ಮೆದುಳು ಮತ್ತು ಬೆನ್ನುಹುರಿ ಸೇರಿಕೊಂಡು ಕೇಂದ್ರೀಯ ನರವ್ಯವಸ್ಥೆಯನ್ನು ನಿರ್ಮಾಣ ಮಾಡಿರುತ್ತವೆ. ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ದೇಹದ ಕೆಲವು ಭಾಗಗಳಲ್ಲಿ ಸಂವೇದನೆಯನ್ನು ಕಳೆದುಕೊಳ್ಳುತ್ತಾರೆ. ಇವರಿಗಾಗಿ ಶಿಬಿರವನ್ನು ಆಯೋಜಿಸಿರುವುದು ಉತ್ತಮ ಸಾಮಾಜಿಕ ಕಾರ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ಹಿರಿಯ ನಾಗರಿಕರ ಮತ್ತು ಜಿಲ್ಲಾ ವಿಕಲ ಚೇತನರ ಕಲ್ಯಾಣ ಇಲಾಖೆ, ರಾಜ್ಯ ಬೆನ್ನು ಹುರಿ ಅಪಘಾತಕ್ಕೆ ಅಂಗವಿಕಲರ ಸಂಘ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ, ಸೆಂಟ್ ಜಾನ್ ಮೆಡಿಕಲ್ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಬೆನ್ನು ಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳ ಮೂರು ದಿನಗಳ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಪುನರ್ ಚೇತನ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕೆಲವು ಮಧ್ಯಸ್ಥ ಪ್ರಕರಣಗಳಲ್ಲಿ ಅಪಘಾತಕ್ಕೊಳಗಾದವರು ಕೈ ಅಥವಾ ಕಾಲಿನ ಚಟುವಟಿಕೆಯನ್ನು ಕಳೆದುಕೊಳ್ಳುತ್ತಾರೆ. ಭೀಕರವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರು ದೇಹದ ಕೆಳಭಾಗದ ಸಂಪೂರ್ಣ ಹಿಡಿತವನ್ನು ಕಳೆದುಕೊಳ್ಳಬಹುದು ಅಥವಾ ದೇಹದ ಮೇಲ್ಬಾಗದ ಚಲನಶೀಲತೆಯನ್ನು ಕಳೆದುಕೊಳ್ಳಬಹುದು. ಅಥವಾ ಸಂಪೂರ್ಣ ದೇಹವು ಪ್ಯಾರಲೈಸಿಸ್ಗೆ ಒಳಗಾಗಬಹುದು. ಚಿಕಿತ್ಸೆ ವೆಚ್ಚ ಹೆಚ್ಚಿರುವ ದಿನಗಳಲ್ಲಿ ಈ ರೀತಿಯ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ರೋಗಿಗಳಿಗೆ ನೆರವಾಗುವಂತೆ ಶಿಬಿರವನ್ನು ಆಯೋಜಿಸಿರುವುದು ಅನುಕೂಲಕರ ಎಂದು ಹೇಳಿದರು.
ತಾಲ್ಲೂಕಿನ 20 ಮಂದಿ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಿಂದ ಬಂದಿದ್ದ ರೋಗಿಗಳೂ ಸೇರಿ ಒಟ್ಟು 40 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದರು. ಈ ಸಂದರ್ಭದಲ್ಲಿ ರಾಜ್ಯ ಬೆನ್ನು ಹುರಿ ಅಪಘಾತಕ್ಕೆ ಅಂಗವಿಕಲರ ಸಂಘದ ಜಿಲ್ಲಾ ಘಟಕದಿಂದ ಮೂವರಿಗೆ ವೀಲ್ ಚೇರ್ ವಿತರಿಸಲಾಯಿತು.
ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಆರ್.ಎ.ಉಮೇಶ್, ಸೆಂಟ್ ಜಾನ್ ಮೆಡಿಕಲ್ ಆಸ್ಪತ್ರೆಯ ಡಾ.ರಾಜಲಕ್ಷ್ಮಿ ಹರಿಹರನ್, ಡಾ.ಸುನೀತ, ನಾಗೇಂದ್ರಕುಮಾರ್, ರಾಮಚಂದ್ರಪ್ಪ, ಮುನಿರಾಜು, ಮಂಜುನಾಥ ಹಾಜರಿದ್ದರು
- Advertisement -
- Advertisement -
- Advertisement -







