ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಸಂಗ್ರಹಿಸುವಂತಹ ರಕ್ತವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪ್ರಾಣ ರಕ್ಷಣೆಗಾಗಿ ಉಪಯೋಗ ಮಾಡಲಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ. ಗುರುರಾಜರಾವ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ಟಿಪ್ಪು ಸೆಕ್ಯುಲರ್ ಸೇನೆ, ಎಸ್.ಎನ್. ಕ್ರಿಯಾ ಟ್ರಸ್ಟ್ ಹಾಗು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಟಿಪ್ಪು ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ರಕ್ತದಾನದ ಜೊತೆಗೆ ಇತ್ತಿಚೆಗೆ ದೇಹದ ಅಂಗಾಂಗ ದಾನ ಮಾಡುವಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸುತ್ತಿರುವ ದೇಶದಲ್ಲಿ ಜನತೆ ಮಾನವೀಯತೆಯನ್ನು ಮೆರೆಯುತ್ತಿರುವುದು ಶ್ಲಾಘನೀಯ ಎಂದ ಅವರು ರಕ್ತದಾನದಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಳ್ಳುವುದರೊಂದಿಗೆ ರಕ್ತದಾನದಿಂದ ಆಗುವಂತಹ ಉಪಯೋಗಗಳ ಬಗ್ಗೆ ತಿಳಿದು ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡುವಂತಹ ಕೆಲಸ ಮಾಡಬೇಕು ಎಂದರು. ತಾಲೂಕಿನಾಧ್ಯಂತ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಈಗಾಗಲೇ ಸುಮಾರು ಸಾವಿರಾರು ಯೂನಿಟ್ ರಕ್ತ ಸಂಗ್ರಹಿಸಿರುವ ಕೀರ್ತಿಗೆ ಪಾತ್ರವಾಗಿದೆ.

ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಮಾತನಾಡಿ ಯುವಜನತೆ ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಬದಲಿಗೆ ದೇಹದಲ್ಲಿ ಹೊಸರಕ್ತ ಕಣಗಳು ಉತ್ಪತ್ತಿಯಾಗುವುದರಿಂದ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ ಎಂದರು.
ಅಪಘಾತಗಳು ಸಂಭವಿಸಿದಾಗ ರಕ್ತಸ್ರಾವ ಹೆಚ್ಚಾಗಿ ಅಪಘಾತಕ್ಕೀಡಾದವರು ಮೃತ ಪಡುವುದು ಸೇರಿದಂತೆ ಹೆರಿಗೆ ಹಾಗು ಶಸ್ತ್ರಚಿಕಿತ್ಸೆ ಸಮಯದಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ 18 ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡುವುದರಿಂದ ಬಹಳಷ್ಟು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಟಿಪ್ಪು ಸೆಕ್ಯುಲರ್ ಸೇನೆಯ ತಾಲೂಕು ಅಧ್ಯಕ್ಷ ಎಂ. ಮೌಲಾ, ಅಫ್ಜಲ್ ಪಾಷ, ಅಜೀಜ್ ಸಾಬ್, ಮುಜೀಬ್ ಸಾಬ್, ಮೈದಿನ್ ಸಾಬ್, ಜಭೀವುಲ್ಲಾ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -







