ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಸುಗ್ಗಲಮ್ಮ ದೇವಿಯ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವನ್ನು ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಗಣಪತಿ ಪೂಜೆ, ಲಘು ಪುಣ್ಯಾಹ, ಸಪ್ತ ಮಾತೃಕೆ ಆರಾಧನೆ, ಕುಂಭ ಕಳಸಾರಾಧನೆ, ದ್ವಾರಪಾಲಕ ಪೂಜೆ, ನವಗ್ರಹ ಪೂಜೆ, ಮಾತೃಕೆಯ ಹೋಮ, ನವಗ್ರಹ ಹೋಮ, ಅಷ್ಠದಿಕ್ಪಾಲಕ ಹೋಮ, ಸಪ್ತಮಾತೃಕೆಯ ಹೋಮ, ಮೂರ್ತಿ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗುರುವಾರದಂದು ಅಮ್ಮನವರ ಉತ್ಸವವನ್ನು ಮಳ್ಳೂರು, ಮುತ್ತೂರು, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಬೆಳ್ಳೂಟಿ ಮತ್ತು ಭಕ್ತರಹಳ್ಳಿ ಗ್ರಾಮಗಳಲ್ಲಿ ನಡೆಸುವುದಾಗಿ ಸುಗ್ಗಲಮ್ಮ ದೇವಿ ಭಕ್ತಮಂಡಳಿಯವರು ತಿಳಿಸಿದ್ದಾರೆ.
ಸುಗ್ಗಲಮ್ಮ ದೇವಿಯ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ
ವನಮಹೋತ್ಸವ ಕಾರ್ಯಕ್ರಮ
ತಾಲ್ಲೂಕಿನ ತಿಮ್ಮನಾಯಕನಹಳ್ಳಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್.ಎನ್. ಹೊಸೂರು ಗ್ರಾಮದಲ್ಲಿ ಭಾನುವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಮತ್ತು ಸೇ ಟ್ರಿ ಸಂಸ್ಥೆಯ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪರಿಸರಕ್ಕೆ ಅನುಕೂಲವಾಗುವಂತಹ ಹೊಂಗೆ, ನೇರಳೆ, ಬೇವು, ಮುತ್ತುಗ, ಗಂಗಿರೇಣಿ ಸಸಿಗಳನ್ನು ಗ್ರಾಮದ ಗೋಮಾಳದಲ್ಲಿ ನಾಟಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಶಾಲಾ ಮಕ್ಕಳು ಸಹ ಭಾಗವಹಿಸಿದ್ದರು.
ಗ್ರಾಮೀಣ ಜೀವನೋಪಾಯ ಬಲಪಡಿಸುವಲ್ಲಿ ಗೋಮಾಳ ಮತ್ತು ಜಲಮೂಲಗಳ ಅಭಿವೃದ್ಧಿ ಅವಶ್ಯವಾಗಿದ್ದು ಈ ದಿಸೆಯಲ್ಲಿ ಸಂಸ್ಥೆಯು ಸೇ ಟ್ರೀ ಸಂಸ್ಥೆ ಸಹಯೋಗದಲ್ಲಿ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್ ಇ ಎಸ್ ಸಂಸ್ಥೆಯ ತಂಡದ ಪಿ. ವಿಜಯ್ ಕುಮಾರ, ಹಿರಿಯ ಯೋಜನಾಧಿಕಾರಿ ನಿಖತ್ ಪರ್ವಿನ್, ಕ್ಷೇತ್ರ ಸಂಯೋಜಕ ಸೌಭಾಗ್ಯ, ಗೋಪಿನಾಥ, ಸೇ ಟ್ರೀ ಸಂಸ್ಥೆಯ ದುರ್ಗೇಶ ಮತ್ತಿತರರು ಹಾಜರಿದ್ದರು.
ಶಾಲೆಯ ಪಕ್ಕದಲ್ಲೇ ರಾಶಿ ರಾಶಿ ಕಸ
ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದರಾಶಿ, ಮೂಗಿಗೆ ಬಡಿಯುವ ದುರ್ನಾತ, ಇವುಗಳ ನಡುವೆಯೇ ಇರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದ ಪರಿಸ್ಥಿತಿ ನಗರದ ತಿಮ್ಮಯ್ಯ ಲೇಔಟ್ನಲ್ಲಿದೆ. ಈ ತ್ಯಾಜ್ಯದ ಹಾವಳಿಯಿಂದಾಗಿ ಮಕ್ಕಳು ವಿವಿಧ ಖಾಯಿಲೆಗಳಿಗೆ ತುತ್ತಾಗುವ ಭೀತಿ ಮೂಡಿದೆ.
ನಗರದ ೧೮ ನೇ ವಾರ್ಡಿನ ಆಜಾದ್ ನಗರದ ತಿಮ್ಮಯ್ಯ ಲೇಔಟ್ ನಲ್ಲಿ ಕಳೆದ ಎರಡು ತಿಂಗಳಿನಿಂದ ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡದಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿಯೂ ರಾಶಿ ರಾಶಿ ಕಸ ಸಂಗ್ರಹವಾಗಿದೆ.
ತಿಮ್ಮಯ್ಯ ಲೇ ಔಟ್ ನಲ್ಲಿರುವ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಸುರಿದಿರುವ ಕಸದ ರಾಶಿಯಿಂದ ದುರ್ನಾತ ಬೀರುತ್ತಿದ್ದು ಕಸದ ನಡುವೆಯೇ ಮಕ್ಕಳು ಓಡಾಡುವುದರಿಂದ ಮಕ್ಕಳಿಗೆ ವಿವಿಧ ಖಾಯಿಲೆ ಬರುವ ಭೀತಿಯಲ್ಲಿ ವಿದ್ಯಾಭ್ಯಾಸ ನಡೆಸುವಂತಾಗಿದೆ.
ಈ ಬಗ್ಗೆ ಸಾಕಷ್ಟು ಭಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯ ನಾಗರಿಕರು ಮತ್ತು ಪೋಷಕರು ಆರೋಪಿಸುತ್ತಾರೆ.
ಸಕಾಲದಲ್ಲಿ ಕಸ ವಿಲೇವಾರಿ ಮಾಡದ ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಸ್ತೆಗಳಲ್ಲಿ ಹಾಕಿರುವ ಕಸ ಕಡ್ಡಿ ಕೊಳೆತು ಹುಳುಗಳು ಬಿದ್ದು ಇದರಿಂದ ಬೀರುತ್ತಿರುವ ದುರ್ನಾತದಿಂದಾಗಿ ಇಲ್ಲಿನ ನಿವಾಸಿಗಳು ಪರಿತಪಿಸುವಂತಾಗಿದೆ.
ನಗರದ ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಬೇಕಾದ ಚುನಾಯಿತ ಜನಪ್ರತಿನಿಧಿಗಳಿಗೂ ನಗರದ ಸ್ವಚ್ಚತೆಯ ಬಗ್ಗೆ ಕಾಳಜಿಯಿಲ್ಲ. ನಾಗರಿಕರಿಗೆ ನೀಡಬೇಕಾದ ಮೂಲಭೂತ ಸವಲತ್ತುಗಳ ಬಗ್ಗೆಯಾಗಲಿ ಆಲೋಚನೆಯಿಲ್ಲ. ಹಾಗಾಗಿ ನಗರದಲ್ಲಿ ನಗರಸಭೆ ಅಸ್ಥಿತ್ವದಲ್ಲಿದೆಯೋ ಇಲ್ಲವೋ ಎಂಬ ಅನುಮಾನ ನಮ್ಮಲ್ಲಿ ಮೂಡಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಮಕ್ಕಳ ಪ್ರತಿಭೆ ಗುರುತಿಸಿ ನಿಷ್ಪಕ್ಷ ಪಾತವಾಗಿ ನಿರ್ಣಯ ನೀಡಬೇಕು
ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಕಲೆ ಹೊರಹಾಕಲು ಪ್ರತಿಭಾ ಕಾರಂಜಿ ಒಂದು ಅತ್ಯತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದವರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮಕ್ಕಳ ಪ್ರತಿಭೆ ಗುರುತಿಸಿ ನಿಷ್ಪಕ್ಷ ಪಾತವಾಗಿ ನಿರ್ಣಯ ನೀಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಮಂಗಳವಾರ ನಡೆದ ನಗರ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುತ್ತವೆ. ಶಿಕ್ಷಕರು ಕಾಲಕಾಲಕ್ಕೆ ತಮ್ಮ ಶಾಲೆಯ ಮಕ್ಕಳನ್ನು ಅಂಥ ಸ್ಪರ್ಧೆಗಳಿಗೆ ಕಳುಹಿಸಿಕೊಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಕೊಳ್ಳುವಂತೆ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ ಸೋತ ಅಥವಾ ಬಹುಮಾನ ಪಡೆದುಕೊಳ್ಳದ ವಿದ್ಯಾರ್ಥಿಗಳು ನಿರಾಶರಾಗದೆ ಮುಂದಿನ ಸ್ಪರ್ಧೆಗೆ ತಯಾರಿ ನಡೆಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವುಗಳು ಸಹಜವಾಗಿದ್ದು, ಸೋಲನ್ನು ಮುಂದಿನ ಸ್ಪರ್ಧೆಯ ಮೆಟ್ಟಿಲೆಂದು ಭಾವಿಸಬೇಕು ಅಂದಾಗ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ. ತಾಲ್ಲೂಕು ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಬೇಕು ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಗೆ ಆಗಮಿಸಿದ್ದ ನಗರ ವ್ಯಾಪ್ತಿಯ 22 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಕನ್ನಡ ರತ್ನಕೋಶ ಮತ್ತು ಇತರೆ ಪುಸ್ತಕಗಳನ್ನು ‘ಪುಸ್ತಕ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೀಡಿದರು. ಪ್ರತಿಭಾ ಕಾರಂಜಿಯಲ್ಲಿ ಆಯ್ದ ಒಂದು ಸ್ಪರ್ಧೆಯಲ್ಲಿ ವಿಜೇತರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಸದಸ್ಯ ಇಲಿಯಾಜ್ ಬೇಗ್, ಖದೀರ್, ಆರೀಫ್, ಮುನಿಯಪ್ಪ, ಸುಂದರಾಚಾರಿ, ಚಂದ್ರಶೇಖರ್, ಸಾದಿಕ್ಪಾಷ, ಮಳ್ಳೂರಯ್ಯ, ಪಾಪಣ್ಣ, ತಿಮ್ಮಯ್ಯ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಶಾಲಾ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಕ್ತರಹಳ್ಳಿ: ತಾಲ್ಲೂಕಿನ ಭಕ್ತರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಭಕ್ತರಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿಯನ್ನು ಆಯೋಜಿಸಲಾಗಿತ್ತು. ನಾಗಮಂಗಲ, ಕಾಕಚೊಕ್ಕಂಡಹಳ್ಳಿ, ನಡಿಪಿನಾಯಕನಹಳ್ಳಿ, ತೊಟ್ಲಗಾನಹಳ್ಳಿ ಮೊದಲಾದ ಗ್ರಾಮಗಳ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೇಲೂರು: ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲೂರು ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯನ್ನು ಮಂಗಳವಾರ ನಡೆಸಲಾಯಿತು. ಮೇಲೂರು, ಚೌಡಸಂದ್ರ, ಮಳ್ಳೂರು, ಮುತ್ತೂರು, ಅಪ್ಪೇಗೌಡನಹಳ್ಳಿ ಮೊದಲಾದ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಪರಿಸರ ಉಳಿಸಲು ಗಿಡ ನೆಡಿ
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಸರ ಉಳಿಸಲು ಮತ್ತು ಅಂತರ್ಜಲ ಹೆಚ್ಚಿಸಲು ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ನಗರದ ಹೊರವಲಯದ ರಾಜೀವ್ಗಾಂಧಿ ಬಡಾವಣೆಯ ಸಮೀಪದ ಮುಸ್ಲೀಮರ ಬಾಷುಬಾಬಾ ದರ್ಗಾ ಮತ್ತು ‘ಚೋಟಾ ಮಕಾನ್’ಗೆ ಸೇರಿರುವ ಸ್ಥಳದಲ್ಲಿ ಸುಮಾರು 200 ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಅಕ್ಷರ ಜ್ಞಾನ ಗೊತ್ತಿಲ್ಲದ ಸಾಲುಮರದ ತಿಮ್ಮಕ್ಕ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಅವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ನಗರ, ಪಟ್ಟಣಗಳು ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ರಸ್ತೆ ಪಕ್ಕದಲ್ಲಿ, ಮನೆ ಅಕ್ಕಪಕ್ಕದಲ್ಲಿ, ಗಿಡಗಳನ್ನು ನೆಟ್ಟು ಪೋಷಿಸಬೇಕು. ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಪರಿಪಾಠ ಬೆಳೆಯಬೇಕು ಎಂದು ಹೇಳಿದರು.
ಬಾಷುಬಾಬಾ ದರ್ಗಾ ಮತ್ತು ಚೋಟಾ ಮಕಾನ್ ಸಮಿತಿ ಅಧ್ಯಕ್ಷ ಬಕ್ಷು, ಸದಸ್ಯ ಅಬ್ದುಲ್ ರಹಮಾನ್ ಅವರು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರನ್ನು ಗೌರವಿಸಿದರು.
ಬೆಳ್ಳೂಟಿ ರಮೇಶ್, ಮದೀನಾ ಮಸೀದಿ ಕಾರ್ಯದರ್ಶಿ ಎ.ಆರ್.ಅಬ್ದುಲ್ ಅಜೀಜ್, ಟೀಪು ಆಟೋ ಕಮಿಟಿಯ ಅಧ್ಯಕ್ಷ ಮೌಲಾ, ಎಚ್.ಬಾಬು, ಟಿ.ಮುನೀರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಷ್ಟ್ರೀಯ ತೋಟಗಾರಿಕಾ ಮಿಷನ್, ಫಲಾನುಭವಿಗಳ ಆಯ್ಕೆ
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಆಯ್ಕೆಯಾಗುವಂತಹ ಫಲಾನುಭವಿಗಳು ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭ ಮಾಡಿ, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ಹೇಳಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ನಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಅವರು ಮಾತನಾಡಿದರು.
ಯೋಜನೆಯಡಿಯಲ್ಲಿ ಪಾಲಿಹೌಸ್, ಪ್ಯಾಕಿಂಗ್ ಹಾಲ್, ಮಿನಿಟ್ರ್ಯಾಕ್ಟರ್, ಬಯೋಡೈಜೆಸ್ಟರ್, ಪ್ರೀಕೂಲಿಂಗ್ ಯೂನಿಟ್, ಮಾವು, ಸೀಬೆ, ಈರುಳ್ಳಿ ಶೇಖರಣಾಘಟಕ ನಿರ್ಮಾಣದ ಯೋಜನೆಗಳಿಗೆ ಸಹಾಯಧನವನ್ನು ಪಡೆಯಲು ಅವಕಾಶಗಳಿದ್ದು, ರೈತರು ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಬೆಳೆಗಳನ್ನು ಬೆಳೆಯಬೇಕು ಎಂದರು.
ಪಾಲಿಹೌಸ್: ೨ ಎಕರೆ ಪ್ರದೇಶದ ಗುರಿಯಿದ್ದು, ನಾಲ್ಕು ಹೋಬಳಿಗೆ ಅರ್ಧ ಎಕರೆಯಂತೆ ನಿಗದಿ ಮಾಡಿ, ಫಲಾನುಭವಿಗಳನ್ನು ಆಯ್ಕೆಮಾಡಲಾಗಿದೆ, ಒಂದು ಪಾಲಿಹೌಸ್ನ ಘಟಕವೆಚ್ಚ ೧೬.೮೮ ಲಕ್ಷ, ಸರ್ಕಾರದಿಂದ ೮.೪೪ ಲಕ್ಷ ಸಹಾಯಧನ ರೈತರಿಗೆ ಸಿಗಲಿದೆ, ಒಟ್ಟು ೧೩೮ ಅರ್ಜಿಗಳು ಸಲ್ಲಿಕೆಯಾಗಿದ್ದು, ಲಾಟರಿಯಲ್ಲಿ ೪ ಮಂದಿಯನ್ನು ಆಯ್ಕೆಮಾಡಲಾಗಿದೆ.
ಪ್ಯಾಕಿಂಗ್ಹೌಸ್: ೨ ಲಕ್ಷ ಸಹಾಯಧನ, ೩೫ ಅರ್ಜಿಗಳು ಬಂದಿದ್ದು, ೨ ಮಂದಿಯನ್ನು ಆಯ್ಕೆಮಾಡಲಾಗಿದೆ, ಹಣ್ಣು ತರಕಾರಿಗಳನ್ನು ಬೆಳೆದು ತಂದ ನಂತರ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದಾಗಿದೆ.
ಈರುಳ್ಳಿ ಶೇಖರಣಾ ಘಟಕ: ೮೬.೫೦೦ ಸಹಾಯಧನ, ೧೩೧ ಅರ್ಜಿಗಳು ಸಲ್ಲಿಕೆಯಾಗಿದ್ದು, ಎಸ್.ಸಿ. ೨, ಎಸ್.ಟಿ.೧ ಇತರೆ ೦೪, ಮಂದಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ಮಿನಿಟ್ರ್ಯಾಕ್ಟರ್: ೭೫.೦೦೦ ಸಹಾಯಧನ, ೭೭ ಅರ್ಜಿಗಳು ಸಲ್ಲಿಕೆಯಾಗಿದ್ದು, ಎಸ್.ಸಿ.೧, ಎಸ್.ಟಿ.೧, ಇತರೆ ೫, ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಫ್ರೀ ಕೂಲಿಂಗ್ ಯೂನಿಟ್: ೫ಲಕ್ಷ ೩ ಅರ್ಜಿಗಳು ಬಂದಿದ್ದು, ಮೂರು ಅರ್ಜಿಗಳನ್ನು ಪರಿಗಣಿಸಲಾಗಿದೆ.
ಲಾಟರಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ಮುಂದಿನ ಹತ್ತು ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭ ಮಾಡದಿದ್ದಲ್ಲಿ ಆಯ್ಕೆ ರದ್ದುಗೊಂಡು, ನಂತರದ ಫಲಾನುಭವಿಗಳು ಆಯ್ಕೆಗೊಳ್ಳಲಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಟಿ.ದೇವೇಗೌಡ ಮತ್ತಿತರರು ಹಾಜರಿದ್ದರು.
ಕಸಾಪ ವತಿಯಿಂದ ಮಕ್ಕಳಿಗೆ ದೇಶಭಕ್ತರ ಪರಿಚಯ
ಬ್ರಿಟಿಷ್ ಆಡಳಿತ ಕೊನೆಗೊಂಡು ದೇಶ ಸ್ವಾತಂತ್ರ್ಯಗೊಂಡ ಬಳಿಕ ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಹಾನ್ ದೇಶಭಕ್ತರಾಗಿದ್ದರು. ‘ಉಕ್ಕಿನ ಮನುಷ್ಯ’ ರೆಂದೇ ಅಮರರಾದ ಅವರ ಸಾಮಾಜಿಕ ಹೋರಾಟಗಳ ಬಗ್ಗೆ ತಿಳಿಯುವ ಮೂಲಕ ದೇಶ ಕಟ್ಟಿದ ಚರಿತ್ರೆಯನ್ನು ಅರಿಯಬೇಕಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ – ಕಲಿಯುವ ಕೈಗೆ ಓದುವ ಪುಸ್ತಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 70 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಕಸಾಪ ವತಿಯಿಂದ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಪುಸ್ತಕ ಬಹುಮಾನ ನೀಡುವ ಜೊತೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಕ್ರೀಡಾಪಟು ಧ್ಯಾನ್ ಚಂದ್ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ, ಕ್ರೀಡೆಯ ಆಸಕ್ತಿ ಉಳ್ಳವರಿಗೆ ಇಂಥಹ ಕ್ರೀಡಾಪಟುಗಳು ಮಾದರಿಯಾಗಬೇಕೆಂದು ನುಡಿದರು.
ಜಾನಪದ ಗಾಯಕ ದೇವರಮಳ್ಳೂರು ಮಹೇಶ್ ಕುವೆಂಪು ರಚಿಸಿರುವ ಗೀತೆಗಳನ್ನು ಹಾಡಿದರು.
‘ನನ್ನ ಮೆಚ್ಚಿನ ಪುಸ್ತಕ’ ಎಂಬ ವಿಷಯವಾಗಿ ತಾವು ಓದಿದ ಪುಸ್ತಕದ ಬಗ್ಗೆ ಭಾಷಣ ಮಾಡಿ ವಿಜೇತರಾದ ಒಂಭತ್ತನೇ ತರಗತಿಯ ಎ. ಮಾನಸ, ಸಿ.ಕೆ. ಸೃಜನ ಮತ್ತು ಸಿ.ಎಂ.ಅನೂಷ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎ.ದಿವ್ಯಾ, ಕೀರ್ತನಾ ಮತ್ತು ಶಿವಮಣಿ ಅವರಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ಕ.ಸಾ.ಪ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕ.ಸಾ.ಪ ವತಿಯಿಂದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಗ್ರಂಥಾಲಯಕ್ಕೆ ‘ಸುಭಾಷ್ ಚಂದ್ರ ಬೋಸ್’, ‘ಸ್ವಾಮಿ ವಿವೇಕಾನಂದ’ ಮತ್ತು ‘ಕನ್ನಡ ರತ್ನಕೋಶ’ವನ್ನು ನೀಡಲಾಯಿತು.
ಕಸಾಪ ಸದಸ್ಯರಾದ ದೇವರಮಳ್ಳೂರು ಮಹೇಶ್, ರಮೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಮುನಿರಾಜು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಶಿವಶಂಕರ್, ಶೀಕ್ಷಕರಾದ ಬಿ. ರಾಜಶೇಖರ್, ಎಂ.ಜೆ. ರಾಜೀವಗೌಡ, ನಾಗೇಶ್, ಲಕ್ಷ್ಮೀಕಾಂತಮ್ಮ, ಎಂ. ವೆಂಕಟೇಶಪ್ಪ, ಎಂ. ಮಮತಾ, ಬಿ. ಶ್ರೀನಿವಾಸ್, ಜೆ.ಸಿ. ಪ್ರಿಯಾಂಕ, ಎಚ್.ಎಸ್. ವಿಠಲ್, ಎಂ. ಶಿವಕುಮಾರ್, ಬಿ.ಸಿ. ದೊಡ್ಡನಾಯ್ಕ, ಟಿ.ಇ. ಶ್ರೀನಿವಾಸ, ಡಿ. ಭವ್ಯ, ಪಿ. ಸವಿತ, ಎ.ವಿ. ನವೀನ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಯೋಗಾಸನ ಸ್ಪರ್ಧೆ
ಶಿಡ್ಲಘಟ್ಟ ತಾಲ್ಲೂಕಿನ ಗಾಂಡ್ಲಚಿಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಹರ್ಷಿತಾ, ಶಾಂಭವಿ, ಪುವೀ, ಮುರಳಿ, ಗಂಗೋತ್ರಿ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕ ಎಸ್.ಎಂ.ಆದಿನಾರಾಯಣ, ಯೋಗ ಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕ ರಾಮರೆಡ್ಡಿ ಇದ್ದಾರೆ.
ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರ ಭೇಟಿ : ರೈತರು ಮತ್ತು ರೀಲರುಗಳ ಸಮಸ್ಯೆ ಬಗೆ ಹರಿಸುವ ಭರವಸೆ
ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿದ್ದರು.
ರೀಲರುಗಳು ಹಾಗೂ ರೈತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿದ ಸಿ.ಎಸ್.ಬಿ ಅಧ್ಯಕ್ಷರು ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಮಾರುಕಟ್ಟೆಯ ನಾನಾ ವಿಭಾಗಗಳಲ್ಲಿ ಸಂಚರಿಸಿದ ಅವರು, ರೇಷ್ಮೆ ಬೆಳೆಗಾರರನ್ನು ರೇಷ್ಮೆ ಗೂಡು ಉತ್ಪಾದನೆಗೆ ತೆಗಲುವ ವೆಚ್ಚ ಎಷ್ಟು, ನೂರು ಮೊಟ್ಟೆ ಹುಳು ಸಾಕಾಣಿಕೆ ಮಾಡಲು ಎಷ್ಟು ಖರ್ಚು ಬರುತ್ತಿದೆ, ಸರಾಸರಿ ಇಳುವರಿ ಎಷ್ಟು ಎಂಬುವ ವಿಚಾರದಲ್ಲಿ ಮಾಹಿತಿಯನ್ನು ಸಂಗ್ರಹಿಸಿದರು.
ಮಂಡಳಿ ಅಧ್ಯಕ್ಷರು ಆಗಮಿಸಿದ ವಿಚಾರ ತಿಳಿದು ರೈತ ಸಂಘದ ಮುಖಂಡರು, ರೀಲರುಗಳು ಹಾಗೂ ಬಿಜೆಪಿ ಮುಖಂಡರು ಸ್ಥಳಕ್ಕಾಗಮಿಸಿ ಮಾರುಕಟ್ಟೆಯಲ್ಲಿ ಆರಂಭಿಸಿರುವ ಇ-ಹರಾಜು ಪ್ರಕ್ರಿಯೆ, ಜಾಲರಿಗಳ ವಿತರಣೆ, ರೇಷ್ಮೆಕೃಷಿ, ರೇಷ್ಮೆ ಉದ್ದಿಮೆ, ಜಿ ಎಸ್ ಟಿ ಸುಂಕಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳನ್ನು ಹೇಳಿಕೊಂಡರು.
ಜತೆಗೆ ಖಾಸಗಿ ಚಾಕಿ ಸಾಕಾಣಿಕೆ ಕೇಂದ್ರಗಳು ಲಂಗು ಲಗಾಮು ಇಲ್ಲದೆ ರೇಷ್ಮೆ ಬೆಳೆಗಾರರನ್ನು ಶೋಷಿಸುತ್ತಿರುವ ಕುರಿತು ಪ್ತಸ್ತಾಪಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರಲ್ಲದೆ ರೇಷ್ಮೆನೂಲು ಹಾಗೂ ಉಪ ಉತ್ಪನ್ನಗಳನ್ನು ಜಿ ಎಸ್ ಟಿ ವ್ಯಾಪ್ತಿಯಿಂದ ಹೊರಗಿಡುವಂತೆ ಕೋರಿದರು.
ರೀಲರ್ಗಳ ಮಾನಸಿಕ ಹಿಂಸೆಗೆ ಕಾರಣವಾಗಿರುವ ಇ-ಹರಾಜು ಪದ್ದತಿಯನ್ನು ಕೂಡಲೇ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲ ರೀಲರುಗಳು ಕೋರಿದರೆ, ಮಾರುಕಟ್ಟೆಯಲ್ಲಿ ಜಾತಿವಾರು ಜಾಲರಿಗಳನ್ನು ಹಂಚಿಕೆ ಮಾಡುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕೆಂದು ಕೆಲ ರೈತರು ಒತ್ತಾಯಿಸಿದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ಬೆಳೆಗಾರರ ಸಮಸ್ಯೆಗಳನ್ನು ಗುರುತಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದೆಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರು ಭರವಸೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾದ ಯಲುವಳ್ಳಿ ರಮೇಶ್, ಮೇಲೂರು ರಾಮಕೃಷ್ಣಪ್ಪ, ಮಳ್ಳೂರು ಶಿವಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ದಾಮೋದರ್, ರೈತ ಸಂಘದ ರವಿಕುಮಾರ್, ನರಸಿಂಹಮೂರ್ತಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಪಘಾತ : ಜನರ ಆಕ್ರೋಷ
ಖಾಸಗಿ ಬಸ್ಸು ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಸಂಭವಿಸಿದೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಬಳಿಯಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ದ್ವಿಚಕ್ರ ವಾಹನ, ಬಸ್ಸಿನಡಿಯಲ್ಲಿ ಸಿಲುಕಿ ಹಾಳಾಗಿದೆ.
ಚೆನ್ನಹಳ್ಳಿ ನಿವಾಸಿ ಬೈರಪ್ಪ (೫೫) ಗಾಯಗೊಂಡು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ. ಈ ಭಾಗದಲ್ಲಿ ಖಾಸಗಿ ಬಸ್ಸುಗಳು ವೇಗವಾಗಿ ಸಂಚರಿಸುತ್ತವೆ. ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ರಸ್ತೆಯು ದ್ವಿಚಕ್ರ ವಾಹನ ಸವಾರರಿಗೆ ಮೃತ್ಯುಕೂಪವಾಗಿದೆ. ಇದರಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಜನರು ಬಸ್ಸಿನ ಗಾಜುಗಳನ್ನು ಹೊಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಬೆಲೆ ಏರಿಕೆಯ ವಿರುದ್ಧ, ಕನಿಷ್ಠ ಕೂಲಿ ೧೮ ಸಾವಿರ ರೂಪಾಯಿಗಳ ವೇತನ ನೀಡಬೇಕು ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಗ್ರಾಮ ಪಂಚಾಯತಿಯ ನೌಕರರು ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಸಿ.ಐ.ಟಿ.ಯು. ಮುಖಂಡರು ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ನೌಕರರು ದುಡಿಯುತ್ತಿರುವ ಸ್ಥಳಗಳಲ್ಲಿ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೂ ಕೂಡಾ ಇಲಾಖೆಯಿಂದ ಯಾವುದೇ ಭದ್ರತೆಯನ್ನು ನೀಡುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕೆಂಬ ನಿಯಮವಿದ್ದರೂ ಕೂಡಾ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ತಿಂಗಳು ಪೂರ್ತಿ ದುಡಿದರೂ ಕೂಡಾ ನೀಡುವಂತಹ ಗೌರವಧನವನ್ನು ನಿಗದಿತ ಸಮಯದಲ್ಲಿ ನೀಡುತ್ತಿಲ್ಲ. ಪಿಂಚಣಿಯನ್ನು ನಿಲ್ಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ, ಇವೆಲ್ಲವುಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ ೨ ರಂದು ಕರೆ ನೀಡಿರುವ ಮುಷ್ಕರಕ್ಕೆ ಎಲ್ಲಾ ನಾಗರಿಕರು ಸಹಕಾರ ನೀಡಬೇಕು, ಗ್ರಾಮ ಪಂಚಾಯತಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು ಮುಂತಾದವರೆಲ್ಲರೂ ಬೆಂಬಲ ನೀಡಲಿದ್ದೇವೆ ಎಂದರು.
ಮಿಷನ್ ಮೋಡ್ ವಿರೋಧಿಸಿ, 45ನೇ ಐ.ಎಲ್.ಸಿ ಶಿಫಾರಸ್ಸುಜಾರಿಗಾಗಿ ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಗನವಾಡಿ ನೌಕರರ ವಿರೋಧಿ ನೀತಿಗಳ ವಿರುದ್ಧ, ನಿವೃತ್ತಿ ಆದವರಿಗೆ ಇಡಿಗಂಟು ಪೆನ್ಷನ್ ಮುಂದುವರಿಸಲು ಒತ್ತಾಯಿಸಿ ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದರು.
ಸಿ.ಐ.ಟಿ.ಯು. ತಾಲ್ಲೂಕು ಅಧ್ಯಕ್ಷ ಸಿ.ಎಸ್. ಸುದರ್ಶನ್, ಕುಂದಲಗುರ್ಕಿ ವೆಂಕಟೇಶಪ್ಪ, ದ್ಯಾವಪ್ಪ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಾಬಾಜಾನ್, ಸಿ.ಐ.ಟಿ.ಯು ಪ್ರಧಾನಕಾರ್ಯದರ್ಶಿ ಪಿ.ಮಂಜುಳಮ್ಮ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶೇಷ ಪೂಜೆ
ತಾಲೂಕಿನಾದ್ಯಂತ ಕಡೆಯ ಶ್ರಾವಣ ಶನಿವಾರವನ್ನು ಶ್ರದ್ದೆ, ಭಕ್ತಿ ಭಾವದಿಂದ ಆಚರಿಸಲಾಯಿತು.
ಪಟ್ಟಣದ ಕೋಟೆ ಆಂಜನೇಯಸ್ವಾಮಿ, ಕೆ ಎಚ್ ಬಿ ಕಾಲೋನಿಯ ಶನೇಶ್ವರ, ವಿನಾಯಕ ಗಾಯಿತ್ರಿ ದೇವಾಲಯ, ನಗರೇಶ್ವರ ಸ್ವಾಮಿ ದೇವಾಲಯ, ವಾಸವಿ ದೇವಾಲಯ ಸೇರಿದಂತೆ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಹಾಗೆಯೆ ಚಿಕ್ಕದಾಸರಹಳ್ಳಿ ಗುಟ್ಟದ ಮೇಲಿನ ಶ್ರೀವೆಂಕಟರಮಣಸ್ವಾಮಿ, ರಾಮಲಿಂಗನ ಬೆಟ್ಟದ ರಾಮಲಿಂಗೇಶ್ವರ ದೇವಾಲಯ, ಬಶೆಟ್ಟಹಳ್ಳಿ ಸಮೀಪದ ಅನಂತಪದ್ಮನಾಭ ದೇವಾಲಯ, ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿ, ವೀರಾಪುರದ ಶ್ರೀವರಸಿದ್ಧ್ದಿ ವಿನಾಯಕಸ್ವಾಮಿ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆದವು.
ನಗರ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ದೇವಾಲಯಗಳಲ್ಲೂ ವಿಶೇಷ ಹೂವಿನ ಅಲಂಕಾರ ವಿಶೇಷ ಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ತಾಲೂಕು ಮಟ್ಟದ ಕ್ರೀಡಾಕೂಟ
ಕ್ರೀಡಾಪಟುಗಳು ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿದ್ದು ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 2016-17 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗು ಪ್ರೌಡಶಾಲೆಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಳ್ಳುವುದರೊಂದಿಗೆ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿರಬೇಕು. ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಗಮನ ಹರಿಸದೇ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಶಾರೀರಕ ಹಾಗು ಭೌತಿಕ ಬೆಳವಣಿಗೆಯಾಗುತ್ತದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಮಕ್ಕಳನ್ನು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸುವುದರಿಂದ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ ಹಾಗಾಗಿ ದೈಹಿಕ ಶಿಕ್ಷಕರು ಇನ್ನಷ್ಟು ಕ್ರೀಡಾಪಟುಗಳನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ಕ್ರೀಡಾಕೂಟದ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣರೆಡ್ಡಿ ನೆರವೇರಿಸಿದರೆ ಕ್ರೀಡಾ ಕೂಟದ ಧ್ವಜಾರೋಹಣವನ್ನು ಜಿ.ಪಂ ಉಪಾಧ್ಯಕ್ಷೆ ಪಿ. ನಿರ್ಮಲಾಮುನಿರಾಜು ನೆರವೇರಿಸಿದರು.
ಜಿ.ಪಂ ಸದಸ್ಯ ಬಂಕ್ಮುನಿಯಪ್ಪ, ನಗರಸಭೆ ಸದಸ್ಯರಾದ ಅಪ್ಸರ್ಪಾಷ, ವೆಂಕಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ. ಗುರುರಾಜರಾವ್, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀರಾಮಯ್ಯ ಮತ್ತಿತರರು ಹಾಜರಿದ್ದರು.
ಯಾದವ ಕುಲಸ್ಥರಿಂದ ಶ್ರೀಕೃಷ್ಣ ಜನ್ಮಾಷ್ಠಮಿ
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಟಿ.ಬಿ. ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನ ಸೇರಿದಂತೆ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು.
ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಕುದುರೆ ರಥ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಪಟ್ಟಣದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಶ್ರೀ ಕೃಷ್ಣಜಯಂತಿ
ಶ್ರೀಕೃಷ್ಣ ಭರತಖಂಡದ ಐಕ್ಯತೆಗಾಗಿ ಶ್ರಮಿಸಿದ ಮಹಾನುಭಾವ. ಶ್ರೀಕೃಷ್ಣ ಯಾವುದೇ ರಾಜ್ಯದ ರಾಜನಾಗದಿದ್ದರೂ ದೇಶದಲ್ಲಿದ್ದ ಆಗಿನ ಎಲ್ಲಾ ರಾಜರಿಂದಲೂ ಪೂಜಿಸಿಕೊಂಡತÀಹ ಶ್ರೇಷ್ಠ ವ್ಯಕ್ತಿ ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ನಗರದ ತಾಲೂಕು ಕಛೇರಿಯ ಬಳಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಧರ್ಮದ ಸ್ಥಾಪನೆಗಾಗಿ ಅಧರ್ಮದ ಹಾದಿಯಲ್ಲಿದ್ದವರನ್ನೆಲ್ಲಾ ನಾಶ ಮಾಡಿ, ಜಗತ್ತಿಗೆ ಗೀತೆಯನ್ನು ಬೋದಿಸಿ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟಂತಹ ಶ್ರೀಕೃಷ್ಣ ಯಾವುದೇ ಜಾತಿಗೆ ಸೀಮಿತವಾಗಿಲ್ಲ ಬದಲಿಗೆ ಮನುಕುಲಕ್ಕೇ ಸೇರುವಂಥಹ ಶ್ರೇಷ್ಠ ವ್ಯಕ್ತಿ ಎಂದ ಅವರು ಗೀತೆಯ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವುದು ಸಮಾಜದ ಏಳಿಗೆಗೆ ಅತ್ಯಗತ್ಯ ಎಂದು ಹೇಳಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ತಾ.ಪಂ ಇಓ ವೆಂಕಟೇಶ್, ತಾ.ಪಂ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಡಿ.ಟಿ. ಸತ್ಯನಾರಾಯಣರಾವ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ. ಕೇಶವಮೂರ್ತಿ, ಮುಖಂಡರಾದ ಜಗ್ಗಪ್ಪ, ಎಸ್.ಎ. ನಾರಾಯಣಸ್ವಾಮಿ, ಮತ್ತಿತರರು ಹಾಜರಿದ್ದರು.
ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆ ಅವಶ್ಯಕ
ಗ್ರಾಮೀಣ ಪ್ರದೇಶಗಳ ಅಭಿವೃದ್ಧ್ದಿಯಲ್ಲಿ ಯಾವುದೇ ರಾಜಕೀಯ ಬೆರಸದೇ ಗ್ರಾಮಗಳ ಏಳಿಗೆಗಾಗಿ ಎಲ್ಲರೂ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ನಟರಾಜ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಿ ಸೇವೆಯಲ್ಲಿರುವವರು ಮೊದಲು ಸಂವಿಧಾನದಲ್ಲಿ ನಮಗಿರುವ ಮೂಲಭೂತ ಹಕ್ಕುಗಳು ಹಾಗು ಕರ್ತವ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳುವ ಮೂಲಕ ನಾಗರೀಕರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು.
ಮಾನವನ ಜೀವನದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ನಮ್ಮ ಸುತ್ತ ಮುತ್ತಲಿನ ಪರಿಸರ ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದ ಅವರು ಮಾನವನ ಅತಿಯಾಸೆಯ ಫಲವಾಗಿ ಪರಿಸರ ನಾಶವಾಗುತ್ತಿದ್ದು ಸಕಾಲದಲ್ಲಿ ಮಳೆಯಾಗದೇ ಹವಾಮಾನ ವೈಪರೀತ್ಯವುಂಟಾಗಿ ಜನರ ಜೀವನ ತುಂಬಾ ಕಷ್ಟಕರವಾಗಿ ರೂಪಗೊಂಡಿದೆ ಹಾಗಾಗಿ ಈಗಲಾದರೂ ಎಚ್ಚೆತ್ತುಕೊಂಡು ಪರಿಸರ ರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದರು.
ನಮ್ಮ ಪೂರ್ವಜರಿಗೆ ಮುಂದಿನ ಫೀಳಿಗೆಯ ಮೇಲಿದ್ದ ಕಾಳಜಿಯಿಂದ ಕೆರೆ, ಕುಂಟೆ, ಬಾವಿ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆದರೆ ಈಗಿನವರು ಅವನ್ನೆಲ್ಲಾ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣ ಮಾಡುವುದರಿಂದ ನೀರಿನ ಸಂಗ್ರಹಣೆ ಮಾಡಲಾಗದೇ ಈಗಾಗಲೇ ಜಿಲ್ಲೆಯಾಧ್ಯಂತ 1500-2000 ಅಡಿ ಆಳದ ಕೊಳವೆ ಬಾವಿಯ ವಿಷಪೂರಿತ ನೀರು ಸೇವಿಸುವಂತಾಗಿದೆ.
ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲಿನ ಪರಿಸರ ಉಳಿಸುವ ಜೊತೆಗೆ ನೀರಿನ ಬಳಕೆಯನ್ನು ಮಿತವಾಗಿ ಮಾಡಬೇಕು. ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಇದೀಗ ಸಾಕಷ್ಟು ಅಧಿಕಾರ ನೀಡಿದ್ದು ಗ್ರಾಮಕ್ಕೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು. ಹಾಗಾಗಿ ಗ್ರಾ.ಪಂ ಅಭಿವೃದ್ಧ್ದಿ ಅಧಿಕಾರಿಗಳು ಸೇರಿದಂತೆ ಕಾರ್ಯದರ್ಶಿಗಳು ಪಂಚಾಯತ್ ರಾಜ್ ಕಾಯಿದೆಯನ್ನು ಸಮಗ್ರವಾಗಿ ತಿಳಿದುಕೊಂಡು ಸರಕಾರಿ ಸ್ಥಳ ಸೇರಿದಂತೆ ಗ್ರಾಮದ ಕೆರೆ, ಕುಂಟೆ, ಗೋಕುಂಟೆ, ಗೋಮಾಳ ಕಲ್ಯಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಯಾರದೋ ಒತ್ತಡಗಳಿಗೆ ಮಣಿದು ಸರಕಾರಿ ಸ್ಥಳವನ್ನು ಬೇರೊಬ್ಬರಿಗೆ ಖಾತೆ ಮಾಡಿ ಕೊಡುವುದಾಗಲಿ ಕೆರೆ ಕುಂಟೆ ಒತ್ತುವರಿ ಮಾಡಿರುವವರ ರಕ್ಷಣೆಗೆ ನಿಂತಲ್ಲಿ ಕಾನೂನು ಪ್ರಕಾರ ತಾವು ಶಿಕ್ಷ ಅನುಭವಿಸಬೇಕಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ. ಪಾಪಿರೆಡ್ಡಿ ಮಾತನಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಈಗ ಕೇಂದ್ರ ಹಾಗು ರಾಜ್ಯ ಸರಕಾರ ಸಂಪೂರ್ಣ ಸವಲತ್ತು ನೀಡಿದ್ದು ಅಧಿಕಾರಿಗಳು ಬದ್ದತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ಪಂಚಾಯತ್ ರಾಜ್ ಕಾಯಿದೆಯನ್ವಯ ಹಾಗೂ ಸ್ಥಳೀಯ ಜನಪ್ರತಿನಿಧಗಳ ಸಹಕಾರ ಪಡೆದುಕೊಂಡು ತಾಲೂಕಿನ 28 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸಲು ಶ್ರಮಿಸಬೇಕು ಎಂದರು.
ವಕೀಲರಾದ ಎಂ.ಬಿ. ಲೋಕೇಶ್ ಪಂಚಾಯತ್ ರಾಜ್ ಕಾಯಿದೆ ಹಾಗು ರಾಷ್ಟ್ರೀಯ ಸಂಪನ್ಮೂಲಗಳ ರಕ್ಷಣೆ ಕುರಿತು ಮಾತನಾಡಿ, ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಎರಡು ರೀತಿಯ ಸಂಪನ್ಮೂಲಗಳಿದ್ದು ನವೀಕರಸಲಾಗುವ ಸಂಪನ್ಮೂಲ ಹಾಗು ನವೀಕರಿಸಲಾಗದ ಸಂಪನ್ಮೂಲಗಳು ಎಂದು ವಿಂಗಡಿಸಲಾಗಿದೆ.
ಬೆಳಕು, ಗಾಳಿ, ನೀರು ನವೀಕರಸಲಾಗುವ ಸಂಪನ್ಮೂಲಗಳಾಗಿದ್ದು ಇವನ್ನು ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ನವೀಕರಿಸಕೊಳ್ಳಬಹುದು ಆದರೆ ಭೂಮಿಯಲ್ಲಿನ ಖನಿಜ ಸಂನ್ಮೂಲಗಳು ನವೀಕರಿಸಲಾಗದ ಸಂಪನ್ಮೂಲವಾಗಿದ್ದು ಮನುಷ್ಯನ ಅತಿ ಆಸೆ ಹಾಗು ಬಳಕೆಯಿಂದ ರಾಷ್ಟ್ರೀಯ ಸಂಪನ್ಮೂಲ ಬರಿದಾಗುತ್ತಿದ್ದು ಇದರ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಗೆ ಹೆಚ್ಚೆನ ಅಧಿಕಾರ ನೀಡಲಾಗಿದೆ.
ಪಂಚಾಯತ್ ರಾಜ್ ಕಾಯಿದೆಯಡಿ ಸರಕಾರ ಗ್ರಾಮ ಪಂಚಾಯಿತಿಗಳಿಗೆ ಹಲವಾರು ಕಾನೂನುಗಳನ್ನು ರೂಪಿಸಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳನ್ನು ರಕ್ಷಣೆ ಮಾಡುವುದು ಸೇರಿದಂತೆ ಗಣಿಗಾರಿಕೆ ನಿಷೇಧದ ಬಗ್ಗೆ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಹಿತ್ತಲಹಳ್ಳಿಯ ರೈತ ಹೆಚ್.ಎಂ. ಸುರೇಶ್ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ .ಎನ್.ಎ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್. ಸಂದೀಶ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್. ಕುಮುದಿನಿ, ತಹಸೀಲ್ದಾರ್ ಕೆ.ಎಂ. ಮನೋರಮಾ, ತಾ.ಪಂ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಸಿಡಿಪಿಓ ಲಕ್ಷ್ಮಿದೇವಮ್ಮ, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲ ಮಂಜುನಾಥ್, ಇನ್ನಿತರರು ಹಾಜರಿದ್ದರು.
ಪಾರ್ವತಿದೇವಿ ಮತ್ತು ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ
ನಗರದ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿಯ ವತಿಯಿಂದ ಪಾರ್ವತಿದೇವಿ ಮತ್ತು ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ ಮತ್ತು ವಾರ್ಷಿಕೋತ್ಸವವನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪುರಾಣ ಪ್ರಸಿದ್ಧ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರದಿಂದ ಗುರುವಾರದವರೆಗೆ ಮೂರು ದಿನಗಳ ಕಾಲ ನಡೆಯುವ ಪೂಜಾ ಮಹೋತ್ಸವದಲ್ಲಿ ನಗರ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಪಾಲ್ಗೊಂಡರು.
ಮುಂಜಾನೆಯಿಂದ ಪ್ರಾರಂಭಗೊಂಡ ಪೂಜಾ ಕಾರ್ಯಕ್ರಮದಲ್ಲಿ ಅಗ್ರೋದಕ, ಗಂಗಾಪೂಜೆ, ಗ್ರಾಮ ಪ್ರದಕ್ಷಿಣೆ, ಗಣಪತಿ ಪೂಜೆ, ಸ್ವಸ್ತಿವಾಚನ ನಾಂದಿ, ಋತ್ವಿಕ್ ವರಣ, ಪಂಚಗವ್ಯ ಪ್ರಾಸನ, ರಕ್ಷಾಬಂಧನ, ಅಸ್ರರಾಜಪೂಜೆ, ನವಗ್ರಹಪೂಜೆ, ಪ್ರಧಾನ ಕಳಶಗಳ ಪೂಜೆ, ಗಣ ಹೋಮ, ವಾಸ್ತು ಹೋಮ, ನವಗ್ರಹಹೋಮ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ರುದ್ರಾಭಿಷೇಕದ ನಂತರ ಪಾರ್ವತಿದೇವಿ ಮತ್ತು ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ ದೇವರ ಮೆರವಣಿಗೆ ಮತ್ತು ಶಯನೋತ್ಸವವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿಯ ಅಧ್ಯಕ್ಷ ಕೆ.ಆರ್.ಶಿವಶಂಕರ್, ಕಾರ್ಯದರ್ಶಿ ವಿನಾಯಕ, ಉಪಾಧ್ಯಕ್ಷ ನಾಗರಾಜ್, ಮಂಜುನಾಥ್, ಮಲ್ಲಿಕಾರ್ಜುನ, ದೇವರಾಜು, ಮಹಿಳಾ ಮಂಡಳಿ ಸದಸ್ಯರು ಮತ್ತಿತರರು ಹಾಜರಿದ್ದರು.
ಬಿಜೆಪಿ ಘಟಕದಿಂದ ಮನವಿ
ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಘಟಕದಿಂದ ಬುಧವಾರ ತಹಶೀಲ್ದಾರ್ ಮನೋರಮಾ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಬೆಂಗಳೂರಿನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದರು. ಇದನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಘಟಕದ ಸದಸ್ಯರು ರಾಜ್ಯಪಾಲರಿಗೆ ತಲುಪಿಸುವಂತೆ ತಹಶೀಲ್ದಾರರಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಅವರು ರಾಜ್ಯ ಸರ್ಕಾರ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಗೆ ನೀಡಿರುವ ರಕ್ಷಣೆಯು ತಾರತಮ್ಯ ಧೋರಣೆ ಎಂದು ಆರೋಪಿಸಿದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್, ಮಂಜುಳಮ್ಮ, ದಾಮೋದರ್, ಪುರುಷೋತ್ತಮ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಓದಿನ ಜತೆಗೆ ಕ್ರೀಡೆ, ಕಲೆ ಅಗತ್ಯ
ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಪ್ರತಿಭಾವಂತರಾಗಲು ಸಾಧ್ಯವಾಗುತ್ತದೆ ಎಂದು ಜಂಗಮಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಹಮತ್ ಜಾನ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಂಗಮಕೋಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಯ ಅಭಿವ್ಯಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುವುದಕ್ಕಾಗಿ ನಡೆಸುವ ಪ್ರತಿಭಾ ಕಾರಂಜಿ ಶಿಕ್ಷಣ ಇಲಾಖೆಯ ಮಹತ್ವದ ಕಾರ್ಯಕ್ರಮವಾಗಿದೆ. ಶಿಕ್ಷಕರು ಮಕ್ಕಳ ಪ್ರತಿಭೆಯನ್ನು ಶಾಲಾ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸಿದರೆ ಭವಿಷ್ಯದ ದಿನಗಳಲ್ಲಿ ಅಭಿರುಚಿ ಇರುವ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಂಗಮಕೋಟೆ ಕ್ಲಸ್ಟರ್ನ 16 ಶಾಲೆಗಳಿಂದ 450 ಮಂದಿ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿವಿಧ ಶಾಲೆಗಳ 70 ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು.
ಸಿ.ಆರ್.ಪಿ ಸುಂದರಾಚಾರಿ, ಎಸ್ಡಿಎಂಸಿ ಅಧ್ಯಕ್ಷರಾದ ಹೊಸಪೇಟೆ ಪಾಪಣ್ಣ, ಬಳುವನಹಳ್ಳಿ ಬಾಬು, ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ರಘು, ಶಿಕ್ಷಕರಾದ ಮುನಿರತ್ನಮ್ಮ, ಗೀತಾ, ರುದ್ರೇಶಮೂರ್ತಿ, ವೇಣು, ಮಾಧವಿ, ಬೈರಾರೆಡ್ಡಿ, ಸುಮಾ, ಈರಯ್ಯ ಮತ್ತಿತರರು ಹಾಜರಿದ್ದರು.
ರೈತರಿಂದ ರಸ್ತೆ ತಡೆ
ತಾಲ್ಲೂಕಿನ ಬಚ್ಚಹಳ್ಳಿ ಮತ್ತು ಬೊಮ್ಮನಹಳ್ಳಿ ಗೇಟ್ ಬಳಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರೈತರ ಬೆಳೆ ನಾಶವಾಗುತ್ತಿದೆ ಎಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ರಾಜ್ಯ ರಸ್ತೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಿಪರೀತ ಧೂಳಿನಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ಬೆಳೆ ನಾಶವಾಗುತ್ತಿದೆ. ರೈತರ ಲಕ್ಷಾತರ ರೂಗಳ ಬೆಳೆ ಹಾಳಾಗುತ್ತಿದೆ. ಸೂಕ್ತ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದೆ, ವಿಳಂಬವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ರೈತರು ಕಿಡಿಕಾರಿದರು.
ಗೌರಿಬಿದನೂರಿನಿಂದ ಶ್ರೀನಿವಾಸಪುರದವರೆಗೆ ರಾಷ್ಟ್ರೀಯ ಹೆದ್ದಾರಿ 234 ರ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕೆರೆ ಮಣ್ಣನ್ನು ತಂದು ಸುರಿದ ಕಾರಣ ರಸ್ತೆಯೆಲ್ಲಾ ಧೂಳುಮಯವಾಗಿ ಹಗಲಿನಲ್ಲೂ ದೀಪ ಉರಿಸಿಕೊಂಡು ಸಾಗಬೇಕಾಗಿದೆ. ಶಿಡ್ಲಘಟ್ಟ ಮತ್ತು ಚಿಂತಾಮಣಿಯ ನಡುವಿನ ಈ ಕೆಟ್ಟ ಕಾಮಗಾರಿಯಿಂದಾಗಿ ನಾಲ್ಕು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿದರು.
ಅತ್ಯಲ್ಪ ನೀರಿನಲ್ಲಿ ಈ ಭಾಗದ ರೈತರು ಕಷ್ಟಪಟ್ಟು ರೇಷ್ಮೆ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಈ ರಸ್ತೆಯ ಧೂಳಿನಿಂದ ಹಿಪ್ಪುನೇರಳೆ ಸೊಪ್ಪು ಪ್ರಯೋಜನಕ್ಕೆ ಬಾರದಂತಾಗಿದೆ. ಈ ಸೊಪ್ಪು ದನದ ಮೇವಿಗೂ ಉಪಯುಕ್ತವಾಗಿಲ್ಲ. ರೈತರ ಈ ನಷ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ಕೊಡಿಸಬೇಕೆಂದು ಪಟ್ಟುಹಿಡಿದರು. ತಲದುಮ್ಮನಹಳ್ಳಿಯಲ್ಲಿ ಪೈಪ್ಲೈನ್ ಕತ್ತರಿಸಲಾಗಿದೆ. ಇದರಿಂದ ಜನರಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಿಂದ ಕೆಲ ಕಾಲ ರಸ್ತೆ ಸಂಚಾರ ನಿಂತು ಹೋಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಬೇಕೆಂದು ಪಟ್ಟುಹಿಡಿದ ರೈತರನ್ನು ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ಸಮಾಧಾನ ಹೇಳಿ ಠಾಣೆಯಲ್ಲಿ ಕರೆಸಿ ಮಾತನಾಡೋಣ ಎಂದು ಮನವೊಲಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಟಿ.ಕೃಷ್ಣಪ್ಪ, ಆನೂರು ದೇವರಾಜು, ತಲದುಮ್ಮನಹಳ್ಳಿ ದೇವರಾಜು, ಪ್ರಭಾಕರ್, ರವಿ, ಕೆಂಪರೆಡ್ಡಿ, ಸೊಣ್ಣೇಗೌಡ, ಮುನಿರಾಜು, ಬಚ್ಚಹಳ್ಳಿ ಶ್ರೀನಿವಾಸ್, ಗೋವಿಂದಪ್ಪ, ಮುನಿಶಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

