Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವನಪರ್ತಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಾಟಿ ಮಾಡಿದ್ದ ಸುಮಾರು 180 ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಕೊಡಲಿಯಿಂದ ಕತ್ತರಿಸಿ ಹಾಕಲಾಗಿದೆ. ಶಂಕರ್ ಅವರಿಗೆ ಸೇರಿದ ಮಾವಿನ ತೋಟದಲ್ಲಿ ಈ ಘಟನೆ ನಡೆದಿದೆ.
ರೈತ ಶಂಕರ್ ಅವರು ಮೂರು ಎಕರೆ ಜಮೀನಿನಲ್ಲಿ 350 ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಎರಡು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ್ದಾರೆ. ಒಂದೊಂದು ಸಸಿಯಲ್ಲಿ ಈ ವರ್ಷ ಮಾವಿನ ಕಾಯಿ ಕೂಡ ಕಾಣಿಸಿಕೊಂಡಿದೆ.
ಈ ಜಮೀನಿನಲ್ಲಿ ನನಗೂ ಭಾಗ ಬೇಕೆಂದು ನರಸಿಂಹಪ್ಪ ತಗಾದೆ ತೆಗೆದಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಶಂಕರ್ ಮತ್ತು ನರಸಿಂಹಪ್ಪ ಅವರು ದಾಯಾದಿಗಳಾಗಿದ್ದು ಜಮೀನಿನ ಭಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವೈಷಮ್ಯವಿದೆ. ಈ ಹಿನ್ನಲೆಯಲ್ಲಿ ನರಸಿಂಹಪ್ಪನೇ ಮಾವಿನ ಸಸಿಗಳನ್ನು ರಾತ್ರೋ ರಾತ್ರಿ ಕತ್ತರಿಸಿ ಹಾಕಿದ್ದಾನೆ ಎಂದು ಶಂಕರ್ ಅವರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಆದರೆ ಪೊಲೀಸರು ಈ ಜಮೀನಿನ ವಾರಸುದಾರರು ಮೃತಪಟ್ಟಿದ್ದು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೂರು ತೆಗೆದುಕೊಳ್ಳದೆ ನನ್ನನ್ನು ವಾಪಸ್ ಕಳುಹಿಸಿದರು ಎಂದು ಶಂಕರ್ ಅಸಮಾಧಾನ ವ್ಯಕ್ತಪಡಿಸಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದ್ದಾರೆ.
Sidlaghatta : ಹಕಾರಿ ವ್ಯವಸ್ಥೆಯು ನೆನ್ನೆ ಮೊನ್ನೆ ಹುಟ್ಟಿದ್ದಲ್ಲ. ಈ ಭೂಮಿ ಮೇಲೆ ಮನುಷ್ಯ ಹುಟ್ಟಿದಾಗಿನಿಂದಲೂ ಸಹಕಾರಿ ವ್ಯವಸ್ಥೆಯು ಒಂದಲ್ಲ ಒಂದು ರೂಪದಲ್ಲಿ ಬಂದಿದೆ. ಕಳೆದ ಹಲವು ವರ್ಷಗಳಿಂದ ಒಂದು ವ್ಯವಸ್ಥೆಯ ರೂಪ ಪಡೆದಿದೆ ಎಂದು KMF ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಗರದ KOCHIMUL ಶಿಬಿರ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ಸಹಕಾರಿ ವ್ಯವಸ್ಥೆಯು ಬಲಿಷ್ಠವಾಗಿ ಬೆಳೆದಿದ್ದು ಗ್ರಾಮೀಣ ಭಾಗದಲ್ಲಿ ರೈತರು, ಕೃಷಿಯ ಅಭಿವೃದ್ದಿಗೆ ಪೂರಕವಾಗಿದೆ. ಕೊರೊನಾದಂತ ಸಂಕಷ್ಟ ಕಾಲದಲ್ಲೂ ಸಹಕಾರಿ ವ್ಯವಸ್ಥೆಯ ಹೈನುಗಾರಿಕೆ ಕೆಲಸ ನಿಂತಿರಲಿಲ್ಲ. ಇದು ಸಹಕಾರಿ ವ್ಯವಸ್ಥೆಯ ಅನಿವಾರ್ಯ, ಪ್ರಭಾವವನ್ನು ಸೂಚಿಸುತ್ತದೆ ಎಂದರು.
ಡೇರಿಗಳು ಇಂದು ಆಯಾ ಗ್ರಾಮದಲ್ಲಿ ರೈತರು, ಹೈನುಗಾರರ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಾಗಾಗಿ ಡೇರಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಿಇಒ ಅವರು ಪಕ್ಷಾತೀತಿ, ಜಾತ್ಯಾತೀತವಾಗಿ ಕೆಲಸ ಮಾಡಬೇಕು, ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದರು.
ಈ ನಿಟ್ಟಿನಲ್ಲಿ ನಡೆಯುತ್ತಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ, ತಮ್ಮ ಕಾರ್ಯದಲ್ಲಿ ಇನ್ನಷ್ಟು ಕಾರ್ಯಪರತೆಯನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಜಿಲ್ಲಾ ಯೂನಿಯನ್ನಿಂದ ಈ ವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಹಕಾರ ಸಂಘಗಳ ಕಟ್ಟಡದ ಬಳಿ ಜಾಗ ಇಲ್ಲದಿದ್ದಲ್ಲಿ ಸರಕಾರಿ ಶಾಲಾ ಆವರಣದಲ್ಲಾಗಲಿ ಸಸಿಗಳನ್ನು ನೆಡುವ ಕಾರ್ಯವನ್ನು ನಡೆಸಲಿದ್ದೇವೆ ಎಂದು ಹೇಳಿದರು.
ತಾಲ್ಲೂಕಿನ ಕೆಲ ಡೇರಿಗಳಿಂದ ಸಹಕಾರ ಶಿಕ್ಷಣ ನಿಧಿಯ ಚೆಕ್ ನ್ನು ಸಹಕಾರ ಮಹಾ ಮಂಡಳ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
DCC ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ಸ್ಕೂಲ್ ನಾಗರಾಜ್, ಜಿಲ್ಲಾ ಯೂನಿಯನ್ ನಿರ್ದೇಶಕ ಎಂ.ಮುರಳಿ, ತಿಪ್ಪೇನಹಳ್ಳಿ ಟಿ.ಎಲ್.ಅಂಬರೀಷ್, ಪಿ.ಎನ್.ವೇಣುಗೋಪಾಲ್, ಚನ್ನಬೈರೇಗೌಡ, ಸುರೇಂದ್ರರೆಡ್ಡಿ, ಚಿಮುಲ್ನ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ಜಿಲ್ಲಾ ಯೂನಿಯನ್ನ ಸಿಇಒ ಅಮೃತ ಬಿಸನಾಳ, ಸಹಕಾರ ಶಿಕ್ಷಕ ಎನ್.ನಾಗಭೂಷಣ್, ವ್ಯವಸ್ಥಾಪಕ ಬಿ.ವಿ.ಪ್ರದೀಪ್, ವಿಸ್ತರಣಾಧಿಕಾರಿಗಳಾದ ಜಯಚಂದ್ರ, ವಿ.ಶ್ರೀನಿವಾಸ್, ಕೆ.ನಾರಾಯಣಸ್ವಾಮಿ, ಶಂಕರ್ ಕುಮಾರ್, ಶಶಿಕುಮಾರ್ ಹಾಜರಿದ್ದರು.
Sidlaghatta : ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಯಾರೇ ಜನಪ್ರತಿನಿಧಿಗಳು ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಲಿದೆ. ಜನ ಸಾಮಾನ್ಯರ ನಾಡಿ ಮಿಡಿತ ಅರಿತವನು ಮಾತ್ರ ಉತ್ತಮ ನಾಯಕನಾಗಲು ಸಾಧ್ಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯ ವೀರಾಪುರ ಗ್ರಾಮದ ಶ್ರೀಗವಿಗುಟ್ಟ ಗಂಗಾಧರೇಶ್ವರಸ್ವಾಮಿ ದೇವಾಲಯ ಆವರಣದಲ್ಲಿನ ಸಮುದಾಯ ಭವನದ ಆವರಣದಲ್ಲಿ ಕೈಗೊಳ್ಳುವ ಮೂಲ ಸೌಕರ್ಯ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ, ಡೇರಿ, ಕುಂಟೆ, ಕಾಲುವೆ, ಸಮುದಾಯ ಭವನದಂತ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಿ, ಅಭಿವೃದ್ದಿಪಡಿಸುವ ಕಾರ್ಯಕ್ಕೆ ಎಲ್ಲರೂ ಕೂಡ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಗವಿಗುಟ್ಟ ಗಂಗಾಧರೇಶ್ವರಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಈಗಾಗಲೆ ವಾಯು ವಿಹಾರಿಗಳಿಗೆ ಅನುಕೂಲ ಆಗುವಂತ ಪಾದಚಾರಿ ಮಾರ್ಗ ನಿರ್ಮಿಸಿದೆ. ಬದುಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಗ್ರಾಮಸ್ಥರೆಲ್ಲರೂ ಸೇರಿ ಈ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು ಇನ್ನು ಮುಂದೆಯೂ ಎಲ್ಲರೂ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರ ನಿಧಿಯ ಅನುದಾನದಿಂದ ಸಮುದಾಯ ಭವನ ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದು ಎಲ್ಲರೂ ಕೈ ಜೋಡಿಸಬೇಕೆಂದು ಗ್ರಾಮಸ್ಥರಲ್ಲಿ ಕೋರಿದರು.
ಗ್ರಾಮದ ಹಿರಿಯರಾದ ಸುಬ್ಬರಾಯಪ್ಪ ಅವರು ಸಮುದಾಯ ಭವನದ ಆವರಣದಲ್ಲಿನ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಪಿಡಿಒ ಸುಧಾಮಣಿ, ಮುಖಂಡರಾದ ಬಿ.ಮುನಿರೆಡ್ಡಿ, ರೈತ ಸಂಘದ ಮುನಿನಂಜಪ್ಪ, ವಿನಾಯಕಸ್ವಾಮಿ ಅಭಿವೃದ್ದಿ ಟ್ರಸ್ಟ್ ನ ಸಿ.ರಾಮು, ವಿ.ಆರ್.ಗಣೇಶ್, ಗುತ್ತಿಗೆದಾರ ಬಿ.ಎ.ಲಕ್ಷ್ಮೀಪತಿ, ಡೇರಿ ಮಾಜಿ ಅಧ್ಯಕ್ಷ ಇ.ಸುಬ್ರಮಣಿ, ಡೇರಿ ಸತ್ಯ, ದೇವಪ್ಪ, ಬೂದಾಳ ಶ್ರೀನಿವಾಸ್, ಮುನಿಶಾಮಿರೆಡ್ಡಿ, ಆರ್.ಶ್ರೀನಿವಾಸ್, ಕೈಯ್ಯಪ್ಪ, ಭೂಮಿಕೇಶವ, ಅರ್ಚಕ ಆದಿರೆಡ್ಡಿ ಹಾಜರಿದ್ದರು.
Sidlaghatta: ಶಿಡ್ಲಘಟ್ಟ ನಗರದ MRS ಸರ್ಕಲ್ ನಲ್ಲಿರುವ ಜಶ್ವಿನ್ ಫಿಟ್ನೆಸ್ ಜಿಮ್ ನ ವಿದ್ಯಾರ್ಥಿ ವಿಜಯ್ ಗೌಡ ಅವರು ಬೆಂಗಳೂರಿನಲ್ಲಿ ನಡೆದ ಐಸಿಎನ್ ರಾಯಲ್ಸ್ ದೇಹದಾರ್ಢ್ಯ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಪಡೆದಿದ್ದಾರೆ.
ಪುರುಷರ ಫಿಟ್ನೆಸ್ ವಿಭಾಗದಲ್ಲಿ, ಯಾವುದೇ ರೀತಿಯಲ್ಲಿ ಸ್ಟೀರಾಯ್ಡ್ ಬಳಸದೇ ನೈಸರ್ಗಿಕವಾಗಿ ದೇಹದಾರ್ಢ್ಯ ಹೊಂದಿರುವವರನ್ನು ಪರಿಗಣಿಸಿದ್ದ ಸ್ಪರ್ಧೆಯಲ್ಲಿ ಶಿಡ್ಲಘಟ್ಟದ ಸ್ಪರ್ಧಿ ವಿಜಯ್ ಗೌಡ ಪ್ರಥಮ ಸ್ಥಾನ ಪಡೆದಿರುವುದು ನಮ್ಮ ತಾಲ್ಲೂಕಿಗೇ ಹೆಮ್ಮೆ. ಆನೂರು ಗ್ರಾಮದವರಾದ ವಿಜಯ್ ಗೌಡ ಅವರು ನಮ್ಮ ಜಿಮ್ ನಲ್ಲಿ ಎರಡು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದು, ಒಳ್ಳೆಯ ಆಹಾರ, ನಿಯಮಿತ ವ್ಯಾಯಾಮ ಮತ್ತು ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ ಎಂದು ತರಬೇತುದಾರರಾದ ವಿನಯ್ ಕುಮಾರ್ ಮತ್ತು ಕಾರ್ತಿಕ್ ತಿಳಿಸಿದ್ದಾರೆ.
ನ್ಯಾಚುರಲ್ ಬಾಡಿಬಿಲ್ಡಿಂಗ್ (ಸಹಜ ವ್ಯಾಯಾಮ, ಅಂಗಸೌಷ್ಠವ) ಪದ್ಧತಿಗೆ ನಮ್ಮಲ್ಲಿ ಒತ್ತು ನೀಡುತ್ತಿದ್ದೇವೆ. ಆರೋಗ್ಯಕ್ಕಾಗಿ ವ್ಯಾಯಾಮ ಮಾಡಬೇಕು. ಒಳ್ಳೆಯ ಆಹಾರ ಪದ್ಧತಿ ರೂಡಿಸಿಕೊಳ್ಳಬೇಕು. ಈ ರೀತಿಯಾಗಿ ದೇಹದಾರ್ಢ್ಯ ಹೊಂದಿರುವವರು ಮಾತ್ರ ಸ್ಪರ್ಧೆಗಳಿಗೆ ಅರ್ಹತೆ ಪಡೆಯುತ್ತಾರೆ ಎಂದು ಅವರು ಹೇಳಿದರು.
Sidlaghatta : ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಎನ್.ಸ್ವಾಮಿ ವರ್ಗಾವಣೆಯಾದ ಹಿನ್ನಲೆಯಲ್ಲಿ ಶಿಡ್ಲಘಟ್ಟ ನೂತನ ತಹಸೀಲ್ದಾರ್ ಆಗಿ ಕುಮಾರಿ ಎನ್.ಗಗನ ಸಿಂಧು. ಬುಧವಾರ ಅಧಿಕಾರ ವಹಿಸಿಕೊಂಡು ಕಾರ್ಯಾರಂಭ ಮಾಡಿದ್ದಾರೆ.
ಈ ಹಿಂದೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಬುಧವಾರ ಶಿಡ್ಲಘಟ್ಟ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೂತನ ತಹಸೀಲ್ದಾರ್ ಗಗನ ಸಿಂಧು.ಎನ್ ರಿಗೆ ನಿರ್ಗಮಿತ ತಹಸೀಲ್ದಾರ್ ಬಿ.ಎನ್.ಸ್ವಾಮಿ ಸ್ವಾಗತಿಸಿ ಅಧಿಕಾರ ಹಸ್ತಾಂತರ ಮಾಡಿದರು.
Sidlaghatta : ಭಾರತ ದೇಶದ ಮುಕುಟ ಮಣಿ ಜಮ್ಮು ಮತ್ತು ಕಾಶ್ಮೀರದಲ್ಲಿ 371 ವಿಶೇಷ ಕಾಯಿದೆಯ ಸ್ಥಾನಮಾನವನ್ನು ರದ್ದುಪಡಿಸಬೇಕೆಂದು ನಡೆದ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದವರು ಶ್ಯಾಂ ಪ್ರಸಾದ್ ಮುಖರ್ಜಿ. ಅವರದ್ದು ದೂರದೃಷ್ಟಿಯ ನಾಯಕತ್ವ, ಆಲೋಚನೆಯಾಗಿತ್ತು ಎಂದು BJP ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಆಚರಣೆಯಲ್ಲಿ ಅವರು ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ 371 ನೇ ಕಾಯಿದೆಯಿಂದ ದೇಶದ ಅಭಿವೃದ್ದಿಗೆ ಮಾರಕವಾಗುತ್ತಿದೆ. ಸೌಹಾರ್ಧತೆಗೆ ದಕ್ಕೆಯಾಗುತ್ತಿದೆ. ಮುಖ್ಯವಾಗಿ ಅಸಮಾನತೆಯ ಹೊಗೆ ಹೆಚ್ಚುತ್ತಿದೆ ಎಂದು 371 ನೇ ವಿಧಿಯನ್ನು ರದ್ದುಪಡಿಸಬೇಕೆಂದು ದೇಶದ ಉದ್ದಗಲಕ್ಕೂ ಹೋರಾಟ ಆರಂಭವಾಯಿತು.
ನೆಹರೂ ಅವರು ಪ್ರಧಾನಿ ಆಗಿದ್ದಾಗ ಆರಂಭವಾದ ಈ ಹೋರಾಟದ ಮುಂಚೂಣಿಯ ನಾಯಕರಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿ ಪ್ರಮುಖರಾಗಿದ್ದು ಅವರನ್ನು ಬಂಧಿಸಲಾಯಿತು. ಆನಂತರ ಅವರು ಏನಾದರು ಎಂದು ಈ ಕ್ಷಣಕ್ಕೂ ಯಾರಿಗೂ ಗೊತ್ತಿಲ್ಲ. ನಿಗೂಢವಾಗಿಯೆ ಇದೆ ಎಂದರು.
ಈ ದಿನವನ್ನು ಬಲಿದಾನ್ ದಿವಸ್ ಆಗಿ ಆಚರಿಸಿ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಬದಕು, ಜೀವನವನ್ನು ಸ್ಮರಿಸುವ ಕೆಲಸ ದೇಶದ ಉದ್ದಗಲಕ್ಕೂ ಆಗುತ್ತಿದೆ ಎಂದು ವಿವರಿಸಿದರು
ಮೋದಿ ಅವರು ಬಂದಾದ ನಂತರ ಜಮ್ಮು ಕಾಶ್ಮೀರಕ್ಕೆ ಮಾತ್ರ ನೀಡಿದ್ದ ವಿಶೇಷ ಕಾಯಿದೆಯನ್ನು ರದ್ದುಪಡಿಸಿ ಇಡೀ ದೇಶದ ಎಲ್ಲ ರಾಜ್ಯಗಳು, ಎಲ್ಲ ಜನರೂ ಒಂದೆ ಎಂದು ಸಂದೇಶವನ್ನು ನೀಡಿದರು. ಇದನ್ನು ಎಲ್ಲರೂ ಮನಗಾಣಬೇಕು. ಆ ಮೂಲಕ ಶ್ಯಾಂ ಪ್ರಸಾದ್ ಮುಖರ್ಜಿ ಅವರ ಆಸೆ ಈಡೇರಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
Sidlaghatta : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಪ್ರಕಾರದ ಕೆಲಸಗಳಿಗೆ ಬಳಸುವುದು ಕಾನೂನಾತ್ಮಕ ಅಪರಾಧವೆಂದು ಶಿಡ್ಲಘಟ್ಟ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ರವರು ಹೇಳಿದರು
ತಾಲ್ಲೂಕು ಕಾನೂನು ಸೇವಾ ಸಮಿತಿ ಶಿಡ್ಲಘಟ್ಟ, ವಕೀಲರ ಸಂಘ ಶಿಡ್ಲಘಟ್ಟ, ಕಂದಾಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಇಂಟಿಗ್ರೇಟರ್ ವೆಲ್ ಫೇರ್ ಫೌಂಡೇಶನ್ ಶಿಡ್ಲಘಟ್ಟ ಇವರ ಸಂಯುಕ್ತಾಶ್ರಯದಲ್ಲಿ ಸಂತೋಷ್ ನಗರದಲ್ಲಿರುವ ಸರ್ಕಾರಿ ಉರ್ದು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು, ಸಂಬಂಧಿಕರು ಅಥವಾ ಪರಿಚಿತರು ಮಕ್ಕಳನ್ನು ಕಟ್ಟಡ ಕಾಮಗಾರಿ, ಮರದ ಕೆಲಸ, ಪೇಂಟಿಂಗ್, ಅಂಗಡಿ ಅಥವಾ ಮನೆಗಳಲ್ಲಿ ಕೂಲಿ ಕೆಲಸಗಳಿಗೆ ಬಳಸಬಾರದು. ಇದು ಕಳ್ಳತನ ಅಥವಾ ಅಪರಾಧ ಚಟುವಟಿಕೆಗೆ ಸಮಾನ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪೋಷಕರು ಶ್ರಮಿಸಬೇಕು. ಕಡ್ಡಾಯ ಶಿಕ್ಷಣಕ್ಕೆ ಮಕ್ಕಳನ್ನು ಸೇರಿಸಬೇಕು ಮತ್ತು ಮುಂದಿನ ಶಿಕ್ಷಣಕ್ಕೂ ಉತ್ತೇಜನೆ ನೀಡಬೇಕು ಎಂದು ತಿಳಿಸಿದರು. ಅಲ್ಲದೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ವಿವಾಹ ಹಾಗೂ 22 ವರ್ಷ ಒಳಗಿನ ಗಂಡು ಮಕ್ಕಳ ವಿವಾಹ ಕೂಡ ಕಾನೂನಿನಂತೆ ನಿಷಿದ್ಧವಾಗಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲೂ ಮಕ್ಕಳನ್ನು ದುಡಿಯಲು ಬಿಡಬಾರದು, ಯಾವುದೇ ಸಮಸ್ಯೆ ಎದುರಾದರೆ 1098 ಹೆಲ್ಪ್ ಲೈನ್ ಅನ್ನು ಸಂಪರ್ಕಿಸಲು ಹೇಳಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಕೆಲವು ಸ್ಥಳಗಳಲ್ಲಿ ಇನ್ನೂ ಮಕ್ಕಳನ್ನು ಬಳಸಿ ರೇಷ್ಮೆ ನೂಲು ತೆಗೆಯುವಂತಹ ಕೆಲಸಗಳು ನಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಾಲ ತೀರಿಸಲು ಶಕ್ತಿಯಿಲ್ಲದ ಕುಟುಂಬಗಳು ಮಕ್ಕಳನ್ನೂ ಸೇರಿಸಿ ಕೆಲಸ ಮಾಡಿಸುತ್ತಿರುವುದರಿಂದ ಮಕ್ಕಳ ಆರೋಗ್ಯಕ್ಕೂ ಹಾನಿಯಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ತಾಲ್ಲೂಕು ಕಾರ್ಮಿಕ ಇಲಾಖೆ ನಿರೀಕ್ಷಕಿ ವಿಜಯಲಕ್ಷ್ಮಿ, ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್, ಮುಖ್ಯ ಶಿಕ್ಷಕಿ ಆಜಂ ಪಾಷ, ಶಿಕ್ಷಕರಾದ ಮುಕ್ಬುಲ್ ಪಾಷಾ, ನಫೀಸ್ ಫಾತೀಮಾ, ನಸೀನ್, ದಾವೂದ್ ಪಾಷಾ. ಎಸ್, ಹೀನಾ ಕೌಸರ್ ಹಾಜರಿದ್ದರು
Cheemangala, Sidlaghatta : ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಆ ಪ್ರದೇಶದ ಶಾಸನಗಳು ಮತ್ತು ವೀರಗಲ್ಲುಗಳ ದಾಖಲೆಗಳು ಮುಖ್ಯವಾಗುತ್ತವೆ. ಯುದ್ಧದಲ್ಲಿ ಮಡಿದ ಯೋಧನ ಶೌರ್ಯ ಮತ್ತು ತ್ಯಾಗವನ್ನು ನೆನಪಿಟ್ಟುಕೊಳ್ಳಲು ಸ್ಥಾಪಿಸಲಾಗುವ ವೀರಗಲ್ಲುಗಳು ಸ್ಥಳೀಯ ಸಂಸ್ಕೃತಿಯ ಪ್ರತಿಬಿಂಬಗಳು ಮತ್ತು ಮುಂದಿನ ಪೀಳಿಗೆ ಸ್ಫೂರ್ತಿಯ ಸೆಲೆಗಳು ಎಂದು ಇತಿಹಾಸ ಅಕಾಡೆಮಿಯ ಸದಸ್ಯ ಕೆ.ಧನಪಾಲ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಚೌಡೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಸಂರಕ್ಷಿಸಿರುವ ವೀರಗಲ್ಲುಗಳ ಕುರಿತಾಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಅವರು “ಶಾಸನಗಳು, ವೀರಗಲ್ಲುಗಳ ಮೂಲಕ ಇತಿಹಾಸ ದರ್ಶನ” ಎಂಬ ವಿಚಾರವಾಗಿ ಮಾತನಾಡಿದರು.
ತಮ್ಮ ಗ್ರಾಮಕ್ಕೆ ಕೀರ್ತಿ ತಂದಿರುವ ಆ ವೀರರಂತೆ ಈಗಿನ ಮಕ್ಕಳು ಜಗಮೆಚ್ಚುವ ರೀತಿಯಲ್ಲಿ ಸಾಧಕರಾಗಬೇಕು. ನಿಮ್ಮದೇ ಗ್ರಾಮದ ವೀರ ಸೇನಾನಿ ಯುದ್ಧದಲ್ಲಿ ಹೋರಾಡಿ ವೀರಮರಣವನ್ನಪ್ಪಿದ್ದಾನೆ. ಆತನ ಬಗ್ಗೆ ಹೆಮ್ಮೆ, ಗೌರವ ಮತ್ತು ಕೃತಜ್ಞತೆಯನ್ನು ಹೊಂದಬೇಕು ಎಂದರು.
ಈ ವೀರಗಲ್ಲುಗಳು ಮತ್ತು ಶಾಸನಗಳ ಕೆಳಗೆ ನಿಧಿ ಇರುವುದಿಲ್ಲ. ಈ ಊರಿಗಾಗಿ ಹೋರಾಡಿದ ವೀರರು ಮತ್ತು ಅವರ ಕಾಲದ ದಾಖಲೆಯೇ ಅಪೂರ್ವ ನಿಧಿಯಿದ್ದಂತೆ. ಈ ಶಾಸನ ಮತ್ತು ವೀರಗಲ್ಲುಗಳನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಶಾಸನದ ಬಗ್ಗೆ ಊರಿನ ಐತಿಹ್ಯದ ಬಗ್ಗೆ ತಿಳಿದುಕೊಂಡಲ್ಲಿ ನಮ್ಮ ಗ್ರಾಮ್ಯಪರಂಪರೆಯ ಬಗ್ಗೆ ಹೆಮ್ಮೆ, ಅಭಿಮಾನ ಮೂಡುತ್ತದೆ. ಹಸುಗಳನ್ನು ಕಾಪಾಡಿದ ವೀರರ ವೀರಗಲ್ಲಿಗೆ ತುರುಗೋಳ್ ಎನ್ನುತ್ತಾರೆ. ಶಾಸನದಲ್ಲಿನ ಅಕ್ಷರಗಳ ಬಗ್ಗೆ ಅವರು ವಿವರಿಸಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆಯೂ ಮಕ್ಕಳಿಗೆ ವಿವರಿಸಿ ಇವುಗಳನ್ನೆಲ್ಲಾ ಸಂರಕ್ಷಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಚೀಮಂಗಲ ಗ್ರಾಮದಲ್ಲಿ ಚೌಡೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ವೀರಗಲ್ಲುಗಳನ್ನು ಸಂರಕ್ಷಿಸಿದ್ದಾರೆ. ಈ ರೀತಿಯಾಗಿ ಇತರ ಗ್ರಾಮದವರೂ ತಮ್ಮ ಗ್ರಾಮಗಳಲ್ಲಿ ಅನಾಥವಾಗಿರುವ ಈ ರೀತಿಯ ವೀರಗಲ್ಲು ಅಥವಾ ಶಾಸನಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇತಿಹಾಸ ಸಂಶೋಧಕ ಶ್ರೀನಿವಾಸ್, ಚೀಮಂಗಲ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಶಿವಶಂಕರ್, ಶಿಕ್ಷಕರಾದ ನವೀನ್ ಕುಮಾರ್, ಶಿವಕುಮಾರ್, ಶ್ರೀನಿವಾಸ್, ಪಲ್ಲವಿ, ಬೀರಪ್ಪ, ಕಮಲ ಹಾಜರಿದ್ದರು.