ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ, ಉನ್ನತ ಶಿಕ್ಷಣ, ಉತ್ತಮ ಮೂಲಭೂತ ಸೌಕರ್ಯ ಒದಗಿಸುವುದೇ ಜೆಡಿಎಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ ಎಂದು ಶ್ರೀ ಎಚ್.ಡಿ.ದೇವೇಗೌಡರವರ ಮತ್ತು ಜಯಪ್ರಕಾಶ್ ನಾರಾಯಣ್ರವರ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶನಿವಾರದಂದು ‘ಮನೆಮನೆ ಕುಮಾರಣ್ಣ’ ಕಾರ್ಯಕ್ರಮದ ಸಮಾವೇಶ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ರಾಜಕೀಯ ಜೀವನದ ಕುರಿತ ‘ಸಾಧನೆಯ ಶಿಖರಾರೋಹಣ : ಪ್ರಧಾನ ಮಂತ್ರಿಯಾಗಿ ಎಚ್ ಡಿ ದೇವೇಗೌಡ ಅವರ ಸಾಧನೆಗಳು’ ಗ್ರಂಥವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ವಿ.ಮುನಿಯಪ್ಪನವರು ‘ಇದು ನನ್ನ ಕಡೆಯ ಚುನಾವಣೆ’ ಎನ್ನುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದವರು ಅಭಿವೃದ್ಧಿಯೇ ನಮ್ಮ ಗುರಿ ಎನ್ನುತ್ತಿದ್ದೇವೆ. ಕ್ಷೇತ್ರದಲ್ಲಿ ಯುವಕರಿಗಾಗಿ ಎಂಜಿನಿಯರಿಂಗ್ ಕಾಲೇಜು, ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ, ಪ್ರಸ್ತುತ 5,600 ಮಂದಿ ಡಯಾಲಿಸಿಸ್ಗೆ ಒಳಗಾಗುತ್ತಿದ್ದಾರೆ, ಅವರಿಗಾಗಿ ಸರ್ಕಾರಿ ಡಯಾಲಿಸಿಸ್ ಕೇಂದ್ರ, 92 ಹಳ್ಳಿಗಳಿಗೆ ಡಾಂಬರು ರಸ್ತೆಯೇ ಇಲ್ಲ, ಅವುಗಳ ನಿರ್ಮಾಣ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಪಕ್ಷದ ಆಶಯವಾಗಿದೆ ಎಂದರು.
ಇದುವರೆಗೂ ಹಲವು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಸಚಿವರಾಗಿದ್ದವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಅದರ ಉಪಯೋಗ ಪಡೆದಿಲ್ಲ. ಕೇವಲ ಅಧಿಕಾರವನ್ನು ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಬಳಸಿಕೊಂಡಿದ್ದಾರೆ. ಜನರು ಈಗ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗಬೇಕು. ಆಗ ರಾಜ್ಯದ ರೈತರ, ನೇಕಾರರ, ಕಾರ್ಮಿಕರ, ಕುಶಲಕರ್ಮಿಗಳ ಸಾಲ ಮನ್ನಾ ಆಗುತ್ತದೆ. ಗರ್ಭಿಣಿಯರಿಗೆ ಭತ್ಯೆ, ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ ಮಾಸಿಕ ವೇತನ, 24 ಗಂಟೆ ವಿದ್ಯುತ್ ಪೂರೈಕೆ, ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. ರಾಜ್ಯದ ಜನರ, ಶ್ರೇಯೋಭಿವೃದ್ಧಿಗಾಗಿ ಸದಾ ಚಿಂತಿಸುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಬದುಕಿನ ಚಿತ್ರಣ ನೀಡುವ ಗ್ರಂಥವನ್ನು ಬಿಡುಗಡೆ ಮಾಡುವ ಸೌಭಾಗ್ಯ ನಮ್ಮದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಟ್ರಸ್ಟ್ ಮೂಲಕ ಕ್ಷೇತ್ರದ ಮಹಿಳೆಯರನ್ನು ಓಂ ಶಕ್ತಿ ದೇವಾಲಯಕ್ಕೆ ಕಳುಹಿಸಿದ ಬಗ್ಗೆ ಮಾಜಿ ಶಾಸಕರೂ ಹಿರಿಯರೂ ಆದ ವಿ.ಮುನಿಯಪ್ಪ ಲಘುವಾಗಿ ಮಾತಾಡಿದ್ದಾರೆ. ‘ಐವತ್ತು ಅರವತ್ತು ರೂಗಳ ಸೀರೆಗೆ ಮಾರುಹೋಗಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ’ ಎಂದು ಅವಹೇಳನವಾಗಿ ಮಾತನಾಡಿದ್ದಾರೆ. ನಮ್ಮ ಕ್ಷೇತ್ರದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಜೀವನ ಮಾಡುವವರು. ಅಭಿಮಾನದಿಂದ, ದೈವ ಭಕ್ತಿಯಿಂದ ಅವರು ದೇವಸ್ಥಾನಕ್ಕೆ ಹೋಗಿದ್ದಾರೆ. ಹೆಣ್ಣುಮಕ್ಕಳನ್ನು ಕೇವಲವಾಗಿ ಮಾತನಾಡುವವರು ಆತ್ಮಸಾಕ್ಷಿಯಿದ್ದಲ್ಲಿ ಕ್ಷೇತ್ರದ ಜನರಿಗೆ ತಮ್ಮ ಕೊಡುಗೆಯೇನು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಬೇಕು, ಮೇಲೂರು ಬಿ.ಎನ್.ರವಿಕುಮಾರ್ ಶಾಸಕರಾಗಬೇಕು. ಅದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಪ್ಪ, ನಗರಸಭಾ ಅಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯರಾದ ಸಂಧ್ಯಾ ಮಂಜುನಾಥ್, ಸರಳಾ ಶ್ರೀಧರ್, ನಂದಕಿಶನ್, ವೆಂಕಟಸ್ವಾಮಿ, ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ, ರಾಮಕೃಷ್ಣಪ್ಪ, ಕಿಟ್ಟಿ, ಕೆ.ರತ್ನಯ್ಯ, ಸುರೇಶ್, ಗೊಲ್ಲಹಳ್ಳಿ ಶಿವಪ್ರಸಾದ್, ಶ್ರೀನಿವಾಸರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಕದಿರಿ ಯೂಸುಫ್, ಸೆಮಿ, ಷಫಿ, ರಮೇಶ್, ರಾಜಶೇಖರ್, ತಾದೂರು ರಘು, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಅಮ್ಜದ್, ಚಾಂದ್ಪಾಷ, ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ತುಳವನೂರು ರವಿ, ಚಂದ್ರಕಲಾ ಬೈರೇಗೌಡ, ಮುನಿಕೃಷ್ಣ, ದ್ವಾವಪ್ಪ, ಮುಗಿಲಡಿಪಿ ನಂಜಪ್ಪ, ಕೆ.ಮುನೇಗೌಡ, ರಾಜಾಕಾಂತ್ ಹಾಜರಿದ್ದರು.
- Advertisement -
- Advertisement -
- Advertisement -