Kothanur, Sidlaghatta : ಪಾರ್ಥೇನಿಯಂ ಎಂಬ ಕಳೆ ಗಿಡವು ಪರಿಸರದಲ್ಲಿದ್ದರೆ ಬೆಳೆ, ಜಾನುವಾರು ಸೇರಿದಂತೆ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಅದರ ನಿರ್ವಹಣೆ ನಮ್ಮೆಲ್ಲ ಹೊಣೆ ಎಂದು ಜಿಕೆವಿಕೆ ಪ್ರಾಧ್ಯಾಪಕಿ ಹಾಗೂ ಯೋಜನಾ ಮುಖ್ಯಸ್ಥರಾದ ಡಾ.ಗೀತಾ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಜಿಕೆವಿಕೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಎ.ಐ.ಸಿ.ಆರ್.ಪಿ ಕಳೆ ನಿರ್ವಹಣೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪಾರ್ಥೇನಿಯಂ ಜಾಗೃತಿ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾರ್ಥೇನಿಯಂ ಕಳೆ ಹೆಚ್ಚು ಪ್ರಮಾಣದಲ್ಲಿ ಪರಾಗ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಸೇರಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಮಣ್ಣಿನ ಗುಣಮಟ್ಟ ಹಾನಿ ಮಾಡುವ ಪಾರ್ಥೇನಿಯಂ ಕಳೆಯನ್ನು ಸಂಪೂರ್ಣ ವಿನಾಶ ಮಾಡುವುದು ಅಗತ್ಯವಾಗಿದೆ ಎಂದರು.
ಜೂನಿಯರ್ ಅಗ್ರೋನಮಿಸ್ಟ್ ಡಾ.ಕಮಲಾಬಾಯಿ ಮಾತನಾಡಿ, ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ ಗೊಳಿಸಲು ಸಾಮೂಹಿಕವಾಗಿ ಎಲ್ಲರೂ ಒಂದಾಗಿ ನಿರ್ವಹಣೆ ಮಾಡಬೇಕು. ಪಾರ್ಥೇನಿಯಂ ಹಾಗೂ ಇತರ ಕೃಷಿ ತ್ಯಾಜ್ಯಗಳನ್ನು ಬಳಸಿ ಕಾಂಪೋಸ್ಟ್ ಕೂಡ ತಯಾರಿಸಬಹುದು. ಜೈವಿಕ ಪದ್ಧತಿಯಲ್ಲಿ ಸಸ್ಯ ನಿಯೋಗಿ ಗಿಡಗಳಾದ ಚೆಂಡು ಹೂವು, ಸಂಜೆಮಲ್ಲಿಗೆಯನ್ನು ಬೆಳೆಸಿ ಈ ಕಳೆ ನಿರ್ವಹಣೆ ಮಾಡಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
Sidlaghatta : ಶ್ರಾವಣ ಮಾಸದ ಕಡೆಯ ಶನಿವಾರ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಹೊಸಹುಡ್ಯ ಬಳಿಯ ಶ್ರೀಕ್ಷೇತ್ರ ಶಾಂತಿಧಾಮದಲ್ಲಿ ಶನೇಶ್ವರಸ್ವಾಮಿಗೆ 1148 ಕ್ಕೂ ಹೆಚ್ಚು ಲೀಟರ್ ಹಾಲಿನ ಅಭಿಷೇಕ ನಡೆಯಿತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಭಕ್ತರು ನೀಡಿದ 1148 ಲೀಟರ್ ಹಾಲಿನಿಂದಲೆ ಸ್ವಾಮಿಗೆ ಅಭಿಷೇಕ ನೆರವೇರಿಸಿ ಅಭಿಷೇಕದ ಹಾಲಿನಲ್ಲೇ ಭಕ್ತರು ನೀಡಿದ ಅಕ್ಕಿ ಬಳಸಿ ತಯಾರು ಮಾಡಿದ ಪ್ರಸಾದವನ್ನು ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ವಿತರಿಸಲಾಯಿತು.
ಸ್ವಾಮಿಯ ಮೂರ್ತಿಗೆ ಕ್ಷೀರಾಭಿಷೇಕದ ನಂತರ ವಿಶೇಷವಾಗಿ ಬೆಳ್ಳಿ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಎಲ್ಲೆಡೆ ಪೂಜೆ
ಶ್ರಾವಣ ಮಾಸದ ಕಡೆಯ ಶನಿವಾರದ ಅಂಗವಾಗಿ ತಾಲ್ಲೂಕಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ, ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿನ ಶ್ರೀಬ್ಯಾಟರಾಯಸ್ವಾಮಿ ದೇವಾಲಯ, ಬೆಳ್ಳೂಟಿ ಗೇಟ್ ನ ಭೂನೀಳಾ ಪದ್ಮಾವತಿ ಸಮೇತ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ ಸೇರಿದಂತೆ ದೇವಾಲಯಗಳಲ್ಲಿ ಶ್ರಾವಣ ಮಾಸದ ಶನಿವಾರದ ಪೂಜೆಗಳು ಶ್ರದ್ಧಾಭಕ್ತಿಯಿಂದ ನಡೆದವು.
Sidlaghatta : ಎಲ್ಲ ವಿದ್ಯಾರ್ಥಿಗಳಲ್ಲೂ ನಾಯಕತ್ವ ಗುಣ, ಸಹಾಯ ಹಸ್ತ ನೀಡುವ ಗುಣಗಳು ಇರುತ್ತವೆ. ಆದರೆ ನಾವು ಬೆಳೆಯುವ ವಾತಾವರಣ ಮತ್ತು ನಮಗೆ ಸಿಗುವ ಮಾರ್ಗದರ್ಶನ, ನಾವು ಚಿಂತಿಸುವ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಗ್ರಾಮಾಂತರ ಠಾಣೆಯ ಎಸ್.ಐ ಸತೀಶ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಯಕತ್ವದ ಪದವಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಹುಟ್ಟಿನಿಂದಲೆ ಎಲ್ಲರು ಕೂಡ ಸಮರ್ಥರಾಗಿರುತ್ತಾರೆ, ಯಾರೊಬ್ಬರು ಕೂಡ ಅಸಮರ್ಥರಾಗಿರುವುದಿಲ್ಲ. ನಾವು ಚಿಂತನೆ ಮಾಡುವುದರ ಮೇಲೆ ಮತ್ತು ಅವಕಾಶಗಳನ್ನು ಬಳಸಿಕೊಳ್ಳುವುದರ ಮೇಲೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ಮುಖ್ಯವಾಗಿ ವಿದ್ಯಾರ್ಥಿಗಳು ಓದು ಬರಹದ ಮೇಲೆ ಗಮನವನ್ನು ಕೇಂದ್ರೀಕರಿಸುವ ಜತೆಗೆ ಸಮಯ ಪ್ರಜ್ಞೆ, ಶಿಸ್ತು, ಶ್ರದ್ದೆಯನ್ನು ಮೈಗೂಡಿಸಿಕೊಳ್ಳಬೇಕು. ಗುರುವಿನ ಮಾರ್ಗದರ್ಶನದೊಂದಿಗೆ ಗುರಿ ಮುಟ್ಟುವ ಕೆಲಸ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ಅಭ್ಯಾಸಗಳು ನಮ್ಮ ಗುರಿ ಮುಟ್ಟಲು ಅನುಕೂಲ ಮಾಡಿಕೊಡಲಿವೆ. ಹೆತ್ತವರು, ಅಕ್ಷರ ಕಲಿಸಿದ ಗುರುಗಳು, ಎಲ್ಲವನ್ನೂ ಕೊಟ್ಟ ಈ ಸಮಾಜದ ಋಣವನ್ನು ತೀರಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದೇ ನಾವು ನೀವು ಈ ಸಮಾಜಕ್ಕೆ ಕೊಡುವ ಕಾಣಿಕೆ ಎಂದರು.
ಪ್ರೌಢಶಾಲಾ ಮಕ್ಕಳಿಗೆ ಕದಂಬ, ರಾಷ್ಟ್ರಕೂಟ ಇನ್ನಿತರೆ ವಿದ್ಯಾರ್ಥಿ ತಂಡಗಳ ನಾಯಕತ್ವದ ಪದವಿ ಪ್ರಮಾಣ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಡಾಲ್ಫಿನ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಕಾರ್ಯದರ್ಶಿ ವಿ.ಕೃಷ್ಣಪ್ಪ, ಪ್ರಿನ್ಸಿಪಲ್ ಮುನಿಕೃಷ್ಣಪ್ಪ, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಪುರಬೈರನಹಳ್ಳಿ ಗ್ರಾಮದಲ್ಲಿ ಗಣಿಗಾರಿಕೆಗೆ ಅನುಮತಿ ಕೊಡಲು, ಹಿಂದಿನ ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಹಾಗೂ ಹಿಂದಿನ ಉಸ್ತುವಾರಿ ಸಚಿವರು 30 ಕೋಟಿ ಲಂಚ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಸದನದಲ್ಲಿ ತಾಲ್ಲೂಕಿನ ಸಾದಲಿ ಹೋಬಳಿಯ ಪುರ ಬೈರನಹಳ್ಳಿಯಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿಯ ಕುರಿತು, ಪ್ರಸ್ತಾಪ ಮಾಡಿರುವ ಅವರು, ತಾಲ್ಲೂಕಿನ ಸಾದಲಿ ಹೋಬಳಿ ಪುರಬೈರನಹಳ್ಳಿ ಗ್ರಾಮದ ಸ.ನಂ.2 ರಲ್ಲಿ ಒಂದೇ ಕುಟುಂಬದವರಿಗೆ 60 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿದ್ದಾರೆ.
ಈ ಜಮೀನಿನಲ್ಲಿ ಗಣಿಗಾರಿಕೆ ಆರಂಭಿಸಿದರೆ, ಅಲ್ಲಿ ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳು, ಪಕ್ಷಿಗಳಿಗೆ ತೊಂದರೆಯಾಗುತ್ತದೆ. ರೈತರಿಗೂ ತೊಂದರೆಯಾಗುತ್ತದೆ. ಒಂದು ವೇಳೆ ಸರ್ಕಾರ, ಗಣಿಗಾರಿಕೆ ರದ್ದುಪಡಿಸದೆ ಆರಂಭಿಸಿದರೆ, ಅಲ್ಲಿ ದೊಡ್ಡಮಟ್ಟದ ಗಲಾಟೆಯಾಗುತ್ತದೆ. ಮುಂದೆ ಆಗುವಂತಹ ಅನಾಹುತಗಳಿಗೆ ಸರ್ಕಾರ ನೇರ ಹೊಣೆಯಾಗಬೇಕಾಗುತ್ತದೆ.
ಗಣಿಗಾರಿಕೆಗೆ ಅವಕಾಶ ಕೊಟ್ಟಿರುವ ಪ್ರದೇಶದ ಸಮೀಪದಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 300 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಿದೆ. ನಾಲ್ಕು ಗ್ರಾಮಗಳಲ್ಲಿ ಕಲ್ಲು ಕುಟುಕರು 700 ಕುಟುಂಬಸ್ಥರು 1974 ರಿಂದ ಕಲ್ಲು ತೆಗೆದು ಜೀವನ ಮಾಡುತ್ತಿದ್ದಾರೆ. ಸ್ಥಳೀಯರು ಬಂದು ನನಗೆ ದೂರು ಕೊಟ್ಟಿದ್ದಾರೆ. ಕೈಗಾರಿಕೆ ಸಚಿವರಿಗೆ ದೂರು ಕೊಟ್ಟ ನಂತರ, ಪ್ರಭ ಅರ್ಥ್ ಮೂವರ್ಸ್, ಮತ್ತು ಶಕ್ತಿ ಎಂಟರ್ ಪ್ರೈಸಸ್ ನ 18-22 ಗುಂಟೆ ವಜಾಗೊಳಿಸಿದ್ದಾರೆ. ಉಳಿದಿರುವ 42-05 ಗುಂಟೆ ವಜಾ ಆಗಿಲ್ಲ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಕೂಡಲೇ ತನಿಖೆ ಮಾಡಿಸಿ, ಗಣಿಗಾರಿಕೆಯನ್ನು ವಜಾಗೊಳಿಸಬೇಕು. ಒಂದು ವೇಳೆ ಗಣಿಗಾರಿಕೆ ಆರಂಭಿಸಿದರೆ, 7 ಸಾವಿರ ಡೀಮ್ಡ್ಸ್ ಫಾರೆಸ್ಟ್ ಇದೆ. ರೈತರಿಗೂ ತೊಂದರೆ ಆಗುತ್ತದೆ. ಗಣಿಗಾರಿಕೆ ಮಾಡಲು ಬಂದರೆ, ದೊಡ್ಡ ಮಟ್ಟದಲ್ಲಿ ಗಲಾಟೆಯಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದರು.
ಅನುದಾನಗಳಲ್ಲಿ ತಾರತಮ್ಯ:
ನಮ್ಮ ಕ್ಷೇತ್ರಕ್ಕೆ ತಾರತಮ್ಯ ಮಾಡದೆ ಅನುದಾನ ಕೊಡಿ, ಇಲ್ಲವೇ, ನಿಮಗೆ ಅನುದಾನ ಕೊಡುವುದಿಲ್ಲ ಎಂದು ಬೋರ್ಡ್ ಹಾಕಿ, ನಾನು ಈ ಸದನಕ್ಕೆ ಬರುವುದಿಲ್ಲ. ಕ್ಷೇತ್ರದಲ್ಲೆ ಇದ್ದು, ಜನರಿಂದ ಬೈಸಿಕೊಂಡೇ ಇರ್ತೇನೆ ಎಂದು ಬೇಸರ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 3 ತಿಂಗಳು ಕಳೆದರೂ, ನಮ್ಮ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ. ತಾರತಮ್ಯವಾಗುತ್ತಿದೆ. 40 ಸಾವಿರ ಅಲ್ಪಸಂಖ್ಯಾತರಿದ್ದಾರೆ. ಎಸ್.ಸಿ.ಎಸ್ಟಿ 65 ಸಾವಿರ, 2023-24 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್.ಎಚ್.ಡಿ.ಬಿ. ಯೋಜನೆಯಡಿ 10 ಕೋಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 25 ಕೋಟಿ ಕೊಟ್ಟಿದ್ದಾರೆ. 2024-25 ನೇ ಸಾಲಿನಲ್ಲಿ ಎಂ.ಡಿ.ಆರ್.3034 ರಲ್ಲಿ 8 ಕೋಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 15-20 ಕೋಟಿ ಕೊಟ್ಟಿದ್ದಾರೆ.
ನಮ್ಮ ವಿಧಾನಸಭಾ ಕ್ಷೇತ್ರವು, ಹಿಂದುಳಿದ ತಾಲ್ಲೂಕಾಗಿದೆ. 100 ಹಾಸಿಗೆಗಳ ಆಸ್ಪತ್ರೆಯಿಲ್ಲ, 11 ಸಾವಿರ ಮಕ್ಕಳು ನಗರ ವ್ಯಾಪ್ತಿಯಲ್ಲಿ ಓದುತ್ತಿದ್ದಾರೆ. ಸುಸಜ್ಜಿತ ಗ್ರಂಥಾಲಯವಿಲ್ಲ. ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಬೇಕು. ಈ ಹಿಂದೆ ಯಾವ ಮುಖ್ಯಮಂತ್ರಿಗಳು ಹೀಗೆ ಮಾಡಿರಲಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Sidlaghatta : ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಮುಖ ಚರ್ಯೆ ಗುರ್ತಿಸುವ ಎಫ್.ಆರ್.ಎಸ್(ಫೇಸ್ ರೀಡಿಂಗ್ ಸಿಸ್ಟಂ) ಯೋಜನೆಯನ್ನು ಕೈ ಬಿಡಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ಕೈಗೆ ಕಪ್ಪು ಪಟ್ಟಿ ಧರಿಸಿ, ಕಪ್ಪು ವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಚಿಕ್ಕಬಳ್ಳಾಪುರ ಮಾರ್ಗದಲ್ಲಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಅಂಗನವಾಡಿ ಫಲಾನುಭವಿಗಳ ಮುಖಚರ್ಯೆ ಗುರ್ತಿಸುವ ಎಫ್.ಆರ್.ಎಸ್ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ. ಇದರಿಂದ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.
ಹಾಗಾಗಿ ಎಫ್.ಆರ್.ಎಸ್ ಯೋಜನೆಯಲ್ಲಿ ಇರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವ ತನಕ ಎಫ್.ಆರ್.ಎಸ್ ಯೋಜನೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮಕ್ಕಳ ಮತ್ತು ಮಹಿಳೆಯರ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುವ ಐಸಿಡಿಎಸ್ ಯೋಜನೆಗೆ 50 ವರ್ಷಗಳು ತುಂಬಿದ್ದು ಯೋಜನೆಯನ್ನು ಖಾಯಂ ಮಾಡಬೇಕು, ಅನುದಾನವನ್ನು ಹೆಚ್ಚು ಮಾಡಬೇಕು. ಗುಜರಾತ್ನ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನವೆಂಬರ್ ನಲ್ಲಿ ಕೇಂದ್ರ ಸಚಿವರಿಗೆ ಸಹಿ ಸಂಗ್ರಹ ಮಾಡಿ ಪತ್ರ ಕಳುಹಿಸುವ ಅಭಿಯಾನ ನಡೆಸುತ್ತೇವೆ ಮತ್ತು ಡಿಸೆಂಬರ್ ನಲ್ಲಿ ಸಚಿವರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸಿಡಿಪಿಒ ವಿದ್ಯಾ ವಸ್ತ್ರದ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಉಮಾದೇವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Jangamakote, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಗ್ರಾಮ ಪಂಚಾಯಿತಿ ಜಂಗಮಕೋಟೆ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ತರಬೇತಿ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.
ಜಂಗಮಕೋಟೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಂದ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಡಾ. ಕೆ.ಪಾರ್ಥಸಾರಥಿ ನಾಯ್ಡು ಮಾತನಾಡಿ, ಈ ದೇಶದಲ್ಲಿನ ಹುಟ್ಟಿ, ಇಲ್ಲೆ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನ ಭದ್ರತೆಯನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡರೆ, 60 ವರ್ಷದ ನಂತರ ಸಾಯುವ ತನಕ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ. ಪ್ರಧಾನ ಮಂತ್ರಿ ಜನ್ ಧನ್ ಖಾತೆ ತೆರೆದು, ಡೆಬಿಟ್ ಕಾರ್ಡ್ ಮೂಲಕ ವ್ಯವಹರಿಸಿದರೆ ಶೂನ್ಯ ಬಾಲೆನ್ಸ್ ನಲ್ಲಿ 2 ಲಕ್ಷದ ವರೆಗೂ ಅಪಘಾತ ವಿಮೆ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 18-50 ವರ್ಷದೊಳಗಿನವರು ವಾರ್ಷಿಕ 436 ರೂಪಾಯಿ ಪಾವತಿಸಿದರೆ 2 ಲಕ್ಷದ ವರೆಗೂ ಜೀವ ವಿಮಾ ರಕ್ಷಣೆ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ ಕೇವಲ 20 ರೂಪಾಯಿ ವಿಮೆ ಕಟ್ಟಿದರೆ 2 ಲಕ್ಷ ತನಕ ಅಪಘಾತ ವಿಮಾ ರಕ್ಷಣೆ ಸಿಗಲಿದೆ. ಅಟಲ್ ಪಿಂಚಣಿ ಯೋಜನೆಗೆ ಚಂದಾದಾರಿಕೆ 18-40 ವರ್ಷದೊಳಗಿನವರು ತಿಂಗಳಿಗೆ 1 ಸಾವಿರದಿಂದ 5 ಸಾವಿರದವರೆಗೂ ಪಿಂಚಣಿ ಪಡೆಯಬಹುದು. ಪಿಎಂಜೆಡಿವೈ ಖಾತೆಗಳಿಗೆ ಹಾಗೂ ನಿಷ್ಕ್ರೀಯವಾಗಿರುವ ಖಾತೆಗಳಿಗೆ ಕೆ.ವೈ.ಸಿ.ನವೀಕರಿಸಿಕೊಳ್ಳಬೇಕು ಇಲ್ಲವಾದರೆ, ಸರ್ಕಾರದ ಸೌಲಭ್ಯಗಳು ನಿಮಗೆ ದೊರೆಯುವುದಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಮಾತನಾಡಿ, ಹೆತ್ತ ತಂದೆ, ತಾಯಿಗಳನ್ನು ಅನಾಥಾಶ್ರಮಗಳಿಗೆ ಬಿಟ್ಟು ಬರುವಂತಹ ಸನ್ನಿವೇಶಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು, ನಿಮ್ಮ ಉಳಿತಾಯ ಖಾತೆಗಳ ಮೂಲಕ ವಿಮೆ ಕಟ್ಟಿಕೊಂಡು, ಉಳಿತಾಯ ಮಾಡಿಕೊಂಡರೆ, 60 ವರ್ಷಗಳ ನಂತರ, ಅದು ನಿಮ್ಮನ್ನು ಪೋಷಣೆ ಮಾಡುತ್ತದೆ. ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಮನೆಗಳಲ್ಲಿ ಗಂಡಸರ ಖಾತೆಗಳಿಂದಲೂ ವಿಮೆ ಕಟ್ಟಿಸುವ ಮೂಲಕ ಪಿಂಚಣಿ ಸೌಲಭ್ಯಗಳಿಗೆ ಅರ್ಹರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಶಿಡ್ಲಘಟ್ಟ ಶಾಖಾ ವ್ಯವಸ್ಥಾಪಕ ಮಲ್ಲಾರೆಡ್ಡಿ, ಜಂಗಮಕೋಟೆ ಬ್ಯಾಂಕಿನ ವ್ಯವಸ್ಥಾಪಕ ಶಿವಶಂಕರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಎಫ್.ಎಲ್.ಸಿ.ಆರ್.ಪಿ. ಅಮರಾವತಿ, ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.
Melur, Sidlaghatta : ಮಹಿಳೆಯರು, ಆರ್ಥಿಕವಾಗಿ ಸಬಲರಾಗುವುದಕ್ಕಾಗಿ, ಸ್ವಯಂ ಉದ್ಯೋಗ ಮಾಡಲು ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಿಕೊಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ಸದಸ್ಯ ಎ.ಎಂ.ತ್ಯಾಗರಾಜ್ ಹೇಳಿದರು.
ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳ್ಳೂರು ವಲಯದ ಸ್ವ-ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಮಹಿಳೆಯರು, ಸ್ವಯಂ ಉದ್ಯೋಗ ನಡೆಸಲು ಅಗತ್ಯವಾಗಿರುವ ಕೌಶಲ್ಯಾಧಾರಿತ ತರಬೇತಿಗಳನ್ನು ರುಡ್ ಸೆಟ್ ಸಂಸ್ಥೆ ನೀಡುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಸಿಗುವಂತಹ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯ ತರಬೇತಿದಾರ ಶಶಿಧರ್ ಅವರು ಮಾತನಾಡಿ, ರುಡ್ ಸೆಟ್ ಸಂಸ್ಥೆಯ ಮೂಲಕ ಮಹಿಳೆಯರಿಗೆ ಅಗತ್ಯವಾಗಿರುವ ಟೈಲರಿಂಗ್, ಬ್ಯೂಟಿಷಿಯನ್, ಕುರಿ ಸಾಕಾಣಿಕೆ, ಮೊಬೈಲ್ ರಿಪೇರಿ, ಹಣಬೆ ಬೇಸಾಯ, ಜೇನುಸಾಕಾಣಿಕೆ ಸೇರಿದಂತೆ ಹಲವಾರು ತರಬೇತಿಗಳು ಸಿಗುತ್ತವೆ. ಇಂತಹ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಕಮಲಮ್ಮವೆಂಕಟರಾಯಪ್ಪ, ವಲಯದ ಮೇಲ್ವಿಚಾರಕರು ಧನಂಜಯ. ಒಕ್ಕೂಟ ಅಧ್ಯಕ್ಷೆ ಪ್ರಭಾ, ಮಂಜುಳಾ. ಶಾಲಾ ಶಿಕ್ಷಕಿ ಗಾಯತ್ರಿ, ಜಿ.ಕೆ.ಶಿವಾನಂದ, ರಂಗಯ್ಯ ಸಮನ್ವಯ ಅಧಿಕಾರಿ ಅರುಣಾ, ಸೇವಾ ಪ್ರತಿನಿಧಿ ಮುನಿರತ್ನ, ಹಾಗೂ ಕೇಂದ್ರದ ಸದಸ್ಯರು ಹಾಜರಿದ್ದರು.