Nadipinayakanahalli, sidlaghatta : “ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ ದೊಡ್ಡದು ಎಂದು ಭಾವಿಸಿದರೆ ದೇಶದಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಶಿಸ್ತು ಮತ್ತು ಸಾರ್ವಜನಿಕ ಮೌಲ್ಯಗಳನ್ನು ಗೌರವಿಸುವುದೇ ಪ್ರಗತಿಯ ಹಾದಿ,” ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆ, ಕಪಿಲಮ್ಮ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದ 90ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಯಶಸ್ಸಿನ ರಹಸ್ಯ ಅಲ್ಲಿನ ಜನರ ‘ಸಾಮಾಜಿಕ ಶಿಸ್ತು’ ಎಂದು ಬಣ್ಣಿಸಿದರು.
ಯಶಸ್ಸಿಗೆ ನೆರವಾದ ಶಿಕ್ಷಕರ ಮಾತು: ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಘಟನೆಯನ್ನು ನೆನಪಿಸಿಕೊಂಡ ಮೂರ್ತಿಯವರು, “ಮೈಸೂರಿನ ಶಾರದಾ ವಿಲಾಸ್ ಶಾಲೆಯಲ್ಲಿ ನಾನು ಓದುವಾಗ ಕೆ.ವಿ. ನಾರಾಯಣ್ ಎಂಬ ಶಿಕ್ಷಕರು ಒಂದು ಮಾತು ಹೇಳಿದ್ದರು—’ನಮ್ಮ ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಹೆಚ್ಚು ಜಾಗರೂಕತೆಯಿಂದ ನಿರ್ವಹಿಸಬೇಕು’. ಈ ಮೌಲ್ಯವೇ ನಾನು ಇನ್ಫೋಸಿಸ್ ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಲು ಅಡಿಪಾಯವಾಯಿತು,” ಎಂದು ತಿಳಿಸಿದರು.
ಪರೀಕ್ಷೆ ಮತ್ತು ಶಿಕ್ಷಣ ವ್ಯವಸ್ಥೆ: ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸರಿಯಾದ ವೇಳಾಪಟ್ಟಿ ಮತ್ತು ನಿರಂತರ ತಯಾರಿ ಅಗತ್ಯ ಎಂದರು. ಭಾರತೀಯ ಮತ್ತು ವಿದೇಶಿ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸುತ್ತಾ, “ನಮ್ಮಲ್ಲಿ ಪರೀಕ್ಷೆಯಲ್ಲಿ ಅಂಕ ಪಡೆಯಲು ಮಾತ್ರ ಕಲಿಸಲಾಗುತ್ತಿದೆ. ಆದರೆ, ಪ್ರಶ್ನಿಸುವ ಮತ್ತು ಪ್ರಾಯೋಗಿಕವಾಗಿ ಚಿಂತಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ದೊಡ್ಡ ಸಂಶೋಧನೆಗಳು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
Sidlaghatta : KPCC ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿ, ನಿಂದಿಸಿರುವ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡ ಪರ ವಕೀಲರು ಚಿಂತಾಮಣಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಶನಿವಾರ ಅರ್ಜಿ ಸಲ್ಲಿಸಿದ್ದರು.
ಜಾಮೀನಿನ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜನವರಿ 22 ರ ಗುರುವಾರ ಕ್ಕೆ ಮುಂದೂಡಿದೆ.
“ರಾಜೀವ್ ಗೌಡ ತಲೆ ಮರೆಸಿಕೊಂಡಿದ್ದಾರೆ. ಕಾನೂನು ಪ್ರಕಾರವಾಗಿ ಕ್ರಮ ತಗೊಳ್ಳಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರು ನಮ್ಮ ಪಕ್ಷದವರಾಗಿರಲಿ ಅಥವಾ ಯಾವುದೇ ಪಕ್ಷದವರಾಗಿರಲಿ ಎಂದು ಹೇಳಿದ್ದೇನೆ” ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ.
Sidlaghatta : “ನೀವು ಒಬ್ಬಂಟಿಯಲ್ಲ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ” ಎನ್ನುವ ಭರವಸೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾ ಕಾರ್ಯಕರ್ತರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಸಾಂತ್ವನ ಹೇಳಿದರು. ರಾಜಕೀಯ ಮುಖಂಡರ ಬೆದರಿಕೆಯಿಂದ ಕುಗ್ಗಿದ್ದ ಮಹಿಳಾ ಅಧಿಕಾರಿಗೆ ಕನ್ನಡಪರ ಸಂಘಟನೆಗಳು ನೀಡಿದ ಬೆಂಬಲ ಹೊಸ ಚೈತನ್ಯ ನೀಡಿದೆ.
ಕರವೇ ಸಿಂಹ ಸೇನೆ ಅಧ್ಯಕ್ಷ ಶ್ರೀನಿವಾಸಗೌಡ ಹಾಗೂ ಮಹಿಳಾ ಕಾರ್ಯಕರ್ತರು ನಗರಸಭೆ ಕಚೇರಿಗೆ ಆಗಮಿಸಿ, ಪೌರಾಯುಕ್ತರಿಗೆ ಅರಿಶಿನ ಕುಂಕುಮ, ಫಲ ತಾಂಬೂಲ ಹಾಗೂ ರೇಷ್ಮೆ ಸೀರೆ ನೀಡಿ ಗೌರವಿಸಿದರು. ಈ ಮೂಲಕ ಒಬ್ಬ ಮಹಿಳಾ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಇಡೀ ನಾಡು ಜೊತೆಗಿರುತ್ತದೆ ಎಂಬ ಸಂದೇಶ ರವಾನಿಸಿದರು.
ಕನ್ನಡ ಸಂಘಟನೆಯ ಕಾರ್ಯಕರ್ತರು ನೀಡಿದ ಈ ಆತ್ಮೀಯ ಗೌರವ ಮತ್ತು ಸಾಂತ್ವನದ ನುಡಿಗಳನ್ನು ಕೇಳಿದ ಅಮೃತಾ ಗೌಡ ಅವರು ಕೆಲ ಕಾಲ ಭಾವೋದ್ವೇಗಕ್ಕೆ ಒಳಗಾದರು. ಅವರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು. “ನಿಮ್ಮೆಲ್ಲರ ಸಹಕಾರ ಮತ್ತು ನೀಡುತ್ತಿರುವ ಧೈರ್ಯದಿಂದ ನನಗೆ ಮತ್ತು ನನ್ನ ಸಿಬ್ಬಂದಿಗೆ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮನೋಸ್ಥೈರ್ಯ ಬಂದಿದೆ,” ಎಂದು ಅವರು ಭಾವುಕರಾಗಿ ನುಡಿದರು.
Sidlaghatta : ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ “ಕಲ್ಟ್” ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ವಿಚಾರವಾಗಿ ದೊಡ್ಡ ರಾದ್ಧಾಂತವೇ ನಡೆದ ಬೆನ್ನಲ್ಲೇ, ಶಿಡ್ಲಘಟ್ಟ ನಗರಸಭೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಸೌಂದರ್ಯಕ್ಕೆ ಅಡ್ಡಿಯಾಗಿದ್ದ ಹಾಗೂ ಸಂಚಾರಕ್ಕೆ ತೊಂದರೆ ನೀಡುತ್ತಿದ್ದ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್ಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಲ್ಲೆಲ್ಲಿ ಕಾರ್ಯಾಚರಣೆ? ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಕೋಟೆ ವೃತ್ತ, ತಾಲ್ಲೂಕು ಕಚೇರಿ ಮುಂಭಾಗ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ರಾಜಕೀಯ ಬ್ಯಾನರ್ಗಳು, ಶುಭಾಶಯದ ಪೋಸ್ಟರ್ಗಳು ಮತ್ತು ಶ್ರದ್ಧಾಂಜಲಿಯ ಫೋಟೋಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.
ವಿವಾದದ ಹಿನ್ನೆಲೆ: ಕೋಟೆ ವೃತ್ತದಲ್ಲಿ “ಕಲ್ಟ್” ಸಿನಿಮಾದ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಜಿ. ಅಮೃತಾ ಅವರಿಗೆ ಕರೆ ಮಾಡಿ ಏಕವಚನದಲ್ಲಿ ನಿಂದಿಸಿದ್ದರು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಡ್ಲಘಟ್ಟಕ್ಕೆ ಆಗಮಿಸಿದ್ದಾಗ ನಡೆದ ಬ್ಯಾನರ್ ವಿಚಾರವನ್ನು ಪ್ರಸ್ತಾಪಿಸಿ, “ನನ್ನ ತಾಕತ್ತು ಏನೆಂದು ತೋರಿಸಬೇಕಾಗುತ್ತದೆ” ಎಂದು ಧಮ್ಕಿ ಹಾಕಿದ್ದರು.
ತೀವ್ರಗೊಂಡ ಕಾನೂನು ಹೋರಾಟ: ರಾಜೀವ್ ಗೌಡ ಅವರ ಈ ವರ್ತನೆಯು ಕೇವಲ ಸ್ಥಳೀಯ ಪ್ರತಿಭಟನೆಗೆ ಸೀಮಿತವಾಗದೆ, ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮಹಿಳಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಇತ್ತ ಕೆಪಿಸಿಸಿ (KPCC) ಕೂಡ ರಾಜೀವ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪಕ್ಷಕ್ಕೂ ಈ ಘಟನೆ ಮುಜುಗರ ತಂದಿದೆ. ಈ ಎಲ್ಲ ರಾದ್ಧಾಂತಗಳ ನಡುವೆ ಅಧಿಕಾರಿಗಳು ಈಗ ನಗರವನ್ನು ಬ್ಯಾನರ್ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ.
Sidlaghatta : “ಕಾನೂನು ಅಥವಾ ಪೊಲೀಸರು ಹಾಕುವ ದಂಡಕ್ಕೆ ಹೆದರಿ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದಲ್ಲ. ನಮ್ಮ ರಕ್ಷಣೆ ಮತ್ತು ನಮ್ಮ ಮೇಲೆ ಅವಲಂಬಿತವಾಗಿರುವ ಕುಟುಂಬದ ಹಿತದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಪ್ರತಿಯೊಬ್ಬರ ಕರ್ತವ್ಯ,” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ ಅಂಗವಾಗಿ ರಾಮಚಂದ್ರಗೌಡ ಫೌಂಡೇಷನ್ (RCG Foundation) ವತಿಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವ ಉಳಿಸುವ ನಿಯಮಗಳು: ಕೇವಲ ಹೆಲ್ಮೆಟ್ ಧರಿಸುವುದು ಮಾತ್ರವಲ್ಲದೆ, ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ರಸ್ತೆ ಸುರಕ್ಷತೆಯು ರಾಷ್ಟ್ರೀಯ ಸಂಪತ್ತಾದ ಮಾನವ ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸೇವೆ ಮತ್ತು ಆದರ್ಶಗಳು ಇಂದಿಗೂ ನಮಗೆ ಮಾದರಿ ಎಂದು ಅವರು ಸ್ಮರಿಸಿದರು.
ಬೈಕ್ ರ್ಯಾಲಿ ಮೂಲಕ ಜಾಗೃತಿ: ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಲಾಯಿತು. ಬಳಿಕ ಹೆಲ್ಮೆಟ್ ಧರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ ಹಾಗೂ ಚಿಂತಾಮಣಿ ಮತ್ತು ಶಿಡ್ಲಘಟ್ಟದ ಹಲವು ಮುಖಂಡರು ಭಾಗವಹಿಸಿದ್ದರು.
ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರನ್ನು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಆಗ್ರಹಿಸಿದರು.
ಕಲ್ಟ್ ಚಲನಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಕಟ್ಟಿದ್ದ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕಾಗಿ ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ರಾಜೀವ್ ಗೌಡ ಮೊಬೈಲ್ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ ಗುಂಡಾವರ್ತನೆ ಮಾಡಿರುವುದನ್ನು ನಾನು ಮತ್ತು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.
ಹೆಣ್ಣು ಮಗಳ ಮೇಲೆ ದರ್ಪಮೆರೆದಿರುವ ರಾಜೀವ್ ಗೌಡನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು. ಆ ವ್ಯಕ್ತಿಯ ನಡುವಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನ ತೋರುತ್ತದೆ ಎಂದು ಆಪಾದಿಸಿದ ಅವರು ನಗರಠಾಣೆಯಲ್ಲಿ ರಾಜೀವ್ ಗೌಡರ ವಿರುದ್ದ ದೂರು ನೀಡಿದರು.
Sidlaghatta : “ಪೌರಾಯುಕ್ತರ ವಿರುದ್ಧ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ನಡೆದುಕೊಂಡಿರುವ ರೀತಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮುಜುಗುರ ತಂದಿದೆ. ಇಂತಹ ವ್ಯಕ್ತಿಯನ್ನು ಕ್ಷೇತ್ರಕ್ಕೆ ಪರಿಚಯಿಸಿ ತಪ್ಪು ಮಾಡಿದೆವು ಎಂದು ನನಗೂ ಮತ್ತು ನನ್ನ ತಂದೆಯವರಿಗೂ ಈಗ ಅನಿಸುತ್ತಿದೆ,” ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮುನಿಯಪ್ಪ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಂಡಿಗನಾಳದ ಮಾಜಿ ಸಚಿವ ವಿ. ಮುನಿಯಪ್ಪ ಅವರ ನಿವಾಸದಲ್ಲಿ ಗುರುವಾರ ನಡೆದ ಚೀಮುಲ್ ಚುನಾವಣಾ ಪೂರ್ವಭಾವಿ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಂಸ್ಕಾರವಿಲ್ಲದ ರಾಜಕಾರಣ:
“ನನ್ನ ತಂದೆ ವಿ. ಮುನಿಯಪ್ಪ ಅವರು 45 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದಾರೆ. ಅವರು ಎಂದಿಗೂ ಅಧಿಕಾರಿಗಳನ್ನು ಅಥವಾ ಜನಸಾಮಾನ್ಯರನ್ನು ಅಗೌರವದಿಂದ ಕಂಡವರಲ್ಲ. ನಮಗೂ ಅದನ್ನೇ ಕಲಿಸಿದ್ದರು. ಆದರೆ ರಾಜೀವ್ ಗೌಡ ಅವರು ಅಧಿಕಾರಿಗಳನ್ನು ನಿಂದಿಸಿರುವುದು ಮಾತ್ರವಲ್ಲದೆ, ಶಾಸಕರ ಬಗ್ಗೆಯೂ ಕೀಳುಮಟ್ಟದ ಪದಬಳಕೆ ಮಾಡಿ ಕ್ಷೇತ್ರದ ಶಾಂತಿಯುತ ವಾತಾವರಣವನ್ನು ಹಾಳು ಮಾಡಿದ್ದಾರೆ,” ಎಂದು ಕಿಡಿಕಾರಿದರು.
ಹೈಕಮಾಂಡ್ ಗಮನಕ್ಕೆ ದೂರು:
ಈ ಆಡಿಯೋ ಕೇಳಿ ಮಾಜಿ ಸಚಿವ ವಿ. ಮುನಿಯಪ್ಪ ಅವರು ತೀವ್ರವಾಗಿ ನೊಂದಿದ್ದಾರೆ ಎಂದು ತಿಳಿಸಿದ ಶಶಿಧರ್, “ಜನರ ಮುಂದೆ ನಾವು ತಲೆತಗ್ಗಿಸುವಂತಾಗಿದೆ. ಕಾರ್ಯಕರ್ತರು ಕೂಡ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ರಾಜೀವ್ ಗೌಡ ಅವರ ಕಾರ್ಯವೈಖರಿ ತಿದ್ದುಕೊಳ್ಳುವಂತೆ ಹಲವು ಬಾರಿ ಹೇಳಿದರೂ ಅವರು ಕೇಳಲಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷವು ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಿದ್ದೇವೆ,” ಎಂದು ಸ್ಪಷ್ಟಪಡಿಸಿದರು.
ರಾಜೀವ್ ಗೌಡ ಗೆ ಕೆ.ಪಿ.ಸಿ.ಸಿ ಯಿಂದ ನೋಟಿಸ್
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ವ್ಯಕ್ತಿಗತ ನಿಂದನೆ ಮಾಡಿ, ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿವೆ. ತಮ್ಮ ವರ್ತನೆಯು ಪಕ್ಷಕ್ಕೆ ಮುಜುಗರ ತಂದಿದ್ದು, ತಾವು ಶಿಸ್ತನ್ನು ಉಲ್ಲಂಘನೆ ಮಾಡಿರುವುದರಿಂದ ಕಾರಣ ಕೇಳಿ ನೋಟಿಸ್ ನೀಡಿದ್ದೇವೆ. ಒಂದು ವಾರದ ಒಳಗೆ ಸೂಕ್ತ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಶಿಸ್ತು ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟಿಸ್ ನೀಡಿದ್ದಾರೆ.
Jangamakote, Sidlaghatta : ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ನಡೆಸಿದ ನಿರಂತರ ಒಂದೂವರೆ ವರ್ಷದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಭೂಸ್ವಾಧೀನಕ್ಕಾಗಿ ಗುರುತಿಸಲಾಗಿದ್ದ ಒಟ್ಟು 2823 ಎಕರೆ ಜಮೀನಿನ ಪೈಕಿ, ರೈತರ ಬದುಕಿಗೆ ಆಧಾರವಾಗಿದ್ದ 471 ಎಕರೆ ಫಲವತ್ತಾದ ನೀರಾವರಿ ಪ್ರದೇಶವನ್ನು ಕೆಐಎಡಿಬಿ ಕೈಬಿಟ್ಟಿರುವುದನ್ನು ಹೋರಾಟ ಸಮಿತಿ ಸ್ವಾಗತಿಸಿದೆ.
ಜಂಗಮಕೋಟೆಯ ಶ್ರೀ ಪೂಜಮ್ಮ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ರೈತಪರ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಹಾಕಲು ಆಗ್ರಹ: ಸಭೆಯ ಬಳಿಕ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ರಾಮಾಂಜನೇಯ, “ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಂಡಿರುವುದು ನಮಗೆ ಖುಷಿ ತಂದಿದೆ. ಆದರೆ, ಉಳಿದ ಜಮೀನಿನ ವಿಷಯದಲ್ಲಿ ಸರ್ಕಾರ ಈಗ ತ್ವರಿತವಾಗಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಜಂಗಮಕೋಟೆ ಭಾಗದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯವಾಗಿದ್ದು, ಬಡ ರೈತರಿಗೆ ಅಲ್ಪ ಹಣ ನೀಡಿ ಜಿಪಿಎ (GPA) ಮಾಡಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರ ಶೀಘ್ರವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಭಾಗದ ಯುವಕರಿಗೆ ಉದ್ಯೋಗ ನೀಡಬೇಕು,” ಎಂದು ಒತ್ತಾಯಿಸಿದರು.
ತ್ವರಿತ ಕೈಗಾರಿಕೀಕರಣಕ್ಕೆ ಬೇಡಿಕೆ:
ಕೃಷಿ ಭೂಮಿಯನ್ನು ಹೊರತುಪಡಿಸಿ ಉಳಿದ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಂಡರೆ ಸ್ಥಳೀಯವಾಗಿ ಆರ್ಥಿಕ ಪ್ರಗತಿ ಕಾಣಬಹುದು ಎಂಬುದು ಸಮಿತಿಯ ಆಶಯವಾಗಿದೆ. ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ದಲಿತ ಸಂಘರ್ಷ ಸಮಿತಿಯ ರಾಮಾಂಜನೇಯ ಸೇರಿದಂತೆ ಹಲವು ಗ್ರಾಮಗಳ ರೈತ ಮುಖಂಡರು ಭಾಗವಹಿಸಿದ್ದರು.