Home Blog Page 1041

ಗಂಜಿಗುಂಟೆಯಲ್ಲಿ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮ

0

ತಾಲ್ಲೂಕಿನ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಬರಗಾಲದ ಪ್ರಯುಕ್ತ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಜಿಲ್ಲೆಯಲ್ಲಿ ಬರಗಾಲವಿದ್ದು ಕುರಿ ಮೇಕೆ ಹಾಗೂ ದನಕರುಗಳಿಗೆ ಮೇವು ಸಿಗದೇ ಅತಿ ಹೆಚ್ಚು ಹಣ ಕೊಟ್ಟು ಖಾಸಗಿಯಾಗಿ ಮೇವು ಕೊಂಡುಕೊಳ್ಳಲು ಶಕ್ತಿಯಿಲ್ಲದೆ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಪ್ರಗತಿಪರ ಕುರಿ ಸಾಕಾಣಿಕಾದಾರರ ಸಹಕಾರ ಸಂಘದ ಸದಸ್ಯರುಗಳಿಗೆ ಮತ್ತು ಮೇವು ಬೆಳೆಯುವ ಅರ್ಹರಿಗೆ ಅಗಸೆ, ಜೋಳ, ಲೂಸನ್, ಅಲಸಂಧಿ ಬೀಜಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ’ ಎಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಅಗಿತ್ತು.
ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ.ಶಿವರಾಂ, ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕುರಿ ಉಣ್ಣೆ ನಿಗಮದ ಯೋಜನಾಧಿಕಾರಿ ಸೀತಾರಾಂ, ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ಯಾವಮ್ಮ, ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ ಚಂದ್ರಶೇಖರರೆಡ್ಡಿ, ನರಸಮ್ಮ, ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ಶಿವಣ್ಣ, ದ್ಯಾವಪ್ಪ, ಪಶುವೈದ್ಯಾಧಿಕಾರಿ ಡಾ.ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಆಚರಣೆ

0

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ(ಬಾಬಯ್ಯನವರ)ಹಬ್ಬ ಶ್ರಧ್ಧಾಭಕ್ತಿಯಿಂದ ಪಟ್ಟಣದಲ್ಲಿ ಆಚರಿಸಲಾಯಿತು.
ವಿಶೇಷ ಪ್ರಾರ್ಥನೆ ನಡೆಸಿ ಪಾನಕ ಮತ್ತು ಪ್ರಸಾದಗಳನ್ನು ಬರುವ ಭಕ್ತಾಧಿಗಳಿಗೆ ಹಂಚಿಕೆ ಮಾಡಿದರು. ಕಳೆದ ೬೦ ವರ್ಷಗಳಿಂದ ಕಳೆಗುಂದಿದ್ದ ಮೊಹರಂ ಹಬ್ಬಗೆ ಈ ಬಾರಿ ವಿಶೇಷ ಮೆರುಗು ನೀಡಲಾಗಿತ್ತು. ಈ ಸಂದರ್ಭದಲ್ಲಿ ಮುಜಾವರ್ ಅಬ್ದುಲ್ ರಶೀದ್ ಮತ್ತು ಮುಜಾವರ್ ನೌಷಾದ್(ಅಬ್ದುಲ್ ವಹಾಬ್) ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಿ ಮೊಹರಂ ಮಾಸದ ೧೦ನೇ ದಿನದಂದು ಆಶುರಾ ಕಾರ್ಯಕ್ರಮವನ್ನು ನೆರವೇರಿಸಿ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರು ಹುತಾತ್ಮರಾದ ಚರಿತ್ರೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಸಂಪ್ರದಾಯದಂತೆ ಮೊಹರಂ ಆಚರಣೆಗೆ ತೆರೆ ಎಳೆಯಲಾಯಿತು.
ಮಹಬೂಬ್ ನಗರದಲ್ಲಿ ಕಳೆದ ೧೦ ದಿನಗಳಿಂದ ಹಝರತ್ ಬಾರಾಇಮಾಂಗಳ ಹಸ್ತದ ಗುರುತಗಳನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಗ್ನಿಕುಂಡವನ್ನು ಮುಚ್ಚಿ ಅದರ ಮೇಲೆ ದಾಳಿಂಬೆ ಗಳನ್ನು ನೆಟ್ಟು ಪಂಜಗಳೊಂದಿಗೆ ಮೆರವಣಿಗೆ ನಡೆಸಿ ಇಲ್ಲಿನ ಹಝರತ್ ಅಮೀರ್ ಬಾಬಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪಂಜಗಳನ್ನು ಶುಧ್ದವಾದ ನೀರಿನಿಂದ ಶುಚಿಗೊಳಿಸಿ ಭದ್ರಗೊಳಿಸಿದರು.
‘ನಮ್ಮ ತಾತಾ ದಿ.ಮುಜಾವರ್ ಮಹಡಿ ಅಬ್ದುಲ್ ವಹಾಬ್ ಅವರ ಕಾಲದಿಂದಲೂ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರ ಸ್ಮರಣಾರ್ಥ ಮೊಹರಂ ಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಈ ಬಾರಿ ನಾಗರಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ವರ್ಷವು ಸಹ ವಿಜೃಂಭಣೆಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುವ ಮೂಲಕ ಸಂಪ್ರದಾಯವನ್ನು ಮುಂದುವರೆಸುತ್ತೇವೆ’ ಎಂದು ಮುಜಾವರ್ ಅಬ್ದುಲ್ ರಶೀದ್ ಹೇಳಿದರು.
ಈ ಸಂದರ್ಭದಲ್ಲಿ ಮುಜಾವರ್ ದಸ್ತಗೀರ್, ಮೊಹದೀನ್, ಅತೀಖ್, ಅಬ್ದುಲ್ ವಹಾಬ್, ಅಬ್ದುಲ್ ರಝಾಖ್, ಅಮೀರ್ ಪಾಷ, ಅಯೂಬ್, ಸಾಧಿಕ್ ಪಾಷ, ಶನ್ನು ಮತ್ತಿತರರು ಹಾಜರಿದ್ದರು.
[images cols=”five” lightbox=”true”]
[image link=”2114″ image=”2114″]
[image link=”2115″ image=”2115″]
[image link=”2116″ image=”2116″]
[image link=”2117″ image=”2117″]
[image link=”2118″ image=”2118″]
[/images]

ನೆಹರೂ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟ

0

ತಾಲ್ಲೂಕಿನ ಜಯಂತಿ ಗ್ರಾಮದ ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಫಲಿತಾಂಶ:
ಬಾಲಕರ 100 ಮೀಟರ್:
ಸುರೇಂದ್ರ(ಪ್ರಥಮ), ಶಾಹಿದ್ ಅಫ್ರಿದಿ(ದ್ವಿತೀಯ), ನಾಗರಾಜ್(ತೃತೀಯ)
ಬಾಲಕಿಯರ 100 ಮೀಟರ್:
ಜಿ.ಬಿ.ಭವಾನಿ(ಪ್ರಥಮ), ಎಂ.ಸೌಮ್ಯ(ದ್ವಿತೀಯ), ಎಂ.ಗೌತಮಿ(ತೃತೀಯ)
ಬಾಲಕರ 200 ಮೀಟರ್:
ಸುರೇಂದ್ರ(ಪ್ರಥಮ), ಮೊಹಮ್ಮದ್ ಸಾಗರ್ಪಾಷ(ದ್ವಿತೀಯ), ಜಯರಾಮ್(ತೃತೀಯ)
ಬಾಲಕಿಯರ 200 ಮೀಟರ್:
ಜಿ.ಬಿ.ಭವಾನಿ(ಪ್ರಥಮ), ಎಂ.ಸೌಮ್ಯ(ದ್ವಿತೀಯ), ಎಂ.ಗೌತಮಿ(ತೃತೀಯ)
ಬಾಲಕರ 5000 ಮೀಟರ್:
ನಾರಾಯಣಸ್ವಾಮಿ(ಪ್ರಥಮ), ಭರತ್(ದ್ವಿತೀಯ), ಲಕ್ಷ್ಮೀನಾರಾಯಣ(ತೃತೀಯ)
ಬಾಲಕಿಯರ 1500 ಮೀಟರ್:
ಜಿ.ಸಿ.ಅನೀತಾ(ಪ್ರಥಮ), ಸುವರ್ಣ(ದ್ವಿತೀಯ), ಅರ್ಚನಾ(ತೃತೀಯ)
ಕ್ರೀಡಾಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು

0

ಗ್ರಾಮೀಣ ಪ್ರದೇಶಗಳು ಸ್ವಚ್ಛವಾಗಿದ್ದರೆ ಅನಾರೋಗ್ಯ ಕಡಿಮೆಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಗಂಜಿಗುಂಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚೊಕ್ಕನಹಳ್ಳಿಮೂರ್ತಿ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳು ಸ್ವಚ್ಚವಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಸಾಕಷ್ಟು ಅನುಧಾನಗಳನ್ನು ಬಿಡುಗಡೆ ಮಾಡುತ್ತಿದೆ. ನರೇಗಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮುಖಾಂತರ ಹಳ್ಳಿಗಳ ಸ್ವಚ್ಛತೆಯನ್ನು ಕಾಪಾಡಲು ಒತ್ತು ನೀಡಲಾಗುತ್ತಿದೆ ಎಂದರು.
ಕುಟುಂಬಕ್ಕೊಂದು ಶೌಚಾಲಯ ನಿರ್ಮಾಣ, ಚರಂಡಿಗಳ ನಿರ್ಮಾಣ, ತೋಟಗಳಲ್ಲಿ ಬದುಗಳ ನಿರ್ಮಾಣ, ದನದ ಕೊಟ್ಟಿಗೆಗಳ ನಿರ್ಮಾಣ ಸೇರಿದಂತೆ ಹಲವು ಉದ್ದೇಶಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಆಸ್ಪತ್ರೆಯ ಆವರಣವನ್ನು ಸ್ವಚ್ಚಗೊಳಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ವೀರಭದ್ರಯ್ಯ, ಮುಖಂಡರಾದ ಚಂದ್ರಶೇಖರ್‌ರೆಡ್ಡಿ, ವೆಂಕಟೇಶ್, ಮುಖ್ಯಶಿಕ್ಷಕ ಶ್ರೀನಿವಾಸ್, ನಾಗರಾಜು, ವೆಂಕಟರಾಮಪ್ಪ ಮತ್ತಿತರರು ಹಾಜರಿದ್ದರು.

ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಪ್ರತಿಭಟನೆ

0

ಡಿ.ವೈ.ಎಫ್.ಐ. ಸಂಘಟನೆಯ ಕಾರ್ಯಕರ್ತರು ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಹಳ್ಳಿ ಗ್ರಾಮದ ಬಳಿಯಲ್ಲಿ ಚಿಂತಾಮಣಿ ಬಾಗೇಪಲ್ಲಿ ಕಡೆಗಳಿಂದ ಬರುತ್ತಿದ್ದ ಸಾರಿಗೆ ಬಸ್ಸುಗಳನ್ನು ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಸಹ ತಾಲ್ಲೂಕಿನ ಗಂಗಹಳ್ಳಿ, ಬಾಳೇಗೌಡನಹಳ್ಳಿ, ಕಾಚಹಳ್ಳಿ, ಸೇರಿದಂತೆ ಹಲವು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಭಾಗದಿಂದ ಶಿಡ್ಲಘಟ್ಟ, ಚಿಂತಾಮಣಿ, ಕಡೆಗಳಿಗೆ ಶಾಲಾ ಕಾಲೇಜುಗಳಿಗೆ ವಿಧ್ಯಾಭ್ಯಾಸಕ್ಕಾಗಿ ಹೋಗುವಂತಹ ವಿಧ್ಯಾರ್ಥಿಗಳು ಶಾಲೆಗಳನ್ನು ಬಿಟ್ಟು ಕೂಲಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಇದಕ್ಕೆಲ್ಲಾ ಇಲಾಖೆಯ ಅಧಿಕಾರಿಗಳೆ ಕಾರಣ. ಈ ಭಾಗದ ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವವರೆಗೂ ಬಸ್ಸುಗಳನ್ನು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಿವಪ್ರಸಾದ್ ಬೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಚರ್ಚೆ ನಡೆಸಿದ ನಂತರ ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಡಿ.ವೈ.ಎಫ್.ಐ. ಸಂಘಟನೆಯ ಪದಾಧಿಕಾರಿಗಳಾದ ಕುಂದಲಗುರ್ಕಿ ಮುನೀಂದ್ರ, ಲಕ್ಷ್ಮೀದೇವಮ್ಮ, ವೆಂಕಟೇಶ್, ಸದಾನಂದ, ರಾಜೇಂದ್ರ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ

0

ಪಟ್ಟಣದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ನುರಿತ ವಿಷಯ ತಜ್ಞರಿಂದ ಎರಡು ದಿನಗಳ ವಿಶೇಷ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿರವರು ಎಲ್ಲಾ ಶಿಕ್ಷಕರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ತಮ್ಮ ಕರ್ತವ್ಯಗಳಿಗೆ ಯಾವುದೇ ರೀತಿಯಲ್ಲಿಯೂ ಚ್ಯುತಿತರದೆ ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಕಾರ್ಯಾಗಾರದ ಸದುಪಯೋಗಪಡೆದುಕೊಂಡು ವಿದ್ಯಾರ್ಥಿಗಳ ಜ್ಞಾನವಿಕಸನಗೊಳಿಸುವುದರಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ವಿಷಯ ಪರಿವೀಕ್ಷಕರಾದ ಉಸ್ಮಾನ್ ಸಾಬ್, ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ವೆಂಕಟಸುಬ್ಬರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯಶಿಕ್ಷಕಿ ವಿ. ಸೀತಾಲಕ್ಷ್ಮಿ, ವಿಷಯ ಪರಿಣಿತರಾದ ಪ್ರೊ. ವೇಣುಗೋಪಾಲ್, ಪ್ರೊ. ಅರುಣಾಚಲಂ, ಪ್ರೊ. ಅಶ್ರಫ್ ಅಲಿ, ಪ್ರೊ. ಚಂದ್ರಿಕಾ, ವಿಜ್ಞಾನ ಶಿಕ್ಷಕ ಬಾಲಗಂಗಾಧರ ತಿಲಕ್‌, ಸುಂದರನ್‌, ಶಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸುಮಧುರವಿಲ್ಲದ ಗಾಯಕರ ಬದುಕು

0

ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾದ ಘಂಟಸಾಲ ಅವರನ್ನು ಅನುಕರಿಸುವವರು ವಿರಳ. ಆದರೆ ಪಟ್ಟಣದಲ್ಲಿ ಮಂಗಳವಾರ ಹಾರ್ಮೋನಿಯಂ ನುಡಿಸುತ್ತಾ ಘಂಟಸಾಲ ಅವರ ಮಧುರ ಗೀತೆಗಳನ್ನು ಹಾಡುತ್ತಾ ಸಾಗಿದ್ದ ವ್ಯಕ್ತಿಯೊಬ್ಬರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಮಧುರ ಗೀತೆಗಳ ಸೊಲ್ಲನ್ನು ತಿಳಿದಿದ್ದ ಹಿರಿಯರು ಆ ದನಿಗೆ ಕಿವಿಯಾಗಿ ಇದ್ದ ಕೆಲಸವನ್ನು ಬಿಟ್ಟು ಅವರ ಹತ್ತಿರ ನಿಂತರೆ, ಯುವಕರು ಕೂಡ ಸುಸ್ವರಕ್ಕೆ ಮಾರುಹೋಗಿ ಇವರ ಬಳಿ ಜಮಾಯಿಸಿದ್ದರು.
ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಮಂಡಲ್‌ನ ಕಮ್ಮದೂರಿನ ವೆಂಕಟೇಶ್ವರ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ತನ್ನ ಹಾಡುವ ಕಲೆಯಿಂದ ಭಿಕ್ಷಾಟನೆ ನಡೆಸುತ್ತಾ ಊರೂರು ಸುತ್ತುತ್ತಾ ಶಿಡ್ಲಘಟ್ಟಕ್ಕೆ ಬಂದಿದ್ದಾರೆ. ಗಂಡನೊಂದಿಗೆ ಹೆಂಡತಿಯೂ ಸುಸ್ವರದಿಂದ ಗತಕಾಲದ ಸುಂದರ ಗೀತೆಗಳನ್ನು ಹಾಡುತ್ತಾ ಘಂಟಸಾಲರನ್ನು ನೆನಪಿಸುತ್ತಿದ್ದಾರೆ. ಪಟ್ಟಣದ ಜನರು ಘಂಟಸಾಲ ಅವರ ಕಂಚು ಕಂಠದ ಎತ್ತರದ ಧ್ವನಿಯ ಮಾಧುರ್ಯದ ಹಾಡುಗಳನ್ನು ಈಗ ಪುನಃ ಸವಿಯುವಂತಾಗಿದೆ.
ಸತ್ಯ ಹರಿಶ್ಚಂದ್ರ ಚಿತ್ರದ ಕ್ಲಿಷ್ಟವಾದ ಹಾಡೆಂದೇ ಪರಿಗಣಿತವಾದ ‘ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ, ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ, ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೆ..’, ಗೃಹಲಕ್ಷ್ಮಿಯಾದ ಮನೆಯೊಡತಿಯ ಕುರಿತು ಹಾಡಿರುವ ದೇವತಾ ಚಿತ್ರದ ‘ಇಲ್ಲಾಲೇ ಈ ಜಗತಿಕಿ ಜೀವನ ಜ್ಯೋತಿ’, ಜೀವನದುದ್ದಕ್ಕೂ ಬಂಧಗಳನ್ನು ಹೊತ್ತರೂ ಸತ್ತ ನಂತರ ಹೊರುವವರಿರರು ಎಂಬ ವಾಸ್ತವ ಸತ್ಯ ಹೇಳುವ ‘ಈ ಜೀವನ ತರಂಗಾಲಲೊ, ಆ ದೇವುನಿ ಚದುರಂಗಂಲೊ, ಎವರಿಕಿ ಎವರು ಸ್ವಂತಮು, ಎಂಥವರಿಕೀ ಬಂಧಮು’ ಎಂಬ ಸಾರ್ವಕಾಲಿಕ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಲೆಯ ದೇವತೆ ಬಡವಳು ಎಂಬ ಆಡು ಮಾತಿನಂತೆ ಉತ್ತಮ ಕಂಠ ಹೊಂದಿದ ವೆಂಕಟೇಶ್ವರ ದಂಪತಿಗಳದ್ದು ಕಷ್ಟದ ಬದುಕು. ಇರುವ ಮೂರು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆಯಾದರೆ ಮತ್ತೊಬ್ಬ ಕಿವುಡ. ‘ನಮ್ಮ ತಾತನ ಕಾಲದಿಂದಲೂ ಕಲೆಯನ್ನೇ ನಂಬಿದ್ದೇವೆ. ಹಿಂದೆ ಹರಿಕಥೆ ನಡೆಸುತ್ತಿದ್ದೆವು, ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದೆವು. ಆದರೆ ಈಗ ಅವುಗಳನ್ನು ಆಸ್ವಾದಿಸುವವರು ಪೋಷಿಸುವವರು ಕಡಿಮೆಯಾಗಿದ್ದಾರೆ. ಜಮೀನು ಇಲ್ಲದ ಕಾರಣ ನಾವು ತಿಳಿದ ವಿದ್ಯೆಯನ್ನೇ ಅವಲಂಬಿಸಿ ಭಿಕ್ಷೆಯ ಮೂಲಕ ಬದುಕುವಂತಾಗಿದೆ. ಹಾರ್ಮೋನಿಯೇ ನಮ್ಮ ಆಸ್ತಿ’ ಎನ್ನುತ್ತಾರೆ ವೆಂಕಟೇಶ್ವರ ದಂಪತಿಗಳು.

ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಐದು ನೂರು ವರ್ಷಗಳ ಇತಿಹಾಸವಿರುವ ಪಾಳೇಗಾರರ ವಂಶಸ್ಥರು

0

ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಚಿಕ್ಕಬಳ್ಳಾಪುರದ ಪಾಳೇಗಾರರ ವಂಶಸ್ಥರು ತಮ್ಮ ಗತ ಇತಿಹಾಸದ ನೆನಪುಗಳೊಂದಿಗೆ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸಿಸುತ್ತಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯ ಉಪ್ಪರಿಗೆಯಲ್ಲಿ ಕಟ್ಟಿಟ್ಟಿರುವ ಆಯುಧಗಳಾದ ಈಟಿ, ಭರ್ಜಿ, ಕತ್ತಿ ಮತ್ತು ಬೀಜ ಬಿತ್ತಲು ಬಳಸುವ ಕೆತ್ತನೆಗಳಿರುವ ಹಲುವಿ.

ಪಾಳೇಪಟ್ಟಿನ ನೆನಪಿಗಾಗಿ ಆಯುಧಗಳಾದ ಭರ್ಜಿ, ಕಡ್ಗ, ಈಟಿ ಮತ್ತು ಗುರಾಣಿ, ಕಬ್ಬಿಣದ ಪೆಟ್ಟಿಗೆ, ಲೆಕ್ಕಬರೆಯುವ ಆಸನ, ಹಳೆ ಪಾತ್ರೆ ಪಡಗಗಳು ಮತ್ತು ಕೃಷಿ ಉಪಕರಣಗಳನ್ನು ಉಳಿಸಿಕೊಂಡಿದ್ದಾರೆ. ಕಾಲದ ಹೊಡೆತಕ್ಕೆ ಸಿಕ್ಕ ಹಳೆಯ ಮನೆಯನ್ನು ಕೊಂಚ ಆಧುನೀಕರಿಸಿಕೊಂಡಿದ್ದಾರೆ. ಎಂದಿನ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುವ ಇವರಿಗೆ ತಮ್ಮ ಗತ ಇತಿಹಾಸದ ನೆನಪು ಮರುಕಳಿಸುವುದು ವರ್ಷಕ್ಕೊಮ್ಮೆ ಮನೆಯಲ್ಲಿರುವ ಕೆಲವೇ ಆಯುಧಗಳನ್ನು ಪೂಜೆಗೆ ತೆಗೆದಾಗ ಮಾತ್ರ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ ಅವರ ಮನೆಯಲ್ಲಿರುವ ಪುರಾತನ ಕಬ್ಬಿಣದ ಪೆಟ್ಟಿಗೆಯ ಮೇಲೆ ಗಂಡುಬೇರುಂಡದ ಲಾಂಚನಗಳಿವೆ.

‘೧೪೭೮ರಲ್ಲಿ ಈ ಮನೆತನದ ಮಲ್ಲಭೈರೇಗೌಡ ತನ್ನ ಮಗ ಮರಿಗೌಡನೊಂದಿಗೆ ಈಗ ಚಿಕ್ಕಬಳ್ಳಾಪುರ ಪಟ್ಟಣವಿರುವ ಸ್ಥಳದಲ್ಲಿ ಹಿಂದೆ ಇದ್ದ ಕೋಡಿಮಂಚಹಳ್ಳಿ ಗ್ರಾಮದಲ್ಲಿ ಕೋಟೆ ಕಟ್ಟಿ ಪೇಟೆಯನ್ನು ಸ್ಥಾಪಿಸಿದರಂತೆ. ಈ ಮನೆತನದವರು ಶಿಡ್ಲಘಟ್ಟವನ್ನು ಖರೀದಿಸುವ ಮೂಲಕ ತಮ್ಮ ಪಾಳೇಪಟ್ಟಿನ ವ್ಯಾಪ್ತಿಯನ್ನು ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ ಹಾಗೂ ಇಟ್ಕಲ್ ದುರ್ಗಗಳಲ್ಲಿ ಕೋಟೆಯನ್ನು ಕಟ್ಟುವ ಮೂಲಕ ಪಾಳೇಪಟ್ಟನ್ನು ಭದ್ರಪಡಿಸಿಕೊಂಡರು. ಮರಿಗೌಡ, ದೊಡ್ಡಭೈರೇಗೌಡ, ರಂಗಪ್ಪಗೌಡ, ಜೋಗಿಭೈರೇಗೌಡ ಮುಂತಾದವರು ಆಳ್ವಿಕೆಯನ್ನು ನಡೆಸಿದರು. ಬೈಚೇಗೌಡನ(೧೭೦೫-–೧೭೨೧) ಆಳ್ವಿಕೆಯಲ್ಲಿ ಮೈಸೂರು ಅರಸರ ಮುತ್ತಿಗೆಯನ್ನು ಮರಾಠರ ಸಹಾಯದಿಂದ ಹಿಮ್ಮೆಟ್ಟಿಸಲಾಯಿತು.
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ
ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣ

೧೭೬೨ರಲ್ಲಿ ಹೈದರಾಲಿಯು ಚಿಕ್ಕಬಳ್ಳಾಪುರದ ಕೋಟೆಗೆ ಮುತ್ತಿಗೆ ಹಾಕಿ ಮೂರು ತಿಂಗಳ ಕಾಲ ಹರಸಾಹಸ ಮಾಡಿದರೂ ಸ್ವಾಧೀನಪಡಿಸಿಕೊಳ್ಳಲಾಗದೇ ಐದು ಲಕ್ಷ ಪಗೋಡವನ್ನು ಪೊಗದಿಯಾಗಿ ಪಡೆದು ಮುತ್ತಿಗೆಯನ್ನು ಹಿಂಪಡೆಯಲಾಯಿತು. ಹೈದರಾಲಿಯು ಸೈನ್ಯದೊಂದಿಗೆ ತೆರಳಿದೊಡನೆ ಪಾಳೇಗಾರ ಚಿಕ್ಕಪ್ಪಗೌಡ ಸಹಾಯಕ್ಕಾಗಿ ಮರಾಠ ಸೈನ್ಯವನ್ನು ಕರೆಸಿಕೊಂಡ. ಈ ಬೆಳವಣಿಗೆಯನ್ನು ಸಹಿಸದ ಹೈದರಾಲಿ ತಕ್ಷಣವೇ ಮರುಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡನು. ಅದರ ಬೆನ್ನಲ್ಲೇ ನಂದಿದುರ್ಗ, ಕಳವಾರದುರ್ಗ, ಗುಡಿಬಂಡೆ, ಇಟ್ಕಲ್‌ದುರ್ಗ ಹಾಗೂ ಕೋಟೆಕೊಂಡಗಳನ್ನೂ ಸ್ವಾಧೀನಪಡಿಸಿಕೊಂಡನು. ಚಿಕ್ಕಬಳ್ಳಾಪುರ ಪಾಳೇಗಾರ ಚಿಕ್ಕಪ್ಪಗೌಡ ಮತ್ತವನ ಕುಟುಂಬವನ್ನು ಬಂಧಿಸಿ ಬೆಂಗಳೂರಿನ ಸೆರೆಮನೆಯಲ್ಲಿಡಲಾಯಿತು.
ಸ್ವಲ್ಪಕಾಲ ಗ್ರಹಣಗ್ರಸ್ಥವಾಗಿದ್ದ ಈ ಪಾಳೇಪಟ್ಟಿಗೆ ಲಾರ್ಡ್ ಕಾರ್ನ್‌ವಾಲೀಸನು ನಾರಾಯಣಗೌಡ ಎಂಬುವರನ್ನು ನೇಮಿಸಿ ಜೀವಂತಿಕೆ ನೀಡಿದನು. ಆದರೆ ಇದರಿಂದ ವಿಚಲಿತನಾದ ಟಿಪ್ಪು ಸುಲ್ತಾನ್ ಮುತ್ತಿಗೆ ಹಾಕಿ ಚಿಕ್ಕಬಳ್ಳಾಪುರವನ್ನು ತನ್ನ ಕೈವಶಮಾಡಿಕೊಂಡನು. ೧೭೯೧ರಲ್ಲಿ ಬ್ರಿಟಿಷರು ನಂದಿದುರ್ಗವನ್ನು ವಶಪಡಿಸಿಕೊಂಡ ನಂತರ ಸ್ವಲ್ಪಕಾಲ ಅದರ ನಿಯಂತ್ರಣವನ್ನು ಪಾಳೇಗಾರರು ಹೊಂದಿದ್ದರು. ಆದರೆ ಟಿಪ್ಪು ಮತ್ತು ಬ್ರಿಟಿಷರ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಚಿಕ್ಕಬಳ್ಳಾಪುರ ಪಾಳೇಗಾರರು ಅಧಿಕಾರವಿಹೀನರಾದರು. ಇದರೊಂದಿಗೆ ಚಿಕ್ಕಬಳ್ಳಾಪುರ ಪಾಳೇಪಟ್ಟಿನ ಅವಸಾನವಾಯಿತು’ ಎಂದು ಇತಿಹಾಸಕಾರ ಡಾ.ಜಿ.ಶ್ರೀನಿವಾಸಯ್ಯ ತಿಳಿಸಿದರು.
‘ಪಾಳೇಗಾರ ಅಣ್ಣೀಗೌಡ(೧೬೮೭-–೧೭೦೫) ತನ್ನ ಆಳ್ವಿಕೆಯ ಕಾಲದಲ್ಲಿ ಶಿಡ್ಲಘಟ್ಟವನ್ನು ಖರೀದಿಸಿ ಕೋಟೆ ಪೇಟೆಗಳನ್ನು ಕಟ್ಟಿಸಿದ್ದ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ಬಳಿಯ ೧೬೩೧ರ ಶಾಸನ ಇಮ್ಮಡಿ ಬೈಚೇಗೌಡನು ದತ್ತಿ ಬಿಟ್ಟ ವಿಚಾರವನ್ನು ತಿಳಿಸಿದರೆ, ತಾಲ್ಲೂಕಿನ ಮಳ್ಳೂರು ಮತ್ತು ಮೇಲೂರಿನ ಶಾಸನಗಳು ೧೬೯೭ರಲ್ಲಿ ಗೋಪಾಲಗೌಡರು ದತ್ತಿ ಬಿಟ್ಟ ಅಂಶವನ್ನು ತಿಳಿಸುತ್ತದೆ’ ಎಂದು ಅವರು ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಿಶೆಟ್ಟಿಪುರದಲ್ಲಿ ವಾಸವಾಗಿರುವ ಪಾಳೇಗಾರ ಮನೆತನದ ಮಂಜುನಾಥ್ ಮತ್ತು ಅವರ ತಂದೆ ವೆಂಕಟಪ್ಪಯ್ಯ.

‘ನಾವೀಗ ರೈತರು. ಪಾಳೇಗಾರಿಕೆ ಒಂದು ಇತಿಹಾಸವಷ್ಟೆ. ಮನೆಯಲ್ಲಿ ನಮ್ಮ ಮುತ್ತಾತ ಚಿಕ್ಕಬಳ್ಳಾಪುರ ಪಾಳ್ಳೇಗಾರ್ ಬಚ್ಚಣ್ಣನವರ ಕಪ್ಪು ಬಿಳುಪು ಚಿತ್ರವಿದೆ. ಕೆಲವು ಆಯುಧಗಳಿವೆ. ಅವನ್ನು ವರ್ಷಕ್ಕೊಮ್ಮೆ ಪೂಜಿಸುತ್ತೇವೆ. ಹಳೆಯ ಮನೆಯು ಶಿಥಿಲಗೊಳ್ಳುತ್ತಿದ್ದಂತೆ ದುರಸ್ತಿ ಮಾಡಿದ್ದೇವೆ. ನಮ್ಮ ಸಂಬಂಧಿಕರು ಮಾಗಡಿ ಬಳಿಯ ಹುಳಿಕಲ್‌ನಲ್ಲಿ ವಾಸವಿದ್ದು ಅವರಿನ್ನೂ ಹಳೆಯ ಮನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ಎಸ್.ದೇವಗಾನಹಳ್ಳಿಯಲ್ಲೂ ನಮ್ಮ ಸಂಬಂಧಿಕರಿದ್ದಾರೆ. ನಮ್ಮ ನಿತ್ಯ ಬದುಕಿನ ಜಂಜಾಟದಲ್ಲಿ ಹಳೆಯ ಅನೇಕ ವಸ್ತುಗಳನ್ನು ಉಳಿಸಿಕೊಳ್ಳಲಾಗಿಲ್ಲ’ ಎಂದು ಮಲ್ಲಿಶೆಟ್ಟಿಪುರದ ಮಂಜುನಾಥ್ ಹೇಳುತ್ತಾರೆ.
– ಡಿ.ಜಿ.ಮಲ್ಲಿಕಾರ್ಜುನ.

ಶಾಶ್ವತ ನೀರಾವರಿ ಹೋರಾಟಕ್ಕೆ ಅಣ್ಣಾ ಹಜಾರೆ

0

ಬರಪೀಡಿತ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆ ಭಾಗಿಯಾಗುವಂತೆ ಒಪ್ಪಿಸುವಲ್ಲಿ ತಾಲ್ಲೂಕಿನ ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಸದಸ್ಯರು ಸಫಲರಾಗಿದ್ದಾರೆ.
ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ 52 ಮಂದಿ ರೈತರು ತೋಟಗಾರಿಕೆ ಇಲಾಖೆ ಮತ್ತು ನಬಾರ್ಡ್‌ ಬ್ಯಾಂಕ್‌ ನೆರವಿನಿಂದ ಮಹಾರಾಷ್ಟ್ರಕ್ಕೆ ಏಳು ದಿನಗಳ ಕಾಲ ಹೆಚ್ಚಿನ ತಿಳುವಳಿಕೆಗಾಗಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದಾರೆ. ಅಣ್ಣಾ ಹಜಾರೆ ಅವರ ಸ್ವಗ್ರಾಮ ರಾಲೆಗಾವ್‌ ಸಿದ್ದಿಗೆ ಹೋಗಿ ಅವರನ್ನು ಭೇಟಿ ಮಾಡಿದ ರೈತರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರಪೀಡಿತ ಆರು ಜಿಲ್ಲೆಗಳ ಜನರ ನೀರಿನ ಬವಣೆಯನ್ನು ವಿವರಿಸಿದ್ದಾರೆ. ಕುಡಿಯಲು ಮತ್ತು ವ್ಯವಸಾಯಕ್ಕೆ 1500 ಅಡಿ ಆಳದ ನೀರನ್ನು ಬಳಸುತ್ತಾ ಫ್ಲೋರೈಡ್‌ ಅಂಶದಿಂದ ಖಾಯಿಲೆಗಳು ಹರಡುತ್ತಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಪರಮಶಿವಯ್ಯನವರ ವರದಿ ಆಧಾರಿತ ಯೋಜನೆಗಾಗಿ ನಾವೆಲ್ಲಾ ಹೋರಾಡುತ್ತಿದ್ದು ತಾವು ಕೂಡ ಭಾಗಿಯಾಗಿ ಶಕ್ತಿ ತುಂಬಲು ಮನವಿಯನ್ನು ಸಲ್ಲಿಸಿದರು. ತಕ್ಷಣವೇ ರೈತರ ಮನವಿಗೆ ಸ್ಪಂದಿಸಿದ ಅಣ್ಣಾ ಹಜಾರೆ ಅವರು ನಿಮ್ಮ ಹೋರಾಟದಲ್ಲಿ ಭಾಗಿಯಾಗುವೆ. ದಿನಾಂಕವನ್ನು ನಿಗದಿಪಡಿಸಿ ಎಂದು ತಿಳಿಸಿದ್ದಾರೆ.
ರಾಲೆಗಾವ್‌ಸಿದ್ದಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾಡಿರುವ ನೀರಿನ ಸದ್ಬಳಕೆ, ನಿರ್ಮಿಸಿರುವ ಚೆಕ್‌ ಡ್ಯಾಮ್‌ಗಳು, ರೀಸೈಕಲ್‌ ಮಾದರಿ ಪ್ರಯೋಗಗಳಿಂದ ಅಂತರ್ಜಲ ವೃದ್ಧಿಸಿರುವ ಬಗ್ಗೆ ಹಾಗೂ ಶ್ರಮದಾನದ ಮೂಲಕ ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಂಡಿರುವ ಮಾಹಿತಿಗಳನ್ನು ಪಡೆದು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಎಂದು ರೈತರಿಗೆ ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
‘ಅಧ್ಯಯನ ಪ್ರವಾಸದಲ್ಲಿ ನಾವು ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ ಅವರನ್ನು ನೀರಾವರಿ ಹೋರಾಟಕ್ಕೆ ಆಹ್ವಾನಿಸಿದೆವು. ಪೂನಾದ ಎನ್‌.ಆರ್‌.ಸಿ ಸಂಶೋಧನಾ ಕೇಂದ್ರದಲ್ಲಿ ನಮ್ಮ ಪ್ರದೇಶಕ್ಕೆ ಒಗ್ಗುವ 6 ತಳಿಗಳ ಬಗ್ಗೆ ತಿಳಿದುಕೊಂಡೆವು. ನಾಸಿಕ್‌ನಲ್ಲಿ ಪ್ರಗತಿಪರ ರೈತರ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದೆವು. ಮುರ್ರಾ ತಳಿಯ ಎಮ್ಮೆಗಳ ಸಾಕಾಣಿಕಾ ಕೇಂದ್ರಕ್ಕೂ ಭೇಟಿ ನೀಡಿದ್ದೆವು’ ಎಂದು ಮೇಲೂರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ನಾಗೇಂದ್ರಪ್ರಸಾದ್‌ ತಿಳಿಸಿದರು.
ಅಧ್ಯಯನ ಪ್ರವಾಸದಲ್ಲಿ ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ನಾಗರಾಜ್‌, ಶ್ರೀನಿವಾಸ್‌, ಕೆಂಪೇಗೌಡ, ಮುರಳಿ, ಗೋಪಾಲಪ್ಪ, ಪಿಳ್ಳವೆಂಕಟಶಾಮಣ್ಣ, ವೆಂಕಟಸ್ವಾಮಿರೆಡ್ಡಿ, ರಾಮಮೂರ್ತಿ, ಜನಾರ್ಧನರೆಡ್ಡಿ, ಕೃಷ್ಣಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ರವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

ಆರೋಗ್ಯಕ್ಕಾಗಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕು

0

ಕಾನೂನಿನ ಭಯದಿಂದ ಸ್ವಚ್ಛ ಗ್ರಾಮ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆರೋಗ್ಯಕ್ಕಾಗಿ, ಗೌರವಕ್ಕಾಗಿ ಮತ್ತು ಮಾದರಿ ಬದುಕಿಗಾಗಿ ಗ್ರಾಮಸ್ಥರೆಲ್ಲಾ ಒಗ್ಗೂಡಿ ಗ್ರಾಮ ಪರಿಸರವನ್ನು ಶುಭ್ರವಾಗಿಟ್ಟುಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯೋಗೇಶ್‌ ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಸ್ವಸಹಾಯ ಗುಂಪುಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳಾ ಸ್ವಸಹಾಯ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗುವುದಲ್ಲದೆ, ಹಲವಾರು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಅಂಟು ರೋಗಗಳು, ಸೋಂಕು ರೋಗಗಳು ಹರಡುವುದು ನಿಲ್ಲುತ್ತವೆ. ಜನರ ಆರೋಗ್ಯ ಉತ್ತಮಗೊಳ್ಳುವುದಲ್ಲದೆ ಹಣವೂ ಉಳಿತಾಯವಾಗುತ್ತದೆ. ಮಹಿಳೆಯರು ಒಂದೆಡೆ ಸೇರಿದಾಗ ಕಷ್ಟ ಸುಖಗಳನ್ನು ಹಂಚಿಕೊಂಡು ಪರಸ್ಪರರಿಗೆ ನೆರವಾಗಬಹುದು. ಆರ್ಥಿಕ ಸಂಬಂಧಿತ ಯೋಜನೆಗಳು ಮತ್ತು ಯೋಚನೆಗಳನ್ನು ಹಂತ ಹಂತವಾಗಿ ಸಾಕಾರಗೊಳಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ನಿರ್ವಹಣೆಗೆ ಅಗತ್ಯದ ದಿನಚರಿ ಕೈಪಿಡಿಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ್‌, ಮುನಿವೀರಪ್ಪ, ರವಿ, ಮುನಿವೆಂಕಟಸ್ವಾಮಿ, ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.