ಅಂಗನವಾಡಿ ನೌಕರರ ಸಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ನಗರದ ಸಿಡಿಪಿಒ ಕಚೇರಿಯ ಬಳಿ ಪ್ರತಿಭಟಿಸಿದರು.
ಎನ್.ಪಿ.ಎಸ್ ಲೈಟ್ ನ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ನಿವೃತ್ತಿಯಾಗಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನಿವೃತ್ತಿ ವೇತನ ಕೊಡಬೇಕು. ಹಲವು ಅಂಗನವಾಡಿ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಕೂಡಲೇ ಅಧಿಕಾರಿಗಳು ಬಗೆಹರಿಸಿಕೊಡಬೇಕು. ಮೂರು ತಿಂಗಳಿಗೊಮ್ಮೆ ಕುಂದುಕೊರತೆಗಳ ಸಭೆ ಕರೆಯಬೇಕು. ಇನ್ನೂ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಸಿಡಿಪಿಒ ಅಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿಯ ಸಿಬ್ಬಂದಿಗೆ ಮನವಿಯನ್ನು ಸಲ್ಲಿಸಿದರು.
ದೂರವಾಣಿ ಮೂಲಕ ಮಾತನಾಡಿದ ಸಿಡಿಪಿಒ ಅಧಿಕಾರಿ ಜನವರಿ 12 ರಂದು ಕುಂದುಕೊರತೆಗಳ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಗುಲ್ಜಾರ್, ಮುನಿರತ್ನಮ್ಮ, ನಂದಿನಿ, ಮಂಜುಳ, ಸೌಭಾಗ್ಯ ಹಾಜರಿದ್ದರು.
ಕೊರೊನಾದಿಂದ ಬಂಧಿಯಾಗಿದ್ದ ಮಕ್ಕಳು ಈಗ ಶಾಲೆಗೆ ಹೋಗುತ್ತಿದ್ದಾರೆ. ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳನ್ನು ಶಾಲೆಯಿಂದ ಹೊರಗೆ ಸ್ವಚ್ಛಂದ ಪರಿಸರದೆಡೆಗೆ ಕರೆದೊಯ್ದು ಪರಿಸರ ಪಾಠವನ್ನು ಶುಕ್ರವಾರ ನಡೆಸಿದ್ದಾರೆ.
ಗೌಡನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ಸಮೀಪದಲ್ಲಿರುವ ಕೆರೆಯ ಬಳಿ ಹೋಗಿದ್ದರು. ಕೆರೆಗೆ ಭೇಟಿ ನೀಡುವ ಹಕ್ಕಿಗಳು, ಬಟ್ಟೆ ಒಗೆಯಲು ಬರುವ ಸ್ಥಳೀಯರು, ವಿವಿಧ ಜಲಚರಗಳು ಮುಂತಾದವುಗಳನ್ನು ತೋರಿಸಿ ವಿವರಿಸಿದ ಶಿಕ್ಷಕರು ಮಕ್ಕಳಿಗೆ ಕೆರೆಯ ಅಗತ್ಯತೆಯ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.
ಶಿಕ್ಷಕರಾದ ಪಿ.ಸುದರ್ಶನ್, ವಿ.ಎಂ.ಮಂಜುನಾಥ್, ಎಚ್.ಬಿ.ರೂಪ, ಎಸ್.ಎ.ನಳಿನಾಕ್ಷಿ ಅವರು ಮಕ್ಕಳಿಗೆ ಹಳ್ಳ, ಕುಂಟೆ, ಕೆರೆ, ಸರೋವರ, ಸಾಗರಗಳು, ಮಳೆಮಾರುತಗಳು, ಜಲ, ಚಕ್ರ, ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯದ ಬಗ್ಗೆ ಹಾಗೂ ಕೆರೆಗಳು ಹಳ್ಳಿಗಳ ಜೀವ ನಾಡಿಗಳು, ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಹೆಚ್ಚಳ, ಕರೆಗಳಿಂದ ಕೃಷಿಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ತಾಲ್ಲೂಕಿನ ಬೋದಗೂರು ಕೆರೆಯಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೋದಗೂರು ಕೆರೆ ಬಳಕೆದಾರರ ಸಂಘ ಹಾಗೂ ಆನೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಯೋಜನೆಯಡಿಯಲ್ಲಿ ಕೆರೆಯ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿದರು.
ಕೆರೆಕಟ್ಟೆಗಳು ನಾಡಿನ ಜೀವನಾಡಿ. ರೈತಾಪಿ ಜನರ ಉಸಿರು. ಇವನ್ನು ಈಗಂತೂ ನಿರ್ಮಿಸಲು ಆಗದು, ಹಾಗಾಗಿ ಇರುವುದನ್ನು ಉಳಿಸಿಕೊಳ್ಳಲೇಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಂದ ಜನರ ಆರ್ಥಿಕ ಅಭಿವೃದ್ಧಿ ಆಗುತ್ತಿದೆ ಎಂದು ಅವರು ತಿಳಿಸಿದರು.
“ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಕೆರೆಯ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಿ ಊರಿನವರಿಗೆ ವರ್ಗಾಯಿಸುವ ಮೂಲಕ ಕೆರೆಯ ಮಹತ್ವ, ಅಗತ್ಯತೆ, ಕೆರೆ ಸಂರಕ್ಷಣೆಯ ಕುರಿತ ಜಾಗೃತಿಯನ್ನು ಮೂಡಿಸುವ ಅಪೂರ್ವ ಕೆಲಸವೊಂದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ನಮ್ಮ ಗ್ರಾಮಗಳ ಜೀವನಾಡಿ ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಬಿ.ವಸಂತ್ ಮಾತನಾಡಿ, ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಶಾಶ್ವತ ಪರಿಹಾರವೆಂಬಂತೆ 2016ರಲ್ಲಿ “ನಮ್ಮೂರು ನಮ್ಮ ಕೆರೆ” ಯೋಜನೆ ಪ್ರಾರಂಭಿಸಿರುವರು. 4 ವರ್ಷಗಳಿಂದ ಕೆರೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ. ಈ ಮಳೆಗಾಲದಲ್ಲಿ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ ಎಂದು ಹೇಳಿದರು.
ಕೆರೆ ಸಮಿತಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಬೆಳ್ಳೂಟಿ ಸಂತೋಷ್, ರಮೇಶ್, ದೊಡ್ಡಮಾರಪ್ಪ, ವಿಶ್ವಾಸ್, ಅರುಣ, ಪ್ರಕಾಶ್, ಮುನಿಯಪ್ಪ, ಸುರೇಶ್, ಪ್ರಭಾಕರ್, ಕೃಷಿ ಅಧಿಕಾರಿ ಹರೀಶ್, ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ವೆಂಕಟಲಕ್ಷ್ಮಿ, ಮುನಿರತ್ನ ಹಾಜರಿದ್ದರು.
ಅಗ್ನಿಶಾಮಕ ಠಾಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಏನೇನು ಕಾಮಗಾರಿಗಳನ್ನು ಮಾಡಿಸಬಹುದೋ ಅವೆಲ್ಲಾ ಕಾಮಗಾರಿಗಳನ್ನು ಗ್ರಾಮಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ಆನೂರು ಗೇಟ್ ಬಳಿ ಇರುವ ಅಗ್ನಿಶಾಮಕ ಠಾಣೆಗೆ ಆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಜೊತೆಯಲ್ಲಿ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ಅಗ್ನಿಶಾಮಕ ಠಾಣೆ ಸರ್ಕಾರಿ ಕಟ್ಟಡದ ಆವರಣದಲ್ಲಿ ಪೌಷ್ಠಿಕ ಕೈ ತೋಟ ಕಾಮಗಾರಿಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರಾರಂಭ ಮಾಡಿದ್ದೇವೆ. ಪೌಷ್ಠಿಕ ಕೈ ತೋಟದಲ್ಲಿ ನಿಂಬೆ, ಸೀಬೆ, ಸಪೋಟ, ಬಾಳೆ, ಕರಿಬೇವು ಹಾಗೂ ಇನ್ನಿತರೆ ಆರೋಗ್ಯಕ್ಕೆ ಅನುಕೂಲವಾದ ಎಲ್ಲಾ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ ಎಂದರು.
ಅಗ್ನಿಶಾಮಕ ಠಾಣೆ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಕಾಮಗಾರಿಯನ್ನು ಪ್ರಾರಂಭ ಮಾಡಿದ್ದೇವೆ. ಅಗ್ನಿಶಾಮಕ ಠಾಣೆ ಕ್ವಾಟರ್ಸ್ ಗಳ ಬಳಿ ಲಭ್ಯವಿರುವ ಸ್ಥಳದಲ್ಲಿ ಉದ್ಯಾನವನವನ್ನು ಗ್ರಾಮಪಂಚಾಯಿತಿಯವರು ರೂಪಿಸಲಿದ್ದಾರೆ. ಇಲ್ಲಿ ನೀರಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ದಿನನಿತ್ಯದ ಬಳಕೆಗೆ ಅವಶ್ಯಕ ನೀರು ಒದಗಿಸಿಕೊಡಲು ಗ್ರಾಮಪಂಚಾಯಿತಿ ಸಿದ್ಧವಿದೆ. ಪೈಪ್ ಲೈನ್ ಮುಖಾಂತರ ನೀರು ನೀಡಲಾಗುತ್ತದೆ ಎಂದರು.
ಅಗ್ನಿಶಾಮಕ ಠಾಣಾಧಿಕಾರಿ ಕೆ.ಆರ್.ರಾಮಕೃಷ್ಣಪ್ಪ, ಪ್ರಮುಖ ಅಗ್ನಿಶಾಮಕ ಠಾಣಾಧಿಕಾರಿಗಳಾದ ಶ್ರೀನಿವಾಸ್, ಕಿರಣ್, ಹಾಗೂ ಅಶೋಕ್ ಹಾಜರಿದ್ದರು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವಕೀಲ ನವಿಲೆ ರವೀಂದ್ರ ಅವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಗುರುವಾರ ವಕೀಲರು ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹರೀಶ್ ಮಾತನಾಡಿ, “ವಕೀಲ ರವೀಂದ್ರ ಅವರು ಕೊಲೆಯಾಗಿರುವುದು ದುರದೃಷ್ಟಕರ. ಇದೊಂದು ಘೋರ ಕೃತ್ಯ. ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವ ವಿಚಾರ. ಈ ಹತ್ಯೆಯ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು” ಎಂದು ಅವರು ಆಗ್ರಹಿಸಿದರು.
“ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರ ಮೇಲೆ ರಾಜ್ಯದಲ್ಲಿ ದಿನೇ ದಿನೇ ಹಲ್ಲೆ, ಕೊಲೆ ಪ್ರಯತ್ನ ಹೆಚ್ಚಾಗುತ್ತಿದ್ದು, ಹತ್ಯೆಗಳೂ ನಡೆಯುತ್ತಿವೆ. ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರ ರಕ್ಷಣೆಗಾಗಿ ಸರ್ಕಾರಗಳು ಇದುವರೆಗೂ ಯಾವುದೇ ಕಾನೂನುಗಳನ್ನು ರೂಪಿಸದಿರುವುದು ದುರದೃಷ್ಟಕರ. ತಕ್ಷಣವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಆವರಣ ಹಾಗೂ ಸುತ್ತಮುತ್ತ ಪ್ರದೇಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬೆಳ್ಳೂಟಿ ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಿದ್ದ “ಧಾರ್ಮಿಕ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ”ದಲ್ಲಿ ಭಾಗಿಯಾಗಿ ತಾಲ್ಲೂಕು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿದರು.
ಬೆಳ್ಳೂಟಿ ಗೇಟ್ ನಮ್ಮ ತಾಲ್ಲೂಕಿನಲ್ಲಿಯೇ ವಿಶಿಷ್ಟವಾದ ಸರ್ವಧರ್ಮಗಳ ಸಮನ್ವಯ ಸ್ಥಳ. ಇಲ್ಲಿ ದೇವಸ್ಥಾನ, ದರ್ಗಾ ಮತ್ತು ಚರ್ಚ್ ಹತ್ತಿರದಲ್ಲಿದ್ದು, ಎಲ್ಲರೂ ಕಲೆತು ಬಾಳ್ವೆ ನಡೆಸುವ ಸಂದೇಶವನ್ನು ಸಾರುತ್ತಿವೆ. ಧಾರ್ಮಿಕ ಕೇಂದ್ರಗಳ ಪರಿಸರ ಸ್ವಚ್ಛವಾಗಿರಬೇಕೆಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಂತೆ ಎಲ್ಲರೂ ಒಗ್ಗೂಡಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಮನಸ್ಸಿನ ಸ್ವಚ್ಛತೆಗೆ ಪರಿಸರ ಸ್ವಚ್ಛತೆಯೂ ಪ್ರಧಾನವಾಗಿದೆ. ಅಂತೆಯೇ ಮನಶ್ಶಾಂತಿಗೆ ಹಾಗೂ ಪ್ರಶಾಂತ ವಾತಾವರಣದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರಿಗೆ ದೇವಾಲಯದ ಪರಿಸರ ಸ್ವಚ್ಛವಾಗಿರಬೇಕೆಂದು ಆಶಿಸಿ ದೇಗುಲಗಳ ಪರಿಸರವನ್ನು ಸ್ವಚ್ಛಗೊಳಿಸುವ ಧರ್ಮಾಧಿಕಾರಿಗಳ ಆಶಯವನ್ನು ಅನುಷ್ಠಾನಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಒಗ್ಗೂಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಬೆಳ್ಳೂಟಿ ಮಾತನಾಡಿ, ದೇಗುಲದ ಪರಿಸರದಲ್ಲಿನ ಸ್ವಚ್ಛತೆಯೇ ದೇವರಿಗೆ ನಾವು ಸಲ್ಲಿಸುವ ಮೊದಲ ಪೂಜೆಯಾಗಿದೆ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಎರಡೂ ಅತ್ಯಗತ್ಯ. ಆರೋಗ್ಯ, ಶಿಕ್ಷಣ ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ನಮ್ಮ ಹಳ್ಳಿ ಸೇರಿದಂತೆ ಗ್ರಾಮ ಪಂಚಾಯಿತಿಯನ್ನು ಮಾದರಿ ಮಾಡುವ ಆಶಯಕ್ಕೆ ಸಮಾನ ಮನಸ್ಕರು ಜೊತೆಗೂಡಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಬೆಳ್ಳೂಟಿ ಹಾಗೂ ಸುತ್ತಲಿನ ಕೆಲವಾರು ಗ್ರಾಮಸ್ಥರು ಜೊತೆಗೂಡಿ ಸ್ವಚ್ಛತಾ ಕಾರ್ಯವನ್ನು ನಡೆಸಿ, ಸುಂದರವಾದ ಬಣ್ಣಬಣ್ಣದ ರಂಗೋಲಿಗಳನ್ನು ರಚಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಸದಸ್ಯರಾದ ಪ್ರೇಮ ಆನಂದ, ನೇತ್ರವತಿ ಮುರಳಿ, ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ಗ್ರಾಮಸ್ಥರಾದ ಚಂದ್ರಣ್ಣ, ದೇವರಾಜು, ಬಿ.ಎಂ.ರಮೇಶ್, ಆನಂದ್, ಚಿಕ್ಕಮಾರಪ್ಪ,ರಾಮಾಂಜನಪ್ಪ, ಚನ್ನಕೃಷ್ಣ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮೇಲ್ವಿಚಾರಕಿ ಜ್ಯೋತಿ, ಸೇವಾಪ್ರತಿನಿಧಿ ವೆಂಕಟಲಕ್ಷ್ಮಿ, ನಳಿನ ಹಾಜರಿದ್ದರು.
ಕುಷ್ಠರೋಗದ ಬಗ್ಗೆ ಹಿಂದೆ ಬಹಳಷ್ಟು ತಪ್ಪು ಕಲ್ಪನೆಗಳಿದ್ದವು. ಸರಿಯಾದ ಚಿಕಿತ್ಸೆ ದೊರೆಯದ್ದಕ್ಕೆ ಕೆಲವರು ನರಕ ಯಾತನೆ ಅನುಭವಿಸಿರುವ ಬಗ್ಗೆ ಈಗಲೂ ಹಿರಿಯರು ಹೇಳುತ್ತಾರೆ. ಇತ್ತೀಚೆಗೆ ಕುಷ್ಠರೋಗ ಗುಣಪಡಿಸಲು ಔಷಧ ಕಂಡುಹಿಡಿಯಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕುಷ್ಠರೋಗಿಗಳಿಗೆ ಉಚಿತ ಔಷಧ ನೀಡಲಾಗುವುದು ಎಂದು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಮೇಲ್ವಿಚಾರಕ ಲೋಕೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ನಡೆದ ಕುಷ್ಠರೋಗ ನಿವಾರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನವರಿ 1 ರಿಂದ 31 ರವರೆಗೂ ಕುಷ್ಠರೋಗ ಮಾಸಾಚರಣೆ ನಡೆಯಲಿದೆ. ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವರು. ಕುಷ್ಠರೋಗ ಶಾಪ ಅಲ್ಲ. ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಹರಡುತ್ತದೆ. ತಂಪಾದ ಜಾಗದಲ್ಲಿ ವಾಸಿಸುತ್ತದೆ. ಬಹುತೇಕ ನರಗಳ ಜೋಡಣೆ ಜಾಗದಲ್ಲಿ ಸೇರಿಕೊಂಡು ಸ್ಪರ್ಶ ಜ್ಞಾನವಿಲ್ಲದಂತೆ ಮಾಡುತ್ತದೆ. ಇದರಿಂದ ರೋಗಪೀಡಿತ ಅಂಗ ಮರಗಟ್ಟಿ ಹೋಗುತ್ತದೆ. ಆದ್ದರಿಂದ ಮುಚ್ಚುಮರೆ ಇಲ್ಲದೆ, ತಿಳಿ ತಾಮ್ರ ಬಣ್ಣದ ಮಚ್ಚೆಗಳು ಮೈ ಮೇಲೆ ಇದ್ದರೆ ತಕ್ಷಣ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ನಂದಿನಿ, ಚೈತ್ರಾ, ವೀಣಾ, ಅಫ್ರೋಜ್, ಸಂದೀಪ್ ಹಾಜರಿದ್ದರು
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಹಣದ ಬಲದ ಮೇಲೆ ರಾಜಕಾರಣ ಮಾಡುವವರಿಗೆ ಕ್ಷೇತ್ರದಲ್ಲಿ ಉಳಿಗಾಲವಿಲ್ಲ. ನನ್ನ ಭಾವಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಿರುವವರನ್ನು ಬೆಂಬಲಿಸಬಾರದೆಂದು ಅವರು ತಿಳಿಸಿದರು.
ಕ್ಷೇತ್ರದಲ್ಲಿ ಸುಮಾರು 40-45 ವರ್ಷಗಳಿಂದ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ಮತದಾರರ ಆಶೀರ್ವಾದದಿಂದ ಕ್ಷೇತ್ರದ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುವ ಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಹಣದಾಸೆಗಾಗಿ ಮತವನ್ನು ಮಾರಿಕೊಳ್ಳುವವರು ಯಾರು ಇಲ್ಲ. ಯಾರು ಒಳ್ಳೆಯವರು ಮತ್ತು ಕ್ಷೇತ್ರದ ಹಿತ ಕಾಪಾಡುವವರು ಎಂಬುದನ್ನು ಮತದಾರರು ಅರಿತಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದ ಮತ್ತು ಮತದಾರರ ಬೆಂಬಲದಿಂದ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಆದರೆ ಕೆಲವರು ತಮ್ಮಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಉಳಿದುಕೊಂಡಿದೆ ಎಂದು ಪ್ರತಿಬಿಂಬಿಸಲು ಹೊರಟಿರುವುದು ಹಾಸ್ಯಸ್ಪದ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ. ತತ್ವ ಸಿದ್ದಾಂತಗಳ ಆಧಾರದ ಮೇಲೆ ಪಕ್ಷವನ್ನು ಸಂಘಟನೆ ಮಾಡಲಾಗಿದೆ. ನನ್ನ ಭಾವಚಿತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ ಅಂತಹದಕ್ಕೆ ಯಾರೂ ಸಹ ಪ್ರೋತ್ಸಾಹ ಮತ್ತು ಬೆಂಬಲ ನೀಡಬಾರದೆಂದು ಪರೋಕ್ಷವಾಗಿ ಎಸ್ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ವಿರುದ್ದ ಸ್ಪರ್ಧಿಸಿ ಇದೀಗ ನಾನು ಸಹ ಕಾಂಗ್ರೆಸಿಗ ಎಂದು ಪ್ರಚಾರ ಗಿಟ್ಟಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಬೇರೆ ಕ್ಷೇತ್ರಗಳಿಂದ ಬಂದು ರಾಜಕಾರಣ ಮಾಡುವವರಿಗೆ ಮತ್ತು ಹಣದ ಬಲದಿಂದ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಬಹುದು ಎಂಬುದು ಕೇವಲ ಭ್ರಮೆ. ಕ್ಷೇತ್ರದ ಮತದಾರರು ಬುದ್ದಿವಂತರು ಪ್ರಬುದ್ದರು. ಈ ಕ್ಷೇತ್ರದ ಅಭಿವೃದ್ದಿಗಾಗಿ ಯಾರು ಏನು ಮಾಡಿದ್ದಾರೆ ಅವರ ಕೊಡುಗೆಗಳೇನು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದೆ ಎಂದರು.
ಕೊರೊನಾದಿಂದಾಗಿ ಈಗ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ನಿಂತಿದೆ. ಆದರೂ ಬಿಸಿಯೂಟಕ್ಕೆಂದು ತಮ್ಮಲ್ಲೇ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದ ಕೆಲವಾರು ಸರ್ಕಾರಿ ಶಾಲೆಗಳು ತಮ್ಮ ಕೃಷಿ ಕಾಯಕವನ್ನು ಮರೆತಿಲ್ಲ. ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈಗಲೂ ಹಲವಾರು ತರಕಾರಿಗಳನ್ನು ಬೆಳೆಯುತ್ತಲೇ ಇದ್ದಾರೆ.
ಹಿಂದಿನಿಂದಲೂ ಬಗೆ ಬಗೆಯ ತರಕಾರಿಗಳನ್ನು ಶಾಲಾ ಆವರಣದಲ್ಲಿ ಬೆಳೆಸಿ ಅದನ್ನು ಮಕ್ಕಳಿಗಾಗಿ ಬಳಸುವ ಪರಿಪಾಠವನ್ನು ಇಟ್ಟುಕೊಂಡಿರುವ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರರಿಗೆ ಮಾದರಿಯಾಗಿದ್ದಾರೆ. ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದೆ. ಸರ್ಕಾರದ ಅನುದಾನ ಮತ್ತು ಗ್ರಾಮಸ್ಥರ ನೆರವಿನಿಂದ ಕಾಂಪೌಂಡ್ ನಿರ್ಮಿಸಲಾಗಿದೆ. “ವಿಷನ್ ಗ್ರೀನ್” ಎಂಬ ಸಂಘ ರಚಿಸಿಕೊಂಡು, ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶ ಹೊಂದಿರುವ ಒಂದು ತಂಡ ಶಾಲೆಯೊಂದಿಗೆ ಸೇರಿ ಕೆಲವು ವರ್ಷಗಳ ಹಿಂದೆ ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ. ಮಹಾಗನಿ, ಬಸವನ ಪಾದ, ಮಾವು, ಗಸಗಸೆ, ಅರಳಿ, ಕಾಡು ಬಾದಾಮಿ, ಅತ್ತಿ, ನುಗ್ಗೆ ಮುಂತಾದ ನೂರು ಗಿಡಗಳನ್ನು ನೆಟ್ಟು ಹನಿ ನೀರಾವರಿ ಪೈಪ್ಗಳನ್ನು ಅಳವಡಿಸಿದ್ದರು. ಈಗವು ಎತ್ತರಕ್ಕೆ ಬೆಳೆದು ನಿಂತಿವೆ.
ಈ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮಗೆ ಬೇಕಾದ ತರಕಾರಿಗಳನ್ನು ಹಲವು ವರ್ಷಗಳಿಂದ ಬೆಳೆದುಕೊಳ್ಳುತ್ತಿದ್ದಾರೆ. ತೊಗರಿಕಾಯಿ, ಅಲಸಂದಿ, ಕುಂಬಳಕಾಯಿ, ಬಸಲೆಸೊಪ್ಪು, ಅರಿವೆಸೊಪ್ಪು, ನುಗ್ಗೆಕಾಯಿ, ಕರಿಬೇವು, ಅಮೃತಬಳ್ಳಿ, ಬೆಟ್ಟದ ನೆಲ್ಲಿಕಾಯಿ, ಗೊಂಗೂರ ಸೊಪ್ಪು, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಮುಂತಾದವುಗಳನ್ನು ಬೆಳೆಯುತ್ತಾ ಬಿಸಿಯೂಟದ ರುಚಿಯನ್ನು ಹೆಚ್ಚಿಸಿಕೊಂಡಿದ್ದರು. ಸುಮಾರು ಒಂದು ವರ್ಷಗಳಿಂದ ಕೊರೊನಾ ಕಾರಣದಿಂದ ಶಾಲೆಯ ಆವರಣದ ತರಕಾತಿ ತೋಟ ಬಸವಳಿದಿದ್ದರೂ, ಆಹಾರ ಉತ್ಪನ್ನಗಳಿಗೇನೂ ಕೊರತೆಯಾಗಿಲ್ಲ. ಕುಂಬಳಕಾಯಿಗಳು, ಸೋರೇಕಾಯಿ, ಅವರೇಕಾಯಿ ಸಾಕಷ್ಟು ಬಿಟ್ಟಿವೆ.
“ಕೊರೊನಾದಿಂದಾಗಿ ಈ ಬಾರಿ ತೋಟವನ್ನು ನಾವು ಶಿಕ್ಷಕರೇ ನೋಡಿಕೊಂಡೆವು. ನಮ್ಮ ಉದ್ದೇಶ ಕೈತೋಟದ ಮೂಲಕ ಮಕ್ಕಳಿಗೆ ಸ್ವಾವಲಂಬನೆ, ಕೃಷಿ, ಪರಿಸರದ ಪಾಠ ಕಲಿಸುವುದು ಮತ್ತು ಶಾಲೆಗೆ ಬೇಕಾದಷ್ಟು ತರಕಾರಿಯನ್ನು ಈ ತೋಟದಲ್ಲಿ ಬೆಳೆಸುವುದಾಗಿದೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುವುದಿಲ್ಲ. ತರಗೆಲೆ ಸೊಪ್ಪುಗಳು, ಸೆಗಣಿ ಹಾಗೂ ತೊಳೆದ ನೀರು ಗೊಬ್ಬರವಾಗಿ ಬಳಕೆಯಾಗುತ್ತದೆ. ಅವರೇಕಾಯಿಯನ್ನು ಒಣಗಿಸುತ್ತಿದ್ದೇವೆ. ಕುಂಬಳ ಸಹ ಹಾಳಾಗದಂತೆ ಶೇಖರಿಸಿಟ್ಟಿದ್ದೇವೆ. ಬಿಸಿಯೂಟ ಪ್ರಾರಂಭವಾದೊಡನೆ ಬಳಕೆ ಮಾಡುತ್ತೇವೆ” ಎಂದು ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಕದಿರೇನಹಳ್ಳಿ ಗೇಟ್ ಬಳಿಯಿರುವ ತೋಟದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಆಂಜಿನಪ್ಪ (ಪುಟ್ಟು) ಮಾತನಾಡಿದರು.
ಅಧಿಕಾರ ಇರಲಿ, ಇಲ್ಲದಿರಲಿ ಜನಸೇವೆಯೇ ನನ್ನ ಗುರಿ. ನಾನು ಕಾಂಗ್ರೆಸ್ ಪಕ್ಷದ ಟಿಕೇಟ್ ಗಾಗಿ ಲಾಭಿಮಾಡುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತೇನೆ ಎಂದು ಮುಖಂಡ ಆಂಜಿನಪ್ಪ ಪುಟ್ಟು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಒಂದು ದೇವಸ್ಥಾನವಿದ್ದಂತೆ. ಅಲ್ಲಿಗೆ ನಿಮ್ಮನ್ನು ಮತದಾರರು ಆಯ್ಕೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ. ನೀವು ಅದನ್ನು ಕಲುಷಿತ ಮಾಡದೆ ಜನರ ಕಲಸ ಕಾರ್ಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿಜೇತರಿಗೆ ಕಿವಿಮಾತು ಹೇಳಿದರು..
ನಾನು ಚುನಾವಣಾ ಪೂರ್ವದಲ್ಲಿ ಮತ್ತು ಚುನಾವಣಾ ನಂತರದಲ್ಲಿ ಈ ಕ್ಷೇತ್ರದಲ್ಲಿ ಇದ್ದುಕೊಂಡು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ. ನಮ್ಮ ಶಾಸಕರಾದ ವಿ. ಮುನಿಯಪ್ಪನವರ ಮಾರ್ಗದರ್ಶನದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ರಾಯಪ್ಪನಹಳ್ಳಿ ಅಶ್ವತ್ಥ್ ನಾರಾಯಣರೆಡ್ಡಿ ಮಾತನಾಡಿ, ಕಾಂಗ್ರೆಸ್ ಗೆ ದಿಕ್ಕಿಲ್ಲದ ಸಂದರ್ಭದಲ್ಲಿ ಆಂಜಿನಪ್ಪ ಪುಟ್ಟು ನಾಯಕತ್ವ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಬ್ಲೂಡು ನಾರಾಯಣಸ್ವಾಮಿ ಮಾತನಾಡಿ, ಪಕ್ಷದಲ್ಲಿರುವ ಒಡಕುಗಳನ್ನು ಮರೆತು, ಒಗ್ಗಾಟಾಗಿ ಪಕ್ಷಕ್ಕೆ ದುಡಿದು ಆಂಜಿನಪ್ಪ ಪುಟ್ಟು ಅವರ ಕೈ ಬಲಪಡಿಸಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ವಿ. ಮುನಿಯಪ್ಪ ಅವರು ಅನಾರೋಗ್ಯದ ಕಾರಣ ಸಾರಥ್ಯವನ್ನು ಆಂಜಿನಪ್ಪ ಪುಟ್ಟು ವಹಿಸಿದ್ದಾರೆ ಎಂದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸಾವಿತ್ರಿಬಾಯಿಪುಲೆ ಇವರ 190 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಎನ್.ಪಂಚಮೂರ್ತಿ ಮಾತನಾಡಿದರು.
ಅವಮಾನ, ನೋವುಗಳನ್ನು ಸಹಿಸುತ್ತಲೇ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಿದ ದಿಟ್ಟ ಮಹಿಳೆ, ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಆ ಮೂಲಕ ಶೈಕ್ಷಣಿಕ ಕ್ರಾಂತಿಕೆ ಕಾರಣರಾದರು ಎಂದು ಅವರು ತಿಳಿಸಿದರು.
ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಸಾವಿತ್ರಿ ಅವರು 1848ರಲ್ಲಿ ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಕಾರಣ. ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ಹಾಗೂ ಅವಕಾಶಗಳು ಲಭಿಸುತ್ತವೆ. ಎಲ್ಲರೂ ವಿಶೇಷವಾಗಿ ಹೆಣ್ಣುಮಕ್ಕಳು ಕೂಡ ಶಿಕ್ಷಣ ಪಡೆಯಬೇಕು. ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ, ಮತ್ತು ಮಹಾತ್ಮ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ ಎಂದು ಹೇಳಿದರು.
ಶಿಕ್ಷಕಿ ಪ್ರತಿಮಾದೇವಿ ಮಾತನಾಡಿ, ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಸಮಾಜಕ್ಕೆ ಸ್ಫೂರ್ತಿ. ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯರಾದರು. ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ್ದು ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣದ ಹಿಂದಿನ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಮತಾ ಸೈನಿಕ ದಳ ವತಿಯಿಂದ ಫ್ಲೆಕ್ಸ್ ಹಾಕುವ ಮೂಲಕ ಕೋರೆಗಾಂವ್ ವಿಜಯೋತ್ಸವ ಮತ್ತು ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ಧಾರಾವಾಹಿಯನ್ನು ಬೆಂಬಲಿಸಿ, ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್ ಮಾತನಾಡಿದರು.
ಯುವ ಪೀಳಿಗೆ “ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್” ಧಾರಾವಾಹಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆ ಮಾಡುವ ಮೂಲಕ ಸಿನಿಮಾ ಹಾವಳಿಯಿಂದ ಹೊರಬಂದು ಅಭಿಮಾನದಿಂದ ಫ್ಲೆಕ್ಸ್ ಹಾಕಿ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಹೆಮ್ಮೆ ಪಡುವಂತ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
1818 ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಅಸಮಾನತೆಯ ವಿರುದ್ಧ ನಡೆದ ಕ್ರಾಂತಿಕಾರಿ ಯುದ್ಧವಾಗಿದೆ. ಈ ಸತ್ಯವನ್ನು ಯಾವುದೇ ಪಠ್ಯ ಪುಸ್ತಕಗಳಲ್ಲಿ ಬರದಂತೆ ದೂರ ಇಟ್ಟಿರುವುದು ದುರಂತದ ಕೆಲಸವಾಗಿದೆ. ಪ್ರತಿಯೊಬ್ಬರೂ ಕೋರೆಗಾಂವ್ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಸಿ ವಿಭಾಗ ಕೆಪಿಸಿಸಿ ರಾಜ್ಯ ಸಂಚಾಲಕ ಗುಡಿಹಳ್ಳಿ ನಾರಾಯಣಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದ್ಯಾವಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಮುನಿರೆಡ್ಡಿ, ತಾತಹಳ್ಳಿ ನಾರಾಯಣಸ್ವಾಮಿ, ಸೊಣ್ಣೇನಹಳ್ಳಿ ವೆಂಕಟೇಶ್, ಪಿಂಡಿಪಾಪನಹಳ್ಳಿ ಮುನಿಆಂಜಿನಪ್ಪ, ಅಬ್ಲೂಡು ಮಂಜುನಾಥ್, ರಾಮಾಂಜಿನಪ್ಪ, ತಾತಹಳ್ಳಿ ಗಂಗಾಧರ್, ವರದನಾಯಕನಹಳ್ಳಿ ವಿ.ಜಿ ಕೃಷ್ಣಮೂರ್ತಿ, ನರಸಿಂಹ, ಮುನಿರಾಜು, ಚಲಪತಿ, ಮಧು, ಮುನಿರೆಡ್ಡಿ, ಮಂಜುನಾಥ್, ಮೂರ್ತಿ ಹಾಜರಿದ್ದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ನಡೆದ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಂತರಾಮ್ ಮಾತನಾಡಿದರು.
ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿರುವ ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯ ಕಲೆಗಾರಿಕೆ ಕೆಲಸವು ವಿಶ್ವವೇ ಮೆಚ್ಚುವಂತೆ ಮಾಡಿದೆ ಎಂದು ಅವರು ತಿಳಿಸಿದರು.
ವಿಷ್ಣುವರ್ಧನನ ಹೆಂಡತಿ ಶಾಂತಲೆ ನಾಟ್ಯ ರಾಣಿ ಎಂದು ಪ್ರಸಿದ್ಧಿಯಾಗಿದ್ದಳು. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೆಬೀಡಿನ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ. ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟರು. ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದು, ಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾ ಕೃತಿಯಿಂದ ನಿರ್ಮಿಸಿದ್ದಾರೆ ಎಂದು ವಿವರಿಸಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಕೆಲವೊಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ. ಅವರು ಜಗತ್ತಿನ ಮಹಾನ್ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅಂತಹ ಚೇತನಕ್ಕೆ ಸರ್ಕಾರದಿಂದ ಸಂಸ್ಮರಣೋತ್ಸವ ನಡೆಸುವ ಕಾರ್ಯವನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್, ಮುನಿರತ್ನಾಚಾರಿ, ಕೃಷ್ಣಾಚಾರಿ, ಶಿವಶಂಕರಾಚಾರಿ, ಸುಬ್ರಮಣ್ಯಾಚಾರಿ, ಮಂಜುನಾಥ್ ಹಾಜರಿದ್ದರು.