Sidlaghatta : ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ ತಾಲ್ಲೂಕಿನ ಅಬ್ಲೂಡು ಗ್ರಾಮದ ಡಿ.ಫಣೀಂದ್ರ ಪ್ರಸಾದ್ ಹಾಗೂ ಮಳಮಾಚನಹಳ್ಳಿ ಗ್ರಾಮದ ಎಂ.ಎ.ಸುನಿಲ್ ಕುಮಾರ್ ನೇಮಕಗೊಂಡಿದ್ದಾರೆ.
ಕನ್ನಡ ಅಭಿವೃದ್ದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಐದು ಮಂದಿಯನ್ನೊಳಗೊಂಡ ಕನ್ನಡ ಜಾಗೃತಿ ಸಮಿತಿಗಳನ್ನು ಸರ್ಕಾರ ರಚಿಸಿದೆ.
ತಾಲ್ಲೂಕಿನ ಫಣೀಂದ್ರ ಪ್ರಸಾದ್ ಮತ್ತು ಸುನಿಲ್ ಕುಮಾರ್ ಅವರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಳಿತ ಕನ್ನಡ ಶಾಖೆಯ ಸರ್ಕಾರದ ಅನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶಿಸಿದ್ದಾರೆ.
Sidlaghatta : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ವಿಶ್ವಕರ್ಮ ಸಮುದಾಯದಿಂದ ಸೆ.17ರಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ “ವಿಶ್ವಕರ್ಮ ಜಯಂತಿ” ಯನ್ನು ಆಚರಿಸಲಾಗುತ್ತಿದೆ ಎಂದು ತಾಲ್ಲೂಕು ವಿಶ್ವಕರ್ಮ ಸಂಘದ ನಿರ್ದೇಶಕ ಸುಂದರಾಚಾರಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ಕರ್ಮ ಜಯಂತಿಯಲ್ಲಿ ಸಮುದಾಯದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಮುಖ್ಯವಾಗಿ ಕುಲ ಕಸಬು ಮಾಡುವ ಐದು ಮಂದಿ ಹಿರಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದರು.
ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಗಗನ ಸಿಂಧು ಸೇರಿದಂತೆ ತಾಲ್ಲೂಕು ಆಡಳಿತವು ಜಯಂತಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಎಲ್ಲ ಸಮುದಾಯದ ಮುಖಂಡರು ಜಯಂತಿಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಶೇ 75ಕ್ಕಿಂತಲೂ ಹೆಚ್ಚು ಅಂಕ ಪಡೆದ ತಾಲ್ಲೂಕಿನ ಸಮುದಾಯದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನಡೆಸಲಿದ್ದು ಅರ್ಹ ವಿದ್ಯಾರ್ಥಿಗಳು ಸುಂದರಾಚಾರಿ 97312 70250, ಶ್ರೀನಾಥ್ 95381 11910, ಬಿ.ವಿ.ಮಂಜುನಾತ್ 90365 01413 ಸಂಪರ್ಕಿಸಲು ಮನವಿ ಮಾಡಿದರು.
ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರ ನಾರಾಯಾಣಚಾರಿ, ಶ್ರೀಕಾಳಿಕಾಂಬ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಸುಂದರಾಚಾರಿ, ಶ್ರೀನಾಥ್, ಬಿ.ವಿ.ಮಂಜುನಾಥ್, ಚಂದ್ರಶೇಖರ್ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ತಹಶೀಲ್ದಾರ್ ಗಗನ ಸಿಂಧು ಅವರನ್ನು ಭೇಟಿಯಾಗಿ, ದಲಿತರ ಕುಂದುಕೊರತೆಗಳು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಸಾದಲಿ ಸಮೀಪದ ಕೋಚಿಮುಲ್ ಶೀಥಲೀಕರಣ ಘಟಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸದ ಬಗ್ಗೆ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸಿಬ್ಬಂದಿಗಳ ಒತ್ತಾಯದ ಮೇರೆಗೆ ಮೂರು ದಿನಗಳ ಬಳಿಕ ಕೇವಲ ಫೋಟೋ ಇಟ್ಟುಕೊಂಡು ಜಯಂತಿ ಆಚರಣೆ ನಡೆದಿದ್ದು, ಅದು ಕಾಟಾಚಾರವೆಂದರು. ತಕ್ಷಣವೇ ತಹಶೀಲ್ದಾರ್ ಗಗನ ಸಿಂಧು ಅವರು ಘಟಕದ ವ್ಯವಸ್ಥಾಪಕ ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿ ಸ್ಪಷ್ಟನೆ ಕೇಳಿ, ಕೇವಲ ನೆಪ ಹೇಳದೆ ಜಯಂತಿ ಆಚರಣೆ ಮಾಡದಿರುವುದು ತಪ್ಪು ಎಂದು ತರಾಟೆಗೆ ತೆಗೆದುಕೊಂಡು, ಕಚೇರಿಗೆ ಬಂದು ವಿವರಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಸೀತಹಳ್ಳಿಯ ಸರ್ವೆ ನಂ. 29ರಲ್ಲಿ 23 ಗುಂಟೆ ಜಮೀನನ್ನು ನಿವೇಶನರಹಿತ ದಲಿತರಿಗೆ ಹಂಚಿಕೆ ಮಾಡುವಂತೆ ಉಪ ವಿಭಾಗಾಧಿಕಾರಿಗಳ ಆದೇಶವಾಗಿದ್ದರೂ, ಹಲವು ವರ್ಷಗಳಿಂದ ಕ್ರಮ ಕೈಗೊಳ್ಳದಿರುವುದಕ್ಕೆ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಹಶೀಲ್ದಾರ್ ಅವರು ಕಡತ ಪತ್ತೆಯಾಗುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದು, ಸಿಕ್ಕ ಕೂಡಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಬಗರ್ ಹುಕುಂ ಜಮೀನಿನ ದಾಖಲೆ ವಿಲೇವಾರಿ ಪ್ರಕ್ರಿಯೆ ಇನ್ನೂ ಪೂರ್ಣವಾಗದಿರುವುದು, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ಬಾಕಿ ಉಳಿದಿರುವುದನ್ನು ಅವರು ತಿಳಿಸಿದರು. ಜೊತೆಗೆ ದಲಿತ ರೈತರು ವರ್ಷಗಳಿಂದ ಫಾರಂ 53 ಸಲ್ಲಿಸಿದರೂ ದರಕಾಸ್ತು ಸಮಿತಿ ರಚನೆಯಿಲ್ಲದ ಕಾರಣ ಜಮೀನು ಮಂಜೂರಾತಿ ಆಗದಿರುವುದನ್ನು ಗಮನಕ್ಕೆ ತಂದರು.
ಎಲ್ಲಾ ವಿಷಯಗಳನ್ನು ಆಲಿಸಿದ ತಹಶೀಲ್ದಾರ್ ಗಗನ ಸಿಂಧು ಅವರು ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕಂದಾಯ ನಿರೀಕ್ಷಕ ವೇಣುಗೋಪಾಲ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಢಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
Talakayalabetta, Sidlaghatta : ತಲಕಾಯಲಬೆಟ್ಟ ಬ್ರಾಹ್ಮಣ ಸಂಘವು 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14, ಭಾನುವಾರ ಬೆಳಿಗ್ಗೆ 9 ಗಂಟೆಗೆ ತಲಕಾಯಲಬೆಟ್ಟದಲ್ಲಿ “ಸುವರ್ಣ ಸಂಭ್ರಮ ಸಮ್ಮಿಲನ”ವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಆರ್. ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಎನ್. ರವಿಕುಮಾರ್ ಮತ್ತು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕೀರ್ತಿಶೇಷ ಪಲಿಚೇರ್ಲು ಪಿ.ಎಸ್. ಕೃಷ್ಣಮೂರ್ತಿರಾವ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಡಿ.ಆರ್. ಶಂಕರ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರೇರಕ ಭಾಷಣಕಾರರಾದ ವೈ.ವಿ. ಗುಂಡೂರಾವ್ ಮತ್ತು ವಂದೇಮಾತರಂ ಪಾಠಶಾಲೆಯ ಸಂಸ್ಥಾಪಕ ಡಾ. ಜಿ.ಬಿ. ಹರೀಶ್ ಅವರು ಪ್ರೇರಣಾ ಭಾಷಣ ಮಾಡುವರು. ಕುಮಾರಿ ನೀಹಾರಿಕಾ ಅವರಿಂದ ಭರತನಾಟ್ಯ ಪ್ರದರ್ಶನ, 101 ಹಿರಿಯ ದಂಪತಿಗಳ ಸನ್ಮಾನ ಹಾಗೂ ಮಹಿಳಾ ಸಂಘದ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಪಲಿಚೇರ್ಲು ಪಿ.ಆರ್. ಪ್ರಕಾಶ್, ದಿಬ್ಬೂರಹಳ್ಳಿ ಶಂಕರ ಸೇವಾ ಸಮಿತಿ ಅಧ್ಯಕ್ಷ ಮೋಕ್ಷಚಗುಂಡಂ ವಿ. ಸೂರ್ಯಕುಮಾರ್, ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷೆ ಎಸ್.ವಿ. ವಿಜಯಲಕ್ಷ್ಮಿ ಸೂರ್ಯಕುಮಾರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
Sidlaghatta : ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಭಾಗವಹಿಸುತ್ತಿದ್ದವರ ಮೇಲೆ ಎಂಜಲು ಉಗುಳಿ, ಕಲ್ಲು ಎಸೆದ ಘಟನೆಗೆ ಖಂಡನೆ ವ್ಯಕ್ತಪಡಿಸಿ, ಶಿಡ್ಲಘಟ್ಟದಲ್ಲಿ ಸೆಪ್ಟೆಂಬರ್ 15ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚೆಲುವರಾಜ್ ಮಾತನಾಡಿ, “ಗಣೇಶೋತ್ಸವದ ವೇಳೆ ಒಂದು ಸಮುದಾಯದ ಮಕ್ಕಳು ಎಂಜಲು ಉಗಿದು ಕಲ್ಲು ತೂರಾಟ ನಡೆಸಿದ ಘಟನೆ ನಡೆಯಿತು. ರಾಜ್ಯದಲ್ಲಿ ಹಿಂದೂ ಧರ್ಮ, ಧಾರ್ಮಿಕ ಆಚರಣೆಗಳು ಮತ್ತು ಕೇಂದ್ರಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳುವ ರಾಜಕೀಯ ಧಾವಂತ ಹೆಚ್ಚಾಗಿದೆ. ಇದರಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದೆ” ಎಂದು ಆರೋಪಿಸಿದರು.
ಸೋಮವಾರ ತಾಲ್ಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ನರೇಶ್ ಯಾದವ್ ಮಾತನಾಡಿ, “ನಮ್ಮ ಹೋರಾಟ ಯಾವುದೇ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ. ಆದರೆ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ. ಈಗಲೇ ಎದ್ದು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಹೆಚ್ಚಾಗಬಹುದು. ಹಿಂದೂಗಳು ಜಾಗೃತರಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಭಜರಂಗ ದಳ ಸಂಯೋಜಕ ವೆಂಕೋಬರಾವ್, ವಿಹಿಪಿ ಅಧ್ಯಕ್ಷ ಚೆಲುವರಾಜ್, ಸಹಕಾರ್ಯದರ್ಶಿ ನರೇಶ್ ಯಾದವ್, ಉಪಾಧ್ಯಕ್ಷ ಮಹೇಶ್, ರಮೇಶ್ ಹಾಗೂ ಪುರೋಹಿತ್ ಸಂಘದ ಪ್ರಮುಖ ಮಳಮಾಚನಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.
Sidlaghatta : ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಆದೇಶದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 754 ಪ್ರಕರಣಗಳು ಇತ್ಯರ್ಥಗೊಂಡು 39 ಲಕ್ಷ 20 ಸಾವಿರ 220 ರೂ ಪಾವತಿಸಲಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ವಿವಿಧ ರೀತಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು
ಸಂಧಾನಕಾರರಾಗಿ ವಕೀಲರಾದ ಶಿವಕುಮಾರ್ ಮತ್ತು ಸುರೇಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.
Sidlaghatta : ಆಹಾರ ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 3,500 ಹೊಸ ನ್ಯಾಯಬೆಲೆ ಅಂಗಡಿಗಳನ್ನು ನೀಡಲು ಸರ್ಕಾರ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ನಗರದ ಪುರಾತನ ಶ್ರೀ ಪೂಜಮ್ಮ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, “ರಾಜ್ಯಾದ್ಯಂತ ಎಲ್ಲಾ ಆಹಾರ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಿ ಒಂದೂವರೆ ತಿಂಗಳೊಳಗೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಈಗಾಗಲೇ 20,000 ನ್ಯಾಯಬೆಲೆ ಅಂಗಡಿಗಳಿದ್ದು, ಅದಕ್ಕೆ ಹೆಚ್ಚುವರಿಯಾಗಿ 3,500 ಅಂಗಡಿಗಳನ್ನು ಸೇರಿಸಲಾಗುತ್ತದೆ” ಎಂದರು.
ಈ ನಿರ್ಧಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾವಂತರು, ನಿರುದ್ಯೋಗಿಗಳು ಮತ್ತು ಯುವಜನರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಅವರು ತಿಳಿಸಿದರು.
ತಾಲ್ಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಅನುಷ್ಠಾನ ಯೋಜನೆಗಳ ನಾಮನಿರ್ದೇಶನದ ಗೊಂದಲ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಕಾಂಗ್ರೆಸ್ ಪಕ್ಷದ ತಾಲ್ಲೂಕು ಮಟ್ಟದ ನಾಮನಿರ್ದೇಶನಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಜಿಲ್ಲಾ ಅಧ್ಯಕ್ಷರಿಗೆ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಒಗ್ಗೂಡಿಸಲು ತೋಪಡಾ ನಾಗರಾಜ್ ಮತ್ತು ಟಿ.ಕೆ. ನಟರಾಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಮುನಿಯಪ್ಪ, ಕೃಷ್ಣಪ್ಪ, ಕದಿರಪ್ಪ, ರಾಮಚಂದ್ರಪ್ಪ, ಅಜ್ಜಪ್ಪ, ಎಸ್.ಎಂ. ರಮೇಶ್, ಕೆ. ನರಸಿಂಹಮೂರ್ತಿ, ದ್ಯಾವಪ್ಪ ಹಾಗೂ ನರಸಿಂಹ (ಎನ್ಟಿಆರ್) ಮೂರ್ತಿ ಹಾಜರಿದ್ದರು.