ಕಳೆದ ಕೆಲ ವರ್ಷಗಳಿಂದ ವರುಣನ ಅವಕೃಪೆಗೆ ತುತ್ತಾಗಿದ್ದ ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವಾರು ಕೆರೆಗಳು ತುಂಬಿರುವುದು ರೈತರು ಹಾಗೂ ನಾಗರಿಕರಲ್ಲಿ ಸಂತಸ ಮೂಡಿಸಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ಸುಮಾರು ವರ್ಷಗಳಿಂದ ಈ ಭಾಗಕ್ಕೆ ಮಳೆಯಾಗದೇ ಬಹುತೇಕ ಕೆರೆಗಳು ಬತ್ತಿ ಹೋಗಿದ್ದವು. ಒಂದೆಡೆ ಇದೀಗ ಸುರಿದ ಮಳೆಯಿಂದ ತಾಲ್ಲೂಕಿನ ಸುಮಾರು ಹದಿನೈದು ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ಸಂತಸದ ವಿಷಯವಾದರೆ, ಇನ್ನೊಂದೆಡೆ ತಾಲೂಕಿನಾದ್ಯಂತ ಹಲವಾರು ಮನೆಗಳು ಭಾಗಶಃ ಬಿದ್ದು ಹೋಗಿರುವುದು ಹಾಗು ತಾಲ್ಲೂಕಿನ ಕರಿಯಪ್ಪನಹಳ್ಳಿ ಗ್ರಾಮದ ಇಬ್ಬರು ಮೃತ ಪಟ್ಟಿರುವುದು ದುರಂತದ ಸಂಗತಿ ಎಂದು ವಿಷಾಧಿಸಿದರು.
ಒಂದು ಕಡೆ ಮಳೆಯಾಯಿತು ಎಂಬ ಸಂತಸದಲ್ಲಿರುವ ರೈತ ಇನ್ನೊಂದು ಕಡೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ತಾಲೂಕಿನಾದ್ಯಂತ ಸುಮಾರು ೩೨೦೦ ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ರಾಗಿ ಮತ್ತು ಜೋಳ ಸಂಪೂರ್ಣವಾಗಿ ನಾಶವಾಗಿದ್ದು ಹೊಲದಲ್ಲಿಯೇ ಮೊಳಕೆ ಬಂದಿರುವ ಬಗ್ಗೆ ಅಧಿಕಾರಿಗಳು ಸೇರಿದಂತೆ ರೈತರು ನಮ್ಮ ಗಮನಕ್ಕೆ ತಂದಿದ್ದಾರೆ. ತಾಲ್ಲೂಕಿನಾದ್ಯಂತ ಆಗಿರುವ ಬೆಳೆ ನಷ್ಟ ಹಾಗು ಹಾನಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯನ್ನು ಸರ್ಕಾರದ ನಿರ್ದೇಶನದಂತೆ ವಿತರಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು ಅಧಿಕಾರಿಗಳು ತಾಲ್ಲೂಕಿನಾಧ್ಯಂತ ಸಂಚರಿಸಿ ರೈತರಿಗೆ ಆಗಿರುವ ಹಾನಿಯ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಬಯಲುಸೀಮೆಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಿದ್ದು ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಕಳೆದ ನವೆಂಬರ್ ೧೫ ರಂದು ಏರ್ಪಡಿಸಲಾಗಿದ್ದ ಟ್ರಾಕ್ಟರ್ ರ್ಯಾಲಿಗೆ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಜನತೆ ಹಾಗು ಕಾರ್ಯಕರ್ತರಿಂದ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭೆ ಸದಸ್ಯ ಅಪ್ಸರ್ಪಾಷ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ರೆಹಮತ್ತುಲ್ಲ, ಮಾಜಿ ಪುರಸಭೆ ಸದಸ್ಯ ಸಲಾಂ, ನಂಜಪ್ಪ, ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -