21.1 C
Sidlaghatta
Saturday, July 27, 2024

ಎಲ್ಲಿಂದಲೋ ಬಂದವರು

- Advertisement -
- Advertisement -

‘ನಾವು ಬಂದಿರುವುದು ರಾಜಾಸ್ಥಾನದಿಂದ ಪಾಕಿಸ್ತಾನದಿಂದಲ್ಲ. ನಿಮ್ಮ ಊರಿನ ಹೆಂಗಸರು ಮತ್ತು ಮಕ್ಕಳನ್ನು ಬೀದಿಯಲ್ಲಿ ಉಳಿಯಲು ಬಿಡುತ್ತೀರಾ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ಏನಾದರೂ ತೊಂದರೆಯಾದರೆ ಯಾರು ಹೊಣೆ. ನಾವೇನು ಕಳ್ಳತನ ಮಾಡಲು ಬಂದಿಲ್ಲವಲ್ಲ’ ಎಂದು ರಾಧಾಬಾಯಿ ಒಂದೇ ಸಮನೆ ಪ್ರಶ್ನಿಸುತ್ತಿದ್ದರೆ ಅವರ ಪೂರ್ವಾಪರ ತಿಳಿಯಲು ಬಂದಿದ್ದ ಸಾರ್ವಜನಿಕರು ನುರುತ್ತರರಾದರು.
ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿ ರಸ್ತೆ ಬಂದಿಯಲ್ಲಿ ಸುಮಾರು 50 ಮಂದಿ ರಾಜಾಸ್ತಾನಿ ಮಹಿಳೆಯರು ಮತ್ತು ಪುಟ್ಟ ಮಕ್ಕಳು ಬೀಡು ಬಿಟ್ಟಿದ್ದರು. ಹಾದಿಯಲ್ಲಿ ಸಾಗುತ್ತಿರುವ ಸಾರ್ವಜನಿಕರಿಗೆ ಇಷ್ಟೊಂದು ಜನ ಹೇಗೆ ಇಲ್ಲಿಗೆ ಬಂದರೆಂಬ ಕುತೂಹಲ. ಅವರೊಂದಿಗೆ ಗಂಡಸರೇ ಇಲ್ಲವಲ್ಲ ಎಂಬ ಅಚ್ಚರಿ ಕೂಡ.
‘ಚಿಂತಾಮಣಿಯಿಂದ ರೈಲಿನಲ್ಲಿ ನಾವು ಬಂದೆವು. ಮಕ್ಕಳು ಸೇರಿದಂತೆ ನಾವೆಲ್ಲಾ ಹಸಿದಿದ್ದೆವು. ಶಿಡ್ಲಘಟ್ಟದ ರೈಲ್ವೆ ನಿಲ್ದಾಣದಲ್ಲಿ ನಾವು ಅಡುಗೆ ಮಾಡಿಕೊಂಡು ಬೆಂಗಳೂರಿಗೆ ಹೋಗುತ್ತೇವೆಂದು ಹೇಳಿದರೂ ಕೇಳದೆ ಪೊಲೀಸರು ಇಲ್ಲಿಗೆ ತಂದು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಎಳೆ ಮಕ್ಕಳಿದ್ದಾರೆ. ಹೆಂಗಸರನ್ನು ಹೀಗೆಯೇ ನಡೆಸಿಕೊಳ್ಳುವುದು. ಮಳೆ ಬರುವ ಹಾಗಿದೆ. ನಾವೇನು ಮಾಡುವುದು’ ಎಂದು ರಾಧಾಬಾಯಿ ಅಳಲನ್ನು ತೋಡಿಕೊಂಡರು.
‘ನಾವು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಬಂದಿದ್ದೇವೆ. ಬೆಂಗಳೂರಿಗೆ ಹೋಗಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತೇವೆ. ನಾವು ಕಸೂತಿ ಕೆಲಸ ಮಾಡುತ್ತೇವೆ’ ಎನ್ನುತ್ತಾ ಅವರು ಕಸೂತಿ ಮಾಡಿದ ಬಟ್ಟೆಯನ್ನು ಪ್ರದರ್ಶಿಸಿದರು.
ನಿನ್ನೆಯ ದಿನವಷ್ಟೇ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಲವಾರು ಮಂದಿ ರಾಜಸ್ಥಾನಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಭಿಕ್ಷೆ ಬೇಡುತ್ತಿದ್ದುದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ತಿಳಿಸಿ ಅವರನ್ನು ಸಾಗಹಾಕಿದ ಘಟನೆ ಹಚ್ಚಹಸಿರಾಗಿರುವಾಗಲೇ ಶಿಡ್ಲಘಟ್ಟದಲ್ಲಿ ರಾಜಸ್ತಾನಿ ಮಹಿಳೆಯರು ಮತ್ತು ಮಕ್ಕಳು ಕಂಡು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ಇವರ ಬಗ್ಗೆ ಕುತೂಹಲ ಉಂಟಾಗಿತ್ತು. ಇವರು ಮೈಸೂರಿಗೆ ಹೋಗಲು ಈ ಮಾರ್ಗವಾಗಿ ಹೇಗೆ ಬಂದರು. ಇವರೊಂದಿಗೆ ಒಬ್ಬರೂ ಗಂಡಸರೇಕೆ ಬಂದಿಲ್ಲ. ಇವರ ಜೀವನ ನಿರ್ವಹಣೆ ಹೇಗೆ ಎಂಬುದಾಗಿ ಪ್ರಶ್ನೆ ಮೂಡಿತ್ತು.
ಅಷ್ಟರಲ್ಲಿ ಅವರ ತೊಂದರೆಯನ್ನು ಗಮನಿಸಿದ ಸಾರ್ವಜನಿಕರು ಬೆಂಗಳೂರಿಗೆ ಹೋಗುವ ಖಾಸಗಿ ಬಸ್ಸಿನವರಿಗೆ ವಿಷಯ ತಿಳಿಸಿ ಬಸ್ಸನ್ನು ಸ್ಥಳಕ್ಕೆ ಕರೆಸಿ ಅವರನ್ನೆಲ್ಲಾ ಬೆಂಗಳೂರಿಗೆ ಕಳುಹಿಸಿದರು. ಅಷ್ಟರಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ತಮ್ಮ ಗಂಟು ಮೂಟೆ, ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು, ‘ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ’ ಎಂದು ಹರಸುತ್ತಾ ಬಸ್ಸಿನತ್ತ ದೌಡಾಯಿಸಿದರು.
ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ, ‘ಚಿಂತಾಮಣಿಯಿಂದ ಈ ಮಹಿಳೆಯರು ಮತ್ತು ಮಕ್ಕಳ ಗುಂಪು ಟಿಕೇಟ್ ಪಡೆಯದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆ ಅಧಿಕಾರಿ ಟಿಕೇಟ್ ಕೇಳಿದಾಗ ರೈಲ್ವೆ ನಿಲ್ದಾಣದಿಂದ ಹೊರಕ್ಕೆ ಅವರು ದೌಡಾಯಿಸಿದ್ದಾರೆ. ಆಗ ರೈಲ್ವೆ ಅಧಿಕಾರಿ ನಮಗೆ ತಿಳಿಸಿದರು. ಹೋಗಿ ನೋಡುವಷ್ಟರಲ್ಲಿ ಅವರು ಅಲ್ಲಿರಲಿಲ್ಲ. ಸಾರ್ವಜನಿಕರು ಕಳಿಸಿದ ಬಸ್ಸಿನಲ್ಲೂ ಟಿಕೇಟ್ ಪಡೆಯದಿದ್ದಲ್ಲಿ ಬಸ್ಸಿನವರು ನಡುದಾರಿಯಲ್ಲಿಯೇ ಇಳಿಸಿಬಿಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಉತ್ತರ ನೀಡುವ ಇವರು ಏತಕ್ಕಾಗಿ ಬಂದಿರುವರೋ ತಿಳಿಯದು’ ಎಂದು ತಿಳಿಸಿದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!