ಪಠ್ಯದ ಜ್ಞಾನದೊಂದಿಗೆ ನಡವಳಿಕೆಯಲ್ಲೂ ಪರಿಣತಿಯನ್ನು ಸಾಧಿಸುವ ತರಬೇತಿಯನ್ನು ಪಡೆಯುವುದು ಅತ್ಯವಶ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ತಿಳಿಸಿದರು.
ಬಿ.ಎಂ.ವಿ. ಎಜುಕೇಷನ್ ಟ್ರಸ್ಟ್, ಸಮಾಜವಾದಿ ಅಧ್ಯಯನ ಕೇಂದ್ರ, ಬೆಂಗಳೂರು ರೋಟರಿ ಹೈಗ್ರೌಂಡ್ಸ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಸ್ಮೈಲ್ ಫೌಂಡೇಷನ್ ಸಹಯೋಗದಲ್ಲಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಪ್ರಾರಂಭಗೊಂಡ ಒಂದು ವಾರದ ರಾಷ್ಟ್ರ ಸೇವಾ ದಳದ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿರುವ ಅಂಕಪಟ್ಟಿ ಇದ್ದರೆ ಸಾಲದು, ಒಂದು ಸಮುದಾಯದ ಒಳಗೆ ಅಪೇಕ್ಷಿತವಾದ ವ್ಯಕ್ತತ್ವವಾಗಬೇಕಾದರೆ, ನಾನು ಎಂಬ ವ್ಯಕ್ತಿ ಕೇಂದ್ರದಿಂದ ನಾವು ಎಂಬ ಸಮುದಾಯ ಕೇಂದ್ರಿತ ಚಿಂತನೆ ಅಗತ್ಯವಿದೆ. ಗಾಂಧೀಜಿ, ಅಬ್ದುಲ್ಕಲಾಂ, ಸರ್.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದುದು ಈ ಕಾಳಜಿ. ಸಧೃಡ ಶರೀರಕ್ಕೆ ಬೇಕಾದುದು ಒಳ್ಳೆಯ ಆಹಾರ ಮತ್ತು ವ್ಯಾಯಾಮ. ಸಧೃಡ ಮನಸ್ಸಿಗೆ ಅಗತ್ಯವಾದುದು ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಮತ್ತು ಕಾಳಜಿಯುಳ್ಳ ಸಕಾರಾತ್ಮಕ ಆಲೋಚನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿ.ಎಂ.ವಿ. ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಇಂದು ನಾಗರಾಜು, ಬಾಪು ಹೆದ್ದೂರ್ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೋಟೆ ಚನ್ನೇಗೌಡ, ಪ್ರೊ.ಹನುಮಂತ, ಆರ್.ಬಸವರಾಜು, ಪ್ರದೀಪ್ ರಾಧಾಕೃಷ್ಣ, ಬಾಬಾ ಸಾಹೇಬ್ ನದಾಫ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪಠ್ಯದ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಲ್ಲಿ ಶನಿವಾರ ನಡೆದ 59 ನೇ ಕನ್ನಡ ರಾಜ್ಯೋತ್ಸವ, ಕಾರ್ಯಕ್ರಮಕ್ಕೆ ಗೈರು ಹಾಜರಾದ ಒಂಬತ್ತು ಮಂದಿ ಅಧಿಕಾರಿಗಳಿಗೆ ನೋಟೀಸ್ ಜಾರಿಯಾಗುವುದರೊಂದಿಗೆ ಪರ್ಯಾವಸಾನಗೊಂಡಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಾದನದೊಂದಿಗೆ ಭುವನೇಶ್ವರಿಯ ಭಾವಚಿತ್ರದ ಅಲಂಕೃತ ವಾಹನದ ಮೆರವಣಿಗೆ ನಡೆಸಲಾಯಿತು. ಉಲ್ಲೂರುಪೇಟೆಯ ಮಂಜುನಾಥ್ ಸೈಕಲ್ಗೆ ಕನ್ನಡ ಕಲಾವಿದ, ಸಾಹಿತಿಗಳ ಭಾವಚಿತ್ರಗಳನ್ನೊಳಗೊಂಡ ಸ್ಥಬ್ದಚಿತ್ರವನ್ನು ಅಲಂಕರಿಸಿಕೊಂಡು ಮೆರವಣಿಗೆಯ ಮುಂಚೂಣಿಯಲ್ಲಿ ಗಮನ ಸೆಳೆದರೆ, ಆರೋಗ್ಯ ಇಲಾಖೆಯ ಸ್ಥಬ್ದ ಚಿತ್ರ ನಗು ಮಗುವಿನ ಬಗ್ಗೆ ತಿಳಿಸುತ್ತಿತ್ತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ಪುಸ್ತಕಗಳನ್ನು ಕೊಂಡು ಓದಿ. ಮನೆಯಲ್ಲೊಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕವು ಓಡಾಡುವ ಗುಡಿಯಿದ್ದಂತೆ. ಕನ್ನಡದ ಸಾಹಿತ್ಯ ಲೋಕ ಚಿರಂತನ, ನಿತ್ಯನೂತನ ಮತ್ತು ಅಮೃತ ಸಮಾನವಾದದ್ದು. ಕನ್ನಡ ನಾಡು ನುಡಿ ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ನಾಡಿಗಾಗಿ ದುಡಿದಿರುವ ಮಹನೀಯರ ಬಗ್ಗೆ ನಮ್ಮ ಮುಂದಿನ ತಲೆಮಾರಿಗೂ ತಿಳಿಸಿ ಗೌರವವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದು, ನಾಡ ಹಬ್ಬಕ್ಕೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೇರಿದ್ದ ಕನ್ನಡಾಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿದರು. ಶಾಸಕರು ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಸಮಾಧಾನಗೊಳಿಸಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯನ್ನು ಪ್ರತಿಧ್ವನಿಸುವ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.
ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪುರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್, ಅಧ್ಯಕ್ಷೆ ಮುಷ್ಠರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರಾರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್, ಕ.ಸಾ.ಪ ಅಧ್ಯಕ್ಷ ಕೋ.ನಾ.ಶ್ರೀನಿವಾಸ್, ಅಮೃತಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಟೋ ಚಾಲಕರ ಸಂಘದ ಕನ್ನಡಾಭಿಮಾನ
ಪಟ್ಟಣದ ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸುಮಾರು 300 ಕ್ಕೂ ಹೆಚ್ಚು ಆಟೋಗಳಿಗೆ ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ತಮ್ಮ ಸಂಘದ ಒಗ್ಗಟ್ಟು ಮತ್ತು ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಹಲವಾರು ಆಟೋಗಳನ್ನು ಕೆಂಪು ಚೆಂಡು ಹೂ ಮತ್ತು ಹಳದಿ ಶಾಮಂತಿಗೆ ಹೂಗಳಿಂದ ಅಲಂಕರಿಸಿ ನಾಡ ಬಣ್ಣವನ್ನು ಹೂಗಳ ಮೂಲಕ ಪ್ರದರ್ಶಿಸಿರುವುದಲ್ಲದೆ, ನಾಡ ಬಾವುಟಗಳನ್ನೂ ಕಟ್ಟಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಾಡಧ್ವಜಾರೋಹಣ ಮತ್ತು ಸಂಜೆ ಆರ್ಕೇಸ್ಟ್ರಾ ಆಯೋಜಿಸಿದ್ದರು.
‘ಮೇಲೂರು ವೈಭವ’ ಸಾರುವ ಚಿತ್ರಮಾಲೆ
ಪ್ರತಿಯೊಂದು ನಗರ, ಊರು, ಹಳ್ಳಿಗೂ ಇತಿಹಾಸವಿರುತ್ತದೆ. ಸಾಧಕರಿರುತ್ತಾರೆ. ವಿಶೇಷ ಆಚರಣೆ, ಘಟನೆ, ಸ್ಥಳ ಹಾಗೂ ಸವಿನೆನಪುಗಳಿರುತ್ತವೆ. ಇಂಥಹ ಅಪರೂಪದ ಸಂಗತಿಗಳನ್ನು ನೆನಪಿಸಿಕೊಳ್ಳುವವರು ವಿರಳ. ಆದರೆ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಇಂಥಹ ಸಿಂಹಾವಲೋಕನವನ್ನು ನಡೆಸಲಾಗುತ್ತಿದೆ. ‘ಮೇಲೂರು ವೈಭವ’ ಎಂಬ ಹೆಸರಿನಲ್ಲಿ ಹಳೆಯ ಛಾಯಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮೇಲೂರಿನ ಎಂ.ಆರ್.ಪ್ರಭಾಕರ್, ಮೇಲೂರು ಗ್ರಾಮದ ಇತಿಹಾಸ, ಕಲೆ, ಸಾಂಸ್ಕೃತಿಕ ಪರಂಪರೆ, ಮೇಲೂರಿಗೆ ಭೇಟಿ ನೀಡಿರುವ ಗಣ್ಯರು ಮತ್ತು ಮೇಲೂರಿನ ಪ್ರಸಿದ್ಧರ ಕುರಿತಂತೆ ಜನರು ಮೆಲುಕು ಹಾಕುವಂತೆ ಮಾಡಿದ್ದಾರೆ.
ಮೇಲೂರಿನ ಸರ್ಕಾರಿ ಶಾಲಾ ಆವರಣದ ಸಮುದಾಯಭವನದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇಲೂರಿನ ಇತಿಹಾಸದ ಇಣುಕು ನೋಟದೊಂದಿಗೆ ತಾಲ್ಲೂಕಿನ ಕಪ್ಪುಬಿಳುಪಿನ ಕಾಲದ ಘಟನಾವಳಿಗಳ ಚಿತ್ರಣವನ್ನು ನೋಡಬಹುದಾಗಿದೆ.
ಮೇಲೂರಿನ ಸಾಂಸ್ಕೃತಿಕ ವೈಭವ, ನಾಟಕ, ಕಲೆ, ಭಕ್ತಿಪಂಥ, ಸಾಧಕರು, ಪ್ರಸಿದ್ಧ ವ್ಯಕ್ತಿಗಳ ಆಗಮನ, ಭಜನೆ, ಹರಿಕಥೆ ಮುಂತಾದ ಹಲವು ವಿಭಾಗಗಳನ್ನಾಗಿಸಿ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

೧೯೫೨ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಉದ್ಘಾಟಿಸಲು ಆಗಮಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ, ಮೈಸೂರು ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್,ಮಿರ್ಜಾ ಇಸ್ಮಾಯಿಲ್, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಹೆಗಡೆ, ಹರಿಕಥಾ ವಿದ್ವಾನ್ ಮಾಲೂರು ಸೊಣ್ಣಪ್ಪ, ಮೇಲೂರಿನವರು ಹೋಗಿ ಭೇಟಿ ಮಾಡಿದ್ದ ರಾಷ್ಟ್ರಪತಿಗಳಾದ ಫಕೃದ್ದೀನ್ ಅಲಿ ಅಹಮದ್, ವಿ.ವಿ.ಗಿರಿ, ರಾಚಯ್ಯ, ಕಪಿಲ್ ದೇವ್, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ, ಡಾ.ರಾಜ್ಕುಮಾರ್, ರಜನಿಕಾಂತ್, ದಾಸರಿ ನಾರಾಯಣರಾವ್, ರಾಕೇಶ್ ಶರ್ಮ, ಸಂತೋಶ್ ಹೆಗಡೆ, ಎಂ.ವಿ.ಕೃಷ್ಣಪ್ಪ, ಅಬ್ದುಲ್ ಕಲಾಂ ಮುಂತಾದವರೊಂದಿಗಿನ ಗ್ರಾಮಸ್ಥರ ಚಿತ್ರಗಳು ಹತ್ತು ಹಲವು ಸಂಗತಿಗಳನ್ನು ನೆನಪಿಗೆ ತಂದಿಟ್ಟಿದ್ದವು.

ಮೇಲೂರಿವರಾದ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಮ.ನಂಜುಡಪ್ಪ, ಕೆ.ಎಸ್.ಚನ್ನಪ್ಪ, ಐ.ಎ.ಎಸ್ ಅಧಿಕಾರಿ ವೆಂಕಟರಾಮೇಗೌಡ, ಸ್ವಾತಂತ್ರ್ಯ ಹೋರಾಟಗಾರರಾದ ಸಂಜೀವಪ್ಪ, ಮುನಿಶಾಮಯ್ಯ, ಎಂ.ಎಸ್.ವೀರಪ್ಪ , ವಿದೇಶಕ್ಕೆ ಹೋಗಿದ್ದ ಬಿ.ಶ್ರೀರಾಮರೆಡ್ಡಿ, ಗ್ರಾಮದ ಹಳೆಯ ತಲೆಮಾರಿನವರಾದ ಪಟೇಲ್ ಪಿಳ್ಳೇಗೌಡರು, ಮಲ್ಲಿಕಾರ್ಜುನಪ್ಪ, ಸೈಕಲ್ನಲ್ಲಿ ಕರ್ನಾಟಕವನ್ನು ಸುತ್ತಿಬಂದ ಎಂ.ರಾಮಯ್ಯ ಮತ್ತು ಪ್ರಭಾಕರ್, ಮ.ಮು.ಸ್ವಾಮಿ ಅವರ ಗಂಗಾದೇವಿ ನಾಟಕ ಮಂಡಳಿ ಮುಂತಾದವರ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
‘ನಾನು ಹುಟ್ಟಿದ ಊರಿನ ಕಲೆ, ಸಂಸ್ಕೃತಿ, ಇತಿಹಾಸ, ಹಳೆ ತಲೆಮಾರಿನ ಜನರ ಚಿತ್ರಗಳನ್ನು ಸಂಗ್ರಹಿಸುತ್ತಾ ಬಂದಂತೆ ಬಹಳ ಹೆಮ್ಮೆ ಎನಿಸುತ್ತಿತ್ತು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜನರ ಸಾಧನೆಗಳ ಬಗ್ಗೆ ಪರಿಚಯ ಮಾಡಿ ಗ್ರಾಮದ ಹಾಗೂ ನಮ್ಮ ಸುತ್ತಲಿನ ಜನರ ಬಗ್ಗೆ ಅವರಲ್ಲಿ ಗೌರವ, ಆದರ, ಪ್ರೀತಿ ಮೂಡಿಸುವುದು ಈ ಪ್ರದರ್ಶನದ ಉದ್ದೇಶ. ಇತಿಹಾಸವನ್ನು ಮರೆತವರಿಗೆ ಉಜ್ವಲ ಭವಿಷ್ಯವಿಲ್ಲ. ನಮ್ಮ ಹಿಂದಿನವರ ಆದರ್ಶ, ಸಾಧನೆ ಮುಂದಿನವರಿಗೆ ಮಾರ್ಗದರ್ಶನವಾಗುತ್ತದೆ. ಒಂದು ಎಚ್ಚರಿಕೆಯ ಕರೆಗಂಟೆಯಾಗುತ್ತದೆ’ ಎಂದು ಎಂ.ಆರ್.ಪ್ರಭಾಕರ್ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
ಆನೆಮಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾದ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ
ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹಾಗು ಗುಣಮಟ್ಟದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು. ಈ ಹಿಂದೆ ಸುಮಾರು ೧೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಇದೀಗ ೮.೯ ಲಕ್ಷ ಲೀಟರ್ಗೆ ಇಳಿದಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ಮುಂಬರುವ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು. ಹಾಲಿನ ಉತ್ಪಾದನೆಯ ಜೊತೆ ಜೊತೆಗೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ನಿರ್ದೇಶಕ ತಾದೂರು ರಮೇಶ್, ಶ್ರೀನಿವಾಸಗೌಡ, ಮಲ್ಲೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಏಕತಾ ಓಟ
ರಾಷ್ಟ್ರದ ಏಕತೆ, ಅಖಂಡತೆ, ಮತ್ತು ಸುರಕ್ಷತೆಗಾಗಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಣೆ ಮಾಡಿಕೊಂಡಾಗ ಮಾತ್ರ ದೇಶವು ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ದೇಶದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಲ್ಲಭಭಾಯಿ ಪಟೇಲರ ದೂರದೃಷ್ಟಿ, ದೇಶಕ್ಕಾಗಿ ಅವರು ಮಾಡಿದ ಸೇವೆ, ಇಡೀ ಜನಾಂಗಕ್ಕೆ ಮಾದರಿಯಾಗಬೇಕಾಗಿದೆ. ದೇಶದ ಯುವಜನತೆ ಪಟೇಲರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಕೈ ಜೋಡಿಸಬೇಕು ಎಂದರು.
ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಏಕತಾ ಓಟದಲ್ಲಿ ಪಾಲ್ಗೊಂಡವರಿಗೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ್ಬಾಯಿರಿ, ಜಿಲ್ಲಾ ಉಪಾಧ್ಯಕ್ಷ ದಾಮೋದರ್, ಸಿ.ವಿ.ಲೋಕೇಶ್ಗೌಡ, ಎ.ಎಂ.ತ್ಯಾಗರಾಜ್, ಸುಜಾತಮ್ಮ, ಮಂಜುಳಮ್ಮ, ರತ್ನಮ್ಮ, ಶಿವಕುಮಾರಗೌಡ, ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಅಶ್ವಥ್, ಶ್ರೀರಾಮ್, ನಂದೀಶ್ ಮತ್ತಿತರರು ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳಿಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಬಿಡುತ್ತಿದ್ದೇವೆಯೇ?
“ನಿಮ್ಮ ನಾಲ್ಕು ವರ್ಷದ ಮಗು…
• ನಿಮ್ಮ ಹಾಗೆ ಓದಬಲ್ಲ
• 6ಕ್ಕೂ ಹೆಚ್ಚು ಭಾಷೆ ಮಾತನಾಡಬಲ್ಲ
• ಕಂಪ್ಯೂಟರ್ ಬಳಸಬಲ್ಲ
• ಸಂಗೀತವಾದ್ಯ ನುಡಿಸಬಲ್ಲ
• ಒಂದು ಗಂಟೆ ಧ್ಯಾನಾವಸ್ಥೆಯಲ್ಲಿ ಕೂರಬಲ್ಲ…. ಇತ್ಯಾದಿ”.
ಇದು ಶಾಲೆಯೊಂದು ಪೋಷಕರನ್ನು ಆಕರ್ಷಿಸಲು ನೀಡಿರುವ ಜಾಹಿರಾತಿನ ಸಾಲುಗಳು. ಬಹುಷಃ ಇಂತಹ ಶಾಲೆಗಳಿಗೆ ಜನ ಮುಗಿಬೀಳುವುದರಲ್ಲಿ, ಕೇಳಿದಷ್ಟು ಫೀಸು, ಡೊನೇಷನ್ಗಳನ್ನು ಕಕ್ಕುವುದರಲ್ಲಿ ಆಶ್ಚರ್ಯವೇನಿಲ್ಲ.
ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತು ಹನ್ನೆರೆಡು ವರ್ಷಕ್ಕೆ ವಯಸ್ಕರರ ಜ್ಞಾನ, ಗುಣ ಸ್ವಭಾವಗಳನ್ನೆಲ್ಲಾ ಬೆಳೆಸಿಕೊಳ್ಳುತ್ತಾರೆಂದುಕೊಳ್ಳೋಣ. ಇದು ಪೋಷಕರಿಗೆ ಅತ್ಯಂತ ಆನಂದ ಮತ್ತು ಹೆಮ್ಮೆ ತರುವ ವಿಚಾರವೇನೋ ನಿಜ, ಆದರೆ ಇದರ ಇನ್ನೊಂದು ಮುಖವನ್ನು ನಾವು ಯೋಚಿಸಿದ್ದೇವೆಯೇ? ಇಂತಹ ಮಕ್ಕಳು ಪೋಷಕರ ಹತ್ತಿರ ಬಂದು, “ಅಪ್ಪಾ ನಾನೀಗ ಮಾನಸಿಕವಾಗಿ, ಭೌದ್ಧಿಕವಾಗಿ ಬೆಳೆದಿದ್ದೇನೆ, ನನಗೊಂದು ಮದುವೆ ಮಾಡು” ಅಂದರೆ ಪೋಷಕರೇನು ಮಾಡಬೇಕು? ಹಾಗೊಮ್ಮೆ ನೇರವಾಗಿ ಕೇಳದಿದ್ದರೂ, ಹದಿವಯಸ್ಸಿನ ಮಕ್ಕಳು ಡೇಟಿಂಗ್ ಹೋಗಲು ಶುರುಮಾಡಿದರೆ, ಸಿಗರೇಟ್, ಗುಟ್ಕಾ, ಮದ್ಯ ಮುಂತಾದವುಗಳನ್ನು ಸೇವಿಸತೊಡಗಿದರೆ, ಹೆಣ್ಣು ಮಕ್ಕಳು ಗರ್ಭಧರಿಸಿದರೆ, ಅದನ್ನೆಲ್ಲಾ ಒಪ್ಪಿಕೊಳ್ಳಲು ಪೋಷಕರು ಸಿದ್ಧರಿದ್ದಾರೆಯೇ? ಇದಕ್ಕೆಲ್ಲಾ ಜೀವಂತ ಉದಾಹರಣೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಹೇರಳವಾಗಿ ಸಿಕ್ಕುತ್ತವೆ. ನಮ್ಮ ಮೆಟ್ರೋಗಳಲ್ಲಿಯೂ ಇತ್ತೀಚೆಗೆ ಇವು ಅಪರೂಪವೇನಲ್ಲ.
ಮಕ್ಕಳು ಕೆಲವೇ ವಿಚಾರದಲ್ಲಿ, ಅದೂ ಪೋಷಕರಿಗೆ ಬೇಕಾದ ವಿಚಾರದಲ್ಲಿ ಮಾತ್ರ ದೊಡ್ಡವರಂತಿರಬೇಕು; ಉಳಿದಂತೆ ಮಕ್ಕಳೇ ಆಗಿರಬೇಕು-ಎಂದು ಬಯಸುವವರಿಗೆ ನಿರಾಸೆ ಕಾದಿರುತ್ತದೆ. ಒಮ್ಮೆ ವಯಸ್ಕರ ಪ್ರಪಂಚದ ಟಿಕೆಟ್ ಮಕ್ಕಳಿಗೆ ಸಿಕ್ಕ ಮೇಲೆ, ಅವರು ಅದನ್ನು ಎಲ್ಲಾ ಕಡೆ ಉಪಯೋಗಿಸುತ್ತಾರೆ. ಇದೆಲ್ಲಾ ವಿತಂಡವಾದ ಎಂದು ಹೊರನೋಟಕ್ಕೆ ಅನ್ನಿಸಿದರೂ, ದುರಾದೃಷ್ಟವಶಾತ್ ಇದು ವಾಸ್ತವ.
ಪ್ರಕೃತಿಯ ಎಲ್ಲಾ ಚಲನೆಗೂ ಒಂದು ವೇಗವನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಅದನ್ನು ಅಲ್ಪ ಸ್ವಲ್ಪ ಹೆಚ್ಚು ಅಥವಾ ಕಡಿಮೆ ಮಾಡಬಹುದೇನೋ. ಆದರೆ ಆಧುನಿಕ ಮಾನವ ಮಾಡುತ್ತಿರುವಂತೆ ಆ ಕೆಲಸಗಳ ವೇಗ ಮತ್ತು ನೀತಿನಿಯಮಗಳನ್ನು ತೀವ್ರವಾಗಿ ಹೆಚ್ಚಿಸಲು ಅಥವಾ ಬದಲಾಯಿಸಲು ಪ್ರಯತ್ನಿಸಿದರೆ, ಅದರ ಭಯಂಕರ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪರಿಸರಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳಲ್ಲಿ ನಾವು ಈಗಾಗಲೇ ಕಾಣುತ್ತಿದ್ದೇವೆ.
ಇದೇ ರೀತಿ ಮನುಷ್ಯನ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕೂಡ ಪ್ರಕೃತಿ ನಿರ್ಧಾರಿತ ವೇಗದಲ್ಲೇ ಮತ್ತು ನಿಯಮಗಳಲ್ಲೇ ಆಗಬೇಕು. ದೇಹದ ಮತ್ತು ಮನಸ್ಸಿನ ಬೆಳವಣಿಗೆಗೆ ಸಾಮರಸ್ಯವಿರಬೇಕು. ಇದನ್ನು ಕಡೆಗಣಿಸಿ ಯಾವುದಾದರೂ ಒಂದರ ಬೆಳವಣಿಗೆಯನ್ನು ತೀವ್ರಗೊಳಿಸಲೆತ್ನಿಸಿದರೆ ಮಕ್ಕಳ ಭಾವೀ ಜೀವನದ ಮೇಲೆ ಕೆಲವು ಅಡ್ಡಪರಿಣಾಮಗಳಾಗಬಹುದು.
ಇದಕ್ಕೆ ನಮ್ಮ ಕಣ್ಣೆದುರೇ ಸಾಕಷ್ಟು ಉದಾಹರಣೆಗಳಿದ್ದರೂ ನಾವು ಒಪ್ಪಿಕೊಳ್ಳುವುದಿಲ್ಲ. ಒಲಂಪಿಕ್ ಕ್ರೀಡೆಗಳಲ್ಲಿ ಮೆಡಲ್ ಗೆಲ್ಲುವುದಕ್ಕಾಗಿಯೇ ಮಕ್ಕಳ ಮೇಲೆ ಎಂತಹ ಒತ್ತಡಗಳನ್ನು ಹೇರಿ ಛಾಂಪಿಯನ್ಗಳನ್ನು ಸಿದ್ಧಪಡಿಸುತ್ತಾರೆಂಬುದನ್ನು ಹೆಚ್ಚಿನ ದೇಶಗಳು ಗೌಪ್ಯವಾಗಿಡುತ್ತವೆ. ಮೂಳೆಗಳು, ಮಾಂಸಖಂಡಗಳು, ಅದರ ಜೊತೆಗೆ ಮನಸ್ಸು, ಬುದ್ಧಿ ಯಾವುದೂ ಬೆಳೆಯದ ಮೂರ್ನಾಲ್ಕು ವರ್ಷದ ಹಸುಳೆಗಳ ಮೇಲೆ ಏನೆಲ್ಲಾ ಪ್ರಯೋಗ ಮಾಡುತ್ತಾರೆ ಮತ್ತು ಒತ್ತಡಗಳನ್ನು ಹೇರುತ್ತಾರೆ ಎನ್ನುವುದನ್ನು ಓದಿದರೆ ಇವರೇನು ಮನುಷ್ಯರಾ ಅಥವಾ ಕಟುಕರಾ ಎನ್ನುವ ಅನುಮಾನ ಬರುತ್ತದೆ. ದೇಶಕ್ಕಾಗಿ ಮೆಡಲ್ಗಳನ್ನು ಗೆದ್ದ ಮೇಲೆ ಈ ಛಾಂಪಿಯನ್ಗಳು ಉಳಿದ ಜೀವಮಾನವನ್ನು ಹೇಗೆ ಕಳೆಯುತ್ತಾರೆ ಎಂಬ ಮಾಹಿತಿ ನಮಗೆಲ್ಲಾ ನಗಣ್ಯವಾಬಿಡುತ್ತದೆ. ಚೈನಾದಂತಹ ದೇಶಗಳಲ್ಲಂತೂ ಎಲ್ಲಾ ಗೌಪ್ಯವಾಗಿಯೇ ನಡೆಯುತ್ತದೆ.
ಮೇಲಿನದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆಯಾಗಿರದ ಮಕ್ಕಳ ದೈಹಿಕ ಬೆಳವಣಿಗೆಯನ್ನು ಮಾತ್ರ ತೀವ್ರಗೊಳಿಸುವ ಕ್ರೂರ ಕ್ರಿಯೆಯಾದರೆ, ಇವತ್ತಿನ ವಿದ್ಯಾವಂತ ತಂದೆತಾಯಂದಿರು ಮಾಡುತ್ತಿರುವುದು ಇದರ ಇನ್ನೊಂದು ಮುಖ. ಅಂದರೆ ದೇಹ, ಮನಸ್ಸುಗಳ ಬೆಳವಣಿಗೆಯ ವೇಗವನ್ನು ಮೀರಿ ಬುದ್ಧಿ ಮಾತ್ರ ಬೆಳೆವಣಿಗೆ ಆಗಬೇಕೆಂದು ಅಪೇಕ್ಷಿಸುವ ಇವರುಗಳು ತಮ್ಮ ಮಕ್ಕಳ ಮೇಲೆ ಅದೇ ರೀತಿಯ ಅನ್ಯಾಯಗಳನ್ನು ಮಾಡುತ್ತಿರುತ್ತಾರೆ. ತಮ್ಮ ಜೀವನದ ಬಗೆಗೆ ಇನ್ನೂ ಏನೂ ನಿರ್ಧಾರಗಳನ್ನು ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿರುವ, ಭಾವನಾತ್ಮವಾಗಿ ಮತ್ತು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತರಾಗಿರುವ ಮಕ್ಕಳ ಮೇಲೆ ಪೋಷಕರು ನಡೆಸುವ ಈ ರೀತಿಯ ದಬ್ಬಾಳಿಕೆ ಯಾವುದೇ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾರದ್ದು. ಹಾಗಾಗಿಯೇ ಇಂತಹ ದಬ್ಬಾಳಿಕೆಯನ್ನು ಸಹಿಸಲಾರದ ಮಕ್ಕಳಿಗೆ ಉಳಿದಿರುವುದು ಆತ್ಮಹತ್ಯೆಯೊಂದೇ ದಾರಿ. ಒತ್ತಡವನ್ನು ನಿಭಾಯಿಸಲಾರದ ಎಷ್ಟೋ ಮಕ್ಕಳು ಇದರ ಮೊರೆಹೋಗುತ್ತಿದ್ದಾರೆ.
ಶಾಲಾದಿನಗಳಲ್ಲಿ ಸರಿಯಾಗಿ ಊಟ, ನಿದ್ದೆ ಮಾಡಲೂ ಆಗದಷ್ಟು ಕಲಿಕೆಯ ಒತ್ತಡ, ರಜ ಬಂತೆಂದರೆ ಬೇಸಿಗೆ ಶಿಬಿರಗಳು, ಅಬಾಕಸ್ ತರಗತಿಗಳು, ನೆನಪಿನ ಶಕ್ತಿ ವೃದ್ಧಿಸುವ ತರಬೇತಿ, ಮುಂದಿನ ತರಗತಿ ಟ್ಯೂಷನ್ ಕ್ಲಾಸ್ಗಳು ಮುಂತಾದವು. ಪೋಷಕರೇನು ತಮ್ಮ ಮಕ್ಕಳನ್ನು ಕೀ ಹಾಕಿದೊಡನೆ ಸ್ಟಾರ್ಟ್ ಆಗಿ, ಆಕ್ಸಿಲರೇಟರ್ ಒತ್ತಿದೊಡನೆ ಬೇಕಾದ ವೇಗದಲ್ಲಿ ಓಡುವ ತಮ್ಮ ಐಷಾರಾಮಿ ಕಾರು ಎಂದುಕೊಡಿದ್ದಾರೆಯೇ? ದುರಂತ ಅಂದರೆ ನಿರ್ಜೀವ ಕಾರುಗಳಿಗೆ ಸಿಗುವಷ್ಟು ಉಸಿರಾಟದ ಸಮಯವೂ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ.
ಇಂದಿನ ಮಕ್ಕಳು ತಮ್ಮ ಸಹಜವಾದ ತುಂಟಾಟದ, ಚಂಚಲತೆಯ, ಕುತೂಹಲದ, ಹುಡುಕಾಟ-ಪ್ರಯೋಗಶೀಲತೆಯ ಬಾಲ್ಯವನ್ನು ಕಳೆಯುವುದು ಇನ್ನು ಮುಂದೆ ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಜಗಜಿತ್ ಸಿಂಗ್ ಹಾಡಿದ “ಏ ದೌಲತ್ ಭೀ ಲೇಲೋ, ಏ ಷೊಹರತ್ ಭಿ ಲೇ ಲೋ” ಎನ್ನುವ ಗಜಲ್ನ ಹಾಡುಗಳನ್ನು ಎಲ್ಲರೂ ಒಮ್ಮೆ ಕೇಳಲೇಬೇಕು. ಈ ಹಾಡಿನ ಹಿನ್ನೆಲೆಯಲ್ಲಿ ಇಂದಿನ ಮಕ್ಕಳ, ಹೆಚ್ಚಾಗಿ ಪಟ್ಟಣಗಳಲ್ಲಿರುವವರ ಪರಿಸ್ಥಿತಿ ನೋಡಿದರೆ, ಜಗಜಿತ್ ಸಿಂಗ್ನ ಧ್ವನಿಯ ವಿಷಾದ ನಮ್ಮನ್ನು ಕಾಡುತ್ತದೆ.
ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸದ ಮಕ್ಕಳು ಮುಂದೆ ಕ್ರೂರಿಗಳೂ, ಸಮಾಜಘಾತುಕರೂ ಆಗುವ ಸಾಧ್ಯತೆಗಳಿವೆಯೆಂದು ಸಮಾಜವಿಜ್ಞಾನಿಗಳು ಹೇಳುತ್ತಾರೆ. ಇದು ಎಲ್ಲಾ ಮಕ್ಕಳಿಗೂ ಅನ್ವಯಿಸುವುದಿಲ್ಲವೆಂದುಕೊಂಡರೂ, ನಾವೀಗ ಮಕ್ಕಳಿಗೆ ಕೊಡುತ್ತಿರುವ ಬಾಲ್ಯದ ಅನುಭವಗಳು ಅವರ ಸಂತೃಪ್ತ ಜೀವನಕ್ಕೆ ಬುನಾದಿಯನ್ನಂತೂ ಹಾಕುವುದು ಸಾಧ್ಯವಿಲ್ಲ. ಇದರಿಂದ ತಾವು ಗಳಿಸಿರುವ ಭರಪೂರ ಹಣದ ಮಧ್ಯೆಯೂ ಅವರು ಅಸುಖಿಗಳಾಗುವುದಷ್ಟೇ ಅಲ್ಲ, ಅದನ್ನು ತಮ್ಮ ಮುಂದಿನ ತಲೆಮಾರಿಗೂ ವರ್ಗಾಯಿಸುತ್ತಾರೆ.
ಈ ಪ್ರಪಂಚದ ಪ್ರತಿಯೊಂದು ಜೀವಿಯೂ ಅನನ್ಯವಾದದ್ದು. ಅದನ್ನು ಸಹಜವಾಗಿ ಬೆಳೆಯಲು ಬಿಟ್ಟರೆ ನಮ್ಮ ಚಿಂತನೆಯ ಮಿತಿಗಳನ್ನು ಮೀರಿ ಅವು ಅರಳುವ ಸಾಧ್ಯತೆಗಳಿರುತ್ತವೆ. ಇದು ನಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಆದ್ದರಿಂದ ಪೋಷಕರೇ ದಯವಿಟ್ಟು ನಿಮ್ಮ ಮಕ್ಕಳನ್ನು ಹಣಗಳಿಸುವ ಭಾವೀ ಯಂತ್ರಗಳಂತೆ ಮಾತ್ರ ನೋಡದೆ, ಅವರಲ್ಲಿ ಒಂದು ಜೀವಂತ ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ಅರಳುವ ಪ್ರತಿಭೆಯನ್ನು ಹುಡುಕಿ. ಅವರಿಗೆ ಬಾಲ್ಯದ ಸಹಜ ಆನಂದಗಳನ್ನು ಹೊಂದಲು ಅವಕಾಶಮಾಡಿಕೊಡಿ.
– ವಸಂತ್ ನಡಹಳ್ಳಿ
ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ
ಅಂಗವಿಕಲರಿಗೆ ಅನುಕಂಪ ಬೇಕಿಲ್ಲ. ಅವರಿಗೆ ಸಿಗಬೇಕಾದ ಸವಲತ್ತು ಹಾಗೂ ಪ್ರಾಮುಖ್ಯತೆಯನ್ನು ನೀಡಿ ಎಂದು ಅಧಿಕಾರಿಗಳಿಗೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ೨೦೧೨–-೧೩ ಹಾಗು ೨೦೧೩-–೧೪ ನೇ ಸಾಲಿನ ನಿರ್ಭಂದಿತ ಹಾಗೂ ೧೩ ನೇ ಹಣಕಾಸಿನ ಯೋಜನೆಯ ಶೇಕಡಾ ೩ ರ ಅನುಧಾನದಡಿ ಅಂಗವಿಕಲರಿಗೆ ಬುಧವಾರ ಟ್ರೈಸಿಕಲ್ ವಿತರಣೆ ಮಾಡಿ ಅವರು ಮಾತನಾಡಿದರು.
ಅಂಗವಿಕಲರು ಯಾವುದೇ ಸರ್ಕಾರಿ ಕಚೇರಿಗೆ ಬಂದರೂ ಅವರಿಗೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು. ಹಣದ ರೂಪದಲ್ಲಿ ಅನುದಾನವನ್ನು ಇತರ ತಾಲ್ಲೂಕುಗಳಲ್ಲಿ ನೀಡಡಬಹುದಾದರೂ ನಮ್ಮ ತಾಲ್ಲೂಕಿನಲ್ಲಿ ನೀಡುವಂತಿಲ್ಲ. 9 ಲಕ್ಷ 45 ಸಾವಿರ ರೂಪಾಯಿಯಷ್ಟು ಹಣವಿದೆ. ಸಲಕರಣೆ ರೂಪದಲ್ಲಿಯೇ ಅನುದಾನ ವಿತರಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ಶೇಕಡಾ ೩ ರಷ್ಟು ಅನುದಾನದಲ್ಲಿ ತಾಲ್ಲೂಕಿನ ಒಟ್ಟು ೩೮ ಮಂದಿ ಅಂಗವಿಕಲರಿಗೆ 2 ಲಕ್ಷ 45 ಸಾವಿರ ರೂಪಾಯಿಗಳ ಬೆಲೆಯ ಟ್ರೈಸಿಕಲ್ಗಳನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಮಾಜಿ ಅಧ್ಯಕ್ಷರಾದ ಯರ್ರಬಚ್ಚಪ್ಪ, ಬಿ.ಎನ್.ವೇಣುಗೋಪಾಲ್, ತಾಲ್ಲೂಕು ಪಂಚಾಯತಿ ಸದಸ್ಯರಾದ ಶ್ರೀನಾಥ್, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿಸಾಕರೆ, ಮಂಜುನಾಥ್, ಮುನಿರೆಡ್ಡಿ, ಮುನಿರಾಜು, ಮುನಿವೆಂಕಟಸ್ವಾಮಿ, ದ್ಯಾವಪ್ಪ, ಮಾರಪ್ಪ, ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹೊಸದ್ಯಾವರು ಪೂಜಾ ಕಾರ್ಯಕ್ರಮಕ್ಕೆ ತಯಾರಿ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಭಾನುವಾರದ ಹೊಸದ್ಯಾವರು ಪೂಜಾ ಕಾರ್ಯಕ್ರಮಕ್ಕೆ ಹೊಸ ಮಡಿಕೆಗಳನ್ನು ಕೊಳ್ಳುತ್ತಿರುವ ಗ್ರಾಮಸ್ಥರು.

