Sidlaghatta : ಶಿಡ್ಲಘಟ್ಟದ ಹೃದಯಭಾಗದಲ್ಲಿರುವ ಒಂದು ಸಣ್ಣ ಅಂಗಡಿಯಿಂದ ಆರಂಭವಾದ ಪಯಣ, ಇಂದಿಗೆ ಒಂದು ಕುಟುಂಬದ ನಾಲ್ಕು ತಲೆಮಾರನ್ನು ದಾಟಿ “ನಂಬಿಕೆಯ ಕಥೆ” ಆಗಿದೆ. 1942ರ ವಿಜಯದಶಮಿಯಂದು ಕೆ.ನಾರಾಯಣಶೆಟ್ಟಿ ಅವರು ಪ್ರಾರಂಭಿಸಿದ “ದೇಶನಾರಾಯಣ ಸ್ಟೋರ್ಸ್”, ಕೇವಲ ಔಷಧಿ ಮಾರುವ ಸ್ಥಳವಲ್ಲ – ಇದು ಸಮುದಾಯದ ಆರೋಗ್ಯ ಸೇವೆಯ ನಂಟಾಗಿದೆ.
ಕಾಲರಾ ವ್ಯಾಪಕವಾಗಿದ್ದಾಗ ಮದ್ರಾಸಿನಿಂದ ಕ್ಲೋರೋಕ್ವಿನ್ ಗುಳಿಗೆಗಳನ್ನು ತಂದು ಜನರಿಗೆ ನೀಡಿದ ನಾರಾಯಣಶೆಟ್ಟಿಯವರ ಮಾನವೀಯ ಸೇವೆಯೇ ಈ ಅಂಗಡಿಯ ಮೂಲ ಕತೆ. ತಾವು ಮದ್ರಾಸಿನಲ್ಲಿ ತರಬೇತಿ ಪಡೆದು ಪಡೆದ ಪ್ರಮಾಣಪತ್ರದೊಂದಿಗೆ ಪ್ರಾರಂಭಿಸಿದ ಈ ಪ್ರಯಾಣ, ಇಂದಿಗೂ ಗುಣಮಟ್ಟದ ಮೇಲೆ ನಂಬಿಕೆ ಉಳಿಸಿಕೊಂಡಿದೆ.
“ಒಂದಾಣಿ ಜಾಸ್ತಿ ತಗೋ, ಆದರೆ ಸರಕಲ್ಲಿ ನಾಣ್ಯವಿರಲಿ” ಎಂಬ ತಾತನ ಮಾತನ್ನು ಧ್ಯೇಯವಾಕ್ಯವನ್ನಾಗಿಸಿಕೊಂಡ ಕುಟುಂಬವು, ಶಿಡ್ಲಘಟ್ಟದಲ್ಲಿರುವ 40ಕ್ಕೂ ಹೆಚ್ಚು ಔಷಧಿ ಅಂಗಡಿಗಳ ನಡುವೆ ತನ್ನದೇ ಆದ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿದಿದೆ. ಇಂದಿಗೆ ರೋಹನ್ ಗಂಧರ್ವ ಎಂಬ ನಾಲ್ಕನೇ ತಲೆಮಾರಿನ ಮೂಲಕ ‘ದೇಶನಾರಾಯಣ ಸ್ಟೋರ್ಸ್’ ತನ್ನ ಸೇವೆಯನ್ನು ಮುಂದುವರೆಸುತ್ತಿದೆ.
ಸಂಪ್ರದಾಯ, ನಂಬಿಕೆ ಮತ್ತು ಮಾನವೀಯತೆಗೆ ಮೆರಗು ನೀಡುತ್ತಿರುವ ಈ ಪಯಣ, ಸ್ಥಳೀಯರ ಹೃದಯದಲ್ಲಿ ಇನ್ನೂ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿದೆ.
Sidlaghatta : ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ.
ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ತಾಲ್ಲೂಕಿನಲ್ಲಿಯೂ ಹಲವಾರು ಮಂದಿ ಆಚರಿಸುವರು.
ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ಪುರಾಣ ಕಥೆಗಳನ್ನು ಪುನ: ಸೃಷ್ಟಿಸುವ ರೀತಿಯಲ್ಲಿ, ದಸರಾ ಗೊಂಬೆಗಳ ಮೂಲಕ ನಮ್ಮ ನಾಡಿನ ಜನಪದ, ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುತ್ತಾರೆ.
ಸುಮಾರು ಮೂರು ತಲೆಮಾರುಗಳಿಂದ ಇವರ ಮನೆಯಲ್ಲಿನ ಈ ದಸರಾ ಗೊಂಬೆ ಹಬ್ಬದ ಆಚರಣೆ ನಡೆಸಿಕೊಂಡು ಬರಲಾಗಿದೆ. ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ರೀತಿ ಅತ್ಯಂತ ಆಕರ್ಷಕವಾಗಿದೆ.
ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ಕಾಮಧೇನು, ಹುತ್ತದಲ್ಲಿ ಮಲಗಿರುವ ವೆಂಕಟೇಶ್ವರನಿಗೆ ಹಾಲು ನೀಡುತ್ತಿರುವ ಗೋಮಾತೆ, ರಾಘವೇಂದ್ರರು, ದಶಾವತಾರ, ಮುವ್ವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ, ಅವರ ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ, ರಾಮ ಗುಹನೊಂದಿಗೆ ವನವಾಸಕ್ಕೆ ತೆರಳುದ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವುದು, ರಾಮನ ತೊಡೆಯ ಮೇಲೆ ಮಲಗಿದ ಲಕ್ಷ್ಮಣ, ಸಂಜೀವಿನಿ ತರುತ್ತಿರುವ ಹನುಮಂತ, ಬೆಣ್ಣೆ ಕದಿಯುವ ಕೃಷ್ಣ, ಗೊಪಿಕಾ ಸ್ತ್ರೀಯರ ಜತೆ ಆಡುತ್ತಿರುವ ಕೃಷ್ಣ, ಮದುವೆ, ಮದುವೆ ಊಟ, ಹೆಣ್ಣಿನ ದೈನಂದಿನ ಕಾಯಕ, ಒಂಟೆ, ಕುದುರೆ, ಚನ್ನಪಟ್ಟಣದ ಬೊಂಬೆಗಳು, ವಿವಿಧ ದೇಶವಾಸಿಗಳ ದಿರಿಸುಗಳು, ಯೋಧರು, ಬುಡಕಟ್ಟು ಜನರು, ಮೈಸೂರು ಅರಮನೆ, ಬದರಿನಾಥ, ಕೇದಾರನಾಥ, ಅಯೋಧ್ಯೆಯ ಬಾಲರಾಮ, ಜಟಾಯು ಮತ್ತು ಶ್ರೀರಾಮರ ಮಿಲನ, ವಿವಿಧ ಕಸುಬುಗಳ ಜನರು, 82 ರೀತಿಯ ಕಾರುಗಳ ಬೊಂಬೆಗಳು, 42 ವಿಧದ ಗಣೇಶ ಮೂರ್ತಿಗಳು, ಗದ್ದೆಯಲ್ಲಿ ಬತ್ತದ ಪೈರು ಕೊಯ್ಲು ಮಾಡುತ್ತಿರುವ ರೈತ ಕುಟುಂಬ, ಪುರಿ ಜಗನ್ನಾಥ.. ಹೀಗೆ ಗೊಂಬೆಗಳನ್ನು ವಿಶಿಷ್ಟವಾಗಿ ಜೋಡಿಸಿದ್ದಾರೆ.
“ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಗೊಂಬೆ ಜೋಡಿಸಿಟ್ಟಿದ್ದು, ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ. ನಮ್ಮ ತಲೆಮಾರಿನ ಈ ಗೊಂಬೆಗಳೊಂದಿಗಿನ ನಂಟು, ಪ್ರೀತಿ ನನ್ನ ಸೊಸೆ ದಿವ್ಯಾ ಮತ್ತು ಮೊಮ್ಮಕ್ಕಳಾದ ಕುಶಲ ಮತ್ತು ಚಿರಾಗ್ ಅವರಿಗೂ ಮುಂದುವರೆದಿರುವುದು ಸಂತಸ ತಂದಿದೆ. ಈ ಬಾರಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಮಗಳು ಸೌಭಾಗ್ಯಲಕ್ಷ್ಮಿ ಬಂದಿರುವುದು ಹಬ್ಬಕ್ಕೆ ಮತ್ತಷ್ಟು ಕಳೆಕಟ್ಟಿದೆ” ಎಂದು ಹಿರಿಯರಾದ ಅಶ್ವತ್ಥಮ್ಮ ಹೇಳಿದರು.
“ದಸರಾ ಹಬ್ಬದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯವಿದೆ. ನಮ್ಮಜ್ಜಿ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು. ಮಕ್ಕಳು ಜೊತೆಗೂಡುತ್ತಾರೆ. ಎಲ್ಲರೂ ಕಲೆತು ಗೊಂಬೆಗಳನ್ನು ಜೋಡಿಸುವ ಸಂಭ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ” ಎಂದು ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ತಿಳಿಸಿದರು.
ಶಿಡ್ಲಘಟ್ಟ ನಗರದ ಗೌಡರಬೀದಿಯ ಲತಾ ಮಂಜುನಾಥ್ ಅವರ ಮನೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ವಿವಿಧ ರೀತಿಯ ಗೊಂಬೆಗಳನ್ನು ಹೇಮನಂದಿನಿ ಮತ್ತು ಪದ್ಮಪ್ರಿಯಾ ಜೊತೆಗೂಡಿ ಜೋಡಿಸಿಟ್ಟಿರುವರು.
ಶರನ್ನವರಾತ್ರಿಯ ಮೊದಲ ದಿನದಿಂದ ಬೊಂಬೆ ಪ್ರದರ್ಶನ ನಿರಂತರವಾಗಿ ಒಂಬತ್ತು ದಿನವಿರುತ್ತದೆ. ಪಾಡ್ಯದಿಂದ ಪ್ರಾರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳು ಪೂಜೆ ನಡೆಸುತ್ತೇವೆ. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪುರಾಣದ ಪರಿಚಯವನ್ನು ಗೊಂಬೆಗಳ ಮೂಲಕ ಮಾಡಿಕೊಡುವ ಪ್ರಯತ್ನವಿದು
Hosapete, Sidlaghatta : ಹಳ್ಳಿಗಳಲ್ಲಿ ನವರಾತ್ರಿ ಸಂದರ್ಭದಲ್ಲಿ ದೇವತಾ ಕಾರ್ಯಗಳನ್ನು ನಡೆಸಿ ಜನರನ್ನು ಒಗ್ಗೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಚೊಕ್ಕಂಡಹಳ್ಳಿ ಗ್ರಾಮದಲ್ಲಿ ಪುನರ್ಪ್ರತಿಷ್ಠಾಪಿತ ಗಂಗಾದೇವಿ ದೇವಾಲಯದಲ್ಲಿ ನಡೆದ ಚಂಡಿಕಾಹೋಮ ಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. “ಜನರು ದೇವತಾ ಕಾರ್ಯಗಳಲ್ಲಿ ಜಾತಿ, ಮತ ಬೇಧವಿಲ್ಲದೆ ಪಾಲ್ಗೊಳ್ಳುವುದರಿಂದ ಸಾಮರಸ್ಯ ಬಲವಾಗುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ಇಂತಹ ಕಾರ್ಯಗಳು ನಡೆಯುವುದರಿಂದ ಮಳೆ, ಬೆಳೆಗಳು ಉತ್ತಮವಾಗಿ ಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದರು.
ಈ ಸಂದರ್ಭದಲ್ಲಿ ಪುನರ್ ನಿರ್ಮಿತ ದೇವಾಲಯದಲ್ಲಿ ಚಂಡಿಕಾಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಿಸಲ್ಪಟ್ಟವು. ದೊಡ್ಡಚೊಕ್ಕಂಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸವಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಮುಖಂಡರಾದ ತಾದೂರು ರಘು, ಸಿ.ವಿ. ನಾರಾಯಣಸ್ವಾಮಿ, ಶ್ರೀನಿವಾಸ್, ನಾಗೇಶ್ ಬಾಬು, ಸಿ.ವಿ. ದೇವರಾಜ್, ಬಿ.ಎಂ. ರಾಜಣ್ಣ, ಸಿ. ಮಂಜುನಾಥ್, ಆಂಜಿನಪ್ಪ, ರವಿಕುಮಾರ್, ಮಂಜುನಾಥ್, ರಾಮಚಂದ್ರಪ್ಪ, ಮಾರೇಗೌಡ, ಮುನಿಕೃಷ್ಣ, ಗಂಗರೆಡ್ಡಿ, ಕೆಂಪಣ್ಣ, ಮಧುಕುಮಾರ್, ತಿಮ್ಮರಾಯಪ್ಪ, ಹೆಚ್.ಎಂ. ಮುರಳಿ, ಅಂಬರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Sidlaghatta : ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಸಹಕಾರಿ ಸಂಘಗಳ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಎಂ. ರಾಜಣ್ಣ ಹೇಳಿದರು.
ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 1976ರಲ್ಲಿ ಸ್ಥಾಪಿತವಾದ ಈ ಸಂಘವು 49 ವರ್ಷಗಳಿಂದ ರೈತರ ಆರ್ಥಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ನೆನಪಿಸಿದರು. ಕಳೆದ ಎರಡು ವರ್ಷಗಳಿಂದ ಜಿಲ್ಲಾ ಡಿಸಿಸಿ ಬ್ಯಾಂಕಿನಲ್ಲಿ ಉಂಟಾದ ಕಾನೂನು ತೊಡಕುಗಳಿಂದ ಸಾಲ ವಿತರಣೆ ತಾತ್ಕಾಲಿಕವಾಗಿ ನಿಂತಿದ್ದರೂ, ಇತ್ತೀಚಿನ ಚುನಾವಣೆಯ ಬಳಿಕ ಸಮಸ್ಯೆ ಪರಿಹಾರಗೊಂಡು ಶೀಘ್ರದಲ್ಲೇ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಪುನರಾರಂಭವಾಗಲಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ನೀಡಲಾಗುವ ಶೂನ್ಯ ಬಡ್ಡಿದರ ಸಾಲವನ್ನು ಸಕಾಲದಲ್ಲಿ ಪಾವತಿಸುವುದು ರೈತರ ಜವಾಬ್ದಾರಿ ಎಂದರು. ಡಿಸಿಸಿ ಬ್ಯಾಂಕ್ ಸದಸ್ಯ ಎ. ನಾಗರಾಜ್ ಕೂಡಾ ಸಾಲ ಮರುಪಾವತಿ ಸಮಯಕ್ಕೆ ಆಗಲೇ ಆಗಬೇಕು, ಇಲ್ಲವಾದರೆ ಇತರರಿಗೆ ಸಾಲ ನೀಡಲು ಅಡಚಣೆಯಾಗುತ್ತದೆ ಎಂದು ರೈತರಿಗೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಜೆ.ಎನ್. ರಾಮಚಂದ್ರಪ್ಪ ಮಾತನಾಡಿ, ಮುಚ್ಚುವ ಹಂತದಲ್ಲಿದ್ದ ಸಂಘವನ್ನು ಪುನಶ್ಚೇತನಗೊಳಿಸಲು ಸದಸ್ಯರ ಸಹಕಾರವೇ ಕಾರಣ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ವಿತರಣೆ ಮಾಡುವ ಗುರಿ ಹೊಂದಿದ್ದೇವೆ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಹುಜಗೂರು ಎಂ.ರಾಮಯ್ಯ ಮಾತನಾಡಿದರು.
ಅಧ್ಯಕ್ಷ ಜೆ.ಎನ್.ರಾಮಚಂದ್ರಪ್ಪ, ಉಪಾಧ್ಯಕ್ಷೆ ಎಂ.ಶೋಭಾರಾಣಿ, ಮಾಜಿ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ನರಸಿಂಹಮೂರ್ತಿ, ಪಿ.ಎನ್.ಪ್ರಶಾಂತ್, ಟಿ.ಎ.ನಾರಾಯಣಪ್ಪ, ಎನ್.ನರಸಿಂಹಯ್ಯ, ಪ್ರಭಾವತಿ, ನಳಿನ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ದೇವಿಕ, ಮುಖಂಡರಾದ ಡಿ.ಎಂ.ಜಗದೀಶ್ವರ್, ಕೆ.ಎಸ್.ಕನಕಪ್ರಸಾದ್ ಹಾಜರಿದ್ದರು.
Bommanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಮುನಿರಾಜು ಹಾಗೂ ಉಪಾಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಹತ್ತು ಸಂಖ್ಯಾಬಲ ಹೊಂದಿರುವ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು. ಈ ಹುದ್ದೆಗಳಿಗೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಂ. ಮಂಜುನಾಥ್ ಕಾರ್ಯನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಚನ್ನಕೃಷ್ಣಪ್ಪ ಬಿ.ಎನ್, ನಾರಾಯಣಸ್ವಾಮಿ ಬಿ.ಸಿ, ಜಯದೇವಗೌಡ ಬಿ.ಆರ್, ಬಿ.ಜಿ. ಆನಂದ್, ಬಿ.ಎಂ. ದೇವರಾಜ್, ಬಿ.ಸಿ. ಶ್ರೀನಿವಾಸ್, ಕೆ. ಮುನಿಸಾಮಪ್ಪ, ಬಿ.ಎಂ. ನಾರಾಯಣಸ್ವಾಮಿ ಸೇರಿದಂತೆ ಕಾರ್ಯದರ್ಶಿ ಪ್ರವೀಣ್ ಹಾಗೂ ಹಾಲು ಪರೀಕ್ಷಕರಾದ ಸುನಿಲ್ಕುಮಾರ್ ಹಾಜರಿದ್ದರು.
Tummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಜಿಲ್ಲಾ ಮಟ್ಟದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದು ಕೀರ್ತಿ ಸಾಧಿಸಿದೆ. ಚಿಕ್ಕಬಳ್ಳಾಪುರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಎಲ್ಲಾ ತಾಲ್ಲೂಕುಗಳ ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಡಿಜಿಟಲ್ ಬಳಕೆಯ ಕುರಿತ ನಾಟಕಗಳನ್ನು ಪ್ರದರ್ಶಿಸಿದ್ದರು. ಈ ಸ್ಪರ್ಧೆಯಲ್ಲಿ ತುಮ್ಮನಹಳ್ಳಿ ಶಾಲೆಯು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಶಿಕ್ಷಕಿ ಹೇಮಾವತಿ ಉತ್ತಮ ನಿರ್ದೇಶಕಿ ಪ್ರಶಸ್ತಿಯನ್ನು, ವಿದ್ಯಾರ್ಥಿ ಎಲ್. ಕಾರ್ತಿಕ್ ಉತ್ತಮ ನಟ ಪ್ರಶಸ್ತಿಯನ್ನು ಹಾಗೂ ವಿದ್ಯಾರ್ಥಿನಿ ಉಮಾ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಜೇತರಿಗೆ ಡಯಟ್ ಪ್ರಾಂಶುಪಾಲ ಎಂ. ಮುನಿಕೆಂಪೇಗೌಡ ಬಹುಮಾನಗಳನ್ನು ವಿತರಿಸಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಈ ತಂಡವು ಸೆಪ್ಟೆಂಬರ್ 24 ರಂದು ಬೆಂಗಳೂರಿನಲ್ಲಿ ನಡೆಯುವ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ತಂಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ. ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ ಹಾಗೂ ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್ ಅಭಿನಂದಿಸಿದ್ದಾರೆ.
Sidlaghatta : ಶಿಡ್ಲಘಟ್ಟ ನಗರದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಶ್ರಮ ಮತ್ತು ಸೇವೆ ಬೆಲೆಕಟ್ಟಲಾಗದಂತಹದ್ದು ಎಂದು ಶ್ಲಾಘಿಸಿದರು. ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಕಾರಣ ನಗರ ಸುಂದರವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಸಭೆಯ ಸಹಯೋಗದಲ್ಲಿ ಅಂಜನಾದ್ರಿ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದಲ್ಲಿ 12,800 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಮೃತ್ 2 ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ₹92 ಕೋಟಿ ಅನುದಾನ ಲಭಿಸಿದ್ದು, ಮುಂದಿನ 40 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ₹38 ಕೋಟಿ ಯುಜಿಡಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು.
ನಗರಸಭೆಯಲ್ಲಿ 150 ಕ್ಕೂ ಹೆಚ್ಚು ಪೌರ ಕಾರ್ಮಿಕರು ಶ್ರಮಿಸುತ್ತಿದ್ದು, ಅಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪಗಳಿಗೆ ಆದ್ಯತೆ ನೀಡಬೇಕೆಂದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ವೈದ್ಯರಂತೆ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಹಾಗೂ ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ಕುಕ್ಕರ್ ಮತ್ತು ಪುರುಷರಿಗೆ ಶರ್ಟ್–ಪ್ಯಾಂಟ್ ಹಾಗೂ ಕುಕ್ಕರ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಪೌರಾಯುಕ್ತೆ ಜಿ.ಅಮೃತ, ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಎಇಇ ಮಾಲಿನಿ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.
Bashettahalli, Sidlaghatta : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ರಾಜಕೀಯ ವಾಗ್ವಾದಕ್ಕೂ ಕಾರಣವಾದ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ತಾಲ್ಲೂಕಿನಲ್ಲಿ ಆರಂಭವಾದರೂ, ತಾಂತ್ರಿಕ ಸಮಸ್ಯೆಗಳು, ಮಾಹಿತಿ ಕೊರತೆ ಮತ್ತು ಸೂಕ್ತ ಮಾರ್ಗದರ್ಶನದ ಅಭಾವದಿಂದ ಗಣತಿ ಕಾರ್ಯ ಗೊಂದಲಕ್ಕೆ ಒಳಪಟ್ಟಿದೆ.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಗಣತಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 550 ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಿ, ಅವರಿಗೆ ಎರಡು ದಿನಗಳ ತರಬೇತಿ ನೀಡಲಾಗಿತ್ತು. ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿತ್ತು.
ಆದರೆ ಗಣತಿದಾರರಿಗೆ ಬಳಸಬೇಕಾದ ಮೊಬೈಲ್ ಆಪ್ ಲಭ್ಯವಾಗದೆ, ಅಗತ್ಯ ಮಾಹಿತಿಯೂ ಸಮಯಕ್ಕೆ ತಲುಪದ ಕಾರಣ ಗೊಂದಲ ಉಂಟಾಯಿತು. ಹೀಗಾಗಿ ಹಲವರು ಸಮೀಕ್ಷೆ ಪ್ರಾರಂಭಿಸದೆ ತಟಸ್ಥರಾಗಿದ್ದರು. ಜೊತೆಗೆ, ಸಮೀಕ್ಷೆಯನ್ನು ರದ್ದುಪಡಿಸಲು ಹೈಕೋರ್ಟ್ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತ ಯಾಚಿಕೆ ವಿಚಾರಣೆ ಸೆಪ್ಟೆಂಬರ್ 23ಕ್ಕೆ ಮುಂದೂಡಲ್ಪಟ್ಟಿದ್ದರಿಂದ, ಗಣತಿ ಮುಂದುವರಿಯುತ್ತದೆಯೋ ನಿಲ್ಲುತ್ತದೆಯೋ ಎಂಬ ಅನುಮಾನ ಪರಿಸ್ಥಿತಿ ನಿರ್ಮಾಣವಾಯಿತು.
ಇದಕ್ಕೂ ಮೊದಲು, ವಿವಿಧ ಸಮುದಾಯಗಳು ಸಮೀಕ್ಷೆಯ ವೇಳೆ ಧರ್ಮ, ಜಾತಿ ಹಾಗೂ ಕುಲ-ಕಸುಬು ಕಾಲಂಗಳಲ್ಲಿ ಏನು ನಮೂದಿಸಬೇಕೆಂಬ ಬಗ್ಗೆ ವಾರದಿಂದ ಜಾಗೃತಿ ಅಭಿಯಾನ ನಡೆಸುತ್ತಿದ್ದರು. ಮನೆಮನೆಗೆ ಸಮೀಕ್ಷೆಯ ಸ್ಟಿಕ್ಕರ್ಗಳನ್ನೂ ಅಂಟಿಸಲಾಗಿತ್ತು.
ಆದರೆ, ಸೆಪ್ಟೆಂಬರ್ 22ರಂದು ಯಾವುದೇ ಗಣತಿದಾರರು ಮನೆಗಳಿಗೆ ಭೇಟಿ ನೀಡದೇ, ಸಮೀಕ್ಷಾ ಕಾರ್ಯವೇ ನಡೆಯದಂತಾಗಿತ್ತು. ಇದರಿಂದ ಸಾರ್ವಜನಿಕರಲ್ಲಿ “ಸಮೀಕ್ಷೆ ನಿಜವಾಗಿಯೂ ನಡೆಯುತ್ತದೆಯೋ?” ಎಂಬ ಅನುಮಾನ ಮತ್ತು ಗೊಂದಲ ವಾತಾವರಣ ಉಂಟಾಯಿತು.
ತಾಲ್ಲೂಕಿನ ಬಶೆಟ್ಟಹಳ್ಳಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಹಶೀಲ್ದಾರ್ ಗಗನ ಸಿಂಧು ಅವರು ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನಿಂದ ಅ.7ರವರೆಗೂ ಸಮೀಕ್ಷೆ ನಡೆಯಲಿದೆ. ಪ್ರತಿ ಮನೆಯ ಸಮೀಕ್ಷೆಗೆ ಸುಮಾರು 45 ನಿಮಿಷಗಳ ಸಮಯ ಹಿಡಿಯಲಿದೆ. ಗಣತಿದಾರರು ಮನೆ ಬಳಿ ಬಂದಾಗ ಪಡಿತರ ಚೀಟಿ, ಆಧಾರ್ ಕಾರ್ಡ್, ಓಟರ್ ಐಡಿ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಕಡ್ಡಾಯವಾಗಿ ಇರಬೇಕು. ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬಿಇಒ ನರೇಂದ್ರ ಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ನವೀನ್ ಕುಮಾರ್, ಗಣತಿದಾರರು ಹಾಜರಿದ್ದರು.