ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ ಮತ್ತು ರೇಷ್ಮೆ ಕೃಷಿ) ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ ಕೃಷಿಗೆ ಸಂಬಂಧಪಟ್ಟ ಹಲವು ಉಪಯುಕ್ತ ವಸ್ತುಗಳನ್ನು ಪ್ರದರ್ಶಿಸುವುದರ ಜೊತೆಗೆ ಆಧುನಿಕ ಕೃಷಿ ಮಾಹಿತಿಯನ್ನು ರೇಷ್ಮೆ ಕೃಷಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿವಿಧ ಇಲಾಖೆಯ ವಿಷಯ ತಜ್ಞರು ನೀಡಿದರು.

ಕಳೆದ ಮೂರು ತಿಂಗಳಿನಿಂದ ದೇವರಮಳ್ಳೂರು ಗ್ರಾಮದಲ್ಲಿ ಬೀಡುಬಿಟ್ಟು ಸ್ಥಳೀಯ ಬೆಳೆಗಳು, ರೈತರ ಸಮಸ್ಯೆಗಳು, ಮಳೆ, ಭೂಮಿ, ಕೃಷಿ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡಿ ಗ್ರಾಮೀಣ ಅನುಭವ ಪಡೆದು ರೈತರೊಂದಿಗೆ ಸಂವಾದಿಸಿದ್ದ ಅಂತಿಮ ವರ್ಷದ ಬಿ.ಎಸ್ಸಿ(ಕೃಷಿ ಮತ್ತು ರೇಷ್ಮೆ ಕೃಷಿ) ವಿದ್ಯಾರ್ಥಿಗಳು ರೈತರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದಾಗಿ ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆಕೃಷಿ, ಪಶುವೈದ್ಯ ತಜ್ಞರು, ಮೀನುಗಾರಿಕೆ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಮಗ್ರ ಪೋಷಕಾಂಶಗಳ ನಿರ್ವಹಣೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಸಾವಯವ ಕೃಷಿ, ಎರೆಹುಳು ಗೊಬ್ಬರ, ಸಮಗ್ರ ಕೃಷಿ ಪದ್ಧತಿಗಳು, ಮಣ್ಣಿನ ಆರೋಗ್ಯ, ಸಮಗ್ರ ರೋಗಗಳ ನಿರ್ವಹಣೆ, ಹಿಪ್ಪುನೇರಳೆ ಬೇಸಾಯ, ಜೈವಿಕ ಇಂಧನ, ರೇಷ್ಮೆ ಹುಳು ಸಾಕಾಣಿಕೆ, ಮಾವಿನ ಮತ್ತು ಗೋಡಂಬಿ ಬೇಸಾಯ ಕ್ರಮಗಳು, ಹೈನುಗಾರಿಕೆ ಕುರಿತಂತೆ ಮಾಹಿತಿ ತಿಳಿಸುವ ವಸ್ತುಪ್ರದರ್ಶನದ ಮಳಿಗೆಗಳಿದ್ದವು. ಅಜೊಲ್ಲಾ ಬಗ್ಗೆ ಅರಿವು, ಉತ್ತಮ ರಾಸುಗಳ ಪ್ರದರ್ಶನ, ವಿಜ್ಞಾನಿಗಳು ಮತ್ತು ರೈತರಿಂದ ವಿಚಾರ ವಿನಿಮಯ ವಿಶೇಷವಾಗಿತ್ತು.
ದೇವರಮಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿದ್ದರು.
ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡಾ.ಕೆ.ಜಗದೀಶ್ವರ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಮ್ಮ ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಗೋಪಿನಾಯ್ಕ, ಡಾ.ವಿಜಯೇಂದ್ರ, ಡಾ.ಡಿ.ವಿ.ನವೀನ್, ಡಾ.ಎಂ.ವಿ.ಶ್ರೀನಿವಾಸರೆಡ್ಡಿ, ಡಾ.ಸಿ.ನಾರಾಯಣಸ್ವಾಮಿ, ಡಾ.ಆರ್.ಎನ್.ಲಕ್ಷ್ಮೀಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವರಮಳ್ಳೂರು ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನ
ಜಿಲ್ಲೆಯು ತೀವ್ರ ಬರವನ್ನು ಎದುರಿಸುತ್ತಿದೆ – ಕೃಷಿ ಸಚಿವ ಕೃಷ್ಣ ಬೈರೇಗೌಡ
ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಸೋಮವಾರ ತಾಲ್ಲೂಕಿನ ಹೊಸಪೇಟೆ ಪಂಚಾಯತಿಯ ಘಟಮಾರನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹೊಸಕೋಟೆಯ ಮೂಲಕ ಕೋಲಾರ ಜಿಲ್ಲೆಯ ಭೇಟಿಯನ್ನು ಮುಗಿಸಿ ತಾಲ್ಲೂಕಿನ ಮೂಲಕ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿ ಚಿಕ್ಕಬಳ್ಳಾಪುರದ ಕಡೆಗೆ ತೆರಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ತಾಲ್ಲೂಕು ಪಂಚಾಯತಿ, ಪುರಸಭೆ ಹಾಗೂ ರೈತ ಸಂಘದವರಿಂದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ‘ಜಿಲ್ಲೆಯು ಸಾಕಷ್ಟು ತೀವ್ರ ಬರವನ್ನು ಎದುರಿಸುತ್ತಿದೆ. ಈಗಾಗಲೇ ಅಂತರ್ಜಲ ಕುಸಿದು ಹುಲ್ಲೂ ಬೆಳೆಯದ ಸ್ಥಿತಿಯಲ್ಲಿದೆ. ಮಾವೂ ಒಣಗಿದೆ. ಅನೇಕ ಕಡೆ ಮೊಳಕೆಯಾಗಿಯೇ ಇಲ್ಲ. ಕೆಲವೆಡೆ ಮೊಳಕೆಯಾಗಿದ್ದರೂ ಒಣಗಿವೆ. ಎರಡನೇ ಬಿತ್ತನೂ ಒಣಗಿದ ನಿದರ್ಶನಗಳಿವೆ. ಶೇಕಡಾ 70 ರಿಂ 80 ರಷ್ಟು ಬೆಳೆ ನಷ್ಟವಾಗಿದೆ. ಜಾನುವಾರುಗಳಿಗೆ ನೀರಿಲ್ಲ, ಮೇವಿಲ್ಲದಂಥ ಪರಿಸ್ಥಿತಿಯಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಜಿಲ್ಲಾಧಿಕಾರಿಗಳು ಎಲ್ಲರೂ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಮುಖ್ಯಮಂತ್ರಿಗಳಿಗೆ ಸಮಗ್ರ ವರದಿಯನ್ನು ನೀಡಿ ತೀವ್ರ ಬರಗಾಲದ ಚಿತ್ರಣವನ್ನು ನೀಡುತ್ತೇವೆ. ಈ ವಾರದ ಸಂಪುಟದ ಸಭೆಯಲ್ಲಿ ಬರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಯಾವ ರೀತಿಯ ಪರಿಹಾರ ನೀಡಬೇಕು ಹೇಗೆ ನೀಡಬೇಕೆಂಬುದನ್ನೂ ಚರ್ಚಿಸಲಿದ್ದೇವೆ. ಪರಿಹಾರ ಎಷ್ಟೇ ನೀಡಿದರೂ ಅದು ನಷ್ಟಕ್ಕೆ ಸಮನಾದುದಲ್ಲ. ಆದರೂ ಸರ್ಕಾರದ ಕಡೆಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಜಾನುವಾರುಗಳ ಮೇವನ್ನು ಇತರ ಜಿಲ್ಲೆಗಳಿಂದ ತರಿಸುವ ಉದ್ದೇಶವೂ ಇದೆ. ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸಲು ದೂರಗಾಮಿ ಯೋಜನೆಗಳಾದ ಎತ್ತಿನ ಹೊಳೆ ಹಾಗೂ ಬೆಂಗಳೂರಿನಿಂದ ವರ್ತೂರು ಕೆರೆಗೆ ಹೋಗುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸುವ ಕೆಲಸಗಳೂ ಜಾರಿಯಲ್ಲಿವೆ’ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ,‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗುತ್ತಿದೆ. ಜನರು ಕಷ್ಟದಲ್ಲಿದ್ದಾರೆ. ಜಿಲ್ಲೆಯ ಮಗನಾಗಿರುವ ಕೃಷಿ ಸಚಿವರು ವಾಸ್ತವ ಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವರದಿ ನೀಡಿ ರೈತರ ಸಂಕಷ್ಟ ಮತ್ತು ಜಾನುವಾರುಗಳ ಮೇವಿನ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ನುಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ, ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ಪುರಸಭಾ ಸದಸ್ಯರಾದ ಬಾಲಕೃಷ್ಣ, ಚಿಕ್ಕಮುನಿಯಪ್ಪ, ಸುಬ್ರಮಣಿ, ಎನ್.ಮುನಿಯಪ್ಪ, ಮುನೇಗೌಡ, ಸುರೇಶ್, ಗೋಪಾಲ್, ಲಕ್ಷ್ಮೀನಾರಾಯಣ, ಬ್ಯಾಟರಾಯಶೆಟ್ಟಿ, ಎಚ್.ಎಂ.ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕ
ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ದುಡಿಯುವ ಹೆಂಗಸಿನ ಕಷ್ಟಗಳು, ಅನಕ್ಷರತೆ ಮುಂತಾದ ಹೆಣ್ಣಿನ ಶೋಷಣೆಗೆ ಸಂಬಂಧಿಸಿದ ‘ಹೆಣ್ಣು’ ಎಂಬ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಗಾಂಧಿ ನಗರದ ವಿಸ್ಡಂ ವಿದ್ಯಾಸಂಸ್ಥೆ ಆವರಣದಲ್ಲಿ ಈಚೆಗೆ ಐನಾ ಸಂಸ್ಥೆಯ ವತಿಯಿಂದ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಅದಕ್ಕೆ ಪರಿಹಾರವನ್ನೂ ಸೂಚಿಸುವ ನಾಟಕವನ್ನು ಪ್ರದರ್ಶಿಸಲಾಯಿತು.
ಗಂಡು ಮಕ್ಕಳು ವಂಶೋದ್ಧಾರಕರು ಎಂಬ ಭ್ರಮೆಯಿಂದ ವೈದ್ಯರಿಗೆ ಹಣ ನೀಡಿ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಬೆಳಕು ಚೆಲ್ಲಿದರು. ಹೆಣ್ಣು ಕೂಡ ಕುಟುಂಬವನ್ನು ಪೋಷಿಸಬಲ್ಲಳು ಎಂಬ ಸಂದೇಶ ನೀಡುತ್ತಾ ವೈದ್ಯರು ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವುದು ಅಪರಾಧ ಎಂಬುದನ್ನು ನಾಟಕದ ಪಾತ್ರಗಳ ಮೂಲಕ ತಿಳಿಸಲಾಯಿತು.
ಬಾಲ್ಯ ವಿವಾಹ ಮಾಡುವುದು ಅಪರಾಧ ಎಂಬುದನ್ನು ತಿಳಿಸಿಕೊಡುತ್ತಾ ಶಿಕ್ಷಣದಿಂದ ಹೆಣ್ಣು ಸ್ವಾವಲಂಭಿ ಜೀವನ ನಡೆಸಬಹುದೆಂದು ನಾಟಕದಲ್ಲಿ ತೋರಿಸಿದರು. ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪೋಕರಿಗಳನ್ನು ಶಿಕ್ಷಿಸುವ ಚಿತ್ರಣವನ್ನೂ ನೀಡಲಾಯಿತು.
‘ಹೆಣ್ಣಿನ ಶೋಷಣೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತದೆ. ಇಂಥಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ಶಾಲೆಯ ವತಿಯಿಂದ ಈ ರೀತಿಯ ಸಾಮಾಜಿಕ ಸಂದೇಶ ನೀಡುವ ನಾಟಕವನ್ನು ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸುತ್ತಾ ಅರಿವು ಮೂಡಿಸುತ್ತಿರುವುದು ಸಮಂಜಸವಾಗಿದೆ. ಹಿಂದುಳಿದ ವರ್ಗದ ಜನರಿರುವ ಪ್ರದೇಶಗಳಲ್ಲಿ ಈ ರೀತಿಯ ಸಂದೇಶ ಬೀರುವ ನಾಟಕಗಳನ್ನು ಪ್ರದರ್ಶಿಸಬೇಕು’ ಎಂದು ಶಿಕ್ಷಣ ಸಂಯೋಜಕ ರಾಮಣ್ಣ ತಿಳಿಸಿದರು.
ಏಕ ಪೋಷಕ ಇರುವ ಮಕ್ಕಳಿಗೆ ಇಲಾಖೆಯ ವಸತಿ ನಿಲಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಶೋಷಣೆ ಕಂಡುಬಂದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡುವಂತೆ ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕಾ ಹೇಳಿದರು.
ವಿಸ್ಡಂ ವಿದ್ಯಾಸಂಸ್ಥೆಯ ಮುಖ್ಯಸ್ಥ ವಿ.ನಾಗರಾಜ್, ಮುಖ್ಯಶಿಕ್ಷಕಿ ಮಾಲಾ ನಾಗರಾಜ್, ಶಿಕ್ಷಕಿಯರಾದ ಮಾಲಾಶ್ರೀ, ನಂದಿನಿ, ವಿನುತಾ, ಮಾನಸ, ನಯನ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧಮ್ಮ, ಐನಾ ಸಂಸ್ಥೆಯ ಸೆಲ್ವಾ ಮೇರಿ ದೊರೈ, ವೆರೋನಿಕಾ, ಜಯಶ್ರೀ, ಶಶಿಕಲಾ, ಮಂಜುಳಾ, ರೇಷ್ಮಾ, ಗಾಯತ್ರಿ. ಲಕ್ಕೀನಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರಾವಳಿಯ ರುಚಿಕರ ತಿನಿಸು – ಪತ್ರೊಡೆ
ಬೇಕಾಗುವ ಸಾಮಾಗ್ರಿ
10 ಕೆಸವಿನ ಸೊಪ್ಪು
1 ಟೀ ಕಪ್ಪು ಹೆಸರುಬೇಳೆ
1 ಟೀ ಕಪ್ಪು ಉದ್ದಿನಬೇಳೆ
1 ಟೀ ಕಪ್ಪು ಕಡಳೆಬೇಳೆ
1/2 ಟೀ ಕಪ್ಪು ಅಕ್ಕಿ
1 ಟೀ ಸ್ಪೂನ್ ಜೀರಿಗೆ, ಕೊತ್ತುಂಬರಿ
15 ಒಣಮೆಣಸು (ಖಾರ ಜಾಸ್ತಿ ಬೇಕಿದ್ದರೆ ಮೆಣಸು ಜಾಸ್ತಿ ಹಾಕಿಕೊಳ್ಳಿ)
ಒಂದು ಕಡಲೆಬೇಳೆ ಗಾತ್ರದಷ್ಟು ಇಂಗು
2 ನಿಂಬೆ ಗಾತ್ರದಷ್ಟು ಹುಣಸೆಹಣ್ಣು
ಉಪ್ಪು
ಒಂದು ನಿಂಬೆ ಗಾತ್ರದಷ್ಟು ಬೆಲ್ಲ
ಅರ್ಧ ತೆಂಗಿನ ಕಾಯಿ ತುರಿ
ಮಾಡುವ ವಿಧಾನ
ಮೊದಲು ಹುಣಿಸೆಹಣ್ಣನ್ನು ನೆನೆಸಿಟ್ಟಿಕೊಳ್ಳಿ. ಎಲ್ಲಾ ಬೇಳೆ ಮತ್ತು ಅಕ್ಕಿಯನ್ನು ಬೇರೆ ಬೇರೆಯಾಗಿ ಹುರಿಯಿರಿ. ಜೀರಿಗೆ ಕೊತ್ತುಂಬರಿ ಇಂಗು ಹುರಿಯಿರಿ. ಎಲ್ಲವನ್ನು ಒಣ ಪುಡಿಮಾಡಿಕೊಳ್ಳಿ. ಈ ಒಣಪುಡಿಗೆ ತೆಂಗಿನ ತುರಿ ನೆನೆಸಿಟ್ಟ ಹುಣಿಸೆರಸ, ಬೆಲ್ಲ, ಉಪ್ಪು, ಮೆಣಸಿನಕಾಯಿಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಕೆಸವಿನ ಎಲೆಯನ್ನು ಸ್ವಚ್ಛಗೊಳಿಸಿ ಅದರ ದಂಟನ್ನು ತೆಗೆದು ಎಲೆಯ ಹಿಂಬಾಗಕ್ಕೆ ಬೀಸಿದ ಮಸಾಲೆಯನ್ನು ಹಚ್ಚಿ ಅದರ ಮೇಲೆ ಇನ್ನೊಂದು ಎಲೆ ಇಟ್ಟು ಅದಕ್ಕು ಮಸಾಲೆ ಹಚ್ಚಿ, ಅದರ ಮತ್ತೊಂದು ಎಲೆ ಇಟ್ಟು ಮಸಾಲೆ ಹಚ್ಚಿ ಅದನ್ನು ಸುರುಳಿ ಸುತ್ತಿ ಎತ್ತಿಡಿ. ಉಳಿದ ಎಲೆಗೂ ಹೀಗೆ ಮಸಾಲೆ ಹಚ್ಚಿ ಸುರುಳಿ ಸುತ್ತಿ ಅದನ್ನು ಉಗಿಯಲ್ಲಿ 1/2 ಗಂಟೆ ಬೇಯಿಸಿ. ಒಮ್ಮೆ ಮುಚ್ಚಳ ತೆಗೆದು ನೋಡಿ ಎಲೆ ಬಾಡದಿದ್ದಲ್ಲಿ ಇನ್ನು 10 ನಿಮಿಷ ಬೇಯಿಸಿ. ನಂತರ ಬೇಯಿಸಿದ ಸುರುಳಿಯನ್ನು 2 ಅಥವಾ 3 ಭಾಗವಾಗಿ ಮಾಡಿ ಅದರ ಮೇಲ್ಮೈಗೆ ಸಣ್ಣರವೆ ಹಚ್ಚಿ ಕಾವಲಿ ಮೇಲೆ ಎಣ್ಣೆ ಹಾಕಿ ಫ್ರೈ ಮಾಡಿ, ತಿನ್ನಲು ಬಡಿಸಿ.
ಅಥವಾ
ಸುರುಳಿ ಸುತ್ತಿ ಬೇಯಿಸಿದ ಎಲೆಯನ್ನು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ. 6 ಈರುಳ್ಳಿಯನ್ನು ಸಣ್ಣಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ 8 ಚಮಚ ಕೊಬ್ಬರಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ ಸಿಡಿಸಿ, 2 ಹೆಚ್ಚಿದ ಹಸಿಮೆಣಸು ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಹೆಚ್ಚಿಟ್ಟ ಎಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಪಲ್ಯದಂತೆ ಆಗುತ್ತದೆ. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಅನ್ನಕ್ಕೂ ಕಲೆಸಿಕೊಳ್ಳಬಹುದು.
ಅಭಿಮಾನಿಗಳಿಂದ ವಿಷ್ಣುವರ್ಧನ್ ಅವರ 64 ನೇ ಹುಟ್ಟುಹಬ್ಬ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶುಕ್ರವಾರ ಸಾಹಸಿಂಹ ವಿಷ್ಣುವರ್ಧನ್ ಅವರ 64 ನೇ ಹುಟ್ಟುಹಬ್ಬವನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಆಚರಿಸಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಡೆಂಗ್ಯೂ ಜ್ವರದ ಅರಿವು ಮೂಡಿಸಲು ಜಾಥಾ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದಲ್ಲಿ ಈಚೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಜಾಥಾ ಮೂಲಕ ಡೆಂಗ್ಯೂ ಜ್ವರದ ಕುರಿತಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಆರೋಗ್ಯ ಸಹಾಯಕಿ ಮುನಿರತ್ನಮ್ಮ, ಮುಖ್ಯಶಿಕ್ಷಕ ಕೆ.ವಿ.ಪ್ರಕಾಶ್ಬಾಬು, ಶಿಕ್ಷಕರಾದ ವೆಂಕಟರೆಡ್ಡಿ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಹೇಮಲತಾ, ರಾದಮ್ಮ ಹಾಜರಿದ್ದರು.
ಮಳೆರಾಯ ಬರಲೆಂದು ಗಂಡು ಮಕ್ಕಳಿಗೆ ಮದುವೆ
‘ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಹಾಡುತ್ತಾ ತಾಲ್ಲೂಕಿನ ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

ಜಿಲ್ಲೆಯ ಗ್ರಾಮೀಣರು ಮಳೆ ಬಾರದಿದ್ದಾಗ ಹಲವು ಜಾನಪದ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ‘ಮಳೆರಾಯ’ನ ಪೂಜೆ ಅಥವಾ ‘ವಾನರಾಯ ಪೂಜ’ ಎಂದು ಕರೆಯುವ ಆಚರಣೆಗಳಲ್ಲಿ ಗ್ರಾಮಸ್ಥರೆಲ್ಲಾ ಒಗ್ಗೂಡುತ್ತಾರೆ. ಪಡ್ಡೆ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿ ಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸುತ್ತಾರೆ. ಅದನ್ನು ಹಲಗೆ ಮೇಲಿಟ್ಟು ಒಬ್ಬ ಹುಡುಗನ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮನೆಯವರು ರಾಗಿ, ಅಕ್ಕಿ, ಬೇಳೆ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸುರಿಯುತ್ತಾರೆ.

ಪ್ರತಿ ದಿನ ಚಂದ್ರಮನ ಆಕಾರದ ರಂಗೋಲಿಯನ್ನು ಗ್ರಾಮದ ಒಂದು ಮುಖ್ಯ ಸ್ಥಳದಲ್ಲಿ ಹಾಕಿ ಮಳೆರಾಯನನ್ನು ಪೂಜಿಸಲಾಗುತ್ತದೆ. ಇದನ್ನು ಐದು ಅಥವಾ ಒಂಭತ್ತು ದಿನಗಳು ಮುಂದುವರೆಸುತ್ತಾರೆ. ಕೊನೆಯ ದಿನದಂದು ಹೀಗೆ ಊರೆಲ್ಲಾ ಸುತ್ತಿ ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಉತ್ಸವ, ಕಲೆ, ಕಾವ್ಯ, ಹಾಡು, ಗೇಯಗಳಿಂದ ಆಚರಣೆಗೆ ಮೆರುಗನ್ನು ತುಂಬುತ್ತಾರೆ.

ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆರಾಯನ ಆಚರಣೆಯ ಕೊನೆಯ ದಿನ ಇಬ್ಬರು ಗಂಡು ಮಕ್ಕಳಿಗೆ ಯಥಾವತ್ ಗಂಡು ಹೆಣ್ಣಿನ ಮದುವೆಯ ರೀತಿಯಲ್ಲೇ ಮದುವೆಯನ್ನು ಮಾಡಿದರು. ಚೌಡಸಂದ್ರದಲ್ಲಿ ಮಳೆರಾಯನನ್ನು ಭರತೇಶ ಹೊತ್ತಿದ್ದರೆ, ಹೆಣ್ಣಿನ ವೇಷಧಾರಿಯಾಗಿ ಹರಿಕೃಷ್ಣ ಮತ್ತು ಗಂಡಿನ ವೇಷಧಾರಿಯಾಗಿ ರಮೇಶ್ ಆಚರಣೆಯಲ್ಲಿ ಭಾಗಿಯಾಗಿದ್ದರು. ಗ್ರಾಮದ ಮಹಿಳೆಯರು ರಾಗಿಮುದ್ದೆ, ಪಾಯಸ, ಅನ್ನ, ಸಾರನ್ನು ತಯಾರಿಸಿ ಎಲ್ಲರಿಗೂ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ಬಡಿಸಿದರು.
ಬರ ಪರಿಹಾರ ಕಾರ್ಯಗಳ ಜಾರಿಗೆ ಒತ್ತಾಯ
ಬರ ಪರಿಹಾರ ಕಾರ್ಯಗಳ ಜಾರಿಗೆ ಒತ್ತಾಯಿಸಿ ಡಿ.ವೈ.ಎಫ್.ವೈ ಸಮಿತಿಯ ಸದಸ್ಯರು ತಹಸಿಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೆದಾರರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರರು.
ಚಿಕ್ಕಬಳ್ಳಾಪುರ ಜಿಲ್ಲೆ ನಿರಂತರವಾಗಿ ಬರಗಾಲದಿಂದ ಬಳಲುತ್ತಿದ್ದು ಈ ವರ್ಷವೂ ಸಹ ಸಕಾಲದಲ್ಲಿ ಮಳೆಯಿಲ್ಲದೆ ಹಾಕಿದ ಬೆಳೆಗಳು ಒಣಗಿದ್ದು ರೈತರು ಜೀವನ ನಡೆಸಲು ಕಷ್ಟವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವದಿಂದ ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಗ್ರಾಮೀಣರಿಗೆ ಕೆಲಸ ಇಲ್ಲದಂತಾಗಿದೆ. ಬೀಕರ ಬರಗಾಲ ಎದುರಿಸಲು ಜಿಲ್ಲೆಗೆ ವಿಶೇಷ ಪ್ಯಾಕೇಜನ್ನು ರಾಜ್ಯ ಸರ್ಕಾರ ಘೋಷಿಸಬೇಕು. ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯಬೇಕು. ಎಲ್ಲಾ ಹಳ್ಳಿಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಶಿರಸ್ತೆದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಡಿ.ವೈ.ಎಫ್.ವೈ ರಾಜ್ಯ ಸಮಿತಿಯ ಸದಸ್ಯ ಮುನೀಂದ್ರ, ಜಿಲ್ಲಾ ಸಮಿತಿ ಸದಸ್ಯೆ ಲಕ್ಷೀದೇವಮ್ಮ, ಕಾರ್ಯದರ್ಶಿ ಮಂಜುಳಮ್ಮ, ನಟರಾಜ, ಸದಾನಂದ, ಮಂಜುನಾಥ, ನರಸಿಂಹ, ಅಶ್ವತ್ಥಮ್ಮ, ಭಾಗ್ಯಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುಂಬೈನಲ್ಲಿ ನಡೆದ ಅಕ್ಷಯ್ಕುಮಾರ್ ಇನ್ವಿಟೇಷನಲ್ ಕೂಡೋ ಚಾಂಪಿಯನ್ಷಿಪ್ನಲ್ಲಿ ಪದಕ

ಪಟ್ಟಣದ ದಿವ್ಯ ಭಾರತ್ ಡೋ ಅಸೋಸಿಯೇಷನ್ನ ಕರಾಟೆ ಪಟುಗಳು ಈಚೆಗೆ ಮುಂಬೈನಲ್ಲಿ ನಡೆದ ಅಕ್ಷಯ್ಕುಮಾರ್ ಆರನೇ ಇನ್ವಿಟೇಷನಲ್ ಕೂಡೋ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.
ಕುಮಿತೆ 37 ಕೆಜಿ ವಿಭಾಗದಲ್ಲಿ ಹರ್ಷನ್ ದ್ವಿತೀಯ ಸ್ಥಾನ, ಕುಮಿತೆ 45 ಕೆಜಿ ವಿಭಾಗದಲ್ಲಿ ನರಸಿಂಹ ತೃತೀಯ ಸ್ಥಾನ ಪಡೆದಿದ್ದಾರೆ. ಓಂ ದೇಶಮುದ್ರೆ, ಪ್ರದೀಪ್, ಜಯಸಿಂಹ, ಹೇಮಂತ್, ಜಗದೀಶ್, ಚೇತನ್ ಸಮಾಧಾನ ಬಹುಮಾನ ಪಡೆದಿರುವುದಾಗಿ ಕರಾಟೆ ಶಿಕ್ಷಕ ಅರುಣ್ಕುಮಾರ್ ತಿಳಿಸಿದ್ದಾರೆ.
ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ಪೂಜೆ
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ದೇವಾಲಯ ಕಟ್ಟಡದ ಪುನರ್ನಿರ್ಮಾಣದ ಅಂಗವಾಗಿ ವಿಶೇಷ ಪೂಜೆ, ಹೋಮ, ಅಗ್ನಿಕುಂಡ ಹಾಗೂ ದೀಪದಾರತಿಗಳನ್ನು ಆಯೋಜಿಸಲಾಗಿತ್ತು.
ಸುಮಾರು ನೂರಾರು ವರ್ಷಗಳ ಹಳೆಯದಾದ ದೇವಾಲಯದ ಕಟ್ಟಡವನ್ನು ಈಚೆಗೆ ಗ್ರಾಮಸ್ಥರೆಲ್ಲಾ ಸೇರಿ ಪುನರ್ನಿರ್ಮಾಣ ಮಾಡಿದ್ದರು.

ಊರ ಹಬ್ಬದಂತೆ ಗ್ರಾಮವನ್ನೆಲ್ಲಾ ಸಿಂಗರಿಸಲಾಗಿತ್ತು. ಎಲ್ಲರ ಮನೆಗಳ ಮುಂದೆಯೂ ರಂಗೋಲಿಗಳನ್ನು ಹಾಕಿ, ವಿದ್ಯುತ್ ದೀಪಗಳು, ತಳಿರು ತೋರಣಗಳು ಹಾಗೂ ಹೂಗಳಿಂದ ಮನೆಮನೆ, ಬೀದಿಬೀದಿಗಳನ್ನು ಅಲಂಕರಿಸಿದ್ದರು. ಗ್ರಾಮದ ಮಹಿಳೆಯರು ತಂಬಿಟ್ಟು ದೀಪಗಳನ್ನು ವಿವಿಧ ಹೂಗಳಿಂದ ಅಲಂಕರಿಸಿ ತಲೆಯ ಮೇಲಿಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಅಗ್ನಿಕುಂಡದಲ್ಲಿ ಹಾದು ಬಂದು, ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕುಂಡದಲ್ಲಿ ಹಾದು ಬಂದ ನಂತರ ಗ್ರಾಮಸ್ಥರೆಲ್ಲಾ ಅಭಯಾಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದವನ್ನು ವಿನಿಯೋಗಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಕೆ.ಜಿ.ಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಭಾಗವಹಿಸಿದ್ದರು.

