ಸಹಕಾರ ಸಂಘಗಳಿಂದ ಪಡೆಯುವ ಸಾಲಗಳನ್ನು ನಿಗಧಿತ ಸಮಯದಲ್ಲಿ ರೈತರು ಮರುಪಾವತಿ ಮಾಡಿದಲ್ಲಿ ಸಂಸ್ಥೆಯು ಮತ್ತಷ್ಟು ಸಾಲವನ್ನು ಕೊಡಲು ಅನುಕೂಲವಾಗುತ್ತದೆ. ರೈತರು ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್ ಹೇಳಿದರು.
ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ೨೦೧೫–-೧೬ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ಪಡೆಯುವುದು ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದು ರೈತರ ಕರ್ತವ್ಯ. ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಈ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಥಳೀಯ ಜನತೆಯ ಹೆಚ್ಚಿನ ಸಹಕಾರ ಅಗತ್ಯವಿದೆ.
ಬ್ಯಾಂಕಿನ ಸಾಮಾನ್ಯ ಸದಸ್ಯರು ಯಶಸ್ವಿನಿ ಆರೋಗ್ಯ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರದಿಂದ ಹಳೇ ಕೃಷಿ ಸಾಲಕ್ಕೆ ಬಡ್ಡಿ ಮನ್ನಾ ಮಾಡಿದ್ದು, ಸೆಪ್ಟೆಂಬರ್ ೩೦ ರೊಳಗೆ ಅಸಲು ಪಾವತಿಸಿ ಋಣ ಮುಕ್ತರಾಗಬಹುದು. ಶೇ.೩ ರ ಬಡ್ಡಿ ದರದಲ್ಲಿ ಸಾಲ ಪಡೆದಿರುವ ರೈತರು ವಾಯಿದೆ ಒಳಗೆ ಕಂತುಗಳನ್ನು ಮರುಪಾವತಿ ಮಾಡಿ ಸರ್ಕಾರದಿಂದ ಬರಬಹುದಾದ ಬಡ್ಡಿ ರಿಯಾಯಿತಿ ಸದುಪಯೋಗ ಮಾಡಿಕೊಂಡು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಹಾಗು ಪಿಎಲ್ಡಿ ಬ್ಯಾಂಕ್ ನ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಪ್ರತಿಯೊಬ್ಬರೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ೨೦೧೫-–೧೬ನೇ ಸಾಲಿನ ಆಡಳಿತ ವರದಿ ಓದಿ ಅಂಗೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಶ್ವತ್ಥರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಂ.ಪಿ.ರವಿ, ನಿರ್ದೇಶಕರಾದ ಸಿದ್ದಪ್ಪ, ಶಿವಾರೆಡ್ಡಿ, ಆಡಳಿತ ಮಂಡಳಿ ನಿರ್ದೇಶಕರು, ಬ್ಯಾಂಕಿನ ವ್ಯವಸ್ಥಾಪಕ ಮುನಿಯಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -