Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅತ್ಯಂತ ಹಳೆಯ ಔಷಧಿ ಅಂಗಡಿಗಳಲ್ಲಿ ಒಂದಾದ ತಿಲಕ್ ಸ್ಟೋರ್ಸ್ ನ ಮಾಲೀಕ ವಿ.ಎಸ್.ವಿ ಗುಪ್ತ (89) ಅವರು ವಯೋಸಹಜ ಕಾರಣಗಳಿಂದ ಬುಧವಾರ ಬೆಳಗ್ಗೆ ನಿಧನರಾದರು.
ಎಪ್ಪತ್ತರ ದಶಕದಲ್ಲಿ ಶಿಡ್ಲಘಟ್ಟದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸೇವಾ ಕಾರ್ಯಗಳನ್ನು ನಡೆಸಿದ್ದರು. ಕಳೆದ 35 ವರ್ಷಗಳಿಂದ ತಾಲ್ಲೂಕು ಔಷಧಿ ಅಂಗಡಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಗೌರವಾಧ್ಯಕ್ಷರಾಗಿದ್ದರು. 2012 ರಲ್ಲಿ ಥಾಯ್ಲೆಂಡ್ ದೇಶದಲ್ಲಿ ಔಷಧಿ ಸಂಘದಿಂದ ಅವರನ್ನು ಸನ್ಮಾನಿಸಲಾಗಿತ್ತು. ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ತಾಲ್ಲೂಕು ಔಷಧಿ ಸಂಘ, ವಾಸವಿ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಮೃತರ ಅಂತಿಮ ದರ್ಶನ ಪಡೆದು ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಅಂತ್ಯಸಂಸ್ಕಾರವನ್ನು ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
Sidlaghatta : ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಅಧಿಕಾರಿಗಳು ನಗರದಲ್ಲಿ ವಿವಿಧ ಕಡೆ ದಾಳಿ ಮಾಡಿ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ 16 ಗೃಹಬಳಕೆ ಸಿಲಿಂಡರ್ ಗಳನ್ನು ಜಪ್ತಿ ಮಾಡಿದ್ದಾರೆ.
ಗೃಹ ಬಳಕೆ ಉದ್ದೇಶಕ್ಕೆ ಮಾತ್ರ ಸೀಮಿತವಾಗಿರುವ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿರುವ ಮಾಹಿತಿ ಮೇರೆಗೆ ನಗರದ ಹೋಟೆಲ್, ಚಿಕನ್ ಶಾಪ್ ಹಾಗೂ ಟೀ ಸ್ಟಾಲ್ ಗಳ ಮೇಲೆ ದಾಳಿ ನಡೆಸಿ ಒಟ್ಟು 16 ಇಂಡೇನ್ ಕಂಪನಿಯ ಸಿಲಿಂಡರ್ ಗಳನ್ನ ಜಪ್ತಿ ಮಾಡಿದ್ದಾರೆ.
ಆಹಾರ ನಿರೀಕ್ಷಕಿ ವೆಂಕಟಲಕ್ಷ್ಮಮ್ಮ ಮತ್ತು ಆಹಾರ ನಿರೀಕ್ಷಕ ಪ್ರಕಾಶ್, ನೇತೃತ್ವದಲ್ಲಿ ದಾಳಿ ಮಾಡಿ 16 ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಅವುಗಳನ್ನ ಕರ್ನಾಟಕ ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿ ವಶಪಡಿಸಿಕೊಂಡು ಸುರಕ್ಷಿತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಇಂಡಿಯನ್ ಗ್ಯಾಸ್ ಏಜನ್ಸಿ ರವರ ವಶಕ್ಕೆ ನೀಡಲಾಗಿದೆ. ಇನ್ನು ಈ ದಾಳಿಯಲ್ಲಿ ಆಹಾರ ಇಲಾಖೆಯ ಹೇಮಂತ್ ಇದ್ದರು.
Sidlaghatta : ಕನ್ನಡ ಸಾಹಿತ್ಯ, ಸಮಾಜ ಸೇವೆ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಮಹಾನ್ ಚಿಂತಕರಾದ ದಿವಂಗತ ಡಿ.ವಿ. ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಮಂಗಳವಾರ ಶಿಡ್ಲಘಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ, ಡಿ.ವಿ. ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಸೇವೆಗಳನ್ನು ಸ್ಮರಿಸಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಶಿಕುಮಾರ್ ಅವರು, ಡಿ.ವಿ. ಗುಂಡಪ್ಪ ಅವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿದ್ದು, ಸಮಾಜಮುಖಿ ಚಿಂತನೆಗಳ ಮೂಲಕ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿತ್ವ ಎಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿತನವನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವೆಂಬ ಸಂದೇಶವನ್ನು ಡಿವಿಜಿ ತಮ್ಮ ಜೀವನಾಚರಣೆಯ ಮೂಲಕ ನೀಡಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಪತ್ರಕರ್ತರು ಸಮಾಜದ ಕನ್ನಡಿ ಎಂಬ ಹೊಣೆಗಾರಿಕೆಯನ್ನು ಅರಿತು, ಸತ್ಯಾಸತ್ಯತೆಯನ್ನು ಕಾಪಾಡುವಲ್ಲಿ ಬದ್ಧರಾಗಿರಬೇಕು. ಡಿವಿಜಿ ಅವರ ಆದರ್ಶಗಳು ಮತ್ತು ಚಿಂತನೆಗಳು ಇಂದಿನ ಪೀಳಿಗೆಯ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದ್ದು, ಅವುಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು ನಂತರ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಗದೀಶ್ ಬಾಬು, ಕೆ.ವಿ. ಮುನೇಗೌಡ, ಡಿ.ಜಿ .ಮಲ್ಲಿಕಾರ್ಜುನ, ಛಾಯಾ ರಮೇಶ್, ಕರಗಪ್ಪ, ನಂದಿ ರಾಜೇಶ್, ಮಿಥುನ್, ಲೋಕೇಶ್, ನಾರಾಯಣಸ್ವಾಮಿ, ರಾಮ್ ದಾಸ್ ಹಾಗೂ ನಯನ್ ಮಹೇಶ್ ಹಾಜರಿದ್ದರು.
Sidlaghatta : ವಿದ್ಯಾರ್ಥಿಗಳು ಯಾವುದೆ ಕಾರಣಕ್ಕೂ ಒತ್ತಡಕ್ಕೆ ಒಳಗಾಗದೆ ಶಾಂತ ಚಿತ್ತದಿಂದ ಪರೀಕ್ಷೆಯನ್ನು ಎದುರಿಸಿ. ಮನೆಗಳಲ್ಲೂ ಸಹ ಪೋಷಕರು ಮಕ್ಕಳ ಮೇಲೆ ವಿನಾಕಾರಣ ಒತ್ತಡ ಹಾಕುವುದು ಬೇಡ ಎಂದು ತಹಶೀಲ್ದಾರ್ ಎನ್.ಗಗನಸಿಂಧು ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳು ಹಾಗೂ ಪೋಷಕರಲ್ಲಿ ಮನವಿ ಮಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಸಮನ್ಯಯ ಸಭೆಯಲ್ಲಿ ಅವರು ಮಾತನಾಡಿದರು.
ಇದೆ ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಅದಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಸಮಚಿತ್ತದಿಂದ ಪರೀಕ್ಷೆಯನ್ನು ಬರೆಯಿರಿ ಎಂದು ಸಲಹೆ ನೀಡಿದರು.
ಜತೆಗೆ ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ವಿನಾಕಾರಣ ಹೆಚ್ಚು ಅಂಕಗಳಿಸುವಂತೆ ಒತ್ತಡ ಹಾಕದಿರುವಂತೆ ಮನವಿ ಮಾಡಿ, ಅವರು ಪರೀಕ್ಷೆಗೆ ಶಾಂತ ಚಿತ್ತವಾಗಿ ಸಿದ್ದವಾಗುವ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ ಎಂದು ಕೋರಿದರು.
ಒಟ್ಟಾರೆ ಈ ಬಾರಿ ಶಿಡ್ಲಘಟ್ಟದಲ್ಲಿ ಶೇ 100 ರಷ್ಟು ಫಲಿತಾಂಶ ಬರುವ ಭರವಸೆಯಿದೆ ಎಂದರು.
ತಾಲ್ಲೂಕಿನಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಒಟ್ಟು 10 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು 1363 ಬಾಲಕರು, 1323 ಬಾಲಕಿಯರು ಸೇರಿ ಒಟ್ಟು 2686 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
10 ಪರೀಕ್ಷಾ ಕೇಂದ್ರಗಳಲ್ಲಿ 190 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು ಪ್ರತಿ ಪರೀಕ್ಷಾ ಕೊಠಡಿಗೆ ಒಬ್ಬರಂತೆ 190 ಪರೀಕ್ಷಾ ಕೊಠಡಿ ಮೇಲ್ವಿಚಾರಕರು, 10 ಮಂದಿ ಮುಖ್ಯ ಅಧೀಕ್ಷಕರು, 4 ಮಂದಿ ಉಪ ಮುಖ್ಯ ಅಧೀಕ್ಷಕರು, 10 ಮಂದಿ ಕಸ್ಟೋಡಿಯನ್, ಪರೀಕ್ಷಾ ಕೇಂದ್ರದಲ್ಲೂ ಮೊಬೈಲ್ ಬಳಕೆ ನಿಷೇಧಿಸಿದ್ದು ಮೇಲ್ವಿಚಾರಕರದ್ದೂ ಸೇರಿ ಎಲ್ಲರ ಮೊಬೈಲ್ ಗಳನ್ನು ಸಂಗ್ರಹಿಸುವ 10 ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳು, 10 ಸ್ಥಾನಿಕ ಜಾಗೃತ ದಳ ಅಧಿಕಾರಿಗಳು, 20 ಮಂದಿ ಪೊಲೀಸ್ ಸಿಬ್ಬಂದಿ, 10 ಮಂದಿ ಆರೋಗ್ಯ ಸಿಬ್ಬಂದಿ ಯನ್ನೊಳಗೊಂಡ ಒಟ್ಟು 300 ಮಂದಿ ಪರೀಕ್ಷಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ನಗರಸಭೆ ಪೌರಾಯುಕ್ತೆ ಜಿ.ಅಮೃತ, ಶಿಕ್ಷಣ ಇಲಾಖೆಯ ಇಸಿಓ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಪರೀಕ್ಷಾ ಕೇಂದ್ರಗಳು :
1.ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಪುರಬೈರೇನಹಳ್ಳಿ, 2.ಜ್ಞಾನಜ್ಯೋತಿ ಶಾಲೆ ಜಂಗಮಕೋಟೆ ಕ್ರಾಸ್, 3.ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಡ್ಲಘಟ್ಟ, 4. ಸರ್ಕಾರಿ ಪ್ರೌಡಶಾಲೆ, ಮೆಲೂರು, 5, ಕನಾಟಕ ಪಬ್ಲಿಕ್ ಶಾಲೆ, ಬಶೆಟ್ಟಹಳ್ಳಿ, 6. ವಾಸವಿ ವಿದ್ಯಾ ಸಂಸ್ಥೆ, ಶಿಡ್ಲಘಟ್ಟ, 7. ಮೊರಾರ್ಜಿ ದೇಸಾಯಿ ವಸತಿ ಶಾಲೆ, 11ನೇ ಮೈಲಿ, 8. ಎಸ್.ವಿ.ಎಚ್.ಎಸ್ ಮಳ್ಳೂರು, 9. ಬಿಜಿಎಸ್ ಪಬ್ಲಿಕ್ ಶಾಲೆ, ಶಿಡ್ಲಘಟ್ಟ, 10.ಸರ್ಕಾರಿ ಪ್ರೌಡಶಾಲೆ, ಜಂಗಮಕೋಟೆ.
Malamachanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಜಿಲ್ಲೆಯಲ್ಲೇ ಅತಿ ಹೆಚ್ಚಿನ ಹಾಲು ಸರಬರಾಜು ಮಾಡುವ ಡೈರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು , ಉತ್ಪಾದಕರಿಗೆ ಅನುಕೂಲವಾಗಲಿ ಎಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಉತ್ಪಾದಕರ ಆರೋಗ್ಯ ನಿವಾರಣೆಗೆ ಮುಂದಾಗಿದೆ.
ದೇವನಹಳ್ಳಿಯ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆಕಾಶ್ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ ಹಾಗೂ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಬಿಪಿ, ಶುಗರ್, ಕಣ್ಣಿನ ಸಮಸ್ಯೆ, ಮೂಳೆ ರೋಗ , ಸ್ತ್ರೀ ರೋಗ ಸೇರಿದಂತೆ ಇನ್ನೂ ಅನೇಕ ಕಾಯಿಲೆಗಳಿಗೆ ಪರೀಕ್ಷೆ ಮಾಡಿ ಔಷಧಿಯನ್ನು ನೀಡಿದರು. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವವರನ್ನು ಹಾಗು ಶಸ್ತ್ರ ಚಿಕಿತ್ಸೆ ಅವಶ್ಯವಿರುವವರನ್ನು ದೇವನಹಳ್ಳಿ ಬಳಿ ಇರುವ ಆಕಾಶ್ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಆಕಾಶ್ ಆಸ್ವತ್ರೆಯ ಮಕ್ಸೂದ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು,ಆರೋಗ್ಯದ ಬಗ್ಗೆ ತಿಳುವಳಿಕೆ ನೀಡಲು ನಮ್ಮ ಆಸ್ವತ್ರೆ ಕಡೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನ ಹಮ್ಮಿಕೊಳ್ಳುತಿದ್ದು, ಶಿಬಿರಗಳಲ್ಲಿ ಎಲ್ಲಾ ಸಮಸ್ಯೆಗಳ ವೈದ್ಯರು ಭಾಗವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ. ಕೆ. ರಾಜಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು ಹೆಚ್ಚಿನ ಚಿಕಿತ್ಸೆ ಇರುವವರಿಗೆ ಆಕಾಶ್ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಈ ಶಿಬಿರದ ಅನುಕೂಲ ಪಡೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವಿನಯ್ ಕುಮಾರ್, ಸಂಘದ ಅಧ್ಯಕ್ಷ ದ್ಯಾವಪ್ಪ, ಎಂ. ಜಿ. ನವೀನ್ ಕುಮಾರ್, ಎಂ. ಎನ್. ರಾಮಚಂದ್ರಾಚಾರಿ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ನಿರ್ದೇಶಕರಾದ ಡಿಶ್ ವೆಂಕಟೇಶ್, ಎಂ. ಎನ್. ವೆಂಕಟೇಗೌಡ ,ಎಂ. ಎಸ್. ಕೃಷ್ಣಪ್ಪ , ಅಶೋಕ್, ಕೇಶವ ಮೂರ್ತಿ ಸೇರಿದಂತೆ ಉತ್ಪಾದಕರು ಹಾಗೂ ಮಳಮಾಚನಹಳ್ಳಿ ಗ್ರಾಮಸ್ಥರು ಹಾಜರಿದ್ದರು.
Sidlaghatta : ಜಿಲ್ಲೆಯ 25 ರೈತರು ಮತ್ತು 25 ರೈತ ಮಹಿಳೆಯರು ಐದು ದಿನಗಳ ಕಾಲ ಗೋಡಂಬಿ ಬೆಳೆ ಕುರಿತಂತೆ ಅಧ್ಯಯನ ಪ್ರವಾಸ ಮಾಡಿ ತರಬೇತಿ ಪಡೆದಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ಪುತ್ತೂರಿನಲ್ಲಿ “ಗೋಡಂಬಿ ಬೆಳೆಯ ಸುಧಾರಿತ ತಾಂತ್ರಿಕತೆಗಳು ಹಾಗೂ ಗೋಡಂಬಿ ಭವಿಷ್ಯವುಳ್ಳ ತೋಟಗಾರಿಕೆ ಬೆಳೆ” ಎಂಬ ಶೀರ್ಷಿಕೆಯ ಕಾರ್ಯಾಗಾರವನ್ನು ಆಯೋಜಿಸಿತ್ತು.
ತರಬೇತಿಯಲ್ಲಿ ಹಣ್ಣಿನ ಜ್ಯೂಸ್, ಪಲ್ಪ್, ಲಾಲಿಪಪ್, ಪೇಡಾ, ಉಪ್ಪಿನಕಾಯಿ, ಮಾಲ್ಟ್ ಹಾಗೂ ಬೀಜದಿಂದ ಯಾವ ರೀತಿ ಗೋಡಂಬಿ ಪಲ್ಪ್ ತಯಾರಿಸಬಹುದು ಎಂಬುದಾಗಿ ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.
ತಳಿಗಳ ಅಭಿವೃದ್ಧಿ ಕ್ಷೇತ್ರವಾದ ಉಳ್ಳಾಲ, ಮೂಡಿಗೆರೆಯಲ್ಲಿರುವ ನರ್ಸರಿ, ಶಿವಮೊಗ್ಗದ ತಾಂತ್ರಿಕ ಕೇಂದ್ರ ಮತ್ತು ನರ್ಸರಿ ಹಾಗೂ ಪ್ರಗತಿಪರ ರೈತರ ಮಿಶ್ರ ಬೆಳೆಯ ತೋಟಗಳನ್ನು ವೀಕ್ಷಿಸಿ ರೈತರು ಅನುಭವಗಳನ್ನು ಹಂಚಿಕೊಂಡರು.
“ಗೋಡಂಬಿಯನ್ನು ಬಡ ರೈತರು ಬೆಳೆದರೆ ಶ್ರೀಮಂತರು ತಿನ್ನುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ತೋಟ ಮತ್ತು ಮನೆ ಅಂಗಳದಲ್ಲಿ ಸಸಿ ನೆಟ್ಟರೆ ವರ್ಷಕ್ಕೆ ಆಗುವಷ್ಟು ಗೋಡಂಬಿ ದೊರೆಯುತ್ತದೆ. ಇಳಿಜಾರು ಹಾಗೂ ಗುಡ್ಡಗಳಂತಹ ಜಮೀನು ಇದಕ್ಕೆ ಸೂಕ್ತ. ನೀರಿಲ್ಲದ ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಗೋಡಂಬಿ ಬೆಳೆಯಬಹುದು. ಗೋಡಂಬಿ ತಳಿಗಳಾದ ಉಳ್ಳಾಲ 1, 2, 4 , ವೆಂಗುರ್ಲ 1, 3, 4, ಚಿಂತಾಮಣಿ 1, 2 ಮುಂತಾದ ತಳಿಗಳ ಬಗ್ಗೆ ಮಾಹಿತಿ ಪಡೆದೆವು. ಧರ್ಮಸ್ಥಳ ಹಾಗೂ ಕೊರಗಜ್ಜ ದೈವ ಸನ್ನಿಧಿಯ ದರ್ಶನ ಪಡೆದೆವು” ಎಂದು ರೈತ ಅಧ್ಯಯನ ಪ್ರವಾಸದ ಸಂಯೋಜಕ ಹಿತ್ತಲಹಳ್ಳಿಯ ಕೃಷಿ ಪಂಡಿತ ಪುರಸ್ಕೃತ, ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
Sidlaghatta: ಶಿಡ್ಲಘಟ್ಟ ನಗರದಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿಫಲವಾದ ಕೊಳವೆಬಾವಿಯನ್ನು ಮುಚ್ಚದೆ ಹಾಗೆಯೆ ಬಿಡಲಾಗಿದೆ. ಗುರುಭವನ ನಿರ್ಮಾಣಕ್ಕೆ ತೆಗೆದ ಪಾಯದ ಪಕ್ಕದಲ್ಲೆ ತೆರೆದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೆ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಹಿಂದೆ ಸರ್ಕಾರಿ ಪ್ರೌಢಶಾಲೆಗೆ ಕುಡಿಯುವ ನೀರು ಮತ್ತು ನಿರ್ವಹಣೆಗೆಂದು ನೀರಿಗಾಗಿ ಕೊಳವೆಬಾವಿಯನ್ನು ಕೊರೆಸಲಾಗಿತ್ತಾದರೂ ಕೊಳವೆಬಾವಿಯಲ್ಲಿ ನೀರು ಸಿಗದೆ ವಿಫಲವಾಗಿದೆ. ವಿಫಲವಾದ ಕೊಳವೆ ಬಾವಿಯನ್ನು ಆಗಲೆ ಕೊಳವೆಬಾವಿ ಕೊರೆದವರು ಮುಚ್ಚಬೇಕಿತ್ತು. ಮುಚ್ಚದೇ ಹಾಗೆಯೆ ಬಿಟ್ಟಿದ್ದಾರೆ.
ನೀರು ಸಿಗದೆ ವಿಫಲವಾದ ಕೊಳವೆ ಬಾವಿಯನ್ನು ಮುಚ್ಚುವ ಕೆಲಸವನ್ನು ನಗರಸಭೆಯವರು ಮಾಡಬೇಕಿತ್ತು. ಬದಲಿಗೆ ಮುಚ್ಚದೆ ಕೊಳವೆಬಾವಿ ಮೇಲೆ ಒಂದು ಚಿಕ್ಕ ಗಾತ್ರದ ಸೈಜು ಗಲ್ಲನ್ನು ಇಟ್ಟು ಬಿಟ್ಟು ಬಿಟ್ಟಿದ್ದಾರೆ.
ಅಲ್ಲಿ ಕೊಳವೆಬಾವಿಯನ್ನು ಮುಚ್ಚದೆ ಹಾಗೆಯೆ ಬಿಟ್ಟಿರುವುದು ಅಲ್ಲಿ ಸುತ್ತಾಡುವವರ ಕಣ್ಣಿಗೆ ಬೀಳುತ್ತದೆ. ಕೆಲ ವಿದ್ಯಾರ್ಥಿಗಳು ಸೈಜು ಗಲ್ಲನ್ನು ಪಕ್ಕಕ್ಕಿಟ್ಟು ಕೊಳವೆಬಾವಿ ಒಳಗೆ ಕಲ್ಲು ಎಸೆದು ನೀರು ಇದೆಯಾ ಇಲ್ಲವಾ ಅಥವಾ ಶಬ್ಧ ಹೇಗೆ ಬರುತ್ತದೆ ಎಂದು ಕಿವಿಗೊಟ್ಟು ಕೇಳಿಸಿಕೊಳ್ಳುವ ಆಟ ಆಡುತ್ತಾರೆ.
ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚುವ ಹೊಣೆ ನಗರಸಭೆಯದ್ದು. ಹಾಗಾಗಿ ಏನಾದರೂ ಅಪಾಯ ಆಗುವ ಮುನ್ನ ವಿಫಲ ಕೊಳವೆಬಾವಿಯನ್ನು ಮುಚ್ಚುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.