ನಗರದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಪರವಾಗಿ ಪ್ರಚಾರ ಮಾಡಲು ಶಿಡ್ಲಘಟ್ಟಕ್ಕೆ ಬಂದಿದ್ದ ಅವರು ರೋಡ್ ಶೋನಲ್ಲಿ ಭಾಗವಹಿಸಿ ಚಲನಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ರಾಜಣ್ಣ ಅವರು ಶಾಸಕರಾಗಲು ಕಾರಣರಾದವರೇ ಬಿ.ಎನ್.ರವಿಕುಮಾರ್. ಕುಮಾರಣ್ಣ ಭಾವನಾತ್ಮಕ ಜೀವಿ. ಅವರು ಯಾರಿಗೂ ಮೋಸ ಮಾಡುವವರಲ್ಲ. ಹಾಲಿ ಶಾಸಕ ರಾಜಣ್ಣ ಅವರಿಗೇ ಟಿಕೇಟ್ ಕೊಡಬೇಕು ಎಂಬುದಾಗಿ ಕುಮಾರಣ್ಣ ಅಂದುಕೊಂಡಿದ್ದುದು ಸತ್ಯ. ಆ ಸಂದರ್ಭದಲ್ಲಿ ರವಿಯಣ್ಣನವರನ್ನೂ ನಾನು ಕರೆದು ಚರ್ಚಿಸಿದ್ದೆ. ಆಗ ಅವರು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ನನ್ನ ಕಣಕಣದಲ್ಲೂ ಜೆಡಿಎಸ್ ಇರುತ್ತದೆ, ನನ್ನ ನಿಯತ್ತು ಎಂದೆಂದಿಗೂ ಜೆಡಿಎಸ್ಗೇ ಎಂದಿದ್ದರು. ಆದರೆ ಎಂ.ರಾಜಣ್ಣ ಬೆಜೆಪಿ ಜೊತೆಗೆ ಮತ್ತು ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಕುಮಾರಣ್ಣನ ಕತ್ತು ಕೊಯ್ಯುವ ಕೆಲಸ ಮಾಡಿದರು. ರಾಜಣ್ಣನವರು ಕುಮಾರಣ್ಣನವರು ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ ಬಿಟ್ಟಿದ್ದು, ಅದರ ಬಗ್ಗೆ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ.
ರಾಜಣ್ಣ ಅವರ ಮೋಸದ ವ್ಯಕ್ತಿತ್ವ ಬಯಲುಗೊಳಿಸಲು ನಾನೇ ಕಾರ್ಯಕರ್ತರ ಮೂಲಕ ಅವರು ಬಚ್ಚೇಗೌಡರೊಂದಿಗೆ ಮಾತಾಡುವ ಚಿತ್ರ ತರಿಸಿದ್ದೆ. ಅವತ್ತೇ ಕುಮಾರಣ್ಣ ಅವರ ಹತ್ತಿರ ರಾಜಣ್ಣ ಬೆಲೆ ಕಳೆದುಕೊಂಡರು. ಆಗಲೇ ಕುಮಾರಣ್ಣ ಮತ್ತು ದೇವೇಗೌಡರು ರವಿಯಣ್ಣ ಅವರ ಬೆಂಬಲವಾಗಿ ನಿಂತು ಬಿಫಾರಂ ಕೊಟ್ಟರು. ತಾನು ಹಾಗೂ ಕುಮಾರಸ್ವಾಮಿಯವರು ಸ್ಪಷ್ಠವಾಗಿ ರವಿಯಣ್ಣ ಅವರನ್ನು ಬೆಂಬಲಿಸುತ್ತಿದ್ದು, ಅವರನ್ನು ಕುಮಾರಸ್ವಾಮಿಗಳೇ ಸಂತೋಷದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ಶಿಡ್ಲಘಟದ ಜನತೆ ಮೇಲಿದೆ. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ನಾನು ಈ ವಿಷಯವನ್ನು ಶಿಡ್ಲಘಟದ ಜನತೆಗೆ ತಿಳಿಸಲು ಚನ್ನಪಟ್ಟಣದ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಆದರೆ ತಮ್ಮ 20 ತಿಂಗಳ ಸರ್ಕಾರದ ಅವಧಿಯಲ್ಲಿ ಕುಮಾರಣ್ಣ ರೈತರಿಗಾಗಿಯೇ ಹಗಲೂ ಇರುಳೂ ದುಡಿದಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದೀರಿ. ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಕೊಡಿ. ನಿಮ್ಮ ಮನೆಮಗನಂತಿರುವ ಕುಮಾರಣ್ಣನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ.
ನಗರದ ಬಸ್ನಿಲ್ದಾಣದಿಂದ ಚಲನಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ರೋಡ್ ಶೋ ಮುಖಾಂತರ ಕರೆತರಲಾಯಿತು. ಬಸ್ ನಿಲ್ದಾಣದ ಬಳಿ, ಕೋಟೆ ವೃತ್ತದ ಬಳಿ ಹಾಗೂ ದಿಬ್ಬೂರಹಳ್ಳಿ ರಸ್ತೆಯ ಬಾಷುಸಾಬ್ ದರ್ಗಾ ಬಳಿ ನಿರ್ಮಿಸಿದ್ದ ವೇದಿಯಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ರಾಧಾಕೃಷ್ಣ ಹಾಜರಿದ್ದರು.
ಎಂ.ರಾಜಣ್ಣ ಬೆಜೆಪಿ ಜೊತೆಗೆ ಮತ್ತು ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಕುಮಾರಣ್ಣನ ಕತ್ತು ಕೊಯ್ಯುವ ಕೆಲಸ ಮಾಡಿದರು – ನಿಖಿಲ್ ಕುಮಾರಸ್ವಾಮಿ
- Advertisement -
- Advertisement -
- Advertisement -
- Advertisement -