ನಗರದ ಹತ್ತನೇ ವಾರ್ಡಿನ ಮನೆಗಳ ನಡುವಿನ ಸಂದಿಯಲ್ಲಿ ಕಸದ ರಾಶಿ ಇದ್ದರೂ ಸಹ ನಗರಸಭೆ ಯಾವುದೇ ರೀತಿಯ ಕ್ರಮ ಜರುಗಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರವು ಸುಂದರವಾಗಿ ಕಾಣಬೇಕಾದರೆ ಸ್ವಚ್ಛತೆಯು ಪ್ರಮುಖವಾಗಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯು ಬಿದ್ದಿರುವುದು ಕಣ್ಣ ಮುಂದೆ ಕಾಣಿಸುತ್ತದೆ. ಕಸದ ರಾಶಿಗಳಿಂದಾಗಿ ಸೊಳ್ಳೆಗಳ ಕಾಟ, ಬೀದಿ ನಾಯಿಗಳ ಕಾಟ ಹೆಚ್ಚಿದೆ. ರೋಗ ರುಜಿನಗಳು ಹರಡುವ ಭಯದಿಂದ ಈ ಭಾಗದ ಜನರು ಪರದಾಡುವಂತಾಗಿದೆ. ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಜನ ಸಾಮಾನ್ಯರು ಸಂಚರಿಸಲು ತೊಂದರೆಯಾಗಿದ್ದು, ಈ ವಿಚಾರವಾಗಿ ನಗರಸಭೆಗೆ ಎಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ನಗರಸಭೆಯು ಸಂಪೂರ್ಣ ವಿಫಲವಾಗಿದೆ ಎಂದು ನಗರಸಭೆಯ ನಾಮಿನಿ ಸದಸ್ಯ ಕೆ.ಎಂ.ವಿನಾಯಕ ತಿಳಿಸಿದರು.
ಈ ನಗರವು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ ಹಲವಾರು ತಿಂಗಳುಗಳು ಕಳೆದರೂ ಅಭಿವೃದ್ಧಿ ಮಾತ್ರ ಹಿಂದುಳಿದಿರುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ನಗರಸಭೆಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿಗಳು ಅನುದಾನ ಬರುತ್ತಿದ್ದರೂ ವಾರ್ಡುಗಳಲ್ಲಿನ ಚರಂಡಿಗಳು, ಕಸದ ವಿಲೇವಾರಿ ಇನ್ನೂ ಮುಂತಾದ ಸಮಸ್ಯೆಗಳು ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
- Advertisement -
- Advertisement -
- Advertisement -
- Advertisement -