ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಬುಧವಾರ ಗ್ರಾಮೀಣ ಕ್ರೀಡೋತ್ಸವ ನಡೆಯಿತು. ಪ್ರತಿದಿನ ದುಡಿಮೆ, ನೌಕರಿ ಮುಂತಾದ ಕೆಲಸಗಳಲ್ಲಿ ತೊಡಗುತ್ತಿದ್ದ ಜನ ಆಟಗಳನ್ನು ಆಡಿ ಖುಷಿಪಟ್ಟರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏರ್ಪಡಿಸಿದ್ದ ಈ ವಿಶೇಷ ಕ್ರೀಡಾಕೂಟದಲ್ಲಿ ಪುರುಷರಿಗೆ ಗೋಣಿಚೀಲ ಕಟ್ಟಿಕೊಂಡು ಓಡುವ ಸ್ಪರ್ಧೆ, ಸ್ಲೋ ಸೈಕಲ್, ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ರಂಗೋಲಿ, ಸಂಗೀತ ಕುರ್ಚಿ ಹಾಗೂ ಕುಂಟು ಮುಟ್ಟಾಟ ಸ್ಪರ್ಧೆಗಳು ನಡೆದವು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿನ ಜನ ಸದಾ ತಮ್ಮ ಕೌಟುಂಬಿಕ ಹಾಗೂ ತೋಟದ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅವರಿಗೆ ಜೀವನದಲ್ಲಿ ಉತ್ಸಾಹವನ್ನು ಮೂಡಿಸಲು ಹಾಗೂ ಅವರಲ್ಲಿನ ಪ್ರತಿಭೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಗ್ರಾಮೀಣ ಕ್ರೀಡೋತ್ಸವವನ್ನು ನಡೆಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ವಿಜೇತರು ಮುಂದೆ ರಾಜ್ಯಮಟ್ಟವನ್ನು ಕೂಡ ಪ್ರತಿನಿಧಿಸಬಹುದು. ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಮಹಿಳಾ ಕ್ರೀಡಾಪಟುಗಳೆಲ್ಲಾ ಗ್ರಾಮೀಣ ಹಿನ್ನೆಲೆಯವರಾಗಿದ್ದಾರೆ’ ಎಂದು ಹೇಳಿದರು.
ಕ್ರೀಡಾಕೂಟಕ್ಕೆ ಸರ್ಕಾರದಿಂದ ಬಹುಮಾನವನ್ನು ಹಣದ ರೂಪದಲ್ಲಿ ನೀಡಿ ಪ್ರೋತ್ಸಾಹಿಸಲಾಗುತ್ತಿದ್ದು, ಮೊದಲ ಬಹುಮಾನ ಒಂದು ಸಾವಿರ ರೂ, ಎರಡನೇ ಬಹುಮಾನ 750 ರೂ ಮತ್ತು ಮೂರನೇ ಬಹುಮಾನ 500 ರೂ ನೀಡಲಾಗುತ್ತಿದೆ. ಗುಂಪು ಸ್ಪರ್ಧೆಗಳಿಗೆ ಮೊದಲ ಬಹುಮಾನ ಎರಡು ಸಾವಿರ ರೂ ಮತ್ತು ಎರಡನೇ ಬಹುಮಾನ ಒಂದು ಸಾವಿರ ರೂ ನೀಡಲಾಗುತ್ತಿದೆ.
ತಾಲ್ಲೂಕಿನ ದೇವರಮಳ್ಳೂರು ಹಾಗೂ ದೊಡ್ಡತೇಕಹಳ್ಳಿ ಪಂಚಾಯತಿಗಳಲ್ಲಿ ಗ್ರಾಮೀಣ ಕ್ರೀಡೋತ್ಸವ ಮುಗಿದಿದ್ದು, ಬುಧವಾರ ಹಂಡಿಗನಾಳ ಪಂಚಾಯತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಂ, ತ್ಯಾಗರಾಜ್, ನೆಹರೂ ಕ್ರೀಡಾಂಗಣದ ನಿರ್ವಾಹಕ ಶ್ರೀನಿವಾಸ್, ಕ್ರೀಡಾಪಟು ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಶ್ರೀಧರ್, ನಳಿನಾ, ರಾಧಾ, ರವಿ, ವಿಜಯ್, ಉಮಾ, ನೇತ್ರಾವತಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -