ಪರಾವಲಂಬಿ ಕೀಟಗಳಿಂದ ರೈತರು ಅನುಭವಿಸುವ ನಷ್ಟದ ಪ್ರಮಾಣ ಉತ್ಪಾದನೆಯ ಶೇಕಡಾ 60 ರಷ್ಟಾಗಿದೆ. ಕೀಟ ನಿರ್ವಹಣೆಯಿಂದ ಕೃಷಿಯ ಉತ್ಪನ್ನ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ ಎಂದು ತೋಟಗಾರಿಕಾ ಸಂಶೋಧನಾ ವಿಭಾಗದ ವಿಜ್ಞಾನಿ ಡಾ.ಎಂ.ಎಸ್.ರಾವ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ನಡೆದ ‘ಸಂರಕ್ಷಿತ ಬೇಸಾಯದಲ್ಲಿ ಜೈವಿಕ ಕೀಟನಾಶಕಗಳಿಂದ ಪರಾವಲಂಬಿ ಕೀಟಗಳ ನಿರ್ವಹಣೆ’ ಎಂಬ ವಿಷಯವಾಗಿ ರೈತರಿಗೆ ನಡೆದ ಪ್ರಾತ್ಯಕ್ಷಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ವರ್ಷವಿಡೀ ಫಸಲನ್ನು ಉತ್ಪಾದಿಸುವ ನಿಟ್ಟಿನಲ್ಲಿ ಪಾಲಿಹೌಸ್ಗಳು ಪ್ರಾರಂಭವಾದವು. ಅಲ್ಲಿನ ತೇವಾಂಶ, ಉಷ್ಣಾಂಶ, ರಾಸಾಯನಿಕಗಳು ಪರಾವಲಂಬಿ ಕೀಟಗಳ ಬೆಳವಣಿಗೆಗೆ ಪೂರಕವಾಗಿ ಅವುಗಳು ವೃದ್ಧಿಸಿ ಬೆಳೆಗೆ ಮಾರಕವಾಗಿವೆ. ಅದಕ್ಕಾಗಿ ಜೈವಿಕ ಕೀಟನಾಶಕಗಳನ್ನು ವೈಜ್ಞಾನಿಕವಾಗಿ ತಯಾರಿಸಲಾಗಿದೆ. ಅದರ ಬಳಕೆಯಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿರುವ ರೈತರು ಬೆಳೆಯನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಕ್ಯಾಪ್ಸಿಕಂ, ಟೊಮೆಟೊ, ಮೆಣಸಿನಕಾಯಿ , ಬೆಂಡೆಕಾಯಿ , ಘೇರ್ಕಿನ್ಸ್, ಕಲ್ಲಂಗಡಿ, ಗುಲಾಬಿಗಳು ಮುಂತಾದ ಬೆಳೆಗಳನ್ನು ಹಸಿರು ಮನೆಗಳಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲಾ ಬೆಳೆಗಳ ಮೇಲೆ ನೆಮಟೋಡ್ ಸಮಸ್ಯೆಗಳ ಕಾರಣ ನಷ್ಟವು ಅಪಾಯಕಾರಿ ಪ್ರಮಾಣದಲ್ಲಿ ಆಗುತ್ತದೆ. ಶಿಲೀಂಧ್ರಗಳ ರೋಗಗಳು ತೀವ್ರತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಜೈವಿಕ ಕೀಟನಾಶಕಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನಿಗಳು ಜೈವಿಕ ಕೀಟನಾಶಕಗಳನ್ನು ಬೆಳೆಯ ವಿವಿಧ ಹಂತದಲ್ಲಿ ಬಳಸುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ತೋಟಗಾರಿಕಾ ಸಂಶೋಧನಾ ವಿಭಾಗದ ವಿಜ್ಞಾನಿಗಳಾದ ಡಾ.ಆರ್.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಆನಂದ್, ಕೃಷಿ ಇಲಾಖೆಯ ಉಪನಿರ್ದೇಶಕ ದೇವೇಗೌಡ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -