26.1 C
Sidlaghatta
Thursday, December 25, 2025
Home Blog Page 1043

ಕೋಟೆ ಶ್ರೀ ಆಂಜನೇಯಸ್ವಾಮಿಯ 19ನೇ ವರ್ಷದ ವಾರ್ಷಿಕೋತ್ಸವ

0

ಶಿಡ್ಲಘಟ್ಟದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ 19ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ನೆರವೇರಿಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಿ, ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವಿತರಣೆಯನ್ನು ನಡೆಸಿ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಮಾಡಲಾಯಿತು.

ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮ ಸಪ್ತಾಹ, 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮ ಯುವಕರ ಸಂಘದ ವತಿಯಿಂದ ಶ್ರೀರಾಮ ಸಪ್ತಾಹ ಮತ್ತು 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಮೂರು ದಿನಗಳ ಕಾಲ ನಡೆದ ಅಖಂಡ ಶ್ರೀರಾಮ ನಾಮ ಸಪ್ತಾಹವು ಸೋಮವಾರಕ್ಕೆ ಕೊನೆಗೊಂಡಿತು. ಹಗಲು ರಾತ್ರಿ ನಡೆದ ಭಜನೆಯ ಸಂದರ್ಭದಲ್ಲಿ ದೇವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಡಿದ್ದಲ್ಲದೆ, ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವಿತರಣೆಯನ್ನೂ ನಡೆಸಲಾಗುತ್ತಿತ್ತು. ಸೋಮವಾರ ಸಂಜೆ ತಂಬಿಟ್ಟು ದೀಪೋತ್ಸವವನ್ನು ಆಚರಿಸಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಮಹಿಳೆಯರು ದೀಪಗಳನ್ನು ತಂದು ದೇವರಿಗೆ ಪೂಜೆ ಸಲ್ಲಿಸಿದರು.
‘ಲೋಕಕಲ್ಯಾಣಕ್ಕಾಗಿ, ಕಾಲಕಾಲಕ್ಕೆ ಮಳೆ ಬೆಳೆ ಆಗಲೆಂಬ ಸದುದ್ದೇಶದಿಂದ ರಾಮಕೋಟಿ ಭಜನೆಯನ್ನು ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಪರಹಿತ ಚಿಂತನೆಯುಳ್ಳ ರಾಮನ ಅನುಗ್ರಹವಾಗಿ ನಮ್ಮೆಲ್ಲರ ಕಷ್ಟ ನಿವಾರಣೆಯಾಗಿ ನೆಮ್ಮದಿಯಿಂದ ಬದುಕುವಂತೆ ಪ್ರಾರ್ಥಿಸುತ್ತೇವೆ’ ಎಂದು ಶ್ರೀರಾಮ ಯುವಕರ ಸಂಘದವರು ತಿಳಿಸಿದರು.

ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾವನಾ ಮಹರ್ಷಿ ಜಯಂತ್ಯುತ್ಸವ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ತಾಲ್ಲೂಕು ಪದ್ಮಶಾಲಿ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಚಿಂತಾಮಣಿ ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಕಳಶಗಳಿಗೆ ಗಂಗಾಜಲವನ್ನು ತುಂಬಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಸ್ಥಾನಕ್ಕೆ ಬಂದು ಕಳಶಸ್ಥಾಪಿಸಿದರು. ನಂತರ ಭಾವನಾ ಮಹರ್ಷಿ ಮತ್ತು ಭದ್ರಾದೇವಿಯ ಕಲ್ಯಾಣೋತ್ಸವ ನಡೆಸಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಅನಂತರಾಮಯ್ಯ, ಬಿ.ಲಕ್ಷ್ಮೀನಾರಾಯಣಪ್ಪ, ಎ.ತಿಪ್ಪಯ್ಯ, ಎನ್‌.ಲಕ್ಷ್ಮೀನಾರಾಯಣ, ನಾಗರಾಜ್‌, ರಮೇಶ್‌, ಮೂರ್ತಿ, ವೆಂಕಟನಾರಾಯಣಯ್ಯ, ಅರ್ಚಕ ಬಿ.ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
 

ಪ್ರೀತಿಯಿಂದ www.sidlaghatta.com

0

ಪ್ರೀತಿಯ ಸ್ನೇಹಿತರೇ,
www.sidlaghatta.com ನ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಆತ್ಮೀಯ ಅಭಿನಂದನೆಗಳು.
www.sidlaghatta.com ನಮ್ಮ ಹೆಮ್ಮೆಯ ತಾಲ್ಲೂಕಿನ ಜನ, ಜೀವನ, ದೈನಂದಿನ ಆಗು ಹೋಗುಗಳ ಕುರಿತಾದ ಸುದ್ದಿ, ಸಂಗತಿಗಳನ್ನು ಕಂಪ್ಯೂಟರ್ ಹಾಗೂ ಮೊಬೈಲ್ ತಂತ್ರಜ್ಞಾನ ಮಾಧ್ಯಮದ ಮೂಲಕ ನಿಮ್ಮೆಲ್ಲರಿಗೂ ತಲುಪಿಸುವ ಒಂದು ಪ್ರಾಮಾಣಿಕ ಪ್ರಯತ್ನ. ಈ ಪ್ರಯತ್ನವನ್ನು ಪ್ರೀತಿಯಿಂದ ಸ್ವಾಗತಿಸಿ ಹಾರೈಸಿ ಪ್ರೋತ್ಸಾಹಿಸುತ್ತಿರುವ ಎಲ್ಲಾ ಓದುಗ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು.
30 ದಿನಗಳನ್ನು ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಹರ್ಷವನ್ನು ಹಂಚಿಕೊಳ್ಳುತ್ತಾ ಮುಂಬರುವ ದಿನಗಳಲ್ಲಿ www.sidlaghatta.com ನ ಯೋಜನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.
ಈಗಾಗಲೇ ಕಂಪ್ಯೂಟರ್ ಹಾಗೂ ಮೊಬೈಲ್ ಮಾಧ್ಯಮಗಳಲ್ಲಿ www.sidlaghatta.com ಲಭ್ಯವಿದ್ದು, Internet ಸಂಪರ್ಕವಿರುವ ಯಾವುದೇ mobile handset/computer ನಿಂದ ಮಾಹಿತಿ ಪಡೆಯಲು ಸಾಧ್ಯವಿದೆ, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪ್ರತಿ ಲೇಖನದ “Comments” ವಿಭಾಗದಲ್ಲಿ ತಿಳಿಸಬಹುದು. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳಲು ಪ್ರಮುಖ ಅಂತರ್ಜಾಲ ತಾಣಗಳಾದ Facebook, Twitter, Google+ ಗಳ ಲಿಂಕ್ ಗಳನ್ನೂ ಸಹ ನೀಡಲಾಗಿದೆ.
Facebook (www.facebook.com/sidlaghatta) ಹಾಗೂ Twitter (www.twitter.com/HiSidlaghatta)ನಲ್ಲಿ www.sidlaghatta.com ನ ಪ್ರತಿಗಳಿದ್ದು, ನಿರಂತವಾಗಿ ಸಂಪರ್ಕದಲ್ಲಿರಲು ಅನುಕೂಲವಾಗುತ್ತದೆ.
ಈಗಾಗಲೇ www.sidlaghatta.com ಅನ್ನು WhatsApp ನಲ್ಲಿ ಪರಿಚಿಯಿಸಿದ್ದು ಎಲ್ಲಾ WhatsApp ಉಪಯೋಗಿಸುವ ಸ್ನೇಹಿತರು +919986904424 ಗೆ “HI” ಎಂದು ಕಿರುಸಂದೇಶ ‘Text/SMS’ ಕಳುಹಿಸುವ ಮೂಲಕ ಎಲ್ಲಾ ಶಿಡ್ಲಘಟ್ಟ ದ ದೈನಂದಿನ ವಿಚಾರಗಳ ಮಾಹಿತಿ ಪದೆಯಬಹುದಲ್ಲದೇ ನೀವೂ ಸಹ ನಿಮ್ಮ ಸುತ್ತಮುತ್ತ ನಡೆಯುವ ಸಂಗತಿಗಳ Photos, Videos ಗಣನ್ನು www.sidlaghatta.com ಜೊತೆ ಹಂಚಿಕೊಳ್ಳಬಹುದು. ಈ ವಿಧಾನವು ಈಗಾಗಲೇ ನಿಮ್ಮೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನೀವೆಲ್ಲಾರೂ News, Photos, Videos ಗಣನ್ನು ಹಂಚಿಕೊಳ್ಳುತ್ತಿರುವುದು ಸಂತೋಷದ ಸಂಗತಿಯೇ ಸರಿ.
WhatsApp ಸೇವೆಯನ್ನು ಮತ್ತಷ್ಟು ಉಪಯುಕ್ತಗೊಳಿಸಲು ‘Emergency Service’ ಅನ್ನು ಪ್ರಾರಂಭಿಸಿದ್ದು, ಯಾವುದೇ ಸಾರ್ವಜನಿಕ ಸೇವೆಯ ಉಪಯುಕ್ತ ಸಂಖ್ಯೆಗಳನ್ನು ಇದರಿಂದ ಪಡೆಯಬಹುದಾಗಿದೆ. ಈ ಸೇವೆಯನ್ನು ಶೀಘ್ರದಲ್ಲಿಯೇ website ಹಾಗೂ social media ಮಾಧ್ಯಮಗಳಿಗೂ ವಿಸ್ತರಿಸಲಾಗುವುದು.
ನಮ್ಮ ಊರಿಗಾಗಿ, ಜನ ಸೇವೆಗಾಗಿ ನಮ್ಮ ಪೂರ್ವಜರ ಕೊಡುಗೆ ಅಪಾರ. ಅವರು ಬರೆದು, ಪ್ರಕಟಿಸಿದ ಪುಸ್ತಕ, ಪ್ರಕಟಣೆಗಳು ಅವರ ನಿಸ್ವಾರ್ಥ ಸೇವೆಯ ಪ್ರತೀಕ. ಅಂಥಹ ಎಷ್ಟೋ ಕೊಡುಗೆಗಳು ನಮ್ಮ ಇಂದಿನ ಜೀವನಶೈಲಿಗೂ ಮಾದರಿಯಾಗಿದೆ. ಅವರ ಪ್ರಯತ್ನಗಳನ್ನು ಸಾರ್ವಕಾಲಿಕಗೊಳಿಸಲು ನಾವುಗಳು ಧ್ಯೇಯಬಧ್ಧರಾಗಿದ್ದೇವೆ. www.sidlaghatta.com ನಮ್ಮ ಪೂರ್ವಜರ ಕೃತಿಗಳನ್ನು ತಂತ್ರಜ್ಞಾನದ ಸಹಾಯದಿಂದ Digitize ಮಾಡಿ, ಶೀಘ್ರದಲ್ಲಿಯೇ ಡಿಜಿಟಲ್ ಲೈಬ್ರರಿ (Digital Library)ಯನ್ನು ಪ್ರಾರಂಭಿಸುತ್ತಿದೆ.
ಈ ನಿಟ್ಟಿನಲ್ಲಿ ಆನೂರು ಶ್ರೀ ಎ ಎಮ್ ಮುನೇಗೌಡರ ‘ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕವನ್ನು ಮೊದಲ ಪ್ರಕಟಣೆಯಾಗಿ ಹೊರತರಲಿದೆ (ಆನೂರು ಶ್ರೀ ಎ ಎಮ್ ಮುನೇಗೌಡರ ಕುರಿತಾದ ಲೇಖನವನ್ನು ಇಲ್ಲಿ ಓದಬಹುದು). ಈ ವ್ಯವಸ್ಥೆಯ ಉಪಯೋಗವನ್ನು ಎಲ್ಲಾ ಸ್ನೇಹಿತರು website ಮೂಲಕ ಪಡೆಯಬಹುದು.
ಇನ್ನು ಮುಂಬರುವ ದಿನಗಳಲ್ಲಿ www.sidlaghatta.com ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಿದ್ದು, ನಮ್ಮ ಊರಿನ ಪ್ರತಿ ಸೇವೆಗೆ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಲಿದೆ.
ನಿಮ್ಮ ಅಭಿಪ್ರಾಯಗಳನ್ನು hi@sidlaghatta.com ಗೆ email ಮೂಲಕ ಕಳುಹಿಸಬಹುದು.
www.sidlaghatta.com ನಮ್ಮ ತಾಯ್ನೆಲ, ಜನ, ಜೀವನ ದ ಹಿರಿಮೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಒಂದು ಹೊಸ ಪ್ರಯತ್ನ. ಈ ಹೊಸ ಪ್ರಯತ್ನಕ್ಕೆ ಪ್ರತಿ ಹಂತದಲ್ಲಿಯೂ ಮೆಚ್ಚಿಗೆಯನ್ನು ವ್ಯಕ್ತಪಡಿಸಿ, ಸಲಹೆ ಸಹಕಾರಗಳೊಂದಿಗೆ ಹುರಿದುಂಬಿಸುತ್ತಿರುವ ನಿಮ್ಮಲ್ಲರಿಗೂ ಹೃತ್ಪೂರ್ವಕ ವಂದನೆಗಳು.
ಪ್ರೀತಿಯಿಂದ,
www.sidlaghatta.com ತಂಡ

ಕಣ್ಮರೆಯಾಗುತ್ತಿರುವ ಗ್ರಾಮೀಣ ಸೊಗಡು

0

ಬೇಸಿಗೆಯ ಬಿಸಿ ಕಡಿಮೆಯಾಗದಿದ್ದರೂ ಮಕ್ಕಳಿಗೆ ಬೇಸಿಗೆ ರಜೆ ಜಾರಿಯಲ್ಲಿರುವುದರಿಂದ ಕುಣಿಯುತ್ತಾ ಕುಪ್ಪಳಿಸುತ್ತಾ ಸದಾ ಚಟುವಟಿಕೆಯಿಂದ ಪುಟಿದೇಳುವ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲು ಅಸಾಧ್ಯ.
ಟಿವಿಯಲ್ಲಿ ಮೂಡಿ ಬರುವ ಕಾರ್ಟೂನು, ಬೇಸಿಗೆ ಶಿಬಿರಗಳು, ಕ್ರಿಕೆಟ್ಟು, ವೀಡಿಯೋ ಗೇಮ್ಸ್, ಪ್ರವಾಸ ಮುಂತಾದ ಹಲವು ಆಕರ್ಷಣೆಗಳು ಮಕ್ಕಳನ್ನು ತಮ್ಮೆಡೆಗೆ ಸೆಳೆಯುವ ಈ ದಿನಗಳಲ್ಲಿ ತಾಲ್ಲೂಕಿನಲ್ಲಿ ಕೆಲವೆಡೆ ಮಕ್ಕಳು ಗ್ರಾಮೀಣ ಜಾನಪದ ಆಟಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಮಕ್ಕಳು ಲಗೋರಿ ಆಡುವುದರಲ್ಲಿ ಸಂತೋಷಪಡುತ್ತಿದ್ದರೆ, ವರದನಾಯಕನಹಳ್ಳಿಯಲ್ಲಿ ಹೆಣ್ಣು ಮಕ್ಕಳು ಕಲ್ಲಾಟ, ಹಳಗುಣಿಮನೆ ಆಡುತ್ತಾ ನಲಿಯುತ್ತಿದ್ದಾರೆ. ಹನುಮಂತಪುರ ಗ್ರಾಮದಲ್ಲಿ ಕುಂಟೆಬಿ್ಲೆ, ಕಣ್ಣಾಮುಚ್ಚಾಲೆ ಆಟದಲ್ಲಿ ಮಕ್ಕಳು ತಲ್ಲೀನರು. ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯ ಬಳಿಯಿರುವ ಗುಲ್ಮೊಹರ್ ಮರವಂತೂ ಹುಡುಗರಿಗೆ ಮರಕೋತಿ ಆಟ ಆಡಲು ಹೇಳಿ ಮಾಡಿಸಿದಂತಿದೆ.
ಯಾವುದೇ ಕಾಸು ಖರ್ಚಿಲ್ಲದೇ ಪರಿಸರದಲ್ಲೇ ಸಿಗುವ ಪರಿಕರಗಳನ್ನು ಬಳಸಿಕೊಂಡು ಆಡುವ ಈ ಆಟಗಳು ಕೂಡಿ ಬಾಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುವಂತಹವು. ಜನಪದ ಸಾಹಿತ್ಯದಂತೆ ಜನಪದ ಆಟಗಳೂ ಕೂಡ ನಾಡಿನ ಸಾಂಸ್ಕೃತಿಯ ಪ್ರತೀಕ. ಈ ಆಟಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಐಪಿಎಲ್ ಹುಚ್ಚು ಎಲೆಡೆ ಪಸರಿಸಿ ಕ್ರಿಕೆಟ್ ಗುಂಗಿನಲ್ಲಿ ಕಣ್ಮರೆಯಾಗುವಂತಹ ಈ ಆಟಗಳನ್ನು ಮುಂದೆ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗಬಹುದು. ಅಥವಾ ಇಂತಹ ಆಟಗಳನ್ನು ಕಲಿಸುಂತಹ ಬೇಸಿಗೆ ಶಿಬಿರಗಳು ಹುಟ್ಟಿಕೊಂಡು ಹೊಸ ವಿದ್ಯೆಯೆಂಬಂತೆ ಕಲಿಸಲೂಬಹುದು.
ಮೌಖಿಕ ಪರಂಪರೆ ಹೊಂದಿದ ಈ ಆಟಗಳು ಜನಾಂಗದಿಂದ ಜನಾಂಗಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅಲ್ಪ ಬದಲಾವಣೆ ಹೊಂದುತ್ತದೆ. ಒಂದೇ ಆಟ ಬೇರೆ ಬೇರೆ ಹೆಸರಿನಿಂದ ವಿವಿಧ ಪ್ರದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಜಾನಪದ ಆಟಗಳು ಹಲವು ನೆಲೆಯಲ್ಲಿ ಕುತೂಹಲ ಕೆರಳಿಸಿ ಆಸಕ್ತಿಯನ್ನು ಅರಳಿಸುತ್ತವೆ.
ಜಾನಪದ ಆಟಗಳು ಮನರಂಜನೆ ಕೊಡುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಕಸರತ್ತನ್ನು ನೀಡುತ್ತವೆ. ಮನುಷ್ಯ ಸಂಬಂಧದ ಸಾಮರಸ್ಯವನ್ನು ಹೆಚ್ಚಿಸುವ ಇವು ನಮ್ಮ ಬದುಕಿನಿಂದ ಮರೆಯಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಾಯಕ ಸಾಧನಗಳಾಗಿ ನಿಲ್ಲುವ ಈ ಆಟಗಳು ಆಡುವವರಿಗೂ, ನೋಡುವವರಿಗೂ, ಕೇಳುವವರಿಗೂ ಆನಂದ ಹಂಚುವಂಥವುಗಳು.
ಸಂಕೀರ್ಣವಾಗುತ್ತಿರುವ ನಮ್ಮ ಬದುಕು ಜಾಗತೀಕರಣ, ವ್ಯಾಪಾರೀಕರಣ, ನಗರೀಕರಣಗಳ ಸುಳಿಯೊಳಗೆ ಸುತ್ತುತ್ತಿದೆ. ದೇಶೀಯತೆ ದೂರಸಾಗುತ್ತಾ ಗ್ರಾಮಸಂಸ್ಕೃತಿಯ ವೈವಿಧ್ಯಮಯ ಆಚರಣೆಗಳು ಅಳಿಯುತ್ತಿವೆ. ಕೆಲವು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಹೊಸ ರೂಪ ಪಡೆಯುತ್ತಿವೆ. ಮನುಷ್ಯ ಬದುಕಿನ ವಿಕಾಸದ ಜೊತೆ ತಳುಕು ಹಾಕಿಕೊಂಡಿರುವ ಈ ಆಟಗಳ ಪುನರುತ್ಥಾನದ ಚಿಂತನೆಯ ಅಗತ್ಯವಿದೆ.

ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನ

0

ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಭಾನುವಾರ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಡಾ.ಡಿ.ಟಿ.ಸತ್ಯನಾರಾಯಣರಾವ್‌ ಹಾಗೂ ಸ್ಥಳೀಯ ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ವಕೀಲ ಟಿ.ಎಸ್‌.ವಿಜಯಶಂಕರ್‌ ಅವರಿಂದ ‘ಶಂಕರ ವಿಜಯ’ ಉಪನ್ಯಾಸವನ್ನು ನಡೆಸಲಾಯಿತು.
ಭಾನುವಾರ ದಿ.ಬಿ.ಆರ್‌.ಪ್ರಕಾಶ್‌ರವರ ವೇದಿಕೆಯಲ್ಲಿ ಹತ್ತು ಮಂದಿ ವಟುಗಳಿಗೆ ಸಾಮೂಹಿಕ ಉಪನಯನಗಳನ್ನು ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್‌ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
‘ಕಳೆದ ಮೂವತ್ತೆರಡು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್‌.ರವಿ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ವಾಸುದೇವರಾವ್‌, ತಾಲ್ಲೂಕು ಅಧ್ಯಕ್ಷ ಎ.ಎಸ್‌.ರವಿ, ವಿ.ಕೃಷ್ಣ, ಬಿ.ಆರ್‌.ಅನಂತಕೃಷ್ಣ, ಬಿ.ಕೃಷ್ಣಮೂರ್ತಿ, ಶ್ರೀನಿವಾಸಮೂರ್ತಿ, ಶ್ರೀನಾಥ್‌, ಎಸ್‌.ವಿ.ನಾಗರಾಜರಾವ್‌, ಮಂಜುನಾಥ್‌, ಬಿ.ಆರ್‌.ನಟರಾಜ್‌, ಭಾಸ್ಕರ್‌, ಎಸ್‌.ಆರ್‌.ಸಕಲೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೇ ತಿಂಗಳಿನ ಅತಿಥಿ ಗುಲ್ಮೊಹರ (May Flower)

0

ತಾಲ್ಲೂಕಿನಲ್ಲಿ ರಸ್ತೆಯಂಚಿನಲ್ಲಿ ಬೆಳೆಯುವ ಗುಲ್ಮೊಹರ್ ಮರಗಳು ಉಜ್ವಲ ಕೆಂಬಣ್ಣದ ಹೂಗಳನ್ನು ಅರಳಿಸಿದ್ದು ದಾರಿಹೋಕರಿಗೆ ನೆರಳು, ತಂಪಿನೊಂದಿಗೆ ಆನಂದವನ್ನೂ ನೀಡುತ್ತಿದೆ.
ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್‌ ಬಳಿ ಬೆಳೆದಿರುವ ಈ ಮರಗಳು ದೂರದಿಂದಲೇ ನೀಲಿ ಆಗಸದ ಹೊಂದಿಕೆಯಲ್ಲಿ ಕೆಂಪುಬಣ್ಣದಿಂದ ಆಹ್ಲಾದವನ್ನು ಉಂಟುಮಾಡುತ್ತಿದೆ. ಸಾಮಾನ್ಯವಾಗಿ ವರ್ಷದ ಕಡುಬಿಸಿಲಿರುವ ಸಮಯದಲ್ಲಿ ಮುಂಗಾರಿಗೆ ಮುಂಚೆ ರಸ್ತೆ ಬದಿಯಲ್ಲಿ ಜ್ವಾಲೆಯಂತಹ ಹೂಗೊಂಚಲಿನ ಗುಲ್ಮೊಹರನ್ನು ಕಾಣಬಹುದು. ರಸ್ತೆಯ ಬದಿಯ ಹೆದ್ದಾರಿ ಮರಗಳಲ್ಲೊಂದಾದ ಈ ವೃಕ್ಷ ಸೌಂದರ್ಯಯುಕ್ತವಾದುದು.
ಈ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಡೆಲೋನಿಕ್ಸ್ ಎಂದರೆ “ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ” ಎಂದರ್ಥ. ಇದು ಹೂವಿನ ಎಸಳಿನ ಆಕಾರವನ್ನು ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ ‘ಕೋಳಿ ಪಂದ್ಯ’ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ಗುಲ್ಮೊಹರ್ ಎನ್ನುವರು. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್ಮೊಹರ್ ಎಂದಾಗಿದೆ. ಇಂಗ್ಲಿಷ್‌ ನಲ್ಲಿ ಫ್ಲಾಂಬೊಯಾಂಟ್, ರಾಯಲ್ ಗೋಲ್ಡ್ ಮೊಹರ್, ರಾಯಲ್ ಪೀಕಾಕ್ ಫ್ಲವರ್, ಫೈರ್ ಟ್ರೀ ಎನ್ನುತ್ತಾರೆ. ಈಸ್ಟರ್ ಉತ್ಸವವು ಆದ ೫೦ ದಿನಗಳ ಬಳಿಕ ಪೆಂಟೆಕಾಸ್ಟ್ ಹಬ್ಬದ ಹೊತ್ತಿಗೆ ಈ ಮರದ ಹೂಗಳು ಅರಳುತ್ತವೆಂದು ಕ್ರಿಶ್ಚಿಯನ್ನರು ಇದಕ್ಕೆ ಪೆಂಟೆಕಾಸ್ಟ್ ಟ್ರೀ ಎಂದು ಕರೆಯುವರು.
ಏಪ್ರಿಲ್ ಕೊನೆ ಮತ್ತು ಮೇ ತಿಂಗಳಿನಲ್ಲಿ ಹೂವರಳುವುದರಿಂದ ಮೇ ಫ್ಲವರ್ ಎಂದೂ ಕರೆಯುವರು. ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಇದು ಕೆಂಬಣ್ಣದಿಂದ ಹೋರಾಟದ, ಶ್ರಮದಾನದ ಮತ್ತು ಕಾರ್ಮಿಕರ ಸಂಕೇತವಾಗಿ ಕೆಂಬಣ್ಣವನ್ನು ಪ್ರತಿಧ್ವನಿಸುತ್ತದೆ. ಇದರ ಕಾಯಿಗಳು ಕತ್ತಿಯಂತೆ ಉದ್ದ ಮತ್ತು ಅಗಲವಿರುವುದರಿಂದ ಈ ಮರವನ್ನು ಕತ್ತಿಕಾಯಿ ಮರವೆಂದೂ ಕರೆಯುತ್ತಾರೆ.
ಈ ಮರದ ಮೂಲ ಮಡಗಾಸ್ಕರ್. ಮಾರಿಷಿಯಸ್ ಮೂಲಕ ಭಾರತಕ್ಕೆ ಇದು ಬಂದಿದೆ. ಹೂ ಬಿಡುವ ಸ್ವಲ್ಪ ಮುಂಚಿತವಾಗಿ ಈ ಮರದ ಎಲೆಗಳು ಉದುರುತ್ತವೆ. ಗೊಂಚಲುಗಳಲ್ಲಿ ಹೂ ಬಿಟ್ಟಾಗ ಕೆಂಪುಬಣ್ಣದಿಂದ ಕಂಗೊಳಿಸುವ ಮರವನ್ನು ‘ಬೆಂಕಿಮರ’ವೆಂದೇ ಕರೆಯುತ್ತಾರೆ. ಉರ್ದು ಕವಿತೆಗಳಲ್ಲಿ ಗುಲ್ಮೊಹರ್ ವಿಶೇಷ ಪ್ರತಿಮೆಯಾಗಿ ರೂಪಕವಾಗಿ ಬಳಸಲಾಗಿದೆ.
‘ಮುಂಗಾರಿನ ಮುನ್ಸೂಚನೆಯಾಗಿ ಅರಳುವ ಗುಲ್ಮೊಹರ್ ಹೂಗಳು ಬೇಸಿಗೆಯ ಬಿಸಿಯಲ್ಲೂ ಮನಕ್ಕೆ ತಂಪನ್ನೆರೆಯುತ್ತವೆ. ದಾರಿಹೋಕರಿಗೆ ನೆರಳು, ದನಗಳಿಗೆ ಇದರ ಎಲೆ ಆಹಾರ ಹಾಗೂ ಹಲವು ಹಕ್ಕಿಗಳು ಮತ್ತು ಜೇನುಗಳಿಗೆ ಮಧು ನೀಡುತ್ತದೆ ಈ ಮರ. ರಸ್ತೆ ಬದಿಯಲ್ಲಿ ಈ ರೀತಿಯ ಮರಗಳನ್ನು ನೆಡುವ ಸಂಸ್ಕೃತಿ ಹೆಚ್ಚಾಗಬೇಕು’ ಎನ್ನುತ್ತಾರೆ ಶಿಕ್ಷಕ ಕೃಷ್ಣಪ್ಪ.

ಬೇಸಿಗೆಯ ಬಂಧು ಈಚಲು

0

ತಾಲ್ಲೂಕಿನಾದ್ಯಂತ ಬೇಸಿಗೆಯಲ್ಲಿ ಬಿಡುವ ಕಾಡುಹಣ್ಣುಗಳಲ್ಲಿ ಒಂದಾದ ಈಚಲ ಹಣ್ಣುಗಳು ಗೊಂಚಲು ಗೊಂಚಲಾಗಿ ಬಿಟ್ಟಿದ್ದು ಹಕ್ಕಿಗಳು ಸೇರಿದಂತೆ ಜನರ ಹೊಟ್ಟೆ ತುಂಬಿಸುತ್ತಿವೆ. ಎಲ್ಲೆಡೆ ಈಚಲು ಮರಗಳಲ್ಲಿ ಹಣ್ಣುಗಳು ಹಳದಿಬಣ್ಣದಿಂದ ಕೂಡಿವೆ.
ಈಚಲ ದೊರೆಗಾಯಿ ಸಿಹಿ ಮತ್ತು ಒಗರಿನಿಂದ ಕೂಡಿರುತ್ತವೆ. ಅವು ವಿಶಿಷ್ಠ ರುಚಿಯನ್ನು ನೀಡುವುದರಿಂದ ಇದರ ಬೀಜವನ್ನು ಮಕ್ಕಳು ಬಾಯಿಯಲ್ಲಿ ಅಡಿಕೆಯಂತೆ ನೆನೆಸುತ್ತಾ ಮೆಲ್ಲುತ್ತಾರೆ. ಈ ರೀತಿ ಬೀಜವನ್ನು ಮೆಲ್ಲುವುದರಿಂದ ಲಾಲಾ ರಸದ ಗ್ರಂಥಿ ಚಟುವಟಿಕೆಗೊಂಡು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡಿ ಆಹಾರದ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ಈಚಲ ದೋರೆ ಹಾಗೂ ಹಣ್ಣುಗಳು ಎಂದರೆ ಹಳ್ಳಿ ಹೈದರ ಬಾಯಲ್ಲಿ ನೀರೂರುತ್ತದೆ.
ಈಚಲು ಹಣ್ಣಿನ ಅರಿಶಿನ ಬಣ್ಣದ ಕಾಯಿ ಹಣ್ಣಾದಾಗ ಕಡುಗಪ್ಪುಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆ ತೆಳುವಾಗಿದ್ದು ಹೆಚ್ಚೂ ಕಡಿಮೆ ಕರ್ಜೂರವನ್ನು ಹೋಲುತ್ತದೆ. ಈಚಲು ಹಣ್ಣಿನಿಂದ ರಕ್ತ ವೃದ್ಧಿ ಹಾಗೂ ಶುದ್ಧಿ ಆಗುತ್ತದೆ. ಇದರಲ್ಲಿ ಕರ್ಜೂರದ ಗುಣಗಳೇ ಇವೆ ಎಂದು ನಾಟಿ ವೈದ್ಯರು ಹೇಳುತ್ತಾರೆ.
ಈಚಲು ಹಣ್ಣನ್ನು ಬಯಲು ಸೀಮೆಯ ಕರ್ಜೂರ ಎಂದೂ ಸಹ ಹೇಳುವುದುಂಟು. ಹಾಗೆಯೇ ಬಡವರ ಕರ್ಜೂರ ಎಂದೂ ಇದು ಹೆಸರುವಾಸಿಯಾಗಿದೆ. ಈ ಹಣ್ಣು ಕೋತಿಗಳಿಗೂ ಪ್ರಿಯ. ಆದರೆ ಕೋತಿ ಮುಳ್ಳು ಗರಿಗಳನ್ನು ದಾಟಿ ಹೋಗಲಾರವು. ಹಣ್ಣು ಉದುರಿದಾಗ ಅವು ಆರಿಸಿ ತಿನ್ನುವುದುಂಟು. ಇನ್ನುಳಿದಂತೆ ಅಳಿಲುಗಳು ಮತ್ತು ಕೆಲವು ಹಕ್ಕಿಗಳಿಗೆ ಇದು ಆಹಾರ.
ಶಾಲೆಯ ರಜೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇವು ಯಥೇಚ್ಛವಾಗಿ ಸಿಗುತ್ತದೆ. ಮುಳ್ಳಿನಂತೆ ಚೂಪಾದ ಗರಿಗಳಿರುವುದರಿಂದ ಕೆಲವು ಹಕ್ಕಿಗಳು ಈಚಲಿನ ಮರದ್ಲಲಿ ಗೂಡು ಕಟ್ಟುತ್ತವೆ. ಈಚೆಗೆ ಈಚಲಿನ ಗೆಲ್ಲುಗಳಿಂದ ಚಾಪೆ ಹೆಣೆಯುವುದು ಹಾಗೂ ಬುಟ್ಟಿ ತಯಾರಿಸುವುದರಿಂದಾಗಿ ಹಣ್ಣುಗಳು ಬಿಡುವುದು ಕಡಿಮೆಯಾಗಿದೆ.

ಹಾದಿ ಬದಿಯ ಪಿಟೀಲು ವಾದಕ

0

ಶಿಡ್ಲಘಟ್ಟದಲ್ಲಿ ಶನಿವಾರ ಉತ್ತರ ಭಾರತದಿಂದ ಬಂದಿದ್ದ ವ್ಯಕ್ತಿಯೊಬ್ಬ ಕಡಿಮೆ ವೆಚ್ಚದ ಬಿದಿರಿನ ಪಿಟೀಲು ಮಾರುತ್ತಿರುವುದು.

ಶಿಡ್ಲಘಟ್ಟದಲ್ಲಿ ವೈಭವದಿಂದ ಬಸವ ಜಯಂತಿ ಆಚರಣೆ

0

ಬಸವಣ್ಣನವರು ಜೀವಿಸಿದ 12 ನೇ ಶತಮಾನದ ಕಾಲವನ್ನು ಪುನವಿರ್‌ಮರ್ಶೆ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಿದೆ, ಜಾತಿ ಜಾತಿಗಳಲ್ಲಿನ ದ್ವೇಷಭಾವಗಳನ್ನು ತ್ಯಜಿಸಿ ಮಾನವಕುಲ ಒಂದಾಗಬೇಕಾಗಿದೆ. ಇಂದಿನ ಮಂತ್ರಿಗಳೂ ಕೂಡಾ ಬಸವಣ್ಣನವರ ಆಳ್ವಿಕೆಯ ದಿನಗಳಲ್ಲಿ ಆಡಳಿತ ನಡೆಸುತ್ತಿದ್ದ ವಿಧಾನಗಳು ಹಾಗೂ ಪ್ರಜೆಗಳ ಕೆಲಸಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿದ್ದ ಚಾಕಚಕ್ಯತೆಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ವಿಜಯಪುರ ಶಾಖಾ ಮಠದ ಮಹದೇವ ಸ್ವಾಮಿಜೀ ಆಶೀರ್ವಚನ ನೀಡಿ ಮಾತನಾಡಿದರು.
ಪಟ್ಟಣದ ಅರಳೇಪೇಟೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಬಸವೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ನಡೆದ ಕಲ್ಯಾಣ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮೂಢನಂಬಿಕೆ ಹಾಗು ಶೋಷಣೆಯನ್ನು ನಿವಾರಿಸಿ ಸಮಾನತೆ, ಸಹೋದರತೆ, ಕಾಯಕ, ದಾಸೋಹ ದಂತಹ ಉದಾತ್ತ ತತ್ವಗಳ ಮೂಲಕ ಸಮಾಜದ ಎಲ್ಲರ ಶ್ರೇಯಸ್ಸನ್ನು ಬಯಸಿದ ಮಹಾಮಾನವತಾವಾದಿ, ವಿಶ್ವಮಾನವ, ಜಗಜ್ಯೋತಿ ಬಸವೇಶ್ವರರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೇ ದೀನ ದಲಿತರ ಹಾಗು ದುರ್ಬಲರ ಏಳಿಗೆಗಾಗಿ ಹಾಗು ಮಹಿಳೆಯರಿಗೆ ಸಮಾನವಾದ ಹಕ್ಕು ನೀಡುವಲ್ಲಿ ಶ್ರಮಿಸಿದ್ದರು. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಇಡೀ ಜಗತ್ತೇ ಮಾರುಹೋಗಿದ್ದು ಅಂತಹ ಮಹಾಪುರುಷರ ಜಯಂತಿಯನ್ನು ಅವರ ನುಡಿಮುತ್ತಾದ ಕಾಯಕವೇ ಕೈಲಾಸ ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಎಲ್ಲಾ ವರ್ಗದವರು ಸೇರಿ ಆಚರಿಸುವಂತಾಗಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ವಾಗೀಶ್‌ಪ್ರಸಾದ್ ಮಾತನಾಡಿ ಬಸವಣ್ಣನವರು ಕಂಡಿದ್ದ ಕನಸನ್ನು ನನಸು ಮಾಡುವಂತಹ ಕೆಲಸವನ್ನು ಎಲ್ಲಾ ಜನಾಂಗಗಳು ಮಾಡಬೇಕು, ಜಾತಿಯ ಕಾಲಂಗಳನ್ನು ತೆಗೆದುಹಾಕಿದರೆ ಎಲ್ಲಾ ಜಾತಿ ಜನಾಂಗದವರು ಒಂದಾಗಲು ಸಾಧ್ಯವಿದೆ, ಯಾವುದೇ ಜಾತಿ, ಧರ್ಮ, ಮತವೆಂಬುದಾಗಿ ವಿಂಗಡನೆ ಮಾಡಬೇಡಿ, ನಾವೆಲ್ಲ ಮನುಷ್ಯರು ಎಂದಷ್ಟೆ ಭಾವಿಸಬೇಕಾಗಿದೆ, ಶಾಸಕರು ಎಲ್ಲಾ ಹಿಂದುಳಿದ ವರ್ಗಗಳ ಕೇರಿಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಹೆಚ್ಚಿನ ಅನುಧಾನಗಳನ್ನು ಮೀಸಲಿಟ್ಟು ಸುದಾರಣೆ ಮಾಡಲು ಸಹಕಾರ ನೀಡಬೇಕು. ಯುವಕರಲ್ಲಿ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ. ದುಂದುವೆಚ್ಚ ಮಾಡಿ ಮದುವೆ ಮಾಡಬೇಡಿ, ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ, ರಕ್ತದಾನ ಮಾಡಿ, ವರದಕ್ಷಿಣೆ ಪಿಡಗನ್ನು ತೊಲಗಿಸಿ ಅಂತರ್ಜಾತಿ ವಿವಾಹಗಳನ್ನು ಮಾಡಿಕೊಳ್ಳಬೇಕು, ಶತಶತಮಾನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಬಸವೇಶ್ವರರ ಹೆಸರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ, ಮತ್ತು ಅಕ್ಕಮಹಾದೇವಿಯ ಹೆಸರನ್ನು ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಾಲಿಂಗಯ್ಯ ಮಠದ್ ಅವರ ಅಂಧಕಲಾವಿದರ ತಂಡದಿಂದ ವಚನಗಾಯನವನ್ನು ಏರ್ಪಡಿಸಲಾಗಿತ್ತು.
ಸಂಜೆ ದೇವಾಲಯದಿಂದ ವಿದ್ಯುತ್‌ ದೀಪಾಲಂಕೃತವಾದ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿರಿಸಿ ನಂದೀಧ್ವಜ ಸಮೇತ ರೇಣುಕಾರಾಧ್ಯ ಮತ್ತು ತಂಡದವರಿಂದ ವೀರಭದ್ರ ನೃತ್ಯ, ದಕ್ಷಬ್ರಹ್ಮನ ಸಂವಾದ, ಕರಡಿ ಮಜಲು, ಚಿಟ್ಟಿಮೇಳ, ನಾದಸ್ವರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಉಲ್ಲೂರುಪೇಟೆಯ ಜೋಡಿ ಬಸವೇಶ್ವರ ದೇಗುಲದಲ್ಲಿ ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ವಿಜಯಪುರ ಮಠದ ಮಹದೇವ ಸ್ವಾಮಿಜಿ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಾಗೀಶ್‌ಪ್ರಸಾದ್, ಡಾ.ಸತ್ಯನಾರಾಯಣರಾವ್, ಬಸವೇಶ್ವರ ಸೇವಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಉಪಾಧ್ಯಕ್ಷ ಡಿ.ಜಿ.ಮಲ್ಲಿಕಾರ್ಜುನ, ಎಸ್.ಜಿ.ಚಂದ್ರಶೇಖರ್‌ಬಾಬು, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್‌ಬಾಬು, ಎಂ.ಎನ್,ನಾಗಭೂಷಣ್, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.

error: Content is protected !!