಗರಸಭೆಯ ಅಧಿಕಾರಿಗಳಾದ ದಿಲೀಪ್, ಸಯಿದಾ, ಆಂಜಿನಪ್ಪ, ಮುರಳಿ, ನಗರಸಭಾ ಸದಸ್ಯರಾದ ಜೆ.ಎಂ.ಬಾಲಕೃಷ್ಣ, ರಾಘವೇಂದ್ರ, ವೆಂಕಟಸ್ವಾಮಿ, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -